ಡಾ. ಚಂದ್ರಶೇಖರ ಪಾಟೀಲ

a22

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೨

ಚಂದ್ರಶೇಖರ ಪಾಟೀಲ (ಚಂಪಾ) (೨0000)

ಜೀವನ

ಕನ್ನಡದ ಕವಿ, ನಾಟಕಕಾರ, ವಿಮರ್ಶಕ, ಹೋರಾಟಗಾರರಾದ `ಚಂಪಾ’ ನಮದಿಂದ ಪ್ರಖ್ಯಾತರಾದ ಚಂದೃಶೇಖರ ಪಾಟೀಲ ಅವರು ೧೯೩೯ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದರು. ಹತ್ತಿಮತ್ತೂರು-ಹಾವೇರಿಗಳಲ್ಲಿ ಕನ್ನಡ ಶಾಲೆ-ಹೈಸ್ಕೂಲ್ ಮುಗಿಸಿ, ೧೯೫೬ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದವರು. ೧೯೬0ರಲ್ಲಿ ಬಿ.ಎ. ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೬೨ರಲ್ಲಿ ಎಂ.ಎ. ಮಾಡಿದರು. ೧೯೬೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. ೧೯೯೬ರಲ್ಲಿ ಪ್ರೊಫೆಸರ್ ಮತ್ತು ಚೇರ್ಮನ್‍ರಾದರು.

೧೯೮0-೮೩ರಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ್ ಚಳವಳಿಗೆ ಪ್ರೇರಣೆ ನೀಡಿದ ಪ್ರಮುಖರಲ್ಲಿ ಒಬ್ಬರು.

ನವೆಂಬರ್ ೨00೪ ರಿಂದ ೨00೮ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಅಂತರಂಗ ನಾಟಕ ಕೂಟ ‘ಮ್ಯಾಳ’ ಮುಂತಾದ ಸಂಸ್ಥೆಗಳ ಮೂಲಕ ರಂಗಚಳುವಳಿಯಲ್ಲಿ ಕ್ರಿಯಾಶೀಲರಾದವರು. ೧೯೭0ರ ದಶಕದ ಸಾಂಸ್ಕೃತಿಕ ಆಂದೋಲನಗಳಲ್ಲಿ ಭಾಗವಹಿಸಿದ್ದಾರೆ.

ಬಾನು (ಕಾವ್ಯ-೧೯೬0) ಕಾವ್ಯಕ್ಕೆ ಗೋಕರ್ಣದ ಗೌಡಶಾನಿ (ನಾಟಕ-೧೯೭೪), ಗಾಂಧೀಸ್ಮರಣ (ಕಾವ್ಯ-೧೯೭೬) ಇವುಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿಗಳು ದೊರೆತಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂದೇಹ ಮಾಧ್ಯಮ ಪ್ರಶಸ್ತಿ ಇತ್ಯಾದಿ ಇವರಿಗೆ ಲಭ್ಯವಾಗಿವೆ. ದಿನಕರ ದೇಸಾಯಿ ಪ್ರಶಸ್ತಿ ಇವರ ಅರ್ಧಸತ್ಯದ ಹುಡುಗಿ ಕಾವ್ಯಕ್ಕೆ ದೊರೆತಿದೆ.

