ನಮ್ಮ ಪರಿಷತ್ತು
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ 1915ರಲ್ಲಿ ಹುಟ್ಟಿಕೊಂಡದ್ದು ‘ಕನ್ನಡ ಸಾಹಿತ್ಯ ಪರಿಷತ್ತು’ –. ಇವತ್ತು 110 ವರ್ಷಗಳ ಸಂಭ್ರಮದಲ್ಲಿರುವ ಈ ಸಂಸ್ಥೆಯ ಹೇಗಿರಬೇಕೆಂಬ ಆಲೋಚನೆ ಪ್ರಾರಂಭವಾದದ್ದು, ‘ಮೈಸೂರು ಇಕನಾಮಿಕ್ ಕಾನ್ಫರೆನ್ಸ್’ ಎಂಬ ಸಂಸ್ಥೆಯಲ್ಲಿ.ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲು, ಕನ್ನಡ ಭಾಷೆ-ಸಂಸ್ಕೃತಿಗಳನ್ನು ಸಂರಕ್ಷಿಸಲು ನಾಡಿನ ಕನ್ನಡಾಭಿಮಾನಿಗಳು ಸಂಘಟಿತ ಪ್ರಯತ್ನ ಆರಂಭಿಸಿದರು. ಇದೇ ವೇಳೆಗೆ ಸರ್ ಎಂ. ವಿಶ್ವೇಶ್ವರಯ್ಯನವರು ರಾಜ್ಯಪ್ರಗತಿ ಕಾರ್ಯಗಳಿಗೆ ಚಾಲನೆ ನೀಡುವ ಮೈಸೂರು ಸರ್ಕಾರದ ಚೀಫ್ ಇಂಜಿನಿಯರ್ ಆಗಿ ನಿಯುಕ್ತಿಗೊಂಡರು. ಪ್ರಾರಂಭದ ದಿನಗಳಲ್ಲಿಯೇ ಮೈಸೂರಿನ ಅಭಿವೃದ್ಧಿಯ ದೃಷ್ಟಿಯಿಂದ ಇಕನಾಮಿಕ್ ಕಾನ್ಫರೆನ್ಸ್ (ಸಂಪದಭ್ಯುದಯ ಸಭಾ) ಎಂಬ ಸಂಪದಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸುವಂತೆ ಮಹಾರಾಜರಿಗೆ ಸಲಹೆ ನೀಡಿದರು. ಅದರ ಅಂಗವಾಗಿ, ಕಾರ್ಖಾನೆ ಕೈಗಾರಿಕೆಗಳ ಸಮಿತಿ; ವಿದ್ಯಾಸಮಿತಿ; ಭೂವ್ಯವಸಾಯ ಸಮಿತಿ – ಎಂಬ ಮೂರು ಸಮಿತಿಗಳು ರಚನೆಯಾದವು. ಇದರಲ್ಲಿ ವಿದ್ಯಾಸಮಿತಿಯಲ್ಲಿ ಪರ್ಯಾಲೋಚನೆಗೆ ಬಂದ ಎರಡು ಯೋಜನೆಗಳು – ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತು.
ರಂಭದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿತ್ತು! ಮೇ 5, 1915 ರಂದು ಬೆಂಗಳೂರಿನಲ್ಲಿ ಇದು ಅಸ್ತಿತ್ವಕ್ಕೆ ಬಂದಾಗ ಎಚ್ ವಿ ನಂಜುಂಡಯ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರಾದರು. 1920 ರಿಂದ 1946 ರವರೆಗೆ ಮೈಸೂರು ರಾಜಮನೆತನದ ಎಂ.ಕಾಂತರಾಜೇ ಅರಸ್ ಅಧ್ಯಕ್ಷರಾಗಿದ್ದರು. ತದನಂತರದಲ್ಲಿ ಕಂಠೀರವ ನರಸರಾಜ ಒಡೆಯರ್, ಜಯಚಾಮರಾಜ ಒಡೆಯರ್, ಬಸವಪ್ರಭು, ರಾಜಾ ಲಕ್ಷ್ಮಣ ಗೌಡ ಅಧ್ಯಕ್ಷರಾಗಿದ್ದು, ಕರ್ಪೂರ ಶ್ರೀನಿವಾಸರಾವ್, ಡಿ ವಿ ಗುಂಡಪ್ಪ, ಬಿ ಎಂ ಶ್ರೀ, ಮಾಸ್ತಿ ಉಪಾಧ್ಯಕ್ಷರಾಗಿ ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ. ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಸತತ ಪ್ರಯತ್ನದಿಂದಾಗಿ ಈಗಿರುವ ಕಟ್ಟಡದ ನಿವೇಶನ ಉಚಿತವಾಗಿ ದೊರೆಯಿತು. 1933 ರಲ್ಲಿ ಅದೇ ಸ್ಥಳದಲ್ಲಿ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದ ನಿರ್ಮಾಣವಾಯಿತು. ಇಂತಹ ಪರಿಷತ್ತಿಗೆ ಮೈಸೂರು ಸರಕಾರ ಆಗಿನ ಕಾಲದಲ್ಲೇ 1800 ರೂಪಾಯಿಗಳ ಅನುದಾನವನ್ನು ನೀಡುತ್ತಿತ್ತು! ಪರಿಷತ್ತಿಗೆ ಲಾಂಛನವನ್ನು ನೀಡಿದವರು ಬಿ. ಎಂ. ಶ್ರೀ. ಅವರು! ಅಲ್ಲದೇ ಮುದ್ರಣಾಲಯವನ್ನೂ ಸ್ಥಾಪಿಸಿದರು. ಆಗಲೇ ಕನ್ನಡ ನುಡಿ ವಾರಪತ್ರಿಕೆ ಆರಂಭವಾಗಿ ಅನಕೃ ಸಂಪಾದಕತ್ವವನ್ನು ವಹಿಸಿಕೊಂಡರು. 1938 ರಲ್ಲಿ ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು “ಕನ್ನಡ ಸಾಹಿತ್ಯ ಪರಿಷತ್ತು” ಎಂದಾಯಿತು.
ಜಿ. ನಾರಾಯಣ ಅವರು ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಸಮ್ಮೇಳನವನ್ನು “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ” ಎಂದು ಕರೆದರು. ಅದೇ ವರ್ಷ ದೆಹಲಿಯಲ್ಲಿ 50ನೇ ಸಮ್ಮೇಳನ ಆಯೋಜಿತಗೊಂಡಿತ್ತು. ಜಿ ಎಸ್ ಸಿದ್ಧಲಿಂಗಯ್ಯನವರು ಅಧ್ಯಕ್ಷರಾಗಿದ್ದಾಗ ಪರಿಷತ್ತಿಗೆ ಪ್ರತ್ಯೇಕ ಧ್ವಜದ ರಚನೆಯಾಯಿತು. ಸಾ.ಶಿ.ಮರುಳಯ್ಯನವರು ತಮ್ಮ ಅವಧಿಯಲ್ಲಿ ಕನ್ನಡಾಂಬೆಯ ತೈಲಚಿತ್ರವನ್ನು ಸಿದ್ಧಪಡಿಸಿದರು. 1940 ರಲ್ಲಿ ರಜತ ಮಹೋತ್ಸವವನ್ನೂ, 1973 ರಲ್ಲಿ ಸುವರ್ಣಮಹೋತ್ಸವವನ್ನೂ, 1977 ರಲ್ಲಿ ವಜ್ರ ಮಹೋತ್ಸವವನ್ನೂ, 1991 ರಲ್ಲಿ ಅಮೃತ ಮಹೋತ್ಸವವನ್ನೂ, 2015 ರ ವರ್ಷದಲ್ಲಿ ಶತಮಾನೋತ್ಸವವನ್ನೂ ಪರಿಷತ್ತು ಆಚರಿಸಿದೆ.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪರಿಷತ್ತಿನ ಜಿಲ್ಲಾ ಘಟಕಗಳು, ತಾಲ್ಲೂಕು ಘಟಕಗಳು ಹಾಗೂ ಹೋಬಳಿ ಘಟಕಗಳು ಅಧಿಕೃತವಾಗಿ ಅಸ್ತಿತ್ವದಲ್ಲಿವೆ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ನಾಡಿನಾದ್ಯಂತ ಚಟುವಟಿಕೆ ನಡೆಸುತ್ತಿವೆ. ಸಮ್ಮೇಳನ, ಗೋಷ್ಠಿ, ಸ್ಪರ್ಧೆ, ಉಪನ್ಯಾಸ, ವಸಂತ ಸಾಹಿತ್ಯೋತ್ಸವ, ಸಾಹಿತ್ಯ ರಚನಾ ತರಬೇತಿ ಶಿಬಿರಗಳು, ಪರಿಷತ್ತಿನ ಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ರಾಜ್ಯೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕೆಲವು ಜಿಲ್ಲೆಗಳಲ್ಲಿ ನಿವೇಶನಗಳಿವೆ. ಜಿಲ್ಲಾ ಸಾಹಿತ್ಯ ಭವನಗಳು ಅನೇಕ ಕಡೆ ನಿರ್ಮಾಣವಾಗಿವೆ –ನಿರ್ಮಾಣಗೊಳ್ಳುತ್ತಲಿವೆ. ಜಿಲ್ಲಾ ಘಟಕಗಳ ವತಿಯಿಂದಲೂ ಪುಸ್ತಕ ಪ್ರಕಟಣೆಯಾಗುತ್ತಿವೆ. ಪರಿಷತ್ತಿನ ಚಟುವಟಿಕೆ ಹೊರರಾಜ್ಯದಲ್ಲಿಯೂ ಹರಡಿದ್ದು ಅಲ್ಲಿ ವ್ಯವಸ್ಥಿತವಾಗಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧೀಕೃತ ಗಡಿನಾಡ ಘಟಕಗಳನ್ನು ರಚಿಸಲಾಗಿದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಅವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಪರಿಷತ್ತಿನ ಸರಸ್ವತೀ ಭಂಡಾರ ಸುಮಾರು 70ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಹೊಂದಿದೆ! ಇದು ನಾಡಿನ ಪ್ರಮುಖ ಪ್ರಾಚೀನ ಗ್ರಂಥಾಲಯಗಳಲ್ಲಿ ಒಂದು. ಇಲ್ಲಿ ಪ್ರತ್ಯೇಕವಾಗಿ ಸಂಶೋಧನಾ ವಿಭಾಗವನ್ನು ತೆರೆಯಲಾಗಿದ್ದು ಹದಿನೈದು ಸಾವಿರಕ್ಕೂ ಹೆಚ್ಚು ಅಮೂಲ್ಯ ಗ್ರಂಥಗಳನ್ನು ಪರಾಮರ್ಶನಕ್ಕಾಗಿ ಇರಿಸಲಾಗಿದೆ. ಪ್ರತಿದಿನ ನೂರಾರು ಸಾಹಿತ್ಯಾಸಕ್ತರು ಉಚಿತವಾಗಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಸಾಹಿತ್ಯಲೋಕದ ಗಣ್ಯರ ಅಮೂಲ್ಯ ಭಾಷಣಗಳು, ಕಲಾವಿದರ ಹಾಡುಗಳನ್ನು ಒಳಗೊಂಡ ಧ್ವನಿಮುದ್ರಣ ಭಂಡಾರ ಮತ್ತು ಪರಿಷತ್ತಿನ ಮತ್ತು ಕನ್ನಡ ಸಾಹಿತಿಗಳ ಹಾಗೂ ಜನಪದ ಕಲೆಗಳ ಪರಿಚಯ ನೀಡುವ ಸಾಕ್ಷ್ಯಚಿತ್ರ ಭಂಡಾರ ಪರಿಷತ್ತಿನ ಅಮೂಲ್ಯ ಆಸ್ತಿಯಾಗಿದೆ. ಅಪರೂಪವಾದಂತಹ ನಾಣ್ಯಗಳು, ಕೈಬರಹಗಳು, ತಾಮ್ರ ಫಲಕಗಳು, ಜಾನಪದ ವಸ್ತುಗಳು, ವಿಗ್ರಹಗಳು ಮೊದಲಾದವುಗಳು ಪರಿಷತ್ತಿನ ವಸ್ತುಸಂಗ್ರಹಾಲಯದಲ್ಲಿದೆ. ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಇದೊಂದು ಆಸಕ್ತಿದಾಯಕ ಸ್ಥಳ!
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪೈಕಿ ಅತಿ ಮುಖ್ಯವಾದುದು ಅದರ ಪುಸ್ತಕ ಪ್ರಕಟಣೆ. ಕನ್ನಡ ಸಾಹಿತ್ಯ ಪರಿಷತ್ತು ೧೯೧೫ರಲ್ಲಿ ಆರಂಭವಾಯಿತು. ಪರಿಷತ್ತಿಗೆ ಆರಂಭದ ವರ್ಷದಲ್ಲಿ ಯಾವುದೇ ಪ್ರಕಟಣೆಯನ್ನೂ ಹೊರತರಲು ಆಗಿರಲಿಲ್ಲ. ಕಾರಣ ಅದು ಸ್ಥಿರಗೊಳ್ಳಬೇಕಾಗಿತ್ತು. ೧೯೧೬ರಲ್ಲಿ ಪುಸ್ತಕ ಪ್ರಕಟಣೆಯನ್ನು ಆರಂಭಿಸಿತು. ಪರಿಷತ್ತು ಹೊರತಂದ ಮೊದಲ ಕೃತಿ; ವೈ.ಕೆ. ರಾಮಚಂದ್ರರಾವ್ ಅವರು ಕನ್ನಡಕ್ಕೆ ಅನುವಾದಿಸಿದ `ಜೇಮ್ಸ್ ಏಬ್ರಾಮ್ ಗಾರ್ಫೀಲ್ಡ್ ಚರಿತೆ’. ಅನಂತರ ಅದರ ಪ್ರಕಟಣೆಗಳು ಒಂದೊಂದಾಗಿ ಹೊರಬಂದವು. ಪರಿಷತ್ತು ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಪ್ರಕಟಿಸಿದೆ. ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಧಿಸಿದ ಕೆಲವು ಇಂಗ್ಲಿಷ್ ಕೃತಿಗಳೂ ಇದರಲ್ಲಿ ಸೇರಿವೆ. ಇವುಗಳಲ್ಲಿ ಹಲವು ಮರುಮುದ್ರಣಗಳನ್ನು ಕಂಡು ದಾಖಲೆ ಸ್ಥಾಪಿಸಿವೆ.
*ಯಾವ ಪ್ರಕಾರವೇ ಇರಲಿ, ಯಾವ ಕೃತಿಯೇ ಆಗಿರಲಿ ಈ ಪ್ರಕಟಣೆಗಳ ಪೈಕಿ ಪರಿಷತ್ತನ್ನು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಸಿದ್ದು ಅದು ಹೊರತಂದಿರುವ ಬಹೂಪಯೋಗಿ ನಿಘಂಟುಗಳು. ಪರಿಷತ್ತಿನ ಸ್ಥಾಪನೆಯ ಮೂಲ ಉದ್ದೇಶಗಳಲ್ಲಿ ಪಂಡಿತ ಮಾನ್ಯವಾದ, ಪರಾಮರ್ಶನ ಮೌಲ್ಯವುಳ್ಳ ಕನ್ನಡ-ಕನ್ನಡ ನಿಘಂಟಿನ ಪ್ರಕಟಣೆ ಮಹತ್ತ್ವವಾದುದು. 45ವರ್ಷಗಳ ಕಾಲ ಹತ್ತಿರ ಹತ್ತಿರ ನೂರು ಘನ ವಿದ್ವಾಂಸರ ಅಹರ್ನಿಶಿ ಬೌದ್ಧಿಕ ಶ್ರಮದ ಫಲವಾಗಿ ಹೊರಬಂದ ಒಟ್ಟು ಎಂಟು ಸಂಪುಟಗಳ 9200ಪುಟಗಳ ಬೃಹತ್ ಸ್ವರೂಪದ ಕನ್ನಡ-ಕನ್ನಡ ನಿಘಂಟು ಪ್ರಕಟವಾಯಿತು. ಈ ಸ್ವರೂಪದ ನಿಘಂಟು ಭಾರತೀಯ ಭಾಷೆಗಳ ಪೈಕಿ ಅತ್ಯಂತ ಅಮೋಘವಾದುದು, ಅಪರೂಪವಾದುದು. ಇದು ಭಾರತೀಯ ಭಾಷೆಗಳ ನಿಘಂಟುಗಳಲ್ಲೇ `ಏಕಂ ಏವಾ ಅದ್ವಿತೀಯ’ವಾದುದು. ಪರಿಷತ್ತಿನ ಮತ್ತೊಂದು ಮಹತ್ವದ ಪ್ರಕಟಣೆ ಸುಮಾರು 1450 ಪುಟಗಳಷ್ಟಿರುವ ಸಂಕ್ಷಿಪ್ತ ಕನ್ನಡ ನಿಘಂಟು. ವಿದ್ಯಾರ್ಥಿಗಳಿಗೆ ನೆರವಾಗುವಂತಹ ಸಣ್ಣ ಆಕಾರದ `ಕನ್ನಡ ರತ್ನಕೋಶ’ ಎಂಬ ನಿಘಂಟು ಪರಿಷತ್ತಿನ ಖ್ಯಾತಿಯನ್ನು ಮನೆಮನೆಗೂ ಹರಡಿತು. ಇದುವರೆಗೆ ಇದರ 10 ಲಕ್ಷ ಪ್ರತಿಗಳು ಮಾರಾಟವಾಗಿವೆ. ಕನ್ನಡ ಪ್ರಕಟಣ ಕ್ಷೇತ್ರದ ವಿಕ್ರಮವಿದು. ಸುಭಾಷಿತ ಮಂಜರಿ ಕೃತಿಯು ಸಹ ಪರಿಷತ್ತಿಗೆ ಅಸ್ಮಿತೆ ನೀಡಿದೆ.
