ಸಾಹಿತ್ಯ ಸಮ್ಮೇಳನ-೨೩ : ಬಳ್ಳಾರಿ
ಡಿಸೆಂಬರ್ ೧೯೩೮

ಅಧ್ಯಕ್ಷತೆ: ದಿವಾಕರ ರಂಗರಾಯರು

ranganath-divakar

೨೩ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ದಿವಾಕರ ರಂಗರಾಯರು

ಕರ್ನಾಟಕ ಏಕೀಕರಣದ ನೇತಾರರೂ, ದಕ್ಷ ಆಡಳಿತಗಾರರೂ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರೂ ಆದ ರಂಗರಾವ್ ರಾಮಚಂದ್ರ ದಿವಾಕರ (ಆರ್.ಆರ್. ದಿವಾಕರ್) ಅವರು ರಾಮಚಂದ್ರರಾವ್-ಸೀತಮ್ಮ ದಂಪತಿಗಳಿಗೆ ೩0-೯-೧೮೯೪ರಲ್ಲಿ ಧಾರವಾಡದಲ್ಲಿ ಜನಿಸಿದರು. ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದ ನಂತರ ೧೯೧೯ರಲ್ಲಿ ಎಲ್.ಎಲ್.ಬಿ ಪದವೀಧರರಾದರು. ೧೯೨0ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು.

೧೯೨೧ರಲ್ಲಿ ಕರ್ಮವೀರ ವಾರಪತ್ರಿಕೆ ಪ್ರಾರಂಭಿಸಿದರು. ಅನಂತರ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು.

ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು. ೧೯೪೮ರಿಂದ ೧೯೫೨ರವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ೧೯೫೨ರಿಂದ ೧೯೫೭ರವರೆಗೆ ಬಿಹಾರದ ರಾಜ್ಯಪಾಲರಾಗಿದ್ದರು. ೧೯೬೨ರಿಂದ ೧೯೬೮ರವರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ಕರನಿರಾಕರಣ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಕರ್ಣಾಟಕ ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಕನ್ನಡ ಸಾಹಿತ್ಯ ಪರಿಷತ್ತು ೧೯೩೮ರಲ್ಲಿ ಬಳ್ಳಾರಿಯಲ್ಲಿ ನಡೆದ ೨೩ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿ ಗೌರವಿಸಿತು.

ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿರುವ ದಿವಾಕರರು ನಾನಾ ವಿಷಯಗಳಲ್ಲಿ ಗ್ರಂಥರಚನೆ ಮಾಡಿದ್ದಾರೆ. ದಿವಾಕರರ ಕೆಲವು ಮುಖ್ಯ ಕೃತಿಗಳು ಹೀಗಿವೆ:

ಉಪನಿಷತ್ಪ್ರಕಾಶ ಭಾಗ ೧-೨, ಉಪನಿಷತ್ತಿನ ಕಥಾವಲಿ, ಗೀತೆಯ ಗುಟ್ಟು, ಕರ್ಮಯೋಗವಚನಶಾಸ್ತ್ರ ರಹಸ್ಯವು, ಹರಿಭಕ್ತಿಸುಧೆ, ಮಹಾತ್ಮರ ಮನೋರಂಗ, ಎಂ.ಆರ್.ಶ್ರೀ ಅವರ ‘ನಾಗರಿಕ’ (ಹಿಂದಿಗೆ ಅನುವಾದ), ಮಹಾಯೋಗಿ (ಇಂಗ್ಲಿಷ್), ಬಿಹಾರ್ ಥ್ರೂ ದಿ ಏಜಸ್ (ಇಂಗ್ಲಿಷ್), ಕರ್ನಾಟಕ ಥ್ರೂ ದಿ ಏಜಸ್ (ಇಂಗ್ಲಿಷ್).