ಸಂಕ್ರಮಣ ಕಾವ್ಯವೆಂಬ ಪತ್ರಿಕೆಯನ್ನು ಕಳೆದ ೫0 ವರ್ಷಗಳಿಂದ ನಿರಂತರವಾಗಿ ಪ್ರಕಟಿಸುತ್ತಿರುವ ಇವರು ಹತ್ತಕ್ಕೂ ಮಿಕ್ಕು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಬಾನುಲಿ, ಮಧ್ಯಬಿಂದು, ಹೂವು ಹಣ್ಣು ತಾರೆ, ಓ ಎನ್ನ ದೇಶ ಬಾಂಧವರೇ, ಗುಂಡಮ್ಮನ ಹಾಡು ಮೊದಲಾದ ಕವನ ಸಂಗ್ರಹ ಹೊರತಂದಿದ್ದಾರೆ. ಕೊಡೆಗಳು, ಗೋಕರ್ಣದ ಗೌಡಶಾನಿ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಬೇಂದ್ರೆ-ನಾನು ಕಂಡಂತೆ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಚಂಪಾದಕೀಯ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ ಹತ್ತಾರು ನಿಯತಕಾಲಿಕೆಗಳಿಗೆ ಲೇಖಕರಾಗಿರುವ ಇವರು ಇಂಗ್ಲಿಷಿನಲ್ಲಿ ಪೊಯಮ್ಸ್ ಅಂಡ್ ಪ್ಲೇಸ್ ಎಂಬ ಗ್ರಂಥವನ್ನು (ಕನ್ನಡದಿಂದ ಅನುವಾದಿಸಿದ ಕೃತಿಗಳು) ಹೊರತಂದಿದ್ದಾರೆ.

ಸಾಧನೆ :

ಕ್ರಾಂತಿಕಾರಿ ಮನೋಭಾವದಿಂದ ಕೂಡಿದ ಕನ್ನಡ ಹೋರಾಟಗಾರ ಚಂಪಾ ಅವರು. ಪರಿಷತ್ತನ್ನು ಚಳುವಳಿ ಹೋರಾಟಗಳಲ್ಲಿ ತೊಡಗಿಸಿದರು.

ಮಾತೃಭಾಷಾ ಮಾಧ್ಯಮ ಚಳುವಳಿ 

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಬೋಧನಾ ಮಾಧ್ಯಮವಾಗಿರಬೇಕು, ಬೇಕಿದ್ದರೆ ಇಂಗ್ಲಿಷನ್ನು ಪ್ರಾಥಮಿಕ ೫ನೇ ತರಗತಿಯಿಂದ (ಮಿಡ್ಲ್‍ಸ್ಕೂಲ್) ಕಲಿಸಬೇಕು, ಕೇಂದ್ರ ಪಠ್ಯಕ್ರಮದ (ಹಿಂದಿ ಇಂಗ್ಲಿಷ್) ಮಾಧ್ಯಮಗಳ ಶಾಲೆಗಳಲ್ಲಿ ಕರ್ನಾಟಕದಲ್ಲಿ ಕನ್ನಡವನ್ನು ಕಲಿಸಬೇಕು- ಎಂಬ ವಿಷಯಗಳ ಬಗ್ಗೆ ಚಂಪಾ ಅವರು ಸರ್ಕಾರದೊಡನೆ ಹೋರಾಡಿದರು. ನಾಡಿನ ಶಿಕ್ಷಣತಜ್ಞರನ್ನು, ವಿದ್ವಾಂಸರನ್ನು ಕಾನೂನು ತಜ್ಞರನ್ನು ಕನ್ನಡ ಸಂಘಟನೆಗಳ ಪ್ರಮುಖರನ್ನು ಆಹ್ವಾನಿಸಿ ಸಮಾಲೋಚನಾ ಸಭೆ ಏರ್ಪಡಿಸಿ ಕನ್ನಡ ಮಾಧ್ಯಮದ ಸಮಸ್ಯೆಗಳನ್ನು ಚರ್ಚಿಸಿದರು. ಶಿಕ್ಷಣ ಸಚಿವರಾಗಿದ್ದವರೊಡನೆ ಸಭೆ ನಡೆಸಿದರು. ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ನಡೆಸಲು ಅನುಮತಿ ಪಡೆದು ಆಂಗ್ಲಮಾಧ್ಯಮದಲ್ಲಿ ಶಾಲೆ ನಡೆಸುತ್ತಿದ್ದ ಸುಮಾರು ೨೨೧೫ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಿಸುವಲ್ಲಿ ಚಂಪಾ ಅವರು ಯಶಸ್ವಿಯಾದವರು.