ಕನ್ನಡಕ್ಕಾಗಿ ಗಮನಾರ್ಹ ಸೇವೆ ಸಲ್ಲಿಸಿರುವ ಗಣ್ಯ ಸಾಹಿತಿಗಳಿಗೆ ಪರಿಷತ್ತಿನ ಅತ್ಯುಚ್ಚ ಮನ್ನಣೆಯಾದ‘ಗೌರವ ಸದಸ್ಯತ್ವ’ವನ್ನು ನೀಡಲಾಗುತ್ತಿದೆ.ಇದು ಫೆಲೋಷಿಪ್ ಮಾದರಿಯದು. ಜೊತೆಗೆ ಪುರಸ್ಕೃತರ ಒಂದು ಪ್ರಾತಿನಿಧಿಕ ಕೃತಿಯನ್ನು ಮುದ್ರಿಸಿ ಸುಲಭ ಬೆಲೆಗೆ ಮಾರಲಾಗುತ್ತಿದೆ. ಕನ್ನಡ ನಾಡಿನ ಮಹನೀಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತರು ಪರಿಷತ್ತಿನಲ್ಲಿ ದತ್ತಿನಿಧಿಗಳನ್ನು ಇರಿಸಿದ್ದಾರೆ ಆ ದತ್ತಿ ನಿಧಿಗಳ ಮೂಲ ಉದ್ದೇಶದಂತೆ ವಿವಿಧ ರೀತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧಕರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಲಾಗುತ್ತಿದೆ ಜೊತೆಗೆ ಉತ್ತಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಷ್ಟೇ ಅಲ್ಲದೆ ನಾಡಿನಾದ್ಯಂತ ನಡೆಸುತ್ತಿದೆ. ಈ ದತ್ತಿ ನಿಧಿ ಪ್ರಶಸ್ತಿಗಳಲ್ಲಿ ‘ನೃಪತುಂಗ’ ಪ್ರಶಸ್ತಿಯಂತಹ ಮಹತ್ವದ ಸಾಹಿತ್ಯಕ ಪ್ರಶಸ್ತಿಗಳೂ ಒಳಗೊಂಡಿದೆ.
ಕರ್ನಾಟಕದ ಏಕೀಕರಣದಲ್ಲಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನದು ಬೃಹತ್ ಕೊಡುಗೆ. ತನ್ನ ಆರಂಭದ ದಿನದಲ್ಲಿಯೇ ಪರಿಷತ್ತು “ಸಮಗ್ರ ಕರ್ನಾಟಕ ಆಡಳಿತ ಮಂಡಳಿ ರಚಿಸಿ ದೃಢವಾದ ಹೆಜ್ಜೆಯಿಟ್ಟಿತ್ತು. 1921, ಮಾರ್ಚ್ 3 ರಂದು ಕರ್ನಾಟಕದ ಏಕೀಕರಣದ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಿ ಈ ನಿಟ್ಟಿನಲ್ಲಿ ಸ್ಪಷ್ಟವಾದ ಹೆಜ್ಜೆಯನ್ನಿಟ್ಟು ಉಳಿದವರಿಗೂ ಮಾದರಿಯಾಗಿತ್ತು. 1930 ರಲ್ಲಿ ಮೈಸೂರಿನಲ್ಲಿ ನಡೆದ 16ನೇ ಸಾಹಿತ್ಯ ಸಮ್ಮೇಳನದಲ್ಲಿ ಆಲೂರು ವೆಂಕಟರಾಯರು “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು..” ಎಂದು ನುಡಿಯುತ್ತಲೇ ಪರಿಷತ್ತು ಮಾತ್ರವೇ ಏಕೀಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರ ಪ್ರೇರಣೆಯಿಂದ ಪರಿಷತ್ತು “ಕರ್ನಾಟಕ ನಾಡಿನ ಚರಿತ್ರೆ” ಪುಸ್ತಕವನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿತು. ಈ ಪ್ರಯತ್ನವು ಕನ್ನಡ ಬರಹಗಾರರ ವಿವರಗಳನ್ನು ಒಟ್ಟಿಗೆ ತರುವ ಮಹತ್ವದ ಪ್ರಯೋಗವೆನ್ನಿಸಿತು. 1948ರಲ್ಲಿ ಕಾಸರಗೋಡಿನಲ್ಲಿ 31ನೇ ಸಮ್ಮೇಳನವು ನಡೆದಾಗ ಕರ್ನಾಟಕ ಏಕೀಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸರ್ಕಾರದ ಮುಲಾಜಿಗೆ ಕಾಯದೇ ಮುಂದುವರೆಯಲು ನಿಶ್ಚಯಿಸಿ “ಸಹಾಯಕ ಸೀಮಾನಿಶ್ಚಯ ಸಮಿತಿ”ಯನ್ನು ರಚಿಸಿತು. ಜೊತೆಗೆ ಚೌಂಚರಿ ಕಮಿಷನ್ ಮುಂದೆ ಈ ಸಮಿತಿಯ ವರದಿಯನ್ನು ಸಲ್ಲಿಸಿ ಏಕೀಕರಣ ಸ್ವರೂಪದ ಕುರಿತಾಗಿ ತನ್ನ ಅಭಿಪ್ರಾಯವನ್ನು ದಾಖಲಿಸಿತು. ಈ ಪ್ರಯತ್ನದಲ್ಲಿ ತಿ.ತಾ.ಶರ್ಮರವರು ಪ್ರಮುಖ ಪಾತ್ರ ವಹಿಸಿದ್ದರು. 1955ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ಶಿವರಾಮಕಾರಂತರು “ಕನ್ನಡ ನಾಡು ಒಂದಾಗಬೇಕು, ಕರ್ನಾಟಕ ಎನ್ನುವ ಹೆಸರು ಬರಬೇಕು” ಎನ್ನುವ ಸ್ಪಷ್ಟ ಕರೆಯನ್ನು ನೀಡಿದರು. ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆದ್ಯ ರಂಗಾಚಾರ್ಯರು “ಕರ್ನಾಟಕ ಏಕೀಕರಣವಾಗಲು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳಗಳೇ ಕಾರಣ” ಎಂದು ಹೇಳಿದ್ದರು. ಈ ಸಮ್ಮೇಳದಲ್ಲೇ ಕರ್ನಾಟಕ ಏಕೀಕರಣವಾಗಬೇಕು, ಕರ್ನಾಟಕ ಹೆಸರು ಬರಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು. 1939ರಿಂದಲೂ ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಏಕೀಕರಣವಾಗದೇ ಸಮ್ಮೇಳನಾಧ್ಯಕ್ಷತೆ ವಹಿಸುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ಅವರು ತಳೆದಿದ್ದರು. ಅದರಂತೆ ಏಕೀಕರಣದ ನಂತರ 1957ರಲ್ಲಿ ಧಾರವಾಡದಲ್ಲಿ ನಡೆದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, “ನಮ್ಮ ಮುಂದಿನ ಗುರಿ ಕರ್ನಾಟಕ ಎನ್ನುವ ಹೆಸರು ನಾಡಿಗೆ ಬರಬೇಕು” ಎಂಬ ದೃಢವಾದ ಕರೆಯನ್ನು ನೀಡಿದ್ದರು. 1970ರಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷರು “ದೇ.ಜ.ಗೌ.” ಇದೇ ಮಾತನ್ನು ಆಗ್ರಹಿಸಿದ್ದರು. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಅವರು ಇದಕ್ಕಾಗಿ ವ್ಯಾಪಕವಾಗಿ ನಾಡಿನುದ್ದಕ್ಕೂ ಪ್ರವಾಸವನ್ನು ಕೈಗೊಂಡಿದ್ದರು. 1973, ನವೆಂಬರ್ 1 ರಂದು ನಮ್ಮ ನಾಡಿಗೆ “ಕರ್ನಾಟಕ” ಎನ್ನುವ ಹೆಸರು ಬಂದಿತು. 1974 ರಲ್ಲಿ ಮಂಡ್ಯದಲ್ಲಿ ನಡೆದ 44ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಯದೇವಿ ತಾಯಿ ಲಿಗಾಡೆಯವರು “ಕನ್ನಡಿಗರು ಒಗ್ಗೂಡಲು ಪರಿಷತ್ತೇ ಪ್ರೇರಣೆ” ಎಂದಿದ್ದರು. ಸಮ್ಮೇಳನವನ್ನು ಉದ್ಘಾಟಿಸಿದ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅವರು ಕರ್ನಾಟಕ ಏಕೀಕರಣ – ಕರ್ನಾಟಕ ನಾಮಕರಣದಲ್ಲಿ ಪರಿಷತ್ತಿನ ಪಾತ್ರವನ್ನು ಶ್ಲಾಘಿಸಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್
ಜೂನ್ ೪ , ೧೮೮೪ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು. ನಾವು ಯಾವ ಯಾವುದನ್ನು ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂತಹ ಮಹನೀಯರ ಶ್ರೇಷ್ಠ ಸೇವೆ ಎಂದು ಕೊಂಡಾಡುತ್ತೇವೆಯೋ ಆ ಹಿರಿಮೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಕೂಡಾ ಮಹತ್ತರವಾದುದು. ಸರ್ವ ಕಾಲದಲ್ಲೂ ಪ್ರಾಜ್ಞರು ನಿಷ್ಠರು ಇದ್ದಿರುತ್ತಾರೆ. ಆ ಪ್ರಾಜ್ಞರಿಗೆ ಕಾರ್ಯದಕ್ಷತೆ ತೋರುವ ಅವಕಾಶ, ಸ್ವಾತಂತ್ರ್ಯ ಅಧಿಕಾರಗಳನ್ನು ನೀಡುವ ಮನೋಬಲ ರಾಜ್ಯಭಾರದವರಿಗೆ ಇದ್ದಾಗ ಮಾತ್ರವೇ ಅದು ಸಾಧ್ಯ ಎಂಬುದು ಅತ್ಯಂತ ಮುಖ್ಯ ಸಂಗತಿಯಲ್ಲವೆ?
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ – ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ರವರೆಗೆ ನಡೆಯಿತು.
ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.
೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ತಕ್ಷಣದಿಂದಲೇ ಅವರು ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ಕಂಕಣ ಬದ್ದರಾದರು, ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯವು ಕಂಡುದರಿಂದ, ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು
ನಾಲ್ವಡಿ ಕೃಷ್ಣರಾಜ ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು. ಅವರ ಕಾಲದಲ್ಲಿ, ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ‘ಪ್ರಜಾ ಪ್ರತಿನಿಧಿ ಸಭೆ’ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. ಇದರ ಜೊತೆಗೆ ‘ನ್ಯಾಯ ವಿಧಾಯಕ’ ಸಭೆಯನ್ನೂ ಸಹ ಸ್ಥಾಪಿಸಲಾಯಿತು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು .
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಮಾಡಳಿತ ಸಂಸ್ಥೆಗಳಾದವು. ಹೊಸ ರೈಲು ದಾರಿಗಳ ನಿರ್ಮಾಣಗಳಾದವು.
೧೯೦೭ ರಲ್ಲಿ ‘ವಾಣೀವಿಲಾಸ ಸಾಗರ’ (ಮಾರಿ ಕಣಿವೆ) ಕಟ್ಟಲ್ಪಟ್ಟಿತು, ೧೯೧೧ ರಲ್ಲಿ ಆರಂಭವಾದ ‘ಕೃಷ್ಣರಾಜ ಸಾಗರ’ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. ೧೯೦೦ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು, ಇದು ಭಾರತದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ.
ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು. ನಾಲ್ವಡಿ ಕೃಷ್ಣರಾಜರ ಮತ್ತೊಂದು ಮಹತ್ತರ ಸಾಧನೆಯೆಂದರೆ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದುದು. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು.
ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. ೧೯೦೬ ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.
ಮೈಸೂರು ಬೆಂಗಳೂರು ಪ್ರದೇಶಗಳಂತಹ ನಗರಗಳಲ್ಲಿ ರಚಿತವಾದ ಶ್ರೇಷ್ಠ ಕಟ್ಟಡಗಳು, ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನವನಗಳು, ಜಲ ಕಾರಂಜಿಗಳು, ವಿಹಾರಿ ಧಾಮಗಳು, ಶ್ರೇಷ್ಠ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಛತ್ರಗಳು, ಶುಲ್ಕ ವಿಧಿಸದೆ ಉತ್ತಮ ಸೇವೆ ನೀಡುತ್ತಿದ್ದ ಆಸ್ಪತ್ರೆಗಳು, ಶುಶ್ರೂಷಾ ಧಾಮಗಳು, ಸಂಪರ್ಕ ವ್ಯವಸ್ಥೆಗಳು, ಪ್ರಯಾಣ ಸೌಲಭ್ಯಗಳು ಬಹುಷಃ ಇಷ್ಟು ಶ್ರೇಷ್ಠ ಮಟ್ಟದಲ್ಲಿದ್ದುದು ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಾಲದಲ್ಲಿ. ಈ ಪ್ರಾಂತ್ಯದಲ್ಲಿದ್ದ ಸರ್ವ ಭಾಷಿಗರ ಸಮನ್ವಯ, ಸರ್ವ ಧರ್ಮೀಯರ ಸಮನ್ವಯ, ಎಲ್ಲಾ ವರ್ಗದವರ ಹಿತಕಾಯುವ ಮನೋಭಾವ ಇತ್ಯಾದಿಗಳು ಸಾರ್ವಕಾಲಿಕವಾಗಿ ಮಹೋನ್ನತವಾದ ಗಳಿಗೆಗಳು. ಈ ಸಂಸ್ಥಾನದಲ್ಲಿ ಕಲೆ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಣೆ ಅದ್ವಿತೀಯವಾಗಿತ್ತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಕಾಲದಲ್ಲಿ ಮಹತ್ವದ ಸಾಮಾಜಿಕ ಸುಧಾರಣಾ ಕಾನೂನುಗಳು ಸಹಾ ಜಾರಿಗೆ ಬಂದವು. ಇವುಗಳಲ್ಲಿ ೧೯೦೯ ರಲ್ಲಿ ದೇವದಾಸಿ ಪದ್ಧತಿ ನಿಷೇಧ, ೧೯೧೦ ರಲ್ಲಿ ಬಸವಿ ಪದ್ಧತಿ ರದ್ಧತಿ, ೧೯೧೦ ರಲ್ಲಿ ’ಗೆಜ್ಜೆಪೂಜೆ’ ಸಂಪೂರ್ಣ ನಿರ್ಮೂಲನೆ, ೧೯೩೬ ಜುಲೈ ೧೪ ರಂದು ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆಯ ಜಾರಿ, ೧೯೩೬ ಜುಲೈ ೭ ರಂದು ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, ೧೯೧೪ ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ ಮತ್ತು ೧೯೧೯ ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ, ೧೯೨೭ ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕು ಮುಂತಾದವು ಪ್ರಮುಖವಾಗಿ ನೆನಪಿಗೆ ಬರುತ್ತವೆ. ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ೧೯೦೫ ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು. ೧೯೧೩ ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದರು. ೧೯೧೮ ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತರಲಾಯಿತು. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದು ಸೂಕ್ತವಾಗಿಯೇ ಇದೆ.
ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ದಿವಾನರಾದರು. ಇವರ ಅಧಿಕಾರಾವಧಿ ೧೯೧೨ರಿಂದ ೧೯೧೮ ರವರೆಗೆ ೬ ವರ್ಷಗಳು. ಈ ಮುಂಚೆ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಚೀಫ್ ಇಂಜಿನಿಯರಾಗಿ ೧೯೦೯ರಲ್ಲಿ ನೇಮಕಗೊಂಡಿದ್ದರು. ಅನಂತರ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು. ೧. ಕಾರ್ಖಾನೆಗಳ ಕೈಗಾರಿಕಾ ಸಮಿತಿ ೨. ವಿದ್ಯಾಸಮಿತಿ ೩. ಭೂ ವ್ಯವಸಾಯ ಸಮಿತಿ.
ವಿದ್ಯಾಸಮಿತಿಗೆ ಹೆಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ವಿ. ಸುಬ್ರಹ್ಮಣ್ಯ ಅಯ್ಯರ್ ಅವರು ಕಾರ್ಯದರ್ಶಿಗಳಾಗಿ ನೇಮಕವಾದರು. ಈ ವಿದ್ಯಾ ಸಮಿತಿಯವರು ಮುಖ್ಯವಾಗಿ ಎರಡು ಯೋಜನೆಗಳನ್ನು ನಿರ್ಧರಿಸಿದರು. ೧. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ ೨. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು
ಹಲವು ಪರಿಣತರ ಅಭಿಪ್ರಾಯಕ್ರೋಡೀಕರಣ ರೂಪುರೇಷೆಗಳ ನಿರ್ಮಾಣ ಮುಖೇನ ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂತು (ಈ ಕುರಿತ ಸಂಪೂರ್ಣ ವಿವರಗಳು ಸಾಂಸ್ಕೃತಿಕ ಇತಿಹಾಸ ಪುಟದಲ್ಲಿ ಲಭ್ಯವಿದೆ).