ಆರ್.ಆರ್. ದಿವಾಕರ್ ಅವರು ೧೫-೧-೧೯೯0ರಂದು ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೨೩,

ಅಧ್ಯಕ್ಷರು, ರಂಗನಾಥ ರಾಮಚಂದ್ರ ದಿವಾಕರ

ದಿನಾಂಕ ೨೯,0,೩೧ ಡಿಸೆಂಬರ್ ೧೯೩೮

ಸ್ಥಳ : ಬಳ್ಳಾರಿ

ಪರಿಷತ್ತಿನ ಕಾರ್ಯಕ್ರಮ

ಭಾಷಾನುಗುಣ ಪ್ರಾಂತ ರಚನೆಯ ತತ್ತ್ವಕ್ಕೆ ಒಪ್ಪಿ, ಮುಂಬಯಿ, ಮದ್ರಾಸು ಸರಕಾರದವರು ಕರ್ನಾಟಕ ಪ್ರಾಂತೀಕರಣದ ಗೊತ್ತುವಳಿಗಳನ್ನು ಸ್ವೀಕರಿಸಿದ್ದು ನಮ್ಮ ಧ್ಯೇಯ ಸಾಧನೆಗೆ ಅನುಕೂಲವಾದ್ದರಿಂದ ನಾವು ಆಯಾ ಸರಕಾರದವರನ್ನು ಅಭಿನಂದಿಸುವದು ನಮ್ಮ ಕರ್ತವ್ಯ.

ಸಾಹಿತ್ಯ ಪರಿಷತ್ ಸಂಸ್ಥೆಯನ್ನು ಸದಸ್ಯ ಸಂಖ್ಯೆ, ಧನ, ಕಾರ್ಯಕರ್ತರು  ಇವುಗಳಿಂದ  ಹೆಚ್ಚು ಬಲವುಳ್ಳದ್ದನ್ನಾಗಿ ಮಾಡಲಿಕ್ಕೇಬೇಕು. ನಮ್ಮ ಸಾಹಿತ್ಯ ಪರಿಷತ್ತಿನ ಉದ್ದೇಶನೂಲಿಕೆಯನ್ನು ನೋಡಿದರೆ ಸಾಹಿತ್ಯದ ಬಗ್ಗೆ ಇದಕ್ಕೂ ಹೆಚ್ಚಿನದೇನಾದರೂ ಆಗಬೇಕು ಎಂದು ಹೇಳುವಂತೆ ಏನೂ ಉಳಿದಿಲ್ಲ. ಆ ಉದ್ದೇಶಗಳಲ್ಲಿಯೂ ಹಲವನ್ನೆತ್ತಿ ಸಾಧಿಸಲು ಯತ್ನಿಸುವದು ಅವಶ್ಯ ಎಂದು ಹೇಳಬಹುದು.

ಕನ್ನಡದಲ್ಲಿ ಅತ್ಯುಚ್ಛ ಸಾಹಿತ್ಯವು ನಿರ್ಮಾಣವಾಗಬೇಕೆಂದು ನಾವು ಬಯಸುವಂತೆ ಕರ್ನಾಟಕದಲ್ಲಿಯ ಪ್ರತಿಯೊಬ್ಬನಿಗೂ ಕನ್ನಡ ಓದು ಬರಹ ಬರುವಂತೆ ಮತ್ತು ಸರ್ವೇಸಾಮಾನ್ಯ ಜ್ಞಾನವೆಲ್ಲ ಅವನಿಗೆ ಕನ್ನಡದಲ್ಲಿ ದೊರಕುವಂತೆ ವ್ಯವಸ್ಥೆ ಮಾಡುವದು ನಮ್ಮ ಕರ್ತವ್ಯವೆಂದು ನಾವು ತಿಳಿದು  ಸಾಗಲಿಕ್ಕೇಬೇಕು. ಈ ವಿಷಯದತ್ತ ನಾವು ಇನ್ನೂ ಅಷ್ಟು ಲಕ್ಷ್ಯ ಕೊಟ್ಟಿಲ್ಲ. ಕೊನೆಗೆ ಸರಕಾರದವರೇ ಇಂಥ ಕೆಲಸಗಳನ್ನು ಕೈಕೊಳ್ಳಬೇಕಾಗುತ್ತದೆ ಎಂಬ ಮಾತು ನಿಜ. ಆದರೆ ಸರಕಾರ ಈ ಕೆಲಸವನ್ನು ಕೈಕೊಳ್ಳುವಂತೆ ಮಾಡುವುದು ನಮ್ಮ ದೀರ್ಘಪ್ರಯತ್ನದಿಂದಲೇ ಐಕ್ಯವು. ಇದೇ ನಾಲ್ಕು ಒಳ್ಳೆ ಕಾವ್ಯಪುಸ್ತಕಗಳು ಹೊರಟರೆ ಅದರಿಂದ ನಮ್ಮ ಉದ್ಧಾರವಾಗುವುದಿಲ್ಲ. ಜನಸಾಮಾನ್ಯರ ಕಾಲವಿದು. ಆದುದರಿಂದ ಎಲ್ಲರಿಗೂ ನುಡಿಯ ಜ್ಞಾನವಾದಾಗಲೇ ಮುಂದೆ ಆ ತಳಹದಿಯ ಮೇಲೆ ನಮ್ಮ ಸಾಹಿತ್ಯಮಂದಿರವನ್ನು ಸುವ್ಯವಸ್ಥಿತವಾಗಿ ಕಟ್ಟಲು ಅಸ್ಪದವಿರುವದು.

