೮೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರು

baraguru-aahvaana

baraguru-aahvaana

ಡಾ. ಬರಗೂರು ರಾಮಚಂದ್ರಪ್ಪನವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಾಧ್ಯಕ್ಷತೆಗೆ ಆಹ್ವಾನ ನೀಡಿದ ಸಂದರ್ಭ

ಕನ್ನಡ ಸಾಹಿತ್ಯ, ಸಿನಿಮಾ, ಪ್ರಾಧ್ಯಾಪನ, ಚಳವಳಿ  ಮತ್ತು ಸಾಂಸ್ಕೃತಿಕ ಲೋಕದ  ಮಹತ್ವದ  ಪ್ರತಿನಿಧಿಗಳೆಂದು ಖ್ಯಾತರಾಗಿರುವ  ಡಾ. ಬರಗೂರು ರಾಮಚಂದ್ರಪ್ಪನವರು  ರಾಯಚೂರಿನಲ್ಲಿ  ಬರುವ  ಡಿಸೆಂಬರ್ ೨ರಿಂದ ಮೂರು ದಿನಗಳವರೆಗೆ ನಡೆಯಲಿರುವ  ೮೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರಾಗಿ  ಸರ್ವಾನುಮತದಿಂದ  ಆಯ್ಕೆಗೊಂಡಿದ್ದಾರೆ.  ಈ ಸಂಬಂಧವಾಗಿ ಕನ್ನಡ ಸಾಹಿತ್ಯ ಪರಿಷತ್ತು, ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ನೇತೃತ್ವದಲ್ಲಿ ಡಾ. ಬರಗೂರು ರಾಮಚಂದ್ರಪ್ಪನವರಿಗೆ  ಸಮ್ಮೇಳನಾಧ್ಯಕ್ಷತೆಯ ಆಹ್ವಾನವನ್ನು ಸಲ್ಲಿಸಿದೆ.

‘ಬ್ರಹ್ಮಪುತ್ರ, ಗಂಗಾನದಿಗಳಷ್ಟೆ ಶ್ರೇಷ್ಠವಲ್ಲ, ನಮ್ಮೂರಿನ ಹಳ್ಳ- ಕೊಳ್ಳಗಳೂ ಶ್ರೇಷ್ಠ. ಶ್ರೀಗಂಧ ಮಾತ್ರವಲ್ಲ, ನಮ್ಮೂರಿನ ಜಾಲಿ ಮರವೂ ಶ್ರೇಷ್ಠ. ಕೋಗಿಲೆ ಅಷ್ಟೇ ಅಲ್ಲ, ನಮ್ಮೂರಿನ ಕಾಗೆಯೂ ನನಗೆ ಶ್ರೇಷ್ಠವೇ ಆಗಿದೆ`. ಈ  ಬರಗೂರು ರಾಮಚಂದ್ರಪ್ಪನವರ ಮಾತುಗಳು  ಅವರ ಅಂತರಾಳದ ಒಂದು ನೋಟ. ತಳ ಮಟ್ಟದ ಜನರ ನೋವುಗಳಿಗೆ ಸದಾ ತುಡಿಯುವ, ಚಿಂತಿಸುವ ಮನಸ್ಸು ಅವರದು.  ಅವರನ್ನು ಜನ ಗುರುತಿಸುವುದು ಬಂಡಾಯ ವ್ಯಕ್ತಿತ್ವದವರಾಗಿ,  ಬಂಡಾಯ ಸಾಹಿತಿಯಾಗಿ, ಬಂಡಾಯದ ಮಾತುಗಾರರಾಗಿ.  ಈ ಕುರಿತು ಬರಗೂರರು ಹೇಳುತ್ತಾರೆ “ಬಂಡಾಯವೆಂದರೆ ಹೊಡಿ, ಬಡಿ, ಕೊಲ್ಲು ಎಂದಲ್ಲ.  ಬಂಡಾಯವೆಂಬುದು ನನ್ನ ಪ್ರಕಾರ ಸಿದ್ಧಾಂತ.  ಯಾವುದೇ ಒಂದು ಅನಿವಾರ್ಯ ಪರಿಸ್ಥಿತಿ ಒದಗಿದಾಗ ಅದಕ್ಕೆ ಅಗತ್ಯವಾದ ಪ್ರತಿಕ್ರಿಯೆ ನೀಡದೆ ಸುಮ್ಮನೆ ಮೂಖನಾಗಿರುವುದು ನನಗೆ ಸಾಧ್ಯವಿಲ್ಲ.  ಹಾಗೆ ಸುಮ್ಮನಿರುವುದು ನನಗೆ ಸಮ್ಮತವೂ ಅಲ್ಲ”.