ಇಂಥಹ ರಾಜರು ಮಾತ್ರವೇ ಚರಿತ್ರೆಯಲ್ಲಿ ಅಜರಾಮರರು. ಹೀಗೊಬ್ಬ ಅರಸರು ಕಳೆದ ಶತಮಾನದಲ್ಲಿ ನಮ್ಮ ನಾಡಿನಲ್ಲಿದ್ದರು ಎಂಬ ಹೆಮ್ಮೆ ನಮ್ಮದು. ನಾವು ಯಾವ ಯಾವುದನ್ನು ಶ್ರೇಷ್ಠ ಅರಮನೆ, ಪ್ರೇಕ್ಷಣೀಯ, ಮನೋಲ್ಲಾಸಕರವೆಂದು ಕೊಂಡಾಡುತ್ತಿದ್ದೇವೆಯೋ ಅವೆಲ್ಲಾ ಒಂದಿಲ್ಲೊಂದು ರೀತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಪ್ರಾರಂಭ ಇಲ್ಲವೇ ಫೋಷಣೆ ಪಡೆದು ಔನ್ನತ್ಯಗೊಂಡಂತಹವು ಎಂಬುದು ಈ ನಾಲ್ವಡಿಯವರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ ಸಮರ್ಥ ರಾಜಕಾರಣಿಯನ್ನು ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂಥಹ ಸಮರ್ಥ ಆಡಳಿತಗಾರರನ್ನು ನಮ್ಮ ನಾಡು ನಿರಂತರವಾಗಿ ಸ್ಮರಿಸುತ್ತಿದೆ.
Tag: Nalwadi Krishnaraja Wodeyar, Samsthapakaru
Photo Courtesy: www.kamat.com
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ
ಈ ನಾಡಿನ ಮಹತ್ವದ ಚಿಂತನೆಗಳ ಹಿಂದಿರುವ ಪ್ರೇರಕಶಕ್ತಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕಾರಣಕರ್ತರೂ ಹೌದು.
“ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ, ನಮ್ಮ ವಿಧಿ – ಮನುಷ್ಯನ ಕೈಯಲ್ಲಿರುವ ಸಾಧನ” ಎಂದು ಹೇಳುತ್ತಿದ್ದವರು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.
ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿದವರು ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಬದುಕಿಡೀ ನಾಡಿಗೆ ದುಡಿದು, ಸೇವೆ ಸಲ್ಲಿಸಿದ ನಮ್ಮ ನೆಲದ ಹೆಮ್ಮೆಯ ಈ ಭಾರತೀಯ, ತಮ್ಮ ಜೀವಿತಕಾಲದಲ್ಲಿಯೇ ದಂತಕತೆಯಾದರು. ಜಗತ್ಪ್ರಸಿದ್ಧರಾದರು.
ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆಯನ್ನು ಮನಗಂಡು ಅವರೊಡನೆ ಸಹಕರಿಸಿದ, ಅವರ ಯೋಜನೆಗಳನ್ನು ಬೆಂಬಲಿಸಿದ ಮೈಸೂರು ಮಹಾರಾಜರು, ದಿವಾನರುಗಳ ಸಹಯೋಗವೂ ಇದೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಕಾರಣರಾದವರು.
೧೯೦೮ರಲ್ಲಿ ಅತ್ಯಂತ ಕೆಟ್ಟ ಪ್ರವಾಹ ಏರಿ ಬಂದು, ಹೈದರಾಬಾದಿಗೆ ಎಲ್ಲಿಲ್ಲದ ಹಾನಿಯಾಯಿತು. ವಿದೇಶ ಪ್ರವಾಸದಲ್ಲಿದ್ದ ವಿಶ್ವೇಶ್ವರಯ್ಯ ಅವರಿಗೆ ಹೈದರಾಬಾದಿನ ನಿಜಾಮರಿಂದ ತುರ್ತು ಕರೆ ಹೋಯಿತು. ತಮ್ಮ ವಿದೇಶ ಯಾತ್ರೆಯನ್ನು ಪೂರ್ಣಗೊಳಿಸದೆಯೇ ಹಿಂದಿರುಗಿ ಬಂದ ವಿಶ್ವೇಶ್ವರಯ್ಯ ಅವರು, ಅಂದಿನ ಹೈದರಾಬಾದನ್ನು ಪ್ರವಾಹದಿಂದ ರಕ್ಷಿಸಲು ಯೋಜನೆಗಳನ್ನು ತಯಾರಿಸಿಕೊಟ್ಟರು. ಅಂದಿನ ಹೈದರಾಬಾದ್ ನಗರದಿಂದ ಹದಿನಾರು ಮೈಲಿಗಳಾಚೆಗೆ ಓಸ್ಮಾನ್ ಸಾಗರ ಮತ್ತು ಹಿಮಾಯತ್ ಸಾಗರಗಳನ್ನು ನಿರ್ಮಿಸಲು ಕಾರಣರಾದರು. ನಗರದ ಒಳಚರಂಡಿ, ನೀರ್ಗಾಲುವೆಗಳ ವ್ಯವಸ್ಥೆಯನ್ನೂ ನಿರೂಪಿಸಿದರು. ಒಂದು ಕಾಲಕ್ಕೆ ಅಬ್ಬರಿಸಿ ಹರಿದ ಮುಸಿಯನ್ನು ಪಳಗಿಸಿ ಆಧುನಿಕ ಹೈದರಾಬಾದಿನ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಕಾರಣರಾದರು.
ನಮ್ಮ ಚಿಕ್ಕಂದಿನಿಂದ ನಮ್ಮ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಎಂದು ಜನ ಆಪ್ತವಾಗಿ ಕತೆ ಹೇಳುತ್ತಿದ್ದುದನ್ನು ಕೇಳಿ ಬೆಳೆದವರು ನಾವು. ಆ ಕಾಲಕ್ಕಾಗಲೇ ವಿಶ್ವೇಶ್ವರಯ್ಯ ದಂತಕತೆಯಾಗಿದ್ದರು. ಕಟ್ಟೆಯ ಮೇಲಿಂದ ಕೆಳಗೆ ತೆರೆದ ಬಾಗಿಲುಗಳಿಂದ ಭೋರ್ಗರೆದು ಹರಿಯುವ ಕಾವೇರಿಯ ನೀರನ್ನು ನೋಡುವುದೇ ಒಂದು ಅದ್ಭುತ ಅನುಭವವಾಗಿತ್ತು.
ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆಯ ಬಗ್ಗೆ ಅದೆಷ್ಟೋ ಕತೆಗಳಿದ್ದವು. ಅವರ ಪ್ರಾಮಾಣಿಕತೆಯನ್ನು ಕುರಿತ ಮೋಂಬತ್ತಿಯ ಕತೆಯಂತೂ ಜನಜನಿತವಾಗಿತ್ತು. ವಿದ್ಯುಚ್ಚಕ್ತಿಯಿಲ್ಲದ ಆ ಕಾಲದಲ್ಲಿ ರಾತ್ರಿ ಹೊತ್ತು ಮೋಂಬತ್ತಿಗಳನ್ನು ಬಳಸಲಾಗುತ್ತಿತ್ತು. ವಿಶ್ವೇಶ್ವರಯ್ಯನವರು ಸರ್ಕಾರದ ಕೆಲಸ ಮಾಡುವ ತನಕ ಮಾತ್ರ ಸರಕಾರ ಕೊಟ್ಟ ಮೋಂಬತ್ತಿ ಬಳಸುತ್ತಿದ್ದರು. ಅದು ಮುಗಿದೊಡನೆ, ತಮ್ಮ ಸ್ವಂತ ಖರ್ಚಿನಲ್ಲಿ ಕೊಂಡ ಮೋಂಬತ್ತಿ ಹತ್ತಿಸುತ್ತಿದ್ದರು – ಈ ಕತೆಯನ್ನು ಅದೆಷ್ಟೋ ಜನರ ಬಾಯಲ್ಲಿ ಕೇಳುತ್ತಿದ್ದೆವು.
ವಿಶ್ವೇಶ್ವರಯ್ಯನವರು ೧೮೬೧ ಸೆಪ್ಟೆಂಬರ್ ೧೫ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀನಿವಾಸಶಾಸ್ತ್ರಿ ಸಂಸ್ಕೃತ ವಿದ್ವಾಂಸರು. ತಾಯಿ ವೆಂಕಟಲಕ್ಷಮ್ಮನವರು. ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ವಿಶ್ವೇಶ್ವರಯ್ಯ ಅವರಿಗೆ ಹದಿನೈದು ವರ್ಷವಾಗಿದ್ದಾಗ ತಂದೆ ತೀರಿಕೊಂಡರು. ದಟ್ಟ ದಾರಿದ್ರ್ಯದ ಬದುಕು. ತಲೆ ಬೋಳಿಸಿಕೊಂಡು ಕೆಂಪು ಸೀರೆಯುಟ್ಟು ತಾಯಿ ಅವರಿವರ ಮನೆಯಲ್ಲಿ ದುಡಿಯುತ್ತ ಮಗನನ್ನು ಸಾಕಿ ಸಲಹಿದರು. ಸೋದರ ಮಾವ ಎಚ್ ರಾಮಯ್ಯನವರ ಸಹಾಯದಿಂದ ೧೮೭೫ರಲ್ಲಿ ವಿಶ್ವೇಶ್ವರಯ್ಯ ಬೆಂಗಳೂರಿಗೆ ಬಂದು ವೆಸ್ಲಿ ಮಿಶನ್ ಹೈಸ್ಕೂಲ್ ಸೇರಿದರು.
ಒಮ್ಮೆಯಂತೂ ಎಸ್ ಎಸ್. ಎಲ್. ಸಿ ಪರೀಕ್ಷೆಗೆ ಕೂರಲು ಹಣದ ತೀವ್ರ ಮುಗ್ಗಟ್ಟಿನಿಂದಾಗಿ ಬೆಂಗಳೂರಿನಿಂದ ಮುದ್ದೇನಹಳ್ಳಿಗೆ ೩೫ ಕಿಲೋಮೀಟರ್ ನಡೆದುಕೊಂಡೇ ಹೋದರು. ಮನೆಯ ಪಾತ್ರೆ ಅಡವಿಟ್ಟು ಆ ತಾಯಿ ಹಣ ಹೊಂದಿಸಿಕೊಟ್ಟಿದ್ದರು. ಆದರೆ ಅವರಲ್ಲಿ ಬಡತನಕ್ಕೂ ಬಗ್ಗದ ಜೀವನೋತ್ಸಾಹವಿತ್ತು. ಬದುಕನ್ನು ಎದುರಿಸುವ ದಿಟ್ಟತನವಿತ್ತು. ಭವಿಷ್ಯದ ದೃಢ ಸಂಕಲ್ಪಗಳಿದ್ದವು. ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. ಓದತೊಡಗಿದರು. ಆ ಕಾಲದಲ್ಲಿ ಬಿ.ಎ ತರಗತಿಗಳಲ್ಲಿಯೇ ವಿಜ್ಞಾನದ ವಿಷಯವನ್ನೂ ಹೇಳಿಕೊಡುತ್ತಿದ್ದರು. ಬದುಕು ಸುಲಭವಿರಲಿಲ್ಲ. ಅನಾನುಕೂಲತೆಗಳ ನಡುವೆಯೇ ಮುಂದುವರೆದ ವಿದ್ಯಾಭ್ಯಾಸ. ದೈನಂದಿಕ ಖರ್ಚಿಗೆ ಹಣವಿಲ್ಲದೆ, ಒಂದು ಕೂರ್ಗಿ ಕುಟುಂಬದಲ್ಲಿ ಪಾಠ ಹೇಳಿಕೊಟ್ಟು ಹಣ ಹೊಂದಿಸಿದರು.
೧೮೮೦ರಲ್ಲಿ ಡಿಸ್ಟಿಂಕ್ಷನ್ ಪಡೆದು ಬಿ.ಎ. ಪಾಸು ಮಾಡಿದ ವಿಶ್ವೇಶ್ವರಯ್ಯನವರಿಗೆ ಪುಣೆಯಲ್ಲಿ ಇಂಜಿನಿಯರಿಂಗ್ ಓದಲು ವಿದ್ಯಾರ್ಥಿವೇತನ ಲಭಿಸಿತು. ಮೈಸೂರು ಸಂಸ್ಥಾನದಲ್ಲಿ ಇಂಜಿನಿಯರಿಂಗ್ ಕಾಲೇಜಿರಲಿಲ್ಲ. ೧೮೮೧ರಲ್ಲಿ ಇಂಜಿನಿಯರಿಂಗ್ ಸೇರಿದ ವಿಶ್ವೇಶ್ವರಯ್ಯ ಮೂರು ವರ್ಷದ ಕೋರ್ಸನ್ನು ಎರಡೂವರೆ ವರ್ಷಕ್ಕೆ ಮುಗಿಸಿದರು. ಪರೀಕ್ಷೆಯಲ್ಲಿ ಅವರ ಮೇಧಾವಿತನ ಪ್ರಜ್ವಲಿಸಿತು. ಜೇಮ್ಸ್ ಬರ್ಕ್ಲಿ ಬಹುಮಾನ ದೊರೆತುದಲ್ಲದೆ, ಬಾಂಬೆ ಪಿ.ಡಬ್ಲ್ಯೂ.ಡಿ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ನೌಕರಿ ದೊರೆಯಿತು. ಅಲ್ಲಿಂದ ಪುಣೆಗೆ ವರ್ಗವಾಯಿತು.
ಪುಣೆಯಲ್ಲಿ ವಿಶ್ವೇಶ್ವರಯ್ಯನವರ ಅನೇಕ ಅನ್ವೇಷಣೆಗಳು ಅವರ ಮೇಧಾವಿತನವನ್ನು ಎತ್ತಿ ತೋರಿದವು. ವಿಶ್ವೇಶ್ವರಯ್ಯ ಅಟೋಮ್ಯಾಟಿಕ್ ಸ್ಲೂಸ್ ಗೇಟ್ ಕಂಡು ಹಿಡಿದರು. ಪುಣೆ ನಗರಕ್ಕೆ ಒಂದು ಸರೋವರದಿಂದ ನೀರಿನ ಪೂರೈಕೆಯಾಗುತ್ತಿತ್ತು. ಸರೋವರ ಕೆಲವು ತಿಂಗಳು ಉಕ್ಕಿ ಹರಿಯುತ್ತಿತ್ತು. ಕೆಲವು ತಿಂಗಳಲ್ಲಿ ಬತ್ತಿ ಇಳಿಯುತ್ತಿತ್ತು. ವಿಶ್ವೇಶ್ವರಯ್ಯನವರು ಸರೋವರದ ಅಡ್ಡಕಟ್ಟೆಯ ಮೇಲೆ ಸ್ವಯಂಚಾಲಿತ ಜಾರು ಬಾಗಿಲುಗಳನ್ನು ವಿನ್ಯಾಸ ಮಾಡಿ ನೆಟ್ಟರು. ನೀರು ಪ್ರವಾಹದ ಮಟ್ಟ ಮುಟ್ಟಿದಾಗ ಜಾರು ಬಾಗಿಲುಗಳು ಸ್ವಯಂಚಾಲಿತವಾಗಿ ತೆರದು ಹೆಚ್ಚುವರಿ ನೀರನ್ನು ಹೊರಹೋಗಲು ಬಿಡುತ್ತಿದ್ದವು. ಅದೇ ನೀರಿನ ಮಟ್ಟ ಕಡಿಮೆ ಇದ್ದಾಗ, ಈ ದ್ವಾರಗಳು ಮುಚ್ಚಿಕೊಂಡು ನೀರನ್ನು ಹಿಡಿದಿಡುತ್ತಿದ್ದವು. ವಿಶ್ವೇಶ್ವರಯ್ಯ ತಮ್ಮ ಈ ಆವಿಷ್ಕಾರಕ್ಕೆ ಪೇಟೆಂಟ್ ಪಡೆದರು. ಆದರೆ ಆ ಪೇಟೆಂಟಿಗೆ ಯಾವುದೇ ಸಂಭಾವನೆ ಪಡೆಯಲು ನಿರಾಕರಿಸಿದರು. ಸರ್ಕಾರದ ಕೆಲಸವನ್ನು ತಾವು ಮಾಡಿದ್ದಾಗಿ ಹೇಳಿದರು. ಈ ದ್ವಾರಗಳನ್ನು ಅವರು ೧೯೧೦ರಲ್ಲಿ ನೆಟ್ಟಿದ್ದರು. ನಲವತ್ತೈದು ವರ್ಷಗಳ ಅನಂತರ ಅವುಗಳನ್ನು ವಿಶ್ವೇಶ್ವರಯ್ಯ ನೋಡಿದಾಗಲೂ ಅವು ತ್ರಪ್ತಿಕರವಾಗಿ ಕೆಲಸ ಮಾಡುತ್ತಿದ್ದವು! ೧೯೦೪ರಲ್ಲಿ ಬಾಂಬೆ ಸರ್ಕಾರದ ಸ್ಯಾನಿಟರಿ ಇಂಜಿನಿಯರ್ ಆಗಿ ವಿಶ್ವೇಶ್ವರಯ್ಯ ನೇಮಕಗೊಂಡರು. ಅವರು ಈ ಹುದ್ದೆಯನ್ನು ಪಡೆದ ಮೊದಲ ಭಾರತೀಯರಾಗಿದ್ದರು.
