ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್

a10

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧0

ಅಧ್ಯಕ್ಷರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ (೧೯೫೩೧೯೫೪)

ಜೀವನ

‘ಕನ್ನಡದ ಆಸ್ತಿ’ ಎಂದೇ ಪರಿಗಣಿತರಾದ ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ದಂಪತಿಗಳಿಗೆ ೮-೬-೧೮೯೧ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿಯನ್ನು ೧೯೧೪ರಲ್ಲಿ ಪಡೆದರು.

ಇವರು ೧೯೧೪ರಲ್ಲಿ ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ಮಾಸ್ತಿ ಅವರು ಸಬ್ ಡಿವಿಜನ್ ಆಫೀಸರ್ (೧೯೨೭) ಮ್ಯಾಜಿಸ್ಟ್ರೇಟ್ ಮತ್ತು ಕಂಟ್ರೋಲರ್ (೧೯೩0) ಡೆಪ್ಯುಟಿ ಕಮೀಷನರ್ (೧೯೩೪) ಎಕ್ಸೈಜ್ ಕಮೀಷನರ್ (೧೯೪0) ಮೊದಲಾದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ೧೯೪೩ ಸ್ವಇಚ್ಛೆಯಿಂದ ಸರ್ಕಾರಿ ಸೇವೆಯಿಂದ ನಿವೃತ್ತರಾದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (೧೯೪೩-೪೮) ಅಧ್ಯಕ್ಷರಾಗಿ (೧೯೫0-೬೪) ಸೇವೆ ಸಲ್ಲಿಸಿರುವ  ಇವರು ‘ಜೀವನ’ ಮಾಸಪತ್ರಿಕೆಯನ್ನು ೨೫ ವರ್ಷ ಪ್ರಕಟಿಸಿದರು. ಕನ್ನಡ ಏಕೀಕರಣಕ್ಕೆ ಶ್ರಮಿಸಿದರು. ಸಹಾಯನಿಧಿ ಮೂಲಕ ಕನ್ನಡ ಲೇಖಕರನ್ನು ಬೆಳಕಿಗೆ ತಂದರು. ಪಿಇಎನ್ ಸಂಸ್ಥೆಯ ಉಪಾಧ್ಯಕ್ಷರಾಗಿ (೧೯೬೪) ಆಯ್ಕೆಯಾಗಿದ್ದರು. ೧೯೪೨ರಲ್ಲಿ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು. ಅನೇಕ ಅಖಿಲ ಭಾರತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.

ಮೈಸೂರು ಮಹಾರಾಜರು ರಾಜಸೇವಾ ಪ್ರಸಕ್ತ ಬಿರುದನ್ನು ೧೯೪೨ರಲ್ಲಿ ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(೧೯೫೬), ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ(೧೯೬೮), ವರ್ಧಮಾನ ಪ್ರಶಸ್ತಿ (೧೯೮೩), ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್(೧೯೭೭) ಭಾರತೀಯ ಜ್ಞಾನಪೀಠ ಪ್ರಶಸ್ತಿ (೧೯೮೩) ಕರ್ನಾಟಕ ಸರ್ಕಾರದ ಸನ್ಮಾನ (೧೯೮೪) ನಾಡಿನ ನಾನಾ ಸಂಸಂಸ್ಥೆಗಳಿಂದ ನೂರಾರು ಸನ್ಮಾನ ಪ್ರಶಸ್ತಿ ಗೌರವಗಳು ಮಾಸ್ತಿ ಅವರಿಗೆ ಸಂದಿವೆ.

ಕನ್ನಡ ಸಣ್ಣಕತೆಗಳ ಜನಕರೆಂದೇ ಖ್ಯಾತಿ ಹೊಂದಿದ ಮಾಸ್ತಿ ಅವರು ನೂರಕ್ಕೂ ಮೀರಿ ಕೃತಿಗಳನ್ನು ವಿವಿಧ ವಿಷಯಗಳ ಮೇಲೆ ರಚಿಸಿ ಕನ್ನಡವನ್ನು ಬೆಳೆಸಿದವರಲ್ಲಿ ಒಬ್ಬರಾಗಿದ್ದಾರೆ. ಇಲ್ಲಿ ಅವರ ಕೆಲವು ಕೃತಿಗಳನ್ನು ಉದಾಹರಿಸಿದೆ.