ಬರಗೂರು ರಾಮಚಂದ್ರಪ್ಪನವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಪಾಟಿ ಚೀಲ ಹಿಡಿದು ಕೆಂಪು ಬಸ್ಸಿನ ಹಿಂದೆ ಓಡುತ್ತಿದ್ದ ಬರಗೂರರು, ತುಮಕೂರು, ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ನಾಡಿನಲ್ಲಿ ಹೊಸ ಆಲೋಚನೆ, ಚಿಂತನೆಗಳಿಗೆ ಕಾರಣರಾದವರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಬರಗೂರರು  ಸಲ್ಲಿಸಿದ ಸೇವೆ ಗಣನೀಯವಾದ್ದದ್ದು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಬರಗೂರರ ಚಿತ್ರಗಳು ಬಡವರು, ದಲಿತರನ್ನು ಧ್ವನಿಸುವ ಮೂಲಕ ಭಾರತೀಯ ಸಿನೆಮಾ ರಂಗದ ಚರಿತ್ರೆಯ ಪುಟಗಳಾಗಿ ಮಿಂಚಿವೆ. ಅವರು ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.  ಅವರ ಸಿನಿಮಾ ನಿರ್ದೇಶನ, ಹಾಡುಗಳು, ಕಥೆ, ಚಿತ್ರಕಥೆ ಇವೆಲ್ಲಾ ಕಲಾತ್ಮಕ ಹಾಗೂ ಜನಮಾನಸಗಳನ್ನು ತನ್ನದೇ ಆದ ರೀತಿಯಲ್ಲಿ ಸೆಳೆದಿವೆ.

ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಇವುಗಳಲ್ಲಿ ಬರಗೂರರು ದಕ್ಷರಾಗಿ ಕೆಲಸಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯಲ್ಲಿದ್ದಾಗ ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿ, ೪೦ಕ್ಕೂ ಅಧಿಕ ಕೃತಿಗಳು ಪ್ರಕಟವಾಗಲು ಕಾರಣರಾಗಿದ್ದಾರೆ.   ಪ್ರಸಕ್ತದಲ್ಲಿ ಅವರು ಪ್ರಾಥಮಿಕ ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   ಕನ್ನಡ ಪರ ಹೋರಾಟ ಮತ್ತು ಚಿಂತನೆಗಳಲ್ಲಿ ಅವರು ಎಂದೂ ಹಿಂದೆ ಬೀಳದವರು.  ಕನ್ನಡ ಪರ ಕಾರ್ಯಕ್ರಮಗಳು, ಕನ್ನಡದ ಸಾಮಾನ್ಯ ಜನತೆ ಮತ್ತು  ಕನ್ನಡತನವನ್ನು ಬಿತ್ತುವ ಕೆಲಸ ಅವರಿಗೆ ಎಂದೆಂದೂ ಪ್ರಿಯ.  ಹೀಗಾಗಿ ಕನ್ನಡ ಪರ ಆಸಕ್ತರಿಗೆ ಅವರು ಎಂದೆಂದೂ ಪ್ರಿಯರು.