೧೯೦೬ರಲ್ಲಿ ಬ್ರಿಟಿಷರ ಆಡಳಿತದಲ್ಲಿದ್ದ ಯೆಮೆನ್ ದೇಶದ ಏಡನ್ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ವಿಶ್ವೇಶ್ವರಯ್ಯನವರನ್ನು ಕಳುಹಿಸಲಾಯಿತು. ಬೆಟ್ಟಗಳಿಂದ ಸುತ್ತುವರೆದ ಏಡನ್ ನಗರದಲ್ಲಿ ಸುರಿದ ಮಳೆ, ಮರಳು ಭೂಮಿಯಲ್ಲಿ ಹಿಂಗಿ ಹೋಗುತ್ತಿತ್ತು. ವಿಶ್ವೇಶ್ವರಯ್ಯನವರು ಆ ಭೂಪ್ರದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರು. ದೂರದ ಗುಡ್ಡಗಾಡುಗಳಲ್ಲಿ ಬಿದ್ದ ಮಳೆ ಹರಿದು ಹಿಂಗುವ ಜಾಗ, ಏಡನ್ ನಗರದಿಂದ ೧೮ ಮೈಲಿಗಳ ದೂರದಲ್ಲಿತ್ತು. ಇಲ್ಲಿ ನೆಲದಾಳದಲ್ಲಿ ನೀರಿನ ಜಲಾಶಯವಿರುವುದನ್ನು ವಿಶ್ವೇಶ್ವರಯ್ಯನವರು ಗುರುತಿಸಿದರು. ಕುಡಿಯುವ ನೀರಿನ ವ್ಯವಸ್ಥೆಯನ್ನು ಯೋಜಿಸಿಕೊಟ್ಟರು. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಏಡನ್ ನಗರ ಇಂದೂ ನೆನಪಿಟ್ಟುಕೊಂಡಿದೆ. ವಿಶ್ವೇಶ್ವರಯ್ಯನವರ ಈ ಅನುಪಮ ಸೇವೆಗೆ ಬ್ರಿಟಿಷ್ ಸರ್ಕಾರ ಅವರಿಗೆ ಕೈಸರ್– ಎ-ಹಿಂದ್ ಬಿರುದು ನೀಡಿ ಗೌರವಿಸಿತು.
೧೯೦೮ರಲ್ಲಿ ತಮ್ಮ ಬಾಂಬೆ ಕೆಲಸಕ್ಕೆ ರಾಜೀನಾಮೆ ನೀಡಿದ ವಿಶ್ವೇಶ್ವರಯ್ಯನವರು ವಿದೇಶ ಪ್ರವಾಸಕ್ಕೆ ತೊಡಗಿದ್ದರು. ಆ ಸಂದರ್ಭದಲ್ಲಿ ಪ್ರವಾಹಗಳಿಂದ ದುಸ್ಥಿತಿಯಲ್ಲಿದ ಹೈದರಾಬಾದಿಗೆ ನೆರವಾಗಲು ಹೈದರಾಬಾದಿನ ನಿಜಾಮರು ಸಲ್ಲಿಸಿದ ಕೋರಿಕೆಯನ್ನು ಮನ್ನಿಸಿ ವಿದೇಶ ಪ್ರವಾಸದಿಂದ ಅರ್ಧ ಹಾದಿಯಲ್ಲಿ ಹಿಂದಿರುಗಿ ಬಂದ ಅವರು, ೧೯೦೯ರಲ್ಲಿ ಅಲ್ಲಿನ ವಿಶೇಷ ಸಲಹಾ ಇಂಜಿನಿಯರ್ ಆದರು. ಅದೇ ಸಂದರ್ಭದಲ್ಲಿ ಮೈಸೂರಿನ ದಿವಾನರಾಗಿದ್ದ ಮಾಧವರಾವ್ ಅವರು ವಿಶ್ವೇಶ್ವರಯ್ಯ ಅವರಿಗೆ ಮೈಸೂರು ರಾಜ್ಯದ ಚೀಫ್ ಇಂಜಿನಿಯರ್ ಆಗುವಂತೆ ಕೋರಿಕೆ ಇಟ್ಟರು. ಮೈಸೂರಿನವರೇ ಆದ ಅವರ ಪ್ರತಿಭೆ, ಪ್ರಸಿದ್ಧಿ ಮಹಾರಾಜರನ್ನು ಪ್ರಭಾವಿಸಿತ್ತು. ಆದರೆ, ವಿಶ್ವೇಶ್ವರಯ್ಯ ಅವರಿಗೆ ವಿಶೇಷವಿಲ್ಲದ ಸಾಮಾನ್ಯ ಕೆಲಸಗಳಲ್ಲಿ ತೊಡಗುವ ಇಚ್ಛೆ ಇರಲಿಲ್ಲ. ಮೈಸೂರು ಸರ್ಕಾರಕ್ಕೆ ತಾಂತ್ರಿಕ ವಿದ್ಯಾಭ್ಯಾಸ ಮತ್ತು ಕಾರ್ಖಾನೆಗಳ ಅಬಿವೃದ್ಧಿಗೆ ಭಾರೀ ಯೋಜನೆಗಳನ್ನು ಹಾಕುವುದರಲ್ಲಿ ಆಸಕ್ತಿ ಇದ್ದರೆ ಮಾತ್ರ ತಾವು ಬರುವುದಾಗಿ ಹೇಳಿದರು. ಮುಸಿ ನದಿಯ ಪ್ರವಾಹ ಸಮಸ್ಯೆಗೆ ಪರಿಹಾರ ಒದಗಿಸಿಕೊಟ್ಟ ವಿಶ್ವೇಶ್ವರಯ್ಯನವರು ಹೈದಾರಾಬಾದಿನಿಂದ ಬೀಳ್ಕೊಂಡು ಮಹಾರಾಜ ಕೃಷ್ಣರಾಜ ಒಡೆಯರ ಒತ್ತಾಯದ ಆಹ್ವಾನದ ಮೇಲೆ ಮೈಸೂರಿಗೆ ಬಂದರು.
ನವೆಂಬರ್ ೧೯೦೯ರಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿ ಸೇರಿಕೊಂಡರು. ಸೇರಿದೊಡನೆ ಅವರಿಗೆ ಪಿ.ಡಬ್ಲ್ಯೂ.ಡಿ ಗೆ ಹೊಸದಾಗಿ ನೇಮಿಸಿಕೊಂಡ ಜನರ ಹೆಸರುಗಳ ಪಟ್ಟಿ ಕಳುಹಿಸಲಾಯಿತು. ಹೊಸದಾಗಿ ನೇಮಕಗೊಂಡ ಅವರ ಮುಖ್ಯ ಅರ್ಹತೆ ಎಂದರೆ, ಅವರೆಲ್ಲ ದೊಡ್ಡ ಅಧಿಕಾರಿಗಳ ಸಂಬಂಧಿಗಳಾಗಿದ್ದದ್ದು! ವಿಶ್ವೇಶ್ವರಯ್ಯ ಆ ಪಟ್ಟಿಯನ್ನು ನಿರಾಕರಿಸಿ, ಕೇವಲ ಪ್ರತಿಭೆ ಮತ್ತು ವಿದ್ಯಾರ್ಹತೆಯ ಮೇಲೆ ಮತ್ತೊಂದು ಪಟ್ಟಿ ಸಿದ್ಧ ಮಾಡಲು ಹೇಳಿದರು. ತಮಗೆ ಇಂತಹ ನಡೆಗಳಿಂದ ಬಂದ ತೊಂದರೆಗಳನ್ನು ಲೆಕ್ಕಿಸದೆ, ತಾವು ಹಿಡಿದ ಅಭಿವೃದ್ಧಿಯ ಹಾದಿಯಲ್ಲಿ ಮೈಸೂರನ್ನು ನಡೆಸಿದರು.
ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು.
೧. ಕಾರ್ಖಾನೆಗಳ ಕೈಗಾರಿಕಾ ಸಮಿತಿ
೨. ವಿದ್ಯಾಸಮಿತಿ
೩. ಭೂ ವ್ಯವಸಾಯ ಸಮಿತಿ
ಈ ವಿದ್ಯಾ ಸಮಿತಿಯ ಅಡಿಯಲ್ಲಿ ಮುಖ್ಯವಾಗಿ ಎರಡು ಯೋಜನೆಗಳನ್ನು ನಿರ್ಧರಿಸಲಾಯಿತು.
೧. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ
೨. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು
ಹೀಗೆ ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಪ್ರೇರಕಶಕ್ತಿ ಹಾಗೂ ಕಾರಣಕರ್ತರಾಗಿದ್ದಾರೆ.
ನಮ್ಮ ಎಲ್ಲ ಆರ್ಥಿಕ ರೋಗಗಳಿಗೂ ವಿದ್ಯಾಭ್ಯಾಸವೇ ಮದ್ದು ಎಂದು ವಿಶ್ವೇಶ್ವರಯ್ಯ ಬಲವಾಗಿ ನಂಬಿದ್ದರು.
ಕನ್ನಂಬಾಡಿ ಆಣೆಕಟ್ಟು ಮತ್ತು ವಿದ್ಯುಚ್ಚಕ್ತಿ ಯೋಜನೆಗಳನ್ನು ಪೂರೈಸಿದಂತಹ ಮಹತ್ವದ ಸಾಧನೆಗಳಿಗಾಗಿ ಬ್ರಿಟಿಷ್ ಸರ್ಕಾರ ಅವರನ್ನು ನೈಟ್ ಕಮಾಂಡರ್ ಆಗಿ ಅಲಂಕರಿಸಿ ಸರ್ ಪದವಿಯನ್ನು ನೀಡಿತು. ಆಡಳಿತದಲ್ಲಿ ದಕ್ಷರಾದ ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ಮೈಸೂರು ಸಂಸ್ಥಾನದ ಏಳನೆ ದಿವಾನರಾದರು. ದಿವಾನರಾಗುವ ಮೊದಲು ತನ್ನ ತಾಯಿಗೆ ನೀನು ಯಾರ ಶಿಫಾರಸ್ಸನ್ನೂ ನನ್ನಲ್ಲಿಗೆ ತರುವುದಿಲ್ಲ ಎಂದರೆ ಮಾತ್ರ ನಾನು ದಿವಾನ ಪದವಿಯನ್ನು ಒಪ್ಪಿಕೊಳ್ಳುವೆ ಎಂದು ಹೇಳಿದರಂತೆ! ವಿಶ್ವೇಶ್ವರಯ್ಯನವರು ಶಿಕ್ಷಣ, ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದರು.
ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಹಾರಾಣಿ ಕಾಲೇಜು, ಹಲವಾರು ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಸೌಲಭ್ಯಗಳು, ಮೈಸೂರು ವಿಶ್ವವಿದ್ಯಾಲಯ, ವಿವಿಧರೀತಿಯ ಕೈಗಾರಿಕೆಗಳು, ಸಾರ್ವಜನಿಕ ಗ್ರಂಥಾಲಯಗಳು ಇವೆಲ್ಲಾ ವಿಶ್ವೇಶ್ವರಯ್ಯನವರ ಸಮಗ್ರ ಕೊಡುಗೆಗಳು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣ ಹಾಗೂ ಆ ಮೂಲಕ ಕನ್ನಡಿಗರ ಒಕ್ಕೂಟ, ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ಕೂಡಾ ವಿಶ್ವೇಶ್ವರಯ್ಯನವರ ಬೆಂಬಲ ಪ್ರಮುಖವಾದದ್ದು.
ಭಾರತದ ಆರ್ಥಿಕ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಗಾಧವಾದದ್ದು. ೧೯೨೦ರಲ್ಲಿ Reconstructing India, ೧೯೩೪ರಲ್ಲಿ Planned Economy for India ಪುಸ್ತಕಗಳನ್ನು ಪ್ರಕಟಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ೧೯೫೫ರಲ್ಲಿ ವಿಶ್ವೇಶ್ವರಯ್ಯ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಪುರಸ್ಕಾರವನ್ನು ನೀಡಲಾಯಿತು. ಒಂದು ವಿಧದಲ್ಲಿ ಭಾರತರತ್ನಕ್ಕೆ ವಿಶ್ವೇಶ್ವರಯ್ಯನವರಿಂದ ಒಂದು ಮೌಲ್ಯ ಬಂತು ಎಂಬದು ಇಂದಿಗೂ ಸಾರ್ವಜನಿಕವಾದ ಅಭಿಪ್ರಾಯವಾಗಿದೆ ಎಂದರೆ ಸುಳ್ಳಲ್ಲ! ಅವರ ನೂರನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನೆಹರೂ ಅವರು ಬಂದರು.
ಭಾರತದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯ ಅವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಸರ್ ಎಂ. ವಿ ಅವರ ಬದುಕು ಮತ್ತು ಸಾಧನೆಯನ್ನು ಜನ ಅರಿತಷ್ಟೂ ನಮ್ಮ ಎಳೆಯ ಪೀಳಿಗೆಯ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ. ಲಂಚಕೋರತನ, ಲಾಭಕೋರತನದ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕ ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪವಾಗಬಲ್ಲದು.
ಈ ಮಹಾನ್ ಪ್ರೇರಕ ಶಕ್ತಿ, ಆದರ್ಶ, ಪ್ರಾಮಾಣಿಕತೆ, ಸಾಮರ್ಥ್ಯ, ಚೇತನಗಳಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು.
(ಆಧಾರ: ನೇಮಿಚಂದ್ರ ಅವರ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಕುರಿತಾದ ಲೇಖನ. ಉದಯವಾಣಿ)
Tag: Sir M. Visvesvaraiaha
ಸರ್ ಮಿರ್ಜಾ ಇಸ್ಮಾಯಿಲ್
(೧೮೮೩ – ಜನವರಿ ೮, ೧೯೫೯), ಮೈಸೂರಿನ ದೀವನರು
ಮಿರ್ಜಾ ಇಸ್ಮಾಯಿಲ್ (೧೮೮೩ – ಜನವರಿ ೮, ೧೯೫೯) ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಮೈಸೂರಿನ ದಿವಾನರಾಗಿದ್ದರು.. ಕಾಗದದ ಕಾರ್ಖಾನೆ , ಸಕ್ಕರೆ ಕಾರ್ಖಾನೆ, ಮೊದಲಾದ ಕಾರ್ಖಾನೆಗಳನ್ನು ಸ್ಥಾಪಿಸಲು ಕಾರಣರ್ತರಾದವರು. ವೃಂದಾವನ ಉದ್ಯಾನವನ್ನು ನರ್ಮಿಸಿದವರು ಮರ್ಜಾರವರು. ಸಂಸ್ಥಾನದ ಸಮೃದ್ಧಿ ಮತ್ತು ಸೊಬಗುಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರು ಹಿಂದೂ ಮುಸ್ಲಿಮ್ ಸೌಹರ್ದತೆಗೂ ಕಾರಣರಾಗಿದ್ದರು.
ಮಿರ್ಜಾ ಇಸ್ಮಾಯಿಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ನಿವೇಶನವು ಒಂದು ಬಯಲುಪ್ರದೇಶ. ಎದುರುಗಡೆ ಹಾರ್ಡಿಂಜ್ ರಸ್ತೆ. (ಈಗ ಪಂಪಮಹಾಕವಿರಸ್ತೆಯಾಗಿದೆ) ಅಕ್ಕಪಕ್ಕ ೨ ಹಾಗೂ ೩ನೇ ಮುಖ್ಯರಸ್ತೆ. ಹಿಂಭಾಗದಲ್ಲಿ ಎರಡು ಖಾಸಗಿ ಮನೆಗಳು. ಈ ಬಯಲಿನ ಅಂಚಿನಲ್ಲಿ ಆ ಎರಡೂ ಮನೆಗಳ ನಡುಭಾಗದಲ್ಲಿ ಮೂರು ದೊಡ್ಡ ಹೊಂಗೆಮರಗಳು. ಸಂಜೆಯ ಸೂರ್ಯನ ಬಿಸಿಲನ್ನು ತಡೆದು ಬಯಲಿಗೆ ನೆರಳೀಯುತ್ತಿದ್ದವು. ಭಾರತ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಎಲ್ಲ ಸಭೆಗಳೂ ಈ ಬಯಲಿನಲ್ಲಿ ನಡೆಯುತ್ತಿದ್ದವು. ಜನರು ಅದನ್ನು ಗಾಂಧೀಮೈದಾನ ಎಂದು ಕರೆಯುತ್ತಿದ್ದರು.
ಕೃಷ್ಣರಾಜಪರಿಷನ್ಮಂದಿರ ನಿರ್ಮಾಣವಾದಾಗ ಈಗಿನ ಸಭಾ ಮಂದಿರಕ್ಕೆ ಬದಲಾಗಿ ಎರಡು ಕೋಟೆಗಳನ್ನು ಕಟ್ಟಿರುವುದನ್ನು ಕಟ್ಟಡ ಏಳುವಾಗ ಆಗಾಗ ಬಂದು ನೋಡುತ್ತಿದ್ದ ಮಿರ್ಜಾ ಸಾಹೇಬರು ತಮ್ಮ ಗುರುಗಳಾದ ವೆಂಕಟನಾರಣಪ್ಪ ಅವರನ್ನು ಕಂಡು “ನಿಮಗೆ ಸಭೆ ಸಮಾರಂಭಗಳಿಗಾಗಿ ಒಂದು ಹಾಲ್ ಬೇಡವೇ? ಈ ಭಾಗವನ್ನು ಎರಡು ರೂಮುಗಳಾಗಿ ಒಡೆಯಬೇಡಿ. ಒಂದು ಹಾಲ್ ಮಾಡಿಕೊಳ್ಳಿ ಎಂದು ಬೋಧನೆ ಮಾಡಿ ಹಾಲ್ ವ್ಯವಸ್ಥೆ ಮಾಡಿದರು. ಅವರ ವಿವೇಕ ಹಾಗೂ ದೂರದೃಷ್ಟಿಯಿಂದ ಮಾಡಿದ ಈ ಕಾರ್ಯ ಪರಿಷತ್ತಿಗೆ ಅನುಕೂಲಕರವಾಯಿತು. ಕಾಲಕಾಲಕ್ಕೆ ಮೈಸೂರು ಸಂಸ್ಥಾನದಿಂದ ಧನಸಹಾಯ ತರಿಸಲು ಕಾರಣರಾದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮುದ್ರಣವಾಗಿರುವ ಸರ್ ಮಿರ್ಜಾ ಇಸ್ಮಾಯಿಲ್ ಎಂಬ ಪುಸ್ತಕದಲ್ಲಿ ಇವರ ಕುರಿತು ವಿಸ್ತೃತ ಮಾಹಿತಿ ದೊರೆಯುತ್ತದೆ.