ಕನ್ನಡ ನುಡಿ – ಕನ್ನಡಗಡಿ ಜಾಗೃತಿ ಜಾಥಾ

ಚಂಪಾ ಅವರು ಕರ್ನಾಟಕದ ಗಡಿಪ್ರದೇಶಗಳಲ್ಲಿ ಜಿಲ್ಲಾ ಘಟಕಗಳ ಸಹಯೋಗದೊಡನೆ, ಸಾಹಿತಿ ಕಲಾವಿದರದೊಂದಿಗೆ ಜಾಗೃತಿ ಜಾಥಾ ನಡೆಸಿದರು. ಗಡಿನಾಡ ಸಮಸ್ಯೆಗಳ ಪರಿಹಾರಕ್ಕಾಗಿ ಹಿಂದಿನ ಅಧ್ಯಕ್ಷರಲ್ಲಿ ಒಬ್ಬರಾದ ಬಿ. ಶಿವಮೂರ್ತಿ ಶಾಸ್ತ್ರಿಗಳು ಹೋರಾಟ ಮಾಡಿದ್ದರು. ಆ ಕಾರ್ಯವನ್ನು ಚಂಪಾ ಮುಂದುವರಿಸಿದರು.

ಹೊಗೇನಕಲ್‍ನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿದ  ವಿದ್ಯುತ್ ಯೋಜನೆಯನ್ನು ವಿರೋಧಿಸಿ ಇವರ ಅವಧಿಯಲ್ಲಿ ನಡೆದ ಚಳವಳಿಯಲ್ಲಿ ಪರಿಷತ್ತು ಪಾಲ್ಗೊಂಡಿತು.

ಗಡಿವಿವಾದದ ಬಗ್ಗೆ ಶಾಶ್ವತ ಪರಿಹಾರ ಕರಡುಕೊಳ್ಳಲು ಮಹಾಜನ್ ವರದಿಯನ್ನು ಜಾರಿಗೆ ತರಲು ಒತ್ತಾಯ ಮಾಡಲು ೪-೧0-೨00೬ರಲ್ಲಿ ಕರ್ನಾಟಕ ಬಂದ್‍ಗೆ ನಾಡಿನ ಸಂಘ ಸಂಸ್ಥೆಗಳು ಕರೆ ನೀಡಿದವು. ಪರಿಷತ್ತು ಈ ಬಂದ್‍ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು.

ಸಾಹಿತ್ಯಿಕ ಯೋಜನೆಗಳು :

ಶನಿವಾರದ ಪುಸ್ತಕ ಸಂತೆ ಕಾರ್ಯಕ್ರಮ

ಚಂಪಾ ಅವರು ಕೆಲವು ನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದರು ಅದರಲ್ಲಿ, ಶನಿವಾರದ ಪುಸ್ತಕಸಂತೆ ಕಾರ್ಯಕ್ರಮವೂ ಒಂದು. ಪ್ರತಿಶನಿವಾರವೂ ಪರಿಷತ್ತಿನ ಅಂಗಳದಲ್ಲಿ ಕನ್ನಡ ಪುಸ್ತಕ ಪ್ರಕಾಶಕರನ್ನು ಮತ್ತು ಮಾರಾಟಗಾರರನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಿದರು. ಈ ಪುಸ್ತಕಸಂತೆಯಲ್ಲಿ ಹೊಸ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಜತೆಗೆ ಹಳೆ ಪುಸ್ತಕ ವ್ಯಾಪಾರಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲದೆ ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸುತ್ತಿದ್ದ ಲೇಖಕರೂ ಇಲ್ಲಿ ತಮ್ಮ ಪುಸ್ತಕಗಳನ್ನು ತಂದು ಮಾರುತ್ತಿದ್ದರು. ಅಪರೂಪದ ಮತ್ತು ಅಲಭ್ಯ ಗ್ರಂಥಗಳು ಇಲ್ಲಿ ಸಿಗುತ್ತಿದ್ದವು. ಇದರ ಜತೆಗೆ ಪರಿಷತ್ತಿನ ಮುಂಭಾಗದಲ್ಲಿ ಹಾಡು, ನೃತ್ಯ, ಭಾಷಣ ಇತ್ಯಾದಿ ಕಾರ್ಯಕ್ರಮಗಳನ್ನು ಬಂದ ಜನರಿಗೆ ಮುದನೀಡಲು ವ್ಯವಸ್ಥೆ ಮಾಡಿದ್ದರು. ಸಾಹಿತ್ಯಪ್ರಿಯರ ಮೆಚ್ಚುಗೆ ಪಡೆದ ಈ ಯೋಜನೆ ೨೯ ಜನವರಿ ೨00೫ರಲ್ಲಿ ಪ್ರಾರಂಭವಾಗಿ ಅವರ ಅಧಿಕಾರಾವಧಿಯ ಅಂತ್ಯದವರೆಗೂ ಚಾಲ್ತಿಯಲ್ಲಿತ್ತು.