ಸಣ್ಣಕಥೆಗಳು(೧0 ಭಾಗಗಳು), ನವರಾತ್ರಿ(ಕಥನ ಕವನಗಳು), ಚಿಕವೀರರಾಜೇಂದ್ರ(ಕಾದಂಬರಿ), ಕೃಷ್ಣಕರ್ಣಾಮೃತ (ಸಂಸ್ಕೃತ ಕಾವ್ಯಾನಂದ), ನಮ್ಮ ನುಡಿ(ಭಾಷಾಶಾಸ್ತ್ರ), ಷೇಕ್ಸ್ಪಿಯರನ ನಾಟಕಗಳು(ಗದ್ಯಾನುವಾದ), ಜನಪದ ಸಾಹಿತ್ಯ(ಪ್ರಬಂಧ), ಪುರಂದರದಾಸ, ಕನಕಣ್ಣ(ನಾಟಕಗಳು), ಪ್ರಸಂಗ(೪ ಭಾಗಗಳು), ಸಂಪಾದಕೀಯ(೫ ಭಾಗಗಳು), ಶ್ರೀರಾಮಪಟ್ಟಾಭಿಷೇಕ (ಕಥನಕಾವ್ಯ), ಸರ್ ಎಂ. ವಿಶ್ವೇಶ್ವರಯ್ಯ(ಸಂಪಾದನೆ) ಇತ್ಯಾದಿ.

ಹಲವು ಕೃತಿಗಳನ್ನು ಇಂಗ್ಲಿಷಿಗೆ ಮಾಸ್ತಿ ಮತ್ತು ಇತರರು ಅನುವಾದಿಸಿದ್ದಾರೆ.

ಕನ್ನಡದ ಅತಿ ಮುಖ್ಯ ಸಾಹಿತಿಗಳಲ್ಲಿ ಒಬ್ಬರಾದ ಮಾಸ್ತಿ ಅವರು ೭-೬-೧೯೮೬ರಲ್ಲಿ ನಿಧನರಾದರು.

ಸಾಧನೆ :

ಉಪಾಧ್ಯಕ್ಷರಾಗಿ ಸಾಧನೆ (೧೯೪೩೧೯೪೭)

ಮೈಸೂರು ಸರ್ಕಾರದಿಂದ ನಿವೃತ್ತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು (ರಾಜಾ ಲಕುಮನ ಗೌಡ ಸರದೇಸಾಯಿ ಅವರು ಅಧ್ಯಕ್ಷರಾದಾಗ)   ಪರಿಷತ್ತಿನ ಉಪಾಧ್ಯಕ್ಷರಾಗಿ ೧೯೪೩ರಲ್ಲಿ  ಬಿಎಂಶ್ರೀ ಅವರ ನಂತರ ಅಧಿಕಾರವನ್ನು ಸ್ವೀಕರಿಸಿದರು. ತಮ್ಮ ಸ್ವಂತ ವೆಚ್ಚದಿಂದಲೇ ಪ್ರವಾಸ ಮಾಡಿ ಪರಿಷತ್ತಿನ ಪ್ರಚಾರ ಮಾಡಿದರು. ಪರಿಣಾಮವಾಗಿ ಸದಸ್ಯರ ಸಂಖ್ಯೆ ಮೊದಲಬಾರಿಗೆ ೧೫00ವರೆಗೆ ಏರಿತು. ಸಾಹಿತ್ಯೋತ್ಸವ, ಗಮಕ ಪ್ರಚಾರ, ಪರೀಕ್ಷೆಗಳು ಮೊದಲಾದ ಕಾರ್ಯಕ್ರಮಗಳು ಮುಂದುವರೆದವು. ಜೊತೆಗೆ  ತಮ್ಮ ಪ್ರಭಾವದಿಂದ ಗಣ್ಯರಿಂದ ದತ್ತಿ ಪಡೆದು ದತ್ತಿಗಳನ್ನು ಹೆಚ್ಚಿಸಿದರು. ದತ್ತಿ ಹಣ ಎಂದರೆ ಸಂಸ್ಥೆಗೆ ಕಾಯಂ ಆದಾಯಕ್ಕೆ ದಾರಿ ಎಂದರ್ಥ. ಬೆಳ್ಳಾವೆ ವೆಂಕಟನಾರಣಪ್ಪನವರ ನಿಧಿ, ಜಾವಳಿ ಗಣೇಶರಾಯರ ನಿಧಿ, ಸೋಸಲೆ ಗರಳಪುರಿ ಶಾಸ್ತ್ರಿಗಳ ಮತ್ತು ವೆಂಕಟಸುಬ್ಬಮ್ಮನವರ ದತ್ತಿ, ತೂಬುಗೆರೆ ನಂಜಪ್ಪನವರ  ದತ್ತಿನಿಧಿ ಮೊದಲಾದ ದತ್ತಿಗಳು ಪರಿಷತ್ತಿಗೆ ದೊರೆತು ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಯಿತು.