1915ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಮುಖ ಗಣ್ಯರು
ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಇತಿಹಾಸ
ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕೀಕರಣದ ಹೋರಾಟಗಾರರೂ ಸಾಹಿತಿಗಳೂ ವಿದ್ವಾಂಸರೂ ಮೈಸೂರಿನ ಆಡಳಿತಗಾರರೂ, ಅಧ್ಯಾಪಕರೂ, ಸಾರ್ವಜನಿಕ ಗಣ್ಯರು ಹೀಗೆ ಹಲವಾರು ಗಣ್ಯವ್ಯಕ್ತಿಗಳ ನಾಡು – ನುಡಿ ಸೇವಕರ ಒಂದು ಗುಂಪಿನ ಜನರ ಸಂಯುಕ್ತ ಶ್ರಮ ತ್ಯಾಗಗಳ ಫಲವಾಗಿ ರೂಪುಗೊಂಡಿತು.
ಬೆಂಗಳೂರಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಮಾಡಿದ ಪ್ರಯತ್ನಗಳೂ ಹೆಚ್.ವಿ. ನಂಜುಂಡಯ್ಯ, ಬೆಳ್ಳಾವೆ ವೆಂಕಟನಾರಣಪ್ಪ, ಕರ್ಪೂರ ಶ್ರೀನಿವಾಸರಾವ್, ಅಚ್ಯುತರಾವ್, ಬಹಾದ್ದೂರ್ ಶ್ಯಾಮರಾವ್, ರಾ.ಹ. ದೇಶಪಾಂಡೆ, ಆಲೂರು ವೆಂಕಟರಾಯರು ಇನ್ನೂ ಅನೇಕರು ಸೇರಿ ಅಹರ್ನಿಶಿ ನಡೆಸಿದ ಚಿಂತನೆ – ಪರಿಶ್ರಮಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ರೂಪುಗೊಂಡು ಸ್ಥಾಪನೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೫ನೇ ಮೇ ೧೯೧೫ರಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ರೀತಿ ಒಂದು ಐತಿಹಾಸಿಕ ಮಹತ್ವದ ಘಟನೆಯಾಗಿದೆ.
ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಮೇಲೆ ೧೮೮೧ರಲ್ಲಿ ಚಾಮರಾಜೇಂದ್ರ ಒಡೆಯರ್ ಪಟ್ಟಕ್ಕೆ ಬಂದರು. ಆಗಿನಿಂದ ದಿವಾನರ ಆಡಳಿತ ಪ್ರಾರಂಭವಾಯಿತು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ದಿವಾನರಾದರು. ಇವರ ಅಧಿಕಾರಾವಧಿ ೧೯೧೨ರಿಂದ ೧೯೧೮ ರವರೆಗೆ ೬ ವರ್ಷಗಳು. ಈ ಮುಂಚೆ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಚೀಫ್ ಇಂಜಿನಿಯರಾಗಿ ೧೯0೯ರಲ್ಲಿ ನೇಮಕಗೊಂಡಿದ್ದರು. ಅನಂತರ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು.
೧. ಕಾರ್ಖಾನೆಗಳ ಕೈಗಾರಿಕಾ ಸಮಿತಿ
೨. ವಿದ್ಯಾಸಮಿತಿ
೩. ಭೂ ವ್ಯವಸಾಯ ಸಮಿತಿ
ವಿದ್ಯಾಸಮಿತಿಗೆ ಹೆಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ವಿ. ಸುಬ್ರಹ್ಮಣ್ಯ ಅಯ್ಯರ್ ಅವರು ಕಾರ್ಯದರ್ಶಿಗಳಾಗಿ ನೇಮಕವಾದರು. ಈ ವಿದ್ಯಾ ಸಮಿತಿಯವರು ಮುಖ್ಯವಾಗಿ ಎರಡು ಯೋಜನೆಗಳನ್ನು ನಿರ್ಧರಿಸಿದರು.
೧. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ
೨. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ವಿಷಯದಲ್ಲಿ ದೇಶದ ವಿದ್ವಜ್ಜನರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬೇಕೆಂದು ವಿದ್ಯಾಸಮಿತಿಯು ಕೆಲವು ವಿಷಯಗಳನ್ನು ಸಂಕಲ್ಪಿಸಿ ಆ ಬಗ್ಗೆ ಹಲವು ಉಪನ್ಯಾಸಗಳನ್ನು ವಿದ್ವಜ್ಜನರಿಂದ ಏರ್ಪಡಿಸಿತು. ಹಾಗೆ ಏರ್ಪಟ್ಟಿದ್ದು ಬಿ. ಎಂ. ಶ್ರೀ ಅವರ ಉಪನ್ಯಾಸ ಮೈಸೂರು ನಗರದಲ್ಲಿ, ೧೯೧೨-೧೩ರಲ್ಲಿ. ಆಗ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ದಸರಾ ಅಧಿವೇಶನಕ್ಕೆ ಬಂದಿದ್ದರು. ಎಂ. ವೆಂಕಟಕೃಷ್ಣಯ್ಯ, ಅಂಬಳೆ ಅಣ್ಣಯ್ಯ ಪಂಡಿತರು, ಕರ್ಪೂರ ಶ್ರೀನಿವಾಸರಾವ್, ಕೆ. ಕೃಷ್ಣಯ್ಯಂಗಾರ್ ಮೊದಲಾದ ಗಣ್ಯವ್ಯಕ್ತಿಗಳು ಬಂದಿದ್ದರು. ಮೈಸೂರಿನ ಗಾರ್ಡನ್ ಪಾರ್ಕಿನಲ್ಲಿರುವ ಡಿಸ್ಟ್ರಿಕ್ಟ್ ಆಫೀಸರ್ ಕಟ್ಟಡದಲ್ಲಿ ಸಭೆ ಸೇರಿತ್ತು. ಬೆಳಿಗ್ಗೆ ೯ರಿಂದ ೧೧ರವರೆಗೆ ಬಿಎಂಶ್ರೀ ಅವರು ಉಪನ್ಯಾಸ ನೀಡಿದರು. ಆ ಭಾಷಣದಲ್ಲಿ “ಕನ್ನಡಕ್ಕೆ ಹೊಸ ಸಾಹಿತ್ಯ ಬೇಕಾಗಿದೆ. ಪ್ರಾಚೀನಸಾಹಿತ್ಯದ ಅಭ್ಯಾಸ ಮಾಡಿ ಭಾಷೆಯ ಹಳೆಯ ಶಬ್ದರಾಶಿ ಪ್ರಯೋಗಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಹೊಸಬರವಣಿಗೆಗೆ ಅದು ಅತ್ಯಂತ ಅವಶ್ಯಕವಾದ ಸಿದ್ಧತೆ. ಸಂಸ್ಕೃತದ ಪರಿಚಯವಿಲ್ಲದಿದ್ದರೆ ಹೊಸ ಸಾಹಿತ್ಯಕ್ಕೆ ಬೇಕಾದ ಶಬ್ದಸಾಮಗ್ರಿ ಒದಗಲಾರದು. ಸಂಸ್ಕೃತ ಹೇಗೆ ಆವಶ್ಯಕವೋ ಇಂಗ್ಲಿಷ್ ಸಾಹಿತ್ಯವೂ ಹಾಗೇ ಅವಶ್ಯಕ. ಹೊಸಗನ್ನಡದಲ್ಲಿ ಹೊಸಹೊಸ ಛಂದಃಪ್ರಯೋಗಗಳು ಹೊಸಹೊಸ ಪದಸಂಯೋಜನೆಗಳೂ ಹೊಸಹೊಸ ಕಥಾಪ್ರಪಂಚದ ನಿರ್ಮಿತಿಗಳೂ ಸೇರಿ ನಮ್ಮ ಸಾಹಿತ್ಯ ಜನಜೀವನಕ್ಕೆ ಒಂದು ಹೊಸ ಪ್ರಚೋದಕ ಶೈಲಿಯಾಗಬೇಕು“ ಎಂದು ಹೇಳಿದರು.
ಅನಂತರ ೧೯೧೪ರ ಇಸವಿಯಲ್ಲಿ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಅವರು ವಾರ್ಷಿಕ ಸಮ್ಮೇಳನ ನಡೆಸಿದಾಗ ಆ ಸಭೆಯಲ್ಲಿ ಎಂ. ಶಾಮರಾವ್ ಅವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ೭ನೇ ಅಂಶದಲ್ಲಿ ಕನ್ನಡ ಸಾಹಿತ್ಯದ ಅಭಿವೃದ್ಧಿಗಾಗಿ ಒಂದು ಸಂಸ್ಥೆಯ ಸ್ಥಾಪನಾ ವಿಷಯವನ್ನು ಮಂಡಿಸುವಂತೆ ಕೋರಿದ್ದರು. ಅದರಂತೆ ಸಭೆಯು “ಕರ್ನಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸಿದವರ ಪ್ರೋತ್ಸಾಹಕ್ಕಾಗಿ ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದಿರಬೇಕು: ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತವೆಂದು ಸಂಪದಭ್ಯುದಯ ಸಮಾಜವು ಸರ್ಕಾರಕ್ಕೆ ಶಿಫಾರಸು ಮಾಡಬೇಕು” ಎಂದು ನಿರ್ಣಯಿಸಿತು.
ಅದರಂತೆ ೩೧ ಅಕ್ಟೋಬರ್ ೧೯೧೪ರಲ್ಲಿ ಸಂಪದಭ್ಯುದಯ ಸಮಾಜದ ವಿದ್ಯಾವಿಷಯಕ ಮಂಡಳಿಯವರು ಉಪಸಮಿತಿಯೊಂದನ್ನು ರಚಿಸಿದರು. ಆ ಸಮಿತಿಗೆ ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರು ಸದಸ್ಯರಾಗಿದ್ದರು. ಈ ಸಮಿತಿ “ಕನ್ನಡ ನಾಡುಗಳ ಪ್ರಮುಖರನ್ನು ಬೆಂಗಳೂರಿಗೆ ಆಹ್ವಾನಮಾಡಿ ಕರ್ಣಾಟಕ ಭಾಷಾ ಪರಿಷ್ಕರಣಕ್ಕೂ ಕರ್ಣಾಟಕ ಗ್ರಂಥಾಭಿವೃದ್ಧಿಗೂ ಅನುಕೂಲವಾಗುವಂತೆ ಸಮಿತಿಯೊಂದನ್ನು ಏರ್ಪಡಿಸುವ ಕಾರ್ಯವನ್ನು ನಿರ್ವಹಿಸಬೇಕು” ಎಂದು ತೀರ್ಮಾನಿಸಿತು.
ಈ ಉಪಸಮಿತಿಯು ೧೯೧೫ ಜನವರಿ ೭ರಂದು ಮೊದಲ ಸಭೆಯನ್ನು, ೧೯೧೫ ಮಾರ್ಚಿ ೨ರಂದು ೨ನೇ ಸಭೆಯನ್ನು, ೧೯೧೫ ಮಾರ್ಚಿ ೨೨ರಂದು ೩ನೇ ಸಭೆಯನ್ನು ನಡೆಸಿತು. ಆ ೩ ಸಭೆಗಳ ಸಂಕ್ಷಿಪ್ತ ವಿವರಣೆ ಹೀಗಿದೆ:
ಮೊದಲ ಸಭೆ : (೭–೧–೧೯೧೫)
ಜನವರಿ ೭ರಂದು ನಡೆದ ಉಪಸಮಿತಿಯ ಮೊದಲ ಸಭೆಯಲ್ಲಿ ಮುಂಬಯಿ ಮತ್ತು ಮದರಾಸ್ ಪ್ರಾಂತದಿಂದ ಸಮ್ಮೇಳನಕ್ಕೆ ಗಣ್ಯರನ್ನು ಆಹ್ವಾನಿಸುವ ವಿಷಯ ಇತ್ಯರ್ಥವಾಯಿತು. ಮೈಸೂರು ಮತ್ತು ಬೊಂಬಾಯಿಯ ಶಿಕ್ಷಣ ಇಲಾಖೆಗಳು ನಿಗದಿಪಡಿಸಿರುವ ಕನ್ನಡ ಪಠ್ಯ ಪುಸ್ತಕಗಳಲ್ಲಿ ಸಾಹಿತ್ಯಿಕ ಸಮಾನಾಂತರ ರೂಪದ ಬಳಕೆ ಬಗ್ಗೆ ಮೈಸೂರು ಕನ್ನಡ ಭೇದವನ್ನು ಮೈಸೂರು ಶಿಕ್ಷಣ ಇಲಾಖೆಯ ಮೂವರು ರೀಡರುಗಳೊಂದಿಗೆ ಚರ್ಚಿಸಿ, ವರದಿ ತಯಾರಿಸಿ ಮುಂದೆ ನಡೆಯಲಿರುವ ಸಮ್ಮೇಳನದಲ್ಲಿ ಮಂಡಿಸಬೇಕೆಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕೋರಲು ತೀರ್ಮಾನಿಸಲಾಯಿತು.
ಎರಡನೆಯ ಸಭೆ : (೨–೩–೧೯೧೫)
ಸಂಪದಭ್ಯುದಯ ಸಮಾಜದ ವಿದ್ಯಾವಿಷಯ ಸಮಿತಿಯ, ಮೂವರು ಪ್ರಾಜ್ಞ ಸದಸ್ಯರ ಉಪಸಮಿತಿಯು ೧೯೧೫ರ ಮಾರ್ಚಿ ೨ರಂದು ಎರಡನೆಯ ಸಭೆ ನಡೆಸಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಂಡಿತು.
- ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಇಬ್ಬರು ಲಿಂಗಾಯಿತರು, ಇಬ್ಬರು ಜೈನ ಪ್ರತಿನಿಧಿಗಳನ್ನು, ಬೊಂಬಾಯಿಯ ಕರ್ನಾಟಕಸಭೆ ಇಬ್ಬರು ಪ್ರತಿನಿಧಿಗಳನ್ನು ಸಮ್ಮೇಳನಕ್ಕೆ ಕಳುಹಿಸುವಂತೆ ಪ್ರಾರ್ಥಿಸುವುದು.
- ಬೊಂಬಾಯಿ ಶಿಕ್ಷಣ ಇಲಾಖೆಯ ಮೂರು ಕನ್ನಡಪುಸ್ತಕಗಳನ್ನು ಪರಿಶೀಲಿಸಿ, ಬೊಂಬಾಯಿ ಕನ್ನಡದಲ್ಲಿನ ಉಚ್ಚಾರಭೇದಗಳಲ್ಲಿರುವ ಬಗೆಗೆ ಸಂಕ್ಷಿಪ್ತವಾದ ವರದಿಯನ್ನು ಸಮ್ಮೇಳನಕ್ಕಾಗಿ ಸಿದ್ಧಪಡಿಸಬೇಕೆಂದು ಆರ್. ನರಸಿಂಹಾಚಾರ್, ಆರ್. ರಘುನಾಥರಾವ್, ಎಂ. ಲಕ್ಷ್ಮೀನಾರಣಪ್ಪ ಮತ್ತು ಬಿ. ಕೃಷ್ಣಪ್ಪ ಅವರುಗಳನ್ನೊಳಗೊಂಡ ಉಪಸಮಿತಿ ನೇಮಕ ಮಾಡುವುದು.
- ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಆಯ್ದ ಒಂದಕ್ಕಿಂತ ಹೆಚ್ಚು ವಿಷಯಗಳ ಬಗ್ಗೆ ಲೇಖನಗಳನ್ನು ಬರೆದು ೧೯೧೫ ಏಪ್ರಿಲ್ ೧೫ರೊಳಗೆ, ಪ್ರಾವಿಷನಲ್ ಸೆಕ್ರೆಟರಿ ಬಿ. ಕೃಷ್ಣಪ್ಪ ಅವರಿಗೆ ತಲುಪಿಸುವಂತೆ ಕೋರುವುದು.
ಆಯ್ದ ಐದು ಅಂಶಗಳು ಇಂತಿವೆ:
- ಕನ್ನಡನಾಡಿನ ಬೇರೆಬೇರೆ ಜಾಗಗಳಲ್ಲಿರುವ ಭಾಷಾಭಿಜ್ಞರಲ್ಲಿ ಐಕಮತ್ಯವನ್ನು ಪರಸ್ಪರ ಸೌಹಾರ್ದವನ್ನು ಹೆಚ್ಚಿಸುವುದಕ್ಕಾಗಿ ಉತ್ತಮೋಪಾಯಗಳನ್ನು ನಿರ್ಧರಿಸುವುದು.