ಚಂಪಾ ಅವರು “ಅಧ್ಯಕ್ಷರ ಪುಸ್ತಕನಿಧಿ”ಯನ್ನು ಪ್ರಾರಂಭಿಸಿದರು. ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜನ ಗೌರವ-ಸನ್ಮಾನಾರ್ಥವಾಗಿ ಹಾಕುತ್ತಿದ್ದ ಶಾಲು-ಹಾರಗಳ ಬದಲಿಗೆ (ಹಾರವು ಒಣಗುತ್ತದೆ, ಶಾಲು ಮುದುಡುತ್ತೆ) ಕನ್ನಡ ಪುಸ್ತಕಗಳನ್ನು ನೀಡಲು ಬಿನ್ನವಿಸಿದರು. ಸಾರ್ವಜನಿಕವಾಗಿಯೂ ಮನವಿ ಮಾಡಿಕೊಂಡರು. ಸಾವಿರಾರು ಪುಸ್ತಕಗಳು ‘ನಿಧಿ’ಗೆ ಸಂಗ್ರಹವಾದುವು.  ಗಡಿನಾಡ ಕನ್ನಡ ಗ್ರಂಥ ಭಂಡಾರಗಳಿಗೆ, ಗ್ರಾಮೀಣ ಗ್ರಂಥಾಲಯಗಳಿಗೆ ಉಚಿತವಾಗಿ `ಪುಸ್ತಕನಿಧಿ’ಯಿಂದ ಗ್ರಂಥಗಳನ್ನು ಕಳುಹಿಸಿದರು

ಕನ್ನಡ ಹೋರಾಟಕ್ಕೆ ಜಯ

೨00೭ರಲ್ಲಿ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿ ಅವರನ್ನು ಪರಿಷತ್ತಿಗೆ ಆಮಂತ್ರಿಸಿ, ಗಣ್ಯ ಸಾಹಿತಿಗಳ ಕನ್ನಡ ಪರ ಹೋರಾಟಗಾರರ ಸಮ್ಮುಖದಲ್ಲಿ ಸಭೆ ನಡೆಸಿದರು. ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸಲು ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿಯ ೨೨೧೫ ಶಾಲೆಗಳನ್ನು ಕನ್ನಡ ದ್ರೋಹಿ ಶಾಲೆಗಳೆಂದು ಪರಿಗಣಿಸಿ ಇವುಗಳನ್ನು ರದ್ದು ಮಾಡಲು ಹಕ್ಕೊತ್ತಾಯ ಮಾಡಿದಾಗ ಸರ್ಕಾರ ಶಾಲೆಯ ಮಾನ್ಯತೆಯನ್ನು ರದ್ದುಮಾಡಿತು.

