ವೀರಪ್ಪ ಮೊಯ್ಲಿ

veerappa-moily1-1

ವೀರಪ್ಪ ಮೊಯ್ಲಿ ಅವರು ಕರ್ನಾಟಕ ರಾಜ್ಯದ ೧೩ನೇ ಮುಖ್ಯಮಂತ್ರಿಗಳಾಗಿ ಮತ್ತು ಕೇಂದ್ರಸಚಿವರಾಗಿ ರಾಜಕಾರಣದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಸಾಹಿತ್ಯಕೃಷಿಯಲ್ಲೂ ಮಹತ್ವದ ಸಾಧನೆ ಮಾಡಿದವರಾಗಿದ್ದಾರೆ.

ವೀರಪ್ಪ ಮೊಯ್ಲಿಯವರು ೧೯೪೦ ಜನೆವರಿ ೧೨ರಂದು ಜನಿಸಿದರು. ಇವರ ತಾಯಿ ಪೂವಮ್ಮ ಮತ್ತು ತಂದೆ ತಮ್ಮಯ್ಯ ಮೊಯ್ಲಿ ಅವರು. ಮೊಯ್ಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದರು. ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ ನಂತರ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಂತೆಯೆ, ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು. ಕಾರ್ಕಳ ಹಾಗು ಮಂಗಳೂರುಗಳಲ್ಲಿ ವಕೀಲಿ ವೃತ್ತಿಯನ್ನಾರಂಭಿಸಿ ಮೊಯ್ಲಿಯವರು ನಂತರದಲ್ಲಿ ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಮುಂದುವರಿದರು.

೧೯೬೮ರಲ್ಲಿ ಮೊಯ್ಲಿಯವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೯ರಲ್ಲಿ ಕಿಸಾನ ಸಭಾ ಸ್ಥಾಪಿಸಿದರು. ೧೯೭೨ರಿಂದ ೧೯೯೯ರವರೆಗೆ ಮೊಯ್ಲಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ೧೯೭೪ರಿಂದ ೧೯೭೭ರವರೆಗೆ ಮೊಯ್ಲಿಯವರು ಸಣ್ಣ ಕೈಗಾರಿಕೆ ಖಾತೆಯ ಮಂತ್ರಿಯಾಗಿದ್ದರು. ೧೯೮೦ರಿಂದ ೧೯೮೨ರವರೆಗೆ ಹಣಕಾಸು ಮತ್ತು ಯೋಜನಾ ಖಾತೆಯ ಮಂತ್ರಿಯಾಗಿದ್ದರು. ೧೯೮೯ರಿಂದ ೧೯೯೨ರ ವರೆಗೆ ವಿವಿಧ ಇಲಾಖೆಗಳ ಸಚಿವರಾಗಿದ್ದ ಮೊಯ್ಲಿ ಅವರು,
೧೯೯೨ರಿಂದ ೧೯೯೪ರವರೆಗೆ ಕರ್ನಾಟಕದ ೧೩ನೇ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.

ಸಾಹಿತ್ಯ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿರುವ ವೀರಪ್ಪ ಮೊಯ್ಲಿಯವರ ಪ್ರಮುಖ ಕೃತಿಗಳು ಇಂತಿವೆ:
ಕಾದಂಬರಿ: ಸುಳಿಗಾಳಿ, ಸಾಗರದೀಪ, ಕೊಟ್ಟ, ತೆಂಬರೆ
ನಾಟಕಗಳು: ಮಿಲನ, ಪ್ರೇಮವೆಂದರೆ, ಪರಾಜಿತ, ಮೂರು ನಾಟಕಗಳು
ಕಾವ್ಯ: ಹಾಲು ಜೇನು, ಮತ್ತೆ ಮಡೆಯಲಿ ಸಮರ, ಯಕ್ಷಪ್ರಶ್ನೆ, ಜೊತೆಯಾಗಿ ನಡೆಯೋಣ (ಶ್ರೀಮತಿ ಮಾಲತಿ ಮೊಯ್ಲಿಯವರ ಜೊತೆಯಲ್ಲಿ), ಶ್ರೀರಾಮಾಯಣ ಅನ್ವೇಷಣಂ

ವೀರಪ್ಪ ಮೊಯ್ಲಿ ಅವರಿಗೆ ೨೦೦೦ನೆಯ ಸಾಲಿನಲ್ಲಿ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ, ೨೦೦೧ನೆಯ ಸಾಲಿನಲ್ಲಿ ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರ ಸುಧಾರಣೆಗಾಗಿ ಕೊಡಮಾಡುವ ದೇವರಾಜ ಅರಸು ಪ್ರಶಸ್ತಿ, ೨೦೦೧ರ ಆರ್ಯಭಟ ಪುರಸ್ಕಾರ, ೨೦೦೨ರಲ್ಲಿ ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ೨೦೦೨ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ, 2013ರ ಬ್ಯಾಂಕಾಕಿನ ಎಷಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ಲೋಬಲ್ ಸಿಟಿಜನ್ ಪ್ರಶಸ್ತಿ, ನ್ಯಾಯ್ಯಾಂಗದಲ್ಲಿನ ವೈಶಿಷ್ಟ್ಯಮಯ ಕೊಡುಗೆಗಳಿಗಾಗಿ ಯುನೈಟೆಡ್ ಕಿಂಗ್ಡಂನ ಹೌಸ್ ಆಫ್ ಕಾಮನ್ಸ್ ನೀಡುವ ನೆಕ್ಸ್ಟ್ ಸ್ಟೆಪ್ ಫೌಂಡೆಶನ್ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ವೈವಿಧ್ಯಮಯ ಗೌರವಗಳು ಸಂದಿವೆ. ಜೊತೆಗೆ ಇವರ ‘ಶ್ರೀರಾಮಾಯಣ ಅನ್ವೇಷಣಂ’ ಕೃತಿಗೆ ಸಾಹಿತ್ಯಕ್ಷೆತ್ರದ ಮಹತ್ವದ ಪ್ರಶಸ್ತಿಗಳಾದ ಭಾರತೀಯ ಜ್ಞಾನಪೀಠ ಪ್ರತಿಷ್ಠಾನ ನೀಡುವ ೨೦೧೦ರ ಸಾಲಿನ ಮೂರ್ತಿದೇವಿ ಪ್ರಶಸ್ತಿ ಹಾಗೂ ೨೦೧೪ರ ಸಾಲಿನ ಪ್ರತಿಷ್ಟಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಗೌರವಗಳು ಸಂದಿವೆ.

Tag: Veerappa Moily

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)