- ಕನ್ನಡನಾಡಿನ ಬೇರೆಬೇರೆ ಭಾಗಗಳಲ್ಲಿ ಪ್ರಚಾರದಲ್ಲಿರುವ ಗ್ರಾಂಥಿಕಭಾಷೆಯನ್ನು ಒಂದೇರೂಪಕ್ಕೆ ತರಲು ತಕ್ಕ ಮಾರ್ಗವನ್ನು ನಿಶ್ಚಯಿಸುವುದು,
- ಕನ್ನಡವನ್ನೋದುವ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾಶಾಲೆಗಳಲ್ಲಿಯೂ ಪಾಠದ ಪುಸ್ತಕಗಳು ಒಂದೇ ಆಗಿರುವುದಕ್ಕೆ ಬೇಕಾದ ಪ್ರಯತ್ನಗಳನ್ನು ಮಾಡುವುದು.
- ಕನ್ನಡವನ್ನಾಡುವ ಜನಸಾಮಾನ್ಯರಲ್ಲಿ ಲೋಕವ್ಯವಹಾರ ಜ್ಞಾನವು ಸರಳ ಹಾಗೂ ಸುಲಭವಾಗಿ ಹರಡುವಂತೆ ತಕ್ಕ ಸಣ್ಣ ಪುಸ್ತಕಗಳನ್ನು ಬರೆಯಿಸಿ ಪ್ರಚಾರಮಾಡುವುದಕ್ಕೆ ಸಾಧಕವಾದ ಉತ್ತಮೋಪಾಯಗಳನ್ನು ನಿರ್ಣಯಿಸುವುದು,
- ಕನ್ನಡದಲ್ಲಿ ಬರೆಯುವ ಭೌತಿಕಾದಿ ನಾನಾ ಶಾಸ್ತ್ರಗಳಲ್ಲಿ ಪ್ರಯೋಗಿಸಬೇಕಾದ ಪಾರಿಭಾಷಿಕ ಶಬ್ದಗಳನ್ನು ನಿರ್ಣಯಿಸುವುದಕ್ಕೆ ತಕ್ಕ ಉತ್ತಮೋಪಾಯಗಳನ್ನು ಪರಿಶೀಲಿಸುವುದು.
ಮೂರನೆಯ ಸಭೆ : (೨೨–೩–೧೯೧೫)
೧೯೧೫ ಮಾರ್ಚಿ ೨೨ರಂದು ಸೇರಿದ ಮೂರನೆಯ ಸಭೆಯಲ್ಲಿ ಸಮ್ಮೇಳನವನ್ನು ೩-೫-೧೯೧೫ರಲ್ಲಿ ನಡೆಸಲು ತೀರ್ಮಾನಿಸಿತು. ಮೇಲ್ಕಾಣಿಸಿದ ೫ ವಿಷಯಗಳ ಬಗ್ಗೆ ವಿದ್ಯಾವಿಷಯಕ ಸಮಿತಿಯ ಉಪಸಮಿತಿಯ ವಿನಂತಿಯ ಮೇರೆಗೆ ೩೧ ಲೇಖನಗಳು ಬಂದವು. ಆ ಪೈಕಿ ೭ ಇಂಗ್ಲಿಷಿನಲ್ಲಿ ಉಳಿದವು ಕನ್ನಡದಲ್ಲಿದ್ದವು.
ಈ ಉಪನ್ಯಾಸಗಳನ್ನೆಲ್ಲ ಪರಿಶೀಲಿಸಿ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ನಿಯಮಗಳನ್ನು ನಿರ್ಧರಿಸುವ ವೇಳೆಯಲ್ಲಿ ಅದರ ಉದ್ದೇಶ ಸಾಧನಕ್ರಮಗಳನ್ನು ಮುಂದೆ ಹೇಳುವ ರೀತಿಯಲ್ಲಿ ವಿವರಿಸಿರುತ್ತಾರೆ:
- ಕನ್ನಡ ಭಾಷೆಯಲ್ಲಿ ಪಂಡಿತಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು ಈ ಮೂರನ್ನೂ ಬರೆಯಿಸುವುದು, ಅಥವಾ ಬರೆಯುವುದಕ್ಕೆ ಸಹಾಯಮಾಡುವುದು.
- ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
- ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
- ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
- ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
- ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
- ಕರ್ಣಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
- ಕರ್ಣಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡುಕೊಳ್ಳುವುದರಿಂದಾಗಲಿ, ಅವರು ಬರೆದಿರುವ ಪುಸ್ತಕಗಳನ್ನು ಅಚ್ಚು ಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ, ಅವರ ಗ್ರಂಥಗಳ ಮುದ್ರಣಾಧಿಕಾರವನ್ನು (Copyright) ಹಣಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ ಸಂಭಾವನೆಯನ್ನಾಗಲಿ ಕೊಡುವುದು.
- ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
- ಕರ್ಣಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
- ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
- ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.
ಅಲ್ಲದೆ, ಸಾಮಾನ್ಯವಾಗಿ ಕರ್ಣಾಟಕ ಭಾಷೋನ್ನತಿಗೂ ಗ್ರಂಥಾಭಿವೃದ್ಧಿಗೂ ಆವಶ್ಯಕವಾದ ಇತರ ಪ್ರಯತ್ನಗಳನ್ನು ಮಾಡುವುದು.
೨೨–೩–೧೯೧೫ರಲ್ಲಿ ಸೇರಿದ ಉಪಸಮಿತಿ ತೀರ್ಮಾನಿಸಿದಂತೆ ೩ ಮೇ ೧೯೧೫ರಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಏರ್ಪಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವು ಮಧ್ಯಾಹ್ನ ೩ ಗಂಟೆಗೆ ಪ್ರಾರಂಭವಾಯಿತು. ಪ್ರಥಮ ಸಮ್ಮೇಳನದಲ್ಲಿ ಭಾಗವಹಿಸಿದ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ – ಪುಟ ೫೭ರಲ್ಲಿ ಸ್ಪಷ್ಟವಾಗಿ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾದದ್ದು ಬೆಂಗಳೂರು ಸೆಂಟ್ರಲ್ ಕಾಲೇಜಿನ ಎದುರುಗಡೆಯಿರುವ ಈಗಿನ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ ಕಟ್ಟಡದ ನಡುವಣ ಸಭಾಮಂದಿರದಲ್ಲಿ ಎಂದಿದ್ದಾರೆ.ನಿಯಮಿತ ಕಾಲಕ್ಕೆ ಎಷ್ಟೋ ಮುಂಚಿತವಾಗಿಯೇ ವಿಶಾಲವಾದ ಹಜಾರವೆಲ್ಲಾ ಜನಸಂದಣಿಯಿಂದ ತುಂಬಿತ್ತು.
ಕರ್ಣಾಟಕದ ನಾನಾ ಪ್ರಾಂತಗಳ ಪ್ರಮುಖರೂ, ವಿದ್ವಾಂಸರೂ ದಯೆಮಾಡಿಸಿದ್ದರು. ಧಾರವಾಡ, ಬಿಜಾಪುರ, ಬೆಳಗಾಮು, ಗಾಲ್ವಿಯರ, ಬೊಂಬಾಯಿ ನಗರ, ಬೊಂಬಾಯಾಧಿಪತ್ಯದ ದೇಶೀಯ ಸಂಸ್ಥಾನಗಳು, ಮದರಾಸು ನಗರ, ಬಳ್ಳಾರಿ, ದಕ್ಷಿಣ ಕನ್ನಡೀಯ, ಮೈಸೂರು ಸಂಸ್ಥಾನದ ಡಿಸ್ಟ್ರಿಕ್ಟ್ಗಳು – ಈ ಪ್ರಾಂತಗಳ ಅನೇಕ ಪ್ರತಿನಿಧಿಗಳು ದಯೆಮಾಡಿಸಿ ಸಮ್ಮೇಳನವನ್ನು ಅಲಂಕರಿಸಿದ್ದರು. ಧಾರವಾಡದ ಕರ್ಣಾಟಕ ವಿದ್ಯಾವರ್ಧಕ ಸಂಘದ ಮತ್ತು ಕರ್ಣಾಟಕ ವಿದ್ಯಾವ್ಯಾಸಂಗ ಸಮಾಜದ, ಬೊಂಬಾಯಿ ನಗರದ ಕರ್ಣಾಟಕ ಸಭೆಯ, ಮತ್ತು ಮೈಸೂರು ಸಂಸ್ಥಾನದ ಕಾಲೇಜು ಮತ್ತು ಹೈಸ್ಕೂಲುಗಳ ಪ್ರತಿನಿಧಿಗಳೂ ದಯೆಮಾಡಿಸಿದ್ದರು. ಧಾರವಾಡದ ‘ಕರ್ಣಾಟಕ ವೃತ್ತ ಮತ್ತು ಧನಂಜಯ’, ಹುಬ್ಬಳ್ಳಿಯ ‘ಸಚಿತ್ರ ಭಾರತ’ ಪತ್ರಿಕೆ, ಮಂಗಳೂರಿನ ‘ಸ್ವದೇಶಾಭಿಮಾನಿ’ ಮತ್ತು ಮೈಸೂರು ಸಂಸ್ಥಾನದ ವೃತ್ತಾಂತ ಪತ್ರಿಕೆಗಳ ಸಂಪಾದಕರೂ ಹಾಜರಿದ್ದರು. ಹೀಗಿದ್ದುದರಿಂದ ಈ ಸಮ್ಮೇಳನಕ್ಕೆ ಕನ್ನಡ ನಾಡುಗಳ ಎಲ್ಲಾ ಕಡೆಗಳಿಂದಲೂ ಪ್ರತಿನಿಧಿಗಳು ಬಂದಿದ್ದಂತೆ ಭಾವಿಸಬಹುದು.
ಪರಿಷತ್ತಿನ ಸ್ಥಾಪನೆ ಎಲ್ಲಿ?
ಡಿವಿಜಿ ಅವರು ಸಭೆಗೆ ಬಂದವರನ್ನು ಕುರಿತು ಹೀಗೆ ಹೇಳಿದ್ದಾರೆ:
“ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾದದ್ದು ಬೆಂಗಳೂರು ಸೆಂಟ್ರಲ್ ಕಾಲೇಜಿನ ಎದುರುಗಡೆಯಿರುವ ಈಗಿನ ಆರ್ಟ್ಸ್ ಅಂಡ್ ಸಯನ್ಸ್ ಕಾಲೇಜ್ ಕಟ್ಟಡದ ನಡುವಣ ಸಭಾಮಂದಿರದಲ್ಲಿ.
ಪರಿಷತ್ತಿನ ಸಮಾರಂಭಕ್ಕಾಗಿ ಕನ್ನಡದೇಶದ ನಾನಾಭಾಗಗಳಿಂದ ಗಣ್ಯಜನ ಬಂದಿದ್ದರು. ಧಾರವಾಡದಿಂದ ರಾಮಚಂದ್ರ ಹಣಮಂತ ದೇಶಪಾಂಡೆ, ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು, (ಕರ್ಣಾಟಕ ಪ್ರಿಂಟಿಂಗ್ ಪ್ರೆಸ್ಸಿನ) ಜಠಾರ್ ಅವರು ಬಂದಿದ್ದರು. ಬಳ್ಳಾರಿಯಿಂದ ವಕೀಲ ತಿಮ್ಮಕೃಷ್ಣರಾಯರು, ಹೊಸಪೇಟೆಯ ರಾವ್ ಬಹದ್ದೂರ್ ಸಿ. ಹನುಮಂತಗೌಡರು, ಮದರಾಸಿನಿಂದ ಬೆನಗಲ್ ರಾಮರಾಯರು, ಮಂಗಳೂರಿನಿಂದ ಮುಳಿಯ ತಿಮ್ಮಪ್ಪಯ್ಯನವರು, ಮೈಸೂರಿನಿಂದ ಪುಂಗನೂರು ರಾಘವೇಂದ್ರಾಚಾರ್ಯರು – ಮೊದಲಾದ ವಿದ್ವಾಂಸರು ದಯಮಾಡಿಸಿದ್ದರು. ಬೆಂಗಳೂರು ಹೊರಗಿನಿಂದ ಬಂದಿದ್ದವರು ನೂರೈವತ್ತು- ಇನ್ನೂರು ಮಂದಿ ಇರಬಹುದು. ಬೆಂಗಳೂರಿನ ಸ್ಥಳೀಕರು ಮುನ್ನೂರು – ನಾಲ್ಕುನೂರು ಮಂದಿ. ಒಟ್ಟಿನಲ್ಲಿ ಅದು ದೊಡ್ಡ ಸಭೆ. ಬಿ. ಎಂ. ಶ್ರೀಕಂಠಯ್ಯನವರು ಅದರಲ್ಲಿದ್ದ ಹಾಗೆ ನನಗೆ ಜ್ಞಾಪಕವಿಲ್ಲ. ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿ – ಇವರು ಸಭೆಯಲ್ಲಿ ಎಲ್ಲಿಯೋ ಇದ್ದರಂತೆ. ಅವರಿಗೂ ನನಗೂ ಆಗ ಪರಿಚಯವಾಗಿರಲಿಲ್ಲ. ಅವರಿಬ್ಬರೂ ಆಗ್ಗೆ ಇನ್ನೂ ಅಪ್ರಸಿದ್ಧರು.”
೩–೫–೧೯೧೫ ಮೊದಲನೇ ದಿನದ ಸಮ್ಮೇಳನ
ಅಗ್ರಾಸನಾಧಿಪತಿಗಳನ್ನು ಚುನಾಯಿಸುವುದು ಸಮ್ಮೇಳನದ ಕಾರ್ಯಗಳಲ್ಲಿ ಮೊದಲನೆಯದಾಗಿದ್ದುದರಿಂದ, ಅಲ್ಲಿ ಸೇರಿದ್ದ ಮಹಾಜನಗಳು ಮ||ರಾ|| ರಾಜಮಂತ್ರಪ್ರವೀಣ ಎಚ್. ವಿ. ನಂಜುಂಡಯ್ಯ, ಎಂ.ಎ., ಎಂ.ಎಲ್., ಸಿ. ಐ.ಇ., ಎಂಬುವರನ್ನು ಅಗ್ರಾಸನಾಧಿಪತಿಗಳನ್ನಾಗಿ ಏಕಕಂಠ್ಯದಿಂದ ಚುನಾಯಿಸಿದರು. ಅಗ್ರಾಸನಾಧಿಪತಿಗಳು ಪೀಠವನ್ನಲಂಕರಿಸಿದ ಕೂಡಲೆ ಬೊಂಬಾಯಿಯ ಕರ್ಣಾಟಕ ಸಭೆಯ ಪ್ರತಿನಿಧಿಗಳಾದ ಮ|| ವಿ. ಬಿ. ಧಾರ್ವಾಡಕರ್, ಬಿ. ಎ. ಅವರು ತಾವು ರಚಿಸಿದ್ದ ದೇವತಾಪ್ರಾರ್ಥನಾರೂಪದ ಕೃತಿಯೊಂದನ್ನು ಮಧುರಧ್ವನಿಯಿಂದ ಹಾಡಿದರು. ಶ್ರೀಮನ್ಮಹಾರಾಜರವರೂ ಶ್ರೀಮದ್ಯುವರಾಜರವರೂ ಮೈಸೂರು ಸಂಸ್ಥಾನದ ದಿವಾನ್ ಸಾಹೇಬರವರೂ, ಮ || ಎಂ. ಎ. ಬಾಳರಾಜ ಅರಸಿನವರೂ, ರಾವ್ಬಹದೂರ್ ಫ್ರೊಫೆಸರ್ ಎಸ್. ಮಂಗೇಶರಾಯರವರೂ, ಫ್ರೊಫೆಸರ್ ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ಯರವರೂ, ಮದರಾಸಿನ ಡಾಕ್ಟರ್ ಸಿ. ಬಿ. ರಾಮರಾಯರವರೂ ಬರೆದು ಕಳುಹಿಸಿದ್ದ ಪ್ರೋತ್ಸಾಹಕ ಪತ್ರಿಕೆಗಳನ್ನು ರಾವ್ಬಹದ್ದೂರ್ ಎಂ. ಶಾಮರಾಯರವರು ಸಭೆಗೆ ಶ್ರುತಪಡಿಸಿದರು. ಸಭೆಯವರ ಸಂತೋಷಾತಿಶಯದ ಕೋಲಾಹಲದ ಮಧ್ಯದಲ್ಲಿ ಅಗ್ರಾಸನಾಧಿಪತಿಗಳು ಅನೇಕ ನವೀನ ವಿಷಯಗರ್ಭಿತವಾದ ತಮ್ಮ ಪ್ರೌಢೋಪನ್ಯಾಸವನ್ನು ಪಠಿಸಿದರು.
ಉಪನ್ಯಾಸ ಪ್ರವಾಹ
ಅದೇ ಮಧ್ಯಾಹ್ನಾತ್ಪರ ಸುಮಾರು ಎರಡೂವರೆ ಗಂಟೆಯಿಂದ ಆರು ಗಂಟೆಯವರೆಗೂ ಉಪನ್ಯಾಸಗಳು. ಕನ್ನಡ ನಾಡುಗಳ ಹಿರಿಮೆ, ಕನ್ನಡ ಭಾಷೆಯ ಹಿರಿಮೆ, ನಮ್ಮ ಪೂರ್ವಕವಿಗಳು, ನಮ್ಮ ಜನಕ್ಕೆ ಬೇಕಾಗಿರುವಂಥ ಸಾಹಿತ್ಯ, ಪರಿಷತ್ತಿನಿಂದ ದೇಶಕ್ಕೆ ಆಗಬಹುದಾದ ಪ್ರಯೋಜನಗಳು – ಈ ನಾನಾ ವಿಷಯಗಳನ್ನು ಕುರಿತು ವಿದ್ವಾಂಸರುಗಳು ಭಾಷಣ ಮಾಡಿದರು.