ಜಾಗತೀಕರಣವೆಂಬ ಭ್ರಮೆಯಲ್ಲಿ ಕಳೆದು ಹೋಗುತ್ತಿರುವ ವಿಶ್ವವನ್ನು ಅವರು ಮನನೀಯವಾಗಿ ಗುರುತಿಸುತ್ತಾರೆ.  “ಕೈಗಾರಿಕೀಕರಣ ಕಾಲದಲ್ಲಿದ್ದ ಜನರ ಕನಸುಗಳೇ ಬೇರೆ. ಜಾಗತೀಕರಣ ಕಾಲದ ಕನಸುಗಳೇ ಬೇರೆ. ಈಗಲೂ ಹಿಂದಿನ ಕನಸುಗಳೇ ಇರಬೇಕೆಂದು ನಾನು ಹೇಳುತ್ತಿಲ್ಲ. ನಮಗೆ ಆರೋಗ್ಯಕರ ಮನೋಧರ್ಮವನ್ನು ಬೆಳೆಸುವ ಕನಸುಗಳು ಬೇಕು; ಆ ಕನಸುಗಳು ಸಾಕಾರಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವುದು, ತಕ್ಕಮಟ್ಟಿನ ಉದ್ಯೋಗ ಪಡೆಯುವುದು, ಬದುಕಲಿಕ್ಕೆ ಬೇಕಿರುವಷ್ಟು ಸಂಬಳ ಪಡೆಯುವುದು, ಮನೆ ಕಟ್ಟಿಸುವುದು, ಕುಟುಂಬದಲ್ಲಿ ನೆಮ್ಮದಿ ಕಾಯ್ದುಕೊಳ್ಳುವುದು – ಈ ಕೆಲವು, ಕೈಗಾರಿಕೀಕರಣ ಕಾಲದ ಕನಸುಗಳು. ಇವು  ‘ಸುಖಮುಖಿಯಾದ’ ಕನಸುಗಳು.

ಆದರೆ ಜಾಗತೀಕರಣ ಹುಟ್ಟುಹಾಕುತ್ತಿರುವುದು ‘ಭೋಗಮುಖಿಯಾದ’ ಕನಸುಗಳು. ಬದುಕಲಿಕ್ಕೆ ಮಾತ್ರ ಸಂಬಳ ಸಾಲದು, ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬೇಕು. ವೈಭೋಗದ ಜೀವನಕ್ಕೆ ವಿಲಾಸದ ವಸ್ತುಗಳು ಬೇಕು. ಇದೇ ಜೀವನ ವಿಧಾನವಾಗಬೇಕು – ಹೀಗೆ ಭೋಗ ಬದುಕನ್ನು ಬಯಸುವ ಜಾಗತೀಕರಣ ಅರ್ಥಾತ್ ಖಾಸಗೀಕರಣ, ಜೀವನದ ಆದ್ಯತೆ ಮತ್ತು ಆದರ್ಶಗಳನ್ನೂ ಬದಲಿಸುತ್ತಿದೆ. ಖಾಸಗಿ ಬಂಡವಾಳಗಾರರ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡುವ ದೃಷ್ಟಿಯಿಂದಲೇ ಮನೋಧರ್ಮವನ್ನು ಬದಲಾಯಿಸಲಾಗುತ್ತಿದೆ.

ಬದುಕಿನ ಬದಲಾವಣೆಯೆಂದರೆ ಮೇಲ್ಪದರದ ಬದಲಾವಣೆ ಎಂದಾಗುತ್ತಿದೆ. `ಮೇಲ್ಪದರ’ ಎನ್ನುವುದು ಸಾಮಾಜಿಕ, ಆರ್ಥಿಕ ಮೇಲ್ಪದರವೂ ಹೌದು; ತೆಳು ಬದಲಾವಣೆಯ ಸ್ವರೂಪವೂ ಹೌದು. ಹೀಗಾಗಿ ಕೈಗಾರಿಕೀಕರಣ ಕಾಲದ ‘ವಿಕಾಸ ಜೀವನ’ವು ಖಾಸಗೀಕರಣ ಕಾಲದಲ್ಲಿ ‘ವಿಲಾಸ ಜೀವನ’ವಾಗುತ್ತಿದೆ. ಖಾಸಗೀಕರಣದ ‘ಕೆನೆಪದರ’ವಾದ ಕಾರ್ಪೊರೇಟ್ ವಲಯವು ಭೋಗವನ್ನೇ ಸುಖವೆಂದು ಬಿಂಬಿಸುತ್ತಿದೆ. ವಾಸ್ತವವಾಗಿ ಭೋಗವೇ ಬೇರೆ, ಸುಖವೇ ಬೇರೆ. ಆದರೆ ಭೋಗದ ಬೆನ್ನು ಹತ್ತಿದವರು ಸುಖಕ್ಕೆ ಬೆನ್ನು ತೋರಿಸುತ್ತಾರೆಂಬ ಸತ್ಯವನ್ನು ಕಾರ್ಪೊರೇಟ್ ವಲಯ ಹೂತುಹಾಕುತ್ತಿದೆ.”