ಕನ್ನಡದಲ್ಲಿ ಸುಧಾರಣೆಗಳು

ಕನ್ನಡ ಮೊಳೆಗಳ ಜೋಡಣೆಯಲ್ಲಿ ಸುಧಾರಣೆಯಾಗುವದು ಆವಶ್ಯವೆಂದು ಎಲ್ಲರಿಗೂ ಎನಿಸುತ್ತ ಬಂದಿದೆ. ಈಗ ಹೊಸ ಮೊಳೆಗಳನ್ನು ತಯಾರಿಸದೆ, ಇದ್ದುದರಲ್ಲಿ ಯಾವ ಸುಧಾರಣೆ ಮಾಡಬಹುದೆಂಬುದನ್ನು ಪರಿಷತ್ತಿನವರು ‘ಕನ್ನಡ ಬಾವುಟ’ದಲ್ಲಿ ತೋರಿಸಿರುವರು. ಅದರಲ್ಲಿಯ ಅನೇಕ ಸೂಚನೆಗಳು ಗ್ರಹಿಸಲು ಯೋಗ್ಯವಾಗಿವೆ. ದಿನಪತ್ರಿಕೆ ಹಾಗೂ ಇತರ ಪತ್ರಿಕೆಯವರು ಅವುಗಳಲ್ಲಿಯ ಹಲವನ್ನಾದರೂ ಸ್ವೀಕರಿಸಿದರೆ ಅದು ಸುಧಾರಣೆಯ ಮೊದಲನೆಯ ಹೆಜ್ಜೆಯಾಗಬಹುದು.

ಕನ್ನಡದಲ್ಲಿ ಲಘುಲಿಪಿ ಹಾಗೂ ಟೈಪ್ರೈಟರ್ ಇವುಗಳ ಅತ್ಯಂತ ಆವಶ್ಯಕತೆ ಇದೆ. ಇವು ಆಗುವವರೆಗೆ ನಮ್ಮ ಪತ್ರವ್ಯವಹಾರವನ್ನೂ, ಪರಿಷ್ಪತ್ರಗಳನ್ನು ಕನ್ನಡದಲ್ಲಿ ಬರೆಯುವುದು ಅವಶ್ಯಕವೇ ಆಗಿದೆ.  ಆದ್ದರಿಂದ ಇತ್ತ ನಾವೆಲ್ಲರೂ ಗಮನಕೊಡಬೇಕು. ಗ್ರಾಮೋಫೋನ್, ರೇಡಿಯೋ, ಸಿನಿಮಾ ಮುಂತಾದ ಕ್ಷೇತ್ರಗಳಲ್ಲಿಯೂ ಕನ್ನಡಿಗರು ತಮ್ಮ ಹಕ್ಕುಬಾಧ್ಯತೆಗಳನ್ನು ಸ್ಥಾಪಿಸಲಿಕ್ಕೇ ಬೇಕು. ಹಾಗೂ ಆ ರೀತಿ ಮಾಡುವವರಿಗೆ ನಾವು ಬಲಕೊಡಬೇಕು.

Tag: Kannada Sahitya Sammelana 23, Diwakara Rangarao, Diwakara Rangaraya

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)