ಅಗ್ರಾಸನಾಧಿಪತಿಗಳ ಉಪನ್ಯಾಸವು ಸಾಮಾಜಿಕರಿಗೆ ಆನಂದವನ್ನುಂಟುಮಾಡಿತು. ಅಹೂತರಾಗಿ ಬೊಂಬಾಯಿ ನಗರದಿಂದ ದಯೆಮಾಡಿಸಿದ್ದ ಮ|| ಆರ್. ಎ. ಜಹಗೀರ್ದಾರ್ ಅವರು ಸಮ್ಮೇಳನದ ಪ್ರಥಮೋದ್ದೇಶವನ್ನು ಕುರಿತು ಬರೆದ ತಮ್ಮ ಲೇಖನವನ್ನು ಓದಿದರು. ಬಳಿಕ ದಕ್ಷಿಣ ಕನ್ನಡದ ಪುತ್ತೂರಿನಿಂದ ಆಗಮಿಸಿದ್ದ ಮ|| ಬೈಂದೂರು ಆನಂದರಾಯರು ಕನ್ನಡ ನಾಡುಗಳ ಗ್ರಾಂಥಿಕಭಾಷೆಯ ಏಕರೂಪತೆಯ ಸಾಧನಮಾರ್ಗವನ್ನು ಕುರಿತು ತಾವು ಬರೆದುದನ್ನು ಪಠಿಸಿದರು. ಆ ಮೇಲೆ ಮ|| ಗೋವಿಂದರಾಜಯ್ಯಂಗಾರ್ಯರು ಸಮ್ಮೇಳನದ ಪ್ರಥಮೋದ್ದೇಶವನ್ನು ಕುರಿತು ತಾವು ಬರೆದುದನ್ನೂ, ತದನಂತರದಲ್ಲಿ ಮ|| ಎಂ. ಎಸ್. ಪುಟ್ಟಣ್ಣನವರು ಕರ್ಣಾಟಕ ಭಾಷೆಯ ಪ್ರಾಚೀನ ನವೀನಸ್ಥಿತಿಗಳನ್ನು ಕುರಿತು ತಾವು ಬರೆದ ಲೇಖನವನ್ನೂ ಓದಿದರು. ಆಗ ಮಾಜಿ ಕೌನ್ಸಿಲರ್ ದಿವಾನ್ ಬಹದೂರ್ ರಾಜಸಭಾಭೂಷಣ ಮ|| ಪುಟ್ಟಣ್ಣಶೆಟ್ಟಿಯವರು ಆರು ಗಂಟೆಯಾಗಿ ಸಾಯಂಕಾಲವಾಗುತ್ತಾ ಬಂತೆಂತಲೂ, ಉಳಿದ ಲೇಖನಗಳನ್ನು ಓದಿ ನೋಡುವುದಕ್ಕೂ ಸಮ್ಮೇಳನದ ಮುಂದಿನ ದಿವಸಗಳಲ್ಲಿ ವಿಚಾರ ಮಾಡಬೇಕಾದ ವಿಷಯಗಳನ್ನು ನಿರ್ಧರಿಸುವುದಕ್ಕೂ ವಿಷಯ ನಿರ್ಧಾರಕ ಮಂಡಲಿಯೊಂದನ್ನು ಏರ್ಪಡಿಸುವುದು ಆವಶ್ಯಕವೆಂದು ತಿಳಿಸಿದರು. ಈ ಮಂಡಲಿಯಲ್ಲಿ ಮೈಸೂರಿನವರು ಒಂಬತ್ತು ಮಂದಿ, ಬೊಂಬಾಯಿ ಅಧಿಪತ್ಯದವರು ಆರುಮಂದಿ, ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳಿಗೆ ಸಂಬಂಧಪಟ್ಟವರು ಇಬ್ಬರು, ಮದರಾಸಾಧಿಪತ್ಯದವರು ಮೂರು ಮಂದಿ, ಆವಶ್ಯಕವಿದ್ದಲ್ಲಿ ಮತ್ತಷ್ಟು ಮಂದಿ ಇರಬಹುದೆಂದು ತೀರ್ಮಾನವಾಯಿತು.
ಇಲ್ಲಿಗೆ ಪ್ರಥಮ ದಿವಸದ ಸಮ್ಮೇಳನವು ಮುಗಿಯಿತು. ಆ ಮೇಲೆ ವಿಷಯ ನಿರ್ಧಾರಕ ಮಂಡಲಿಯವರು ಅದೇ ಹಜಾರದಲ್ಲಿ ಕುಳಿತು ಸಮ್ಮೇಳನದ ಎರಡನೆಯ ದಿನದಲ್ಲಿ ಚರ್ಚಿಸಿ ತೀರ್ಮಾನಿಸಬೇಕಾದ ವಿಷಯಗಳ ಮಸೂದೆಯನ್ನು ಪರ್ಯಾಲೋಚಿಸಿ ನಿರ್ಧರಿಸಿದರು.
ಪ್ರಥಮ ಕನ್ನಡ ಸಮ್ಮೇಳನದಲ್ಲಿ ಇಂಗ್ಲಿಷ್ ಬಳಕೆ
ಮೊದಲ ದಿನ
೧೯೧೫ರಲ್ಲಿ ಇಂಗ್ಲಿಷಿಗೆ ಪ್ರಾಧಾನ್ಯ ಹೇಗಿತ್ತು ಸಾರ್ವಜನಿಕ ಜೀವನದಲ್ಲಿ ಎಂಬುದಕ್ಕೆ ಈ ಸಮ್ಮೇಳನದ ಕೆಲವು ಸಂಗತಿಗಳು ಸಾಕ್ಷಿಯಾಗಿವೆ.
ಮೊದಲ ಸಂಗತಿ ಎಂದರೆ ಸಮ್ಮೇಳನದ ಆಹ್ವಾನ ಪತ್ರಿಕೆ ಇಂಗ್ಲಿಷಿನಲ್ಲಿತ್ತು. ಈ ಬಗ್ಗೆ ಮೈಸೂರು ಸ್ಟಾರ್ ಪತ್ರಿಕೆ ೨-೫-೧೯೧೫ ಭಾನುವಾರ ಪುಟ ೫ರಲ್ಲಿ ಪ್ರಕಟವಾದ ವಾಚಕರ ಪತ್ರದಲ್ಲಿ ಈ ಸಂಗತಿಯನ್ನು ತಿಳಿಸಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸೇರುವ ಕನ್ನಡಿಗರ ಸಮ್ಮೇಳನಕ್ಕೆ ಸಂಬಂಧಪಟ್ಟ ಆಹ್ವಾನಪತ್ರಿಕೆ ಮೊದಲಾದವುಗಳು ಇಂಗ್ಲಿಷಿನಲ್ಲಿ ಅಚ್ಚುಮಾಡಿಸಿ ಕಳುಹಿಸಲ್ಪಟ್ಟಿವೆ. ಆಹ್ವಾನ ಮಾಡಲ್ಪಟ್ಟವರಲ್ಲಿ ಬರಿಯ ಕನ್ನಡವನ್ನು ಬಲ್ಲವರು ಅದನ್ನು ಓದಿಸಿಕೊಳ್ಳುವುದಕ್ಕಾಗಿ ಇಂಗ್ಲಿಷ್ ಪ್ಯಾಸ್ ಮಾಡಿದವರಲ್ಲಿಗೆ ಹೋಗಬೇಕಾಯಿತು. ಸಮ್ಮೇಳನವನ್ನು ಕೂಡಿಸುವವರು ಕನ್ನಡಿಗರು, ಅಲ್ಲಿ ಸೇರುವವರು ಕನ್ನಡಿಗರು, ಅಲ್ಲಿ ಪಡೆದ ಲಾಭವು ಕನ್ನಡದ ಏಳ್ಗೆಯಾಗಿರುವಾಗ ಇಂಗ್ಲಿಷಿನ ಮಧ್ಯಸ್ತಿಕೆ ಯಾತಕ್ಕೆ? ಇದು ಪ್ರಥಮ ಕಬಳದಲ್ಲೇ ಮಕ್ಷಿಕಾಪಾತವಾದಂತಲ್ಲವೆ? ಇದು ಸ್ವಭಾಷಾಭಿಮಾನದ ಲಕ್ಷಣವೆ? ಇಂಥ ಪರಭಾಷಾ ಪ್ರೇಮದಿಂದಲೇ ಅಲ್ಲವೆ ನಮ್ಮ ಸ್ವಭಾಷಾಮಾತೆಯು ಮೂಲೆಮುಟ್ಟಾಗಿರುವುದು? ಆ ಹೀನಸ್ಥಿತಿಯನ್ನು ನಿವಾರಣೆ ಮಾಡುವ ಪ್ರಯತ್ನದಲ್ಲೂ ಇಂಥ ನಡೆಯಾದರೆ ಮುಂದಣ ಸಭೆಯ ಕೆಲಸವೂ, ಅದರ ಚರಿತಾರ್ಥವೂ, ಎಷ್ಟುಮಟ್ಟಿಗೆ ನಮ್ಮ ಭಾಷೆಗೆ ಹಿತವನ್ನು ಮಾಡುವುದೋ ನೋಡಬೇಕು ಎಂದು ನಮ್ಮ ಪತ್ರವ್ಯವಹಾರಕರೊಬ್ಬರು ಬರೆದಿರುತ್ತಾರೆ.
ಇಂಗ್ಲಿಷಿನಲ್ಲಿ ಪ್ರಾರಂಭೋಪನ್ಯಾಸ
ಸಮ್ಮೇಳನದ ಅಧ್ಯಕ್ಷರಾದ ಹೆಚ್. ವಿ. ನಂಜುಂಡಯ್ಯನವರ ಭಾಷಣವೂ ಇಂಗ್ಲಿಷ್ನಲ್ಲಿದ್ದು ಆ ಬಗ್ಗೆ ಡಿವಿಜಿ ಅವರು ಈ ರೀತಿ ಬರೆದಿದ್ದಾರೆ.
ಹೆಚ್.ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ಪ್ರಾರಂಭೋಪನ್ಯಾಸ ಮಾಡಿದರು. ಆದರೆ ಇಂಗ್ಲಿಷಿನಲ್ಲಿ! ವೇದಿಕೆಯ ಎದುರುಗಡೆ ಮೊದಲನೆಯ ಸಾಲಿನ ನಾಲ್ಕೈದು ಪೀಠಗಳ ಪೈಕಿ ಒಂದರಲ್ಲಿ ಬೆಳ್ಳಾವೆ ವೆಂಕಟನಾರಣಪ್ಪನವರು ಕುಳಿತಿದ್ದರು. ನಾನು ಅವರ ಪಕ್ಕದಲ್ಲಿದ್ದೆ. ನಂಜುಂಡಯ್ಯನವರು ಇಂಗ್ಲಿಷಿನಲ್ಲಿ ತಮ್ಮ ಮೊದಲ ಮಾತುಗಳನ್ನು ನುಡಿಯುತ್ತಿದ್ದಂತೆಯೇ ವೆಂಕಟನಾರಣಪ್ಪನವರು ಮೆಲ್ಲನೆಯ ಧ್ವನಿಯಲ್ಲಿ-
“Nonsense. ಇದು ಶುದ್ಧ Nonsense ಅಷ್ಟೆ” – ಎಂದರು. ನಂಜುಂಡಯ್ಯನವರಿಗೆ ಅದು ಕೇಳಿಸಿರಬೇಕು. ಅವರ ಎಡಮೀಸೆ ಹಾರಿತು. ಅವರನ್ನು ಬಲ್ಲವರಿಗೆ ಅದು ನಗುವಿನ ಲಾಂಛನವೆಂಬುದು ಗೊತ್ತಿತ್ತು. ನಂಜುಂಡಯ್ಯನವರು ವೆಂಕಟನಾರಣಪ್ಪನವರ ಟೀಕೆಯನ್ನು ಕೇಳಲಿಲ್ಲವೋ ಏನೋ ಎಂಬಂತೆ ಉಪನ್ಯಾಸ ಮುಗಿಸಿ ಸಭೆ ಪುನಃ ಅದೇ ಜಾಗದಲ್ಲಿ ಆ ಮಧ್ಯಾಹ್ನ ಎರಡೂವರೆ ಗಂಟೆಗೆ ಸೇರತಕ್ಕದ್ದೆಂದು ತೀರ್ಮಾನ ಹೇಳಿ, ವೇದಿಕೆಯಿಂದ ಇಳಿದು ಬಂದು ವೆಂಕಟನಾರಣಪ್ಪನವರ ಹತ್ತಿರ ನಿಂತು, “ಅದಕ್ಕೇನು ಕನ್ನಡದಲ್ಲಿ ಮಾತಿಲ್ಲವೋ?” – ಎಂದು ಕೇಳಿದರು.
ವೆಂಕಟನಾರಣಪ್ಪನವರು ನಕ್ಕರು. ನನ್ನ ಕಡೆ ತಿರುಗಿ “ಏನಪ್ಪಾ Nonsense ಅಂಬೋದಕ್ಕೆ ಕನ್ನಡದಲ್ಲಿ ಏನು?” ಎಂದು ಕೇಳಿದರು. ನಾನು “ನಾನ್ಸೆನ್ಸೇ” ಎಂದೆ. ಆ ಕ್ಷಣ ನನಗೆ ಬೇರೆ ಏನೂ ಹೊಳೆಯಲಿಲ್ಲ. ಆಮೇಲೆ ನಂಜುಂಡಯ್ಯನವರು ಒಂದು ಸಣ್ಣ ವಿವರಣೆ ಕೊಟ್ಟರು:
“ನಾವು ಈಗ ಮಾಡುತ್ತಿರುವ ಪ್ರಯತ್ನ ಕನ್ನಡ ತಿಳಿಯದ ಜನರಿಗೂ ತಿಳಿಯಬೇಕಾದದ್ದು. ನಮ್ಮ ಪರಿಷತ್ತಿಗೆ ಹಣ ಕೊಡಬೇಕಾದ ಸರಕಾರಕ್ಕೂ ತಿಳಿಯಬೇಕು; ಸರಕಾರದ ಮೇಲೆ ಉಸ್ತುವಾರಿ ನಡೆಸುವ ಬ್ರಿಟಿಷ್ ರೆಸಿಡೆಂಟರಿಗೂ ತಿಳಿಯಬೇಕು. ಅವರಿಗೆಲ್ಲ ತಿಳಿದರೆ ನಮಗೇನೂ ನಷ್ಟವಾಗದು; ಕೊಂಚ ಪ್ರಯೋಜನವೂ ಇರಬಹುದು ಅಲ್ಲವೇ?”
ಎರಡನೆಯ ದಿವಸದ ಸಮ್ಮೇಳನದಲ್ಲಿ ನಡೆದ ಕೆಲಸ (೪–೫–೧೯೧೫)
ಇದೇ ಹೈಸ್ಕೂಲಿನ ಹಜಾರದಲ್ಲಿ ಸಮ್ಮೇಳನವು ಅಪರಾಹ್ನ ೩ ಗಂಟೆಗೆ ಸರಿಯಾಗಿ ಸೇರಿತು. ಸಭೆಯ ಪ್ರಾರ್ಥನಾನುಸಾರವಾಗಿ ದಿವಾನ್ ಬಹದೂರ್ ರಾಜಸಭಾಭೂಷಣ ಮ|| ಕೆ. ಪಿ. ಪುಟ್ಟಣ್ಣ ಶೆಟ್ಟಿಯವರು ಅಗ್ರಾಸನವನ್ನು ಅಲಂಕರಿಸಿದರು. ಮುಂದೆ ವಿವರಿಸಲ್ಪಡುವ ಸಲಹೆಗಳು ಚರ್ಚಿತವಾಗಿ ತೀರ್ಮಾನಿಸಲ್ಪಟ್ಟುವು:
೧. ಕರ್ಣಾಟಕ ಭಾಷಾ ಸಂಸ್ಕರಣಕ್ಕಾಗಿಯೂ ಕರ್ಣಾಟಕ ಗ್ರಂಥಾವಳಿಯ ಅಭಿವೃದ್ಧಿಗಾಗಿಯೂ ಬೆಂಗಳೂರಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿನೊಡನೆ ಪ್ರಧಾನಸಭೆಯೊಂದು ಸ್ಥಾಪಿತವಾಗಬೇಕು.
೨. ಬೊಂಬಾಯಿ, ಮದರಾಸು, ಹೈದರಾಬಾದು ಮತ್ತು ಕೊಡಗು ಪ್ರಾಂತ್ಯಗಳಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಶಾಖೆಗಳಿರಬೇಕು; ಮತ್ತು ಈ ಪರಿಷತ್ತಿನ ಉದ್ದೇಶಗಳನ್ನೇ ಇಟ್ಟುಕೊಂಡು ಕೆಲಸಮಾಡುವ ಇತರ ಸಂಘಗಳನ್ನು ತನ್ನ ಜತೆಗೆ ಸೇರಿಸಿಕೊಳ್ಳುವುದಕ್ಕೆ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಅಧಿಕಾರವಿರಬೇಕು.