ಬರಗೂರರ ಸಾಹಿತ್ಯದ ಹಾದಿಯಲ್ಲಿನ ಕೆಲವು ಕೃತಿಗಳನ್ನು ನೆನೆಸಿಕೊಳ್ಳುವುದಾದರೆ ‘ಒಂದು ಊರಿನ ಕತೆಗಳು’, ‘ಕನ್ನಡಾಭಿಮಾನ’, ‘ಕಪ್ಪು ನೆಲದ ಕೆಂಪು ಕಾಲು’, ‘ಮರಕುಟಿಗ’, ‘ರಾಜಕಾರಣಿ’, ‘ಸಾಹಿತ್ಯ’, ‘ಸುಂಟರಗಾಳಿ’, ‘ಸೂತ್ರ’, ‘ಕಾಂಟೆಸ್ಸಾ ಕಾವ್ಯ’, ‘ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ’, ‘ನೆತ್ತರಲ್ಲಿ ನೆಂದ ಹೂ’, ‘ಗುಲಾಮನ ಗೀತೆ’, `ಸಿನಿಮಾ : ಒಂದು ಜನಪದ ಕಲೆ`, ‘ಮರ್ಯಾದಸ್ಥ ಮನುಷ್ಯರಾಗೋಣ’ ಮುಂತಾದವು ತಕ್ಷಣ ನೆನಪಿಗೆ ಬರುತ್ತವೆ. ಬರಗೂರರ ‘ಸುಂಟರಗಾಳಿ’ ಕಥಾಸಂಕಲನಕ್ಕೆ  ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.