ಭಾರತ ಸರ್ಕಾರವು ತಮಿಳು ಭಾಷೆಯನ್ನು “ಶಾಸ್ತ್ರೀಯ ಭಾಷೆ”ಯೆಂದು ಘೋಷಿಸಿತು.  ಒಂದು ಸಾವಿರ ವರ್ಷದ ಲಿಖಿತ ಇತಿಹಾಸವಿದ್ದು, ಮೌಲಿಕ ಸಾಹಿತ್ಯ ರಚನೆ ಆಗಿದ್ದ ಭಾಷೆಯನ್ನು ಶಾಸ್ತ್ರೀಯಭಾಷೆಯೆಂದು ಘೋಷಿಸಲಾಗುತ್ತದೆ.  “ಶಾಸ್ತ್ರೀಯ ಭಾಷೆ” ಎಂಬ ಘೋಷಣೆಯ ಅಡಿಯಲ್ಲಿ ತಮಿಳುಭಾಷೆ ಸಂಸ್ಕೃತಿಯ ಅಭಿವೃದ್ಧಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ತಮಿಳುನಾಡು ಅನುದಾನ ಪಡೆಯತೊಡಗಿತು.  ತಮಿಳಿನಷ್ಟೇ ಪ್ರಾಚೀನವಾಗಿರುವ ಕನ್ನಡ ಭಾಷೆಗೂ ಶಾಸ್ತ್ರೀಯ ಭಾಷೆಯ ಸ್ಥಾನ ಸಿಗಬೇಕೆಂದು ಕನ್ನಡ ಅಭಿಮಾನಿಗಳು ಹೋರಾಟಕ್ಕಿಳಿದರು.  `ಚಂಪಾ’ ನೇತೃತ್ವದ ಸಾಹಿತ್ಯ ಪರಿಷತ್ತು ಈ ಹೋರಾಟಕ್ಕೆ ನಾಯಕತ್ವವನ್ನು ಒದಗಿಸಿತು.

ಕಾನ್ವೆಂಟ್ ಶಾಲೆಯ ಮಕ್ಕಳು ಇಂಗ್ಲಿಷ್‍ನಲ್ಲಿ ಪರಿಣತಿ ಸಾಧಿಸಿ ಉನ್ನತ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ ಹಾಗೂ ಕನ್ನಡ ಮಾಧ್ಯಮಗಳ ಶಾಲೆಯ ಮಕ್ಕಳು ಇಂಗ್ಲಿಷ್ ಭಾಷಾ ಸಾಮಥ್ರ್ಯದಲ್ಲಿ ಹಿಂದುಳಿದ ಪರಿಣಾಮ ಉದ್ಯೋಗಾವಕಾಶ ಕಳೆದುಕೊಳ್ಳುತ್ತಾರೆ. ಆದ್ದರಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‍ನ್ನು ಕಲಿಸಬೇಕೆಂಬ ಒತ್ತಾಯಕ್ಕೆ ಮಣಿದು ೨00೭ ಜೂನ್‍ನಲ್ಲಿ ಸರ್ಕಾರ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‍ನ್ನು ಕಡ್ಡಾಯವಾಗಿ ಕಲಿಸಲು ಆಜ್ಞೆ ಹೊರಡಿಸಿದಾಗ ಇದನ್ನು ವಿರೋಧಿಸಿ ೨00೭ ಜೂನ್ ೧ ರಂದು ಪರಿಷತ್ತಿನ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಕಾವೇರಿ ನದಿ ನೀರು ಹಂಚಿಕೆಯಲ್ಲಿ ನ್ಯಾಯಮಂಡಳಿ ತೀರ್ಪನ್ನು ವಿರೋಧಿಸಿ ಹೊಗೇನಕಲ್‍ನಲ್ಲಿ ತಮಿಳುನಾಡು ಆರಂಭಿಸಿದ ವಿದ್ಯುತ್ ಯೋಜನೆ ವಿರೋಧಿಸಿ ಚಳವಳಿಯನ್ನು ಇವರ ನೇತೃತ್ವದಲ್ಲಿ ಪರಿಷತ್ತು ನಡೆಸಿತು.

Tag: Champa, Chandra Shekhara Patila, Chandra Shekhara Patil, Chandra Shekar Patil

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)