ಗಮಕ ತರಬೇತಿಯಲ್ಲಿ ಪರಿಷತ್ತು ಪ್ರೌಢ ತರಗತಿಗಳನ್ನು ಆರಂಭಿಸಿತು. ಬೇರೆಬೇರೆ ಭಾಗಗಳಿಂದ ಆರಿಸಿದ ೬ ಜನ ಗಮಕ ಅಧ್ಯಾಪಕರನ್ನು ಆಯ್ಕೆಮಾಡಿ ತರಬೇತಿ ನೀಡಿತು. ೩ ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಾಯಿತು. ಹೀಗೆ ತರಬೇತಿ ಹೊಂದಿದ ಗಮಕಿಗಳು ಊರೂರಿಗೆ ಹೋಗಿ ಗಮಕ ಪ್ರಚಾರ ಮಾಡಬೇಕಾಗಿತ್ತು.

ಲೋಕೂರರು ಅಧ್ಯಕ್ಷರಾದಾಗಲೂ ಮಾಸ್ತಿ ಅವರು ಸ್ವಲ್ಪಕಾಲಕ್ಕೆ ಉಪಾಧ್ಯಕ್ಷರಾಗಿ ಮುಂದುವರೆದರು. ಕಾಸರಗೋಡು ಸಮ್ಮೇಳನದಲ್ಲಿ ತಿರುಮಲೆ ತಾತಾಚಾರ್ಯರು ಅಧ್ಯಕ್ಷರಾದಾಗ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ಶರ್ಮರು ಅಧಿಕಾರ ಸ್ವೀಕಾರ ಮಾಡಿದ್ದು ೨೯-೧೨-೧೯೪೭ರಂದು (೬-೩-೧೯೪೯) ಅಲ್ಲಿಯವರೆಗೆ ಮಾಸ್ತಿ ಉಪಾಧ್ಯಕ್ಷರಾಗಿ ೨ನೇ ಬಾರಿಗೆ ಮುಂದುವರೆದಿದ್ದರು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳು ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿದರು.

ಪರಿಷತ್ತಿನ ಕೆಲಸಕ್ಕಾಗಿ ಎಷ್ಟೇ ಪ್ರಯಾಣ ಕೈಗೊಳ್ಳುತ್ತಿದ್ದರೂ ಅದರ ಖರ್ಚು ವೆಚ್ಚಗಳಿಗಾಗಿ ಪರಿಷತ್ತಿನಿಂದ ಒಂದು ಕಾಸನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಹೀಗೆ ನಿಸ್ಪೃಹರಾಗಿ ಕೆಲಸ ಮಾಡಿದವರು ಮಾಸ್ತಿ.

ಅಧ್ಯಕ್ಷರಾಗಿ ಸಾಧನೆ (೧೯೫೩೧೯೫೪)

ಉಪಾಧ್ಯಕ್ಷರಾಗಿ (೧೯೪೩-೧೯೪೭)ರಲ್ಲಿ  ಪರಿಷತ್ತಿನ ಕಾರ್ಯಕಲಾಪಗಳನ್ನು ಉಪಾಧ್ಯಕ್ಷರಾಗಿ ನಡೆಸಿದ ಮಾಸ್ತಿ ಅಧ್ಯಕ್ಷರಾಗಿ ಕಾರ್ಯಕಲಾಪಗಳನ್ನು ೮ ತಿಂಗಳು ಕಾಲ ನಡೆಸಲು ಬಂದಿದ್ದು ಆಕಸ್ಮಿಕ. ಏಕೆಂದರೆ ಅಧ್ಯಕ್ಷರಾಗಿದ್ದ ಎಂ. ಆರ್. ಶ್ರೀನಿವಾಸ ಮೂರ್ತಿ ಅವರು ಅವಧಿ ಮುಗಿಯುವ ಮೊದಲೇ ಅನಿರೀಕ್ಷಿತವಾಗಿ ದೈವಾಧೀನರಾದರು ಆಗ ಉಳಿದ ಅವಧಿಗೆ ೨ನೇ ಬಾರಿಗೆ ಮಾಸ್ತಿ ಆಯ್ಕೆಯಾದರು. ನಡುವಣ ಅವಧಿಯ ರಕ್ಷಕ ಎಂಬಂತೆ ಪರಿಷತ್ತಿನ ಚಟುವಟಿಕೆಗಳನ್ನು ನಿರ್ವಹಿಸಿದರು.

Tag: Masti Venkatesha Iyengar

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)