‘ಪಂಪ ಪ್ರಶಸ್ತಿ’,  ‘ನಾಡೋಜ’ ಪ್ರಶಸ್ತಿ,  ಕನ್ನಡ  ಸಾಹಿತ್ಯ ಪರಿಷತ್ತಿನ  ‘ನೃಪತುಂಗ ಪ್ರಶಸ್ತಿ’  ಹಾಗೂ ಹಲವಾರು ರಾಜ್ಯಮಟ್ಟದ, ಸಂಘ ಸಂಸ್ಥೆಗಳ  ಗೌರವಗಳು ಬರಗೂರು  ರಾಮಚಂದ್ರಪ್ಪನವರಿಗೆ  ಸಂದಿವೆ.  ಇವೆಲ್ಲಕ್ಕೂ  ಕಿರೀಟವಿಟ್ಟಂತೆ ಕನ್ನಡ  ಸಾಹಿತ್ಯ ಪರಿಷತ್ತು  ಬರಗೂರು  ರಾಮಚಂದ್ರಪ್ಪನವರನ್ನು  ರಾಯಚೂರಿನಲ್ಲಿ  ಡಿಸೆಂಬರ್ ೨, ೩, ೪ರಂದು  ನಡೆಯಲಿರುವ  ೮೨ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ  ಸರ್ವಾನುಮತದಿಂದ  ಆಯ್ಕೆಮಾಡಿದೆ.  ಈ  ಕುರಿತು  ಪ್ರತಿಕ್ರಿಯಿಸಿರುವ  ಬರಗೂರರು “ಇದು ಕನ್ನಡ  ಸಾಹಿತ್ಯ ಲೋಕದಲ್ಲಿ ದೊರೆಯುವ ಅತ್ಯುನ್ನತ ಗೌರವ ಎಂಬುದು ನನ್ನ ಭಾವನೆ.  ಸರ್ವಾನುಮತದಿಂದ  ಆಯ್ಕೆ ಮಾಡಿರುವುದು ಸಂತಸ ಮೂಡಿಸಿದೆ.  ಹಳ್ಳಿಗಾಡಿನಲ್ಲಿ  ಹುಟ್ಟಿ ಬೆಳೆದ ನನ್ನಂಥವರ ಪ್ರತಿಭೆ ಮೇಲೆ ಬರಲು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಇವೆ.  ಪ್ರತಿಯೊಬ್ಬ ವ್ಯಕ್ತಿ ಪ್ರತಿಭೆ ಮತ್ತು ಸಂಕಲ್ಪಗಳನ್ನು ಒಗ್ಗೂಡಿಸಿಯೇ ಮೇಲೆ ಬರಬೇಕು.  ಸಾಮಾಜಿಕ ನ್ಯಾಯವು ಪ್ರತಿಭೆಗೆ ವಿರೋಧವಾಗಿ ಇರಬಾರದು.  ನಾನು ಎಂದಿಗೂ  ಇಂಥ  ದೊಡ್ಡ ಗೌರವದ ಕನಸನ್ನೇ  ಕಂಡವನಲ್ಲ.  ಕೊಳೆಗೇರಿಗಳ ನಿವಾಸಿಗಳಿಗೆ, ದುರ್ಬಲರಿಗೆ, ಬಡವರಿಗೆ ಐಡೆಂಟಿಟಿ ಏನು ಎಂಬುದು ಈ ಪ್ರಶ್ನೆಗಳ ಸಾಲಿನಲ್ಲಿ  ಮೊದಲನೆಯದು.  ಸಾಮಾಜಿಕ, ಆರ್ಥಿಕ ಐಡೆಂಟಿಟಿ ನಮ್ಮಂಥವರಿಗೆ ಕನಸು ಎಂಬ ಸ್ಥಿತಿಯಲ್ಲಿ  ನಾನು ಶ್ರೇಷ್ಠತೆಯ ಬೆಂಬಲ ಇದ್ದರೆ ಒಳ್ಳೆಯದು ಎಂದುಕೊಂಡು ಅರಸಿದ್ದು ಶಿಕ್ಷಣದ ಐಡೆಂಟಿಟಿಯನ್ನ.  ನಮ್ಮ ಮನೆಯಲ್ಲಿದ್ದ ‘ಜೈಮಿನಿ ಭಾರತ’ದ ಪ್ರತಿಯನ್ನು ಹಿಡಿದುಕೊಂಡು ಊರೆಲ್ಲ ಓಡಾಡಿದ ಪರಿಯಿಂದಲೇ, ‘ಈತ ಓದುವ ಹುಡುಗ’  ಎಂದು ಕರೆಯಿಸಿಕೊಂಡು, ಐಡೆಂಟಿಟಿ ಕಂಡುಕೊಂಡೆ. ಅದರಿಂದಲೇ ನನ್ನ ಅಸ್ಮಿತೆಯ ಸಮಸ್ಯೆಯನ್ನು ನೀಗಿಸಿಕೊಂಡೆ. ಹಾಗೆಯೇ ಓದುತ್ತ ಸಾಗಿದೆ. ‘ಶ್ರೀಮಂತರಲ್ಲದವರೂ ಬರೆಯುವ ಮೂಲಕ ಬೆಳೆಯಬಹುದು’ ಎಂದು ರವೀಂದ್ರನಾಥ್‌ ಠಾಗೂರರು ಹೇಳಿದಂತೆ, ನಾನೂ ಬದ್ಧತೆಯೊಂದಿಗೆ ಬರೆಯಲು ಆರಂಭಿಸಿದೆ. ಎಂದಿಗೂ ಸಾಮಾಜಿಕ ಕಾಳಜಿ, ಸೃಜನಶೀಲತೆಯನ್ನು ಬಿಡದೆ ಬರೆದೆ. ನನ್ನ ಮೂಲಕ ನನ್ನಂತಹ ಅಸಂಖ್ಯಾತ ಪ್ರತಿಭೆಗಳಿಗೆ ಈ ಗೌರವ ಸಂದಿದೆ ಎಂಬುದೇ ನನ್ನ ಭಾವನೆ. ಇದು ಅಸ್ಮಿತೆಯ ಸವಾಲನ್ನು ಎದುರಿಸಿದ ಫಲ” ಎಂದಿದ್ದಾರೆ.

ಯಾವುದೇ ವ್ಯಾಪಾರೀ ಮಾಧ್ಯಮದ ಸರಕಿಲ್ಲದಿದ್ದರೂ ಉತ್ತಮ ಸಾಂಸ್ಕೃತಿಕ ಮೌಲ್ಯಗಳಿಂದ ಜನಪ್ರೀತಿಗಳಿಸಿ ಶತದಿನೋತ್ಸವ ಆಚರಿಸಿದ ‘ಭಾಗೀರತಿ’ ಚಿತ್ರವೇ ಅಲ್ಲದೆ  ‘ಒಂದು ಊರಿನ ಕಥೆ’, ‘ಬೆಂಕಿ’, ‘ಸೂರ್ಯ’,  ‘ಕೋಟೆ’, ‘ಕ್ಷಾಮ’, ‘ಶಾಂತಿ’, ‘ಕರಡಿಪುರ’, ‘ತಾಯಿ’, ‘ಏಕಲವ್ಯ’, ‘ಶಬರಿ’, ‘ಹಗಲು ವೇಷ’, ‘ಭೂಮಿತಾಯಿ’ ಮುಂತಾದವು ಬರಗೂರರ ಚಿತ್ರಗಳು.  ಇವರ ಹಲವಾರು ಚಿತ್ರಗಳು ರಾಜ್ಯ, ರಾಷ್ಟ್ರ ಮತ್ತು  ಅಂತರರಾಷ್ಟ್ರೀಯ  ಮನ್ನಣೆಗೆ  ಪಾತ್ರವಾಗಿವೆ.  ಒಂದೇ ಪಾತ್ರವನ್ನು ಒಳಗೊಂಡ ವಿಶಿಷ್ಟ ಚಿತ್ರ ‘ಶಾಂತಿ’ ಗಿನ್ನೆಸ್ ಸಾಧನೆಗಳಲ್ಲಿ  ದಾಖಲುಗೊಂಡಿದೆ.    ಇವಲ್ಲದೆ ಬರಗೂರರ ಕಥೆ ಮತ್ತು ಹಾಡುಗಳು ಇತರ ನಿರ್ದೇಶಕರ ಚಲನಚಿತ್ರಗಳಲ್ಲಿ ಖ್ಯಾತಿಗಳಿಸಿವೆ. ‘ತಾಯಿ’ ಚಿತ್ರದ ಗೀತರಚನೆಗೆ  ರಾಷ್ಟ್ರಪ್ರಶಸ್ತಿ ದೊರೆತಿದ್ದು  ಚಿತ್ರ ಸಂಭಾಷಣೆಗೂ  ರಾಜ್ಯಪ್ರಶಸ್ತಿಗಳಿಸಿರುವ  ಹೆಗ್ಗಳಿಕೆ  ಇವರದ್ದಾಗಿದೆ.

ಹೀಗೆ ಹಲವು ರೀತಿಯಲ್ಲಿ ಕನ್ನಡದಲ್ಲಿ ಕ್ರಿಯಾಶೀಲರಾಗಿರುವ ಬರಗೂರು ರಾಮಚಂದ್ರಪ್ಪನವರು  ಕನ್ನಡ  ಸಾಂಸ್ಕೃತಿಕ ಲೋಕದ  ಮಹತ್ವದ  ಕೂಟವಾದ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರಾಗಿರುವುದು  ಸಂತಸದ ಸಂಗತಿಯಾಗಿದೆ.

Tag: Baraguru Ramachandrappa, 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, Baragur Ramachandrappa, 82 Sahitya Sammelana

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)