ನಿಬಂಧನೆಗಳ ರಚನೆ
ಅಂದಿನ ಬೆಳಗ್ಗೆ ಸಂಸ್ಥೆಯ ನಿಯಮಾವಳಿಯನ್ನು ತಯಾರು ಮಾಡುವುದಕ್ಕಾಗಿ ನೇಮಕವಾಗಿದ್ದ ಉಪಸಮಿತಿ ತನ್ನ ನಿಯಮಗಳ ಕರಡುಪ್ರತಿಯನ್ನು ಒಪ್ಪಿಸಿತು. ಆ ಉಪಸಮಿತಿಯಲ್ಲಿದ್ದವರು ಕರ್ಪೂರ ಶ್ರೀನಿವಾಸರಾಯರು. ಡಾ|| ಪಿ. ಎಸ್. ಅಚ್ಯುತರಾಯರು, ಪುಟ್ಟಣ್ಣನವರು, ಬಾಪು ಸುಬ್ಬರಾಯರು, ಆರ್. ರಘುನಾಥರಾಯರು, ಟಿ. ಲಕ್ಷ್ಮೀನರಸಿಂಹರಾಯರು ಮತ್ತು ಡಿ. ವಿ. ಗುಂಡಪ್ಪನವರು.
ಇಲ್ಲಿಗೆ ಎರಡನೆಯ ದಿನದ ಸಭೆಯು ಭರಕಾಸ್ತಾಯಿತು. ಬಳಿಕ ವಿಷಯ ನಿರ್ಧಾರಕ ಮಂಡಲಿಯವರು ಮೂರನೆಯ ದಿನ ಸಲಹೆಗಳನ್ನು ಕ್ರಮಪಡಿಸುವುದಕ್ಕೆ ಸಭೆಸೇರಿದರು.
ಮೂರನೆಯ ದಿನದ ಕೆಲಸ (೫–೫–೧೯೧೫)
ಅದೇ ಹಜಾರದಲ್ಲಿ ಮೂರನೆಯ ದಿವಸವೂ ಸಮ್ಮೇಳನವು ಅಪರಾಹ್ನ ೩ ಗಂಟೆಗೆ ಸರಿಯಾಗಿ ಸೇರಿತು. ಮ|| ಕರ್ಪೂರ ಶ್ರೀನಿವಾಸರಾಯರು ಅಗ್ರಾಸನವನ್ನು ಅಲಂಕರಿಸಬೇಕೆಂದು ಡಾಕ್ಟರು ಅಚ್ಯುತರಾಯರವರು ಸಭೆಗೆ ಬಿನ್ನವಿಸಲು ಸಭೆಯವರೆಲ್ಲರೂ ಹರ್ಷಾತಿಶಯದ ಕಲಕಲದೊಡನೆ ಒಪ್ಪಿದರು.
ಆ ದಿವಸದಲ್ಲಿ ಪರಿಷತ್ತಿನ ರಚನಾಕ್ರಮವೂ, ನಿಬಂಧನೆಗಳೂ ಜಿಜ್ಞಾಸಾಪೂರ್ವಕವಾಗಿ ತೀರ್ಮಾನಿಸಲ್ಪಟ್ಟವು.
ಮೂರನೆಯ ದಿನ ಕರಡು ನಿಯಮಾವಳಿಯು ಸಭೆಯ ಪರ್ಯಾಲೋಚನೆಗೆ ಬಂದಿತು. ಅದರ ಮೇಲೂ ಪಂಡಿತ ಭಾಷಣಗಳು. ದಾತೃಗಳು, ಪ್ರದಾತೃಗಳು, ಮಹಾಪ್ರದಾತೃಗಳ ಆಶ್ರಯದಾತರು, ಆಶ್ರಯಕರ್ತರು, ಪೋಷಕರು, ಪರಿಪೋಷಕರು – ಇಂಥ ಮಾತುಗಳೆಲ್ಲ ಚರ್ಚೆ. ಒಬ್ಬರು ಶಬ್ದಮಣಿದರ್ಪಣವನ್ನು ಹೇಳಿದರೆ ಇನ್ನೊಬ್ಬರು ಶಾಸನಪ್ರಯೋಗವನ್ನು ಹೇಳಿದರು….. ಹೀಗೆ ಬೆಳೆಯಿತು ವಿಚಾರಸರಣಿ.
ನಂಜಂಡಯ್ಯನವರು ಬಹುಮಟ್ಟಿಗೆ ನಗುತ್ತ, ಒಂದೊಂದು ಸಾರಿ ಕಟು ಟೀಕೆ ಮಾಡುತ್ತ, ಹಾಗೂ ಈ ಕೆಲಸವನ್ನು ಮೂರನೆಯ ದಿನ ಸಂಜೆ ನಾಲ್ಕು ಗಂಟೆಗೆ ಮುಗಿಸಿದರು.
ಪರಿಷತ್ತಿನ ಸ್ಥಾಪನಕಾರ್ಯದಲ್ಲಿ ಮೊದಲಿನಿಂದ ಕಡೆಯವರೆಗೂ ಶ್ರಮಿಸಿದವರು ಸೆಕ್ರೆಟರಿ ಬಿ. ಕೃಷ್ಣಪ್ಪ, ಎಂ. ಎ., ಅವರು. ಅವರ ಪಾಂಡಿತ್ಯ ಎಷ್ಟು ದೊಡ್ಡದೋ ಅವರ ತಾಳ್ಮೆಯೂ ಕಾರ್ಯದಕ್ಷತೆಯೂ ಅಷ್ಟು ಪ್ರಶಂಸನೀಯವಾದವು. ಆ ಮಹನೀಯರು ಮೈಸೂರು ವಿಶ್ವವಿದ್ಯಾನಿಲಯದ ಮೊದಲನೆಯ ಕನ್ನಡ ಪ್ರೊಫೆಸರಾಗಿದ್ದರು.
ಇದು ವಿಷಯ. ಮೊದಲು ಕರ್ನಾಟಕವೆ, ಕರ್ಣಾಕಟವೆ, ಕನ್ನಡವೆ? ಅಥವಾ ಕರಿನಾಡೆ? ಮೂರನೆಯದಾಗಿ ಕರ್ಣಾಟವೆ, ಕರ್ಣಾಟಕವೇ? ಅಥವಾ ಕಾರ್ಣಾಟಕೀ ಎಂದೆ? ನಾಲ್ಕನೆಯದಾಗಿ ಪರಿಷತ್ತೆ, ಸಂಸತ್ತೆ ಅಥವಾ ಪರಿಷದವೆ, ಅಥವಾ ಸಂಸದವೆ, ಅಥವಾ ಸಭಾ ಎನ್ನತಕ್ಕದ್ದೆ? ಸಭೆ ಸೇರಿದಾಗ ಅಧ್ಯಕ್ಷ ನಂಜುಂಡಯ್ಯನವರು ಹೀಗೆ ಹೇಳಿದರು:
“ಈಗ ಎರಡು ದಿನವೆಲ್ಲ ಹೆಸರನ್ನು ಚರ್ಚಿಸುವುದಕ್ಕಾಗಿ ಕಳೆದೆವಲ್ಲ. ಈಗಲಾದರೂ ಕೆಲಸಕ್ಕೆ ಉಪಕ್ರಮ ಮಾಡೋಣ. ನಿಮ್ಮಲ್ಲಿ ರಘುನಾಥರಾಯರೋ ರಾಘವೇಂದ್ರಾಚಾರ್ಯರೋ ಇನ್ನು ಯಾರಾದರೂ ಒಂದು ಹೆಸರನ್ನು ಸೂಚಿಸೋಣವಾಗಲಿ, ಅದನ್ನು ಸಭೆಯ ವೋಟಿಗೆ ಹಾಕುತ್ತೇನೆ. ಭಾಷಣಗಳು ಸಾಕು. ಆ ಸೂಚನೆ ಅಂಗೀಕಾರವಾಗದೆ ಹೋದರೆ ಆಮೇಲೆ ಇನ್ನೊಂದು ಸೂಚನೆ. ಅನಂತರ ಮತ್ತೊಂದು – ಕ್ರಮವನ್ನನುಸರಿಸೋಣ.”
ಸಭೆಯಲ್ಲಿ ಯಾರೋ ಒಬ್ಬರು “ಇನ್ನೂ ಮಾತನಾಡುವವರಿದ್ದಾರೆ, ಸ್ವಾಮಿ” ಎಂದರು. ನಂಜುಂಡಯ್ಯನವರು “ಹೌದು ಹೌದು. ನಾವೆಲ್ಲ ಅದೇ. ಊರು ತುಂಬ ಮಾತನಾಡುವವರೇ. ಆದರೆ ಕೆಲಸವೂ ನಡೆಯಬೇಕಲ್ಲ?” ಎಂದರು. ಕೆಲಸಕ್ಕೆ ಉಪಕ್ರಮ ಮಾಡಿಸಿದರು.
ನಾಲ್ಕನೆಯ ದಿನ ೬–೫–೧೯೧೫
೪ನೇ ದಿನ ಮಧ್ಯಾಹ್ನ ಎರಡೂವರೆ ಗಂಟೆಗೆ ಪ್ರಾರಂಭವಾಯಿತು. ಕರ್ಪೂರ ಶ್ರೀನಿವಾಸರಾಯರು ಅಗ್ರಾಸನಾಧಿಪತಿಗಳಾಗಿದ್ದರು. ನಾಲ್ಕನೇ ದಿನದ ಸಭೆಯಲ್ಲಿ ನಿರ್ಣಯಗಳು ಮಂಡಿಸಲ್ಪಟ್ಟು ಅಂಗೀಕಾರವಾಯಿತು. ಪರಿಷತ್ತಿನ ಕಾರ್ಯಕಾರಿ ದಿನವಿಡೀ ರೂಪುಗೊಂಡಿತು.
ಸಮ್ಮೇಳನದ ಕಾರ್ಯವು ಇಲ್ಲಿಗೆ ಮುಗಿಯಲು, ಪಂಡಿತರುಗಳಾದ ಅಯ್ಯಾಶಾಸ್ತ್ರಿಗಳೂ, ದೇವೋತ್ತಮ ಜೋಯಿಸರೂ, ಶ್ರೀರಂಗಾಚಾರ್ಯರೂ, ಕೋದಂಡರಾಮಶಾಸ್ತ್ರಿಗಳೂ, ಮ || ಚಿಕ್ಕೋಡಿಯವರೂ, ಕೇಶವಯ್ಯನವರೂ ಪರಿಷತ್ತಿನ ಉತ್ತರೋತ್ತರ ಶ್ರೇಯಸ್ಸನ್ನು ಬಯಸಿ ಪ್ರಾರ್ಥನಾರೂಪದಲ್ಲಿ ತಾವು ತಾವು ರಚಿಸಿದ ಪದ್ಯಗಳನ್ನು ಶ್ಲೋಕಗಳನ್ನೂ ರಾಗದಿಂದ ಓದಿದರು.
ಬೇರೆಬೇರೆ ಕನ್ನಡನಾಡುಗಳ ಮಹನೀಯರುಗಳ ಪರಿಚಯವನ್ನು ಸಂಪಾದಿಸಿಕೊಂಡು ಸನ್ಮಿತ್ರ ಮಂಡಲಿಯನ್ನು ವಿಸ್ತರಿಸಿಕೊಳ್ಳುವುದಕ್ಕೂ ಮೈಸೂರು ಸಂಸ್ಥಾನ ಪಂಡಿತರ ಮಂಡಲಿಯೊಡನೆ ಸಂಭಾಷಣೆಯನ್ನು ಬೆಳೆಯಿಸುವುದಕ್ಕೂ ಈ ಪರಿಷತ್ತಿನ ಮೂಲಕ ಅವಕಾಶವನ್ನು ಕಲ್ಪಿಸಿಕೊಟ್ಟು ಮಹೋಪಕಾರವನ್ನು ಮಾಡಿದುದಕ್ಕಾಗಿ ಮಹಾಪ್ರಭುಗಳಾದ ಶ್ರೀಮನ್ಮಹಾರಾಜರವರಿಗೂ ಅವರ ಸರ್ಕಾರಕ್ಕೂ ಸಮ್ಮೇಳನವನ್ನೇರ್ಪಡಿಸಿದ ಮಹನೀಯರುಗಳಿಗೂ ಬೊಂಬಾಯಿ ಕರ್ಣಾಟಕದವರ ಪರವಾಗಿ ವಂದನೆಗಳನ್ನು ಸಮರ್ಪಿಸುತ್ತಾ ಮ || ದೇಶಪಾಂಡೆಯವರೂ, ಜೋಷಿಯವರೂ, ದೇಸಾಯಿಯವರೂ, ವಾಸುದೇವಾಚಾರ್ಯರವರೂ, ನರ್ಗುಂದಕರವರೂ, ಸೆಟ್ಲೂರವರೂ, ಜಹಗೀರ್ದಾರವರೂ, ಚಿಕ್ಕೋಡಿಯವರೂ, ಮಂಗಸೂಲಿಯವರೂ ಉತ್ಸಾಹಭರಿತರಾಗಿ ಪ್ರವಚನಗಳನ್ನು ಮಾಡಿದರು.
ಮೈಸೂರು ಸಂಪದಭ್ಯುದಯ ಸಮಾಜದವರ ಮೂಲಕ ಈ ಕರ್ಣಾಟ ವಿದ್ವನ್ಮಂಡಲಿಯ ಸಮ್ಮೇಳನವನ್ನು ಏರ್ಪಡಿಸಿ, ಬೇರೆಬೇರೆ ಕನ್ನಡ ನಾಡುಗಳಿಂದ ಆಹ್ವಾನವನ್ನು ಹೊಂದಿ ಬಂದ ಮಹನೀಯರನ್ನು ಒಂದೇ ಎಡೆಯಲ್ಲಿ ಸಂಧಿಸುವುದಕ್ಕೆ ತಮಗೆ ಅಸಾಧಾರಣವಾದ ಆನುಕೂಲ್ಯವನ್ನು ಕಲ್ಪಿಸಿಕೊಟ್ಟುದುದಕ್ಕಾಗಿ ಶ್ರೀಮನ್ಮಮಹಾರಾಜ ಸಾಹೇಬ್ ಬಹದೂರವರಿಗೂ ಅವರ ಸರ್ಕಾರಕ್ಕೂ ತಮ್ಮ ಕೃತಜ್ಞತೆಯನ್ನು ಪ್ರದರ್ಶಿಸುತ್ತಾ ಮದರಾಸು ಕರ್ಣಾಟಕದವರ ಪರವಾಗಿ ಮ || ತಿಮ್ಮಕೃಷ್ಣರಾಯರವರೂ, ರಾಮರಾಯರವರೂ, ಮಂಗೇಶರಾಯರವರೂ, ವೆಂಕಟರಾಯರವರೂ ವಂದನೆಗಳನ್ನು ಸಮರ್ಪಿಸುತ್ತಾ ಮೃದುಮಧುರ ವಚನಗಳಿಂದ ಪ್ರಸಂಗಿಸಿದರು.
ಒಂದೇ ಸಮನಾದ ವಿನಯದೊಡನೆಯೂ ಸಾಮರ್ಥ್ಯದೊಡನೆಯೂ ಶ್ರದ್ಧೆಯೊಡನೆಯೂ ತಾಳ್ಮೆಯೊಡನೆಯೂ ಅಗ್ರಾಸನಾಧಿಪತಿಗಳು ಸಮ್ಮೇಳನದ ನಾಲ್ಕು ದಿವಸಗಳ ಕೆಲಸಗಳನ್ನು ನಡೆಯಿಸಿದುದು ಶ್ಲಾಘನೀಯವೆಂದೂ, ಸಮ್ಮೇಳನದ ಏರ್ಪಾಡುಗಳನ್ನು ಸಮರ್ಪಕವಾಗುವಂತೆ ನಿರ್ಮಿಸಿದ ಮಹನೀಯರ ಸಾಮರ್ಥ್ಯವು ಅಸಾಧಾರಣವಾದುದೆಂದೂ ಅಂತಹವರ ಸಹಾಯವು ಪರಿಷತ್ತಿನ ಕಾರ್ಯನಿರ್ವಾಹಕ್ಕೆ ದೊರೆತುದು ಕರ್ಣಾಟಕ ಮಹಾಮಂಡಲಿಯ ಪುಣ್ಯೋದಯವೆಂದೇ ಹೇಳಬೇಕೆಂದೂ ಪರಮೋತ್ಸಾಹದಿಂದ ವರ್ಣಿಸುತ್ತ ಮ|| ಮುದವೇಡಕರ್ರವರು ವಾಗ್ವೈಖರಿಯೊಡನೆ ವಂದನೆಗಳನ್ನು ಸಮರ್ಪಿಸಿದರು.
ನಾಲ್ಕನೇದಿನ ಸಂಜೆ ಬಂದಿದ್ದ ಮಹನೀಯರಿಗೆ ಏರ್ಪಡಿಸಿದ್ದ ಸಂತೋಷಕೂಟವನ್ನು ಡಿವಿಜಿ ಹೀಗೆ ಬಣ್ಣಿಸಿದ್ದಾರೆ, (ಜ್ಞಾ. ಚಿತ್ರಶಾಲೆ ಪುಟ ೫೯):
ಅಂದು ಸಂಜೆ, ಬಂದಿದ್ದ ಮಹನೀಯರ ಸಂತೋಷಕ್ಕಾಗಿ ಒಂದು ಸಂತೋಷಕೂಟವನ್ನೇರ್ಪಡಿಸಿತ್ತು. ಅದು ಸೆಂಟ್ರಲ್ ಕಾಲೇಜಿನ ವಿದ್ಯಾಮಂದಿರದ ಆವರಣದಲ್ಲಿ. ಸದಸ್ಯರಲ್ಲಿ ಬಹುಮಂದಿ ಅಲ್ಲಿಯೇ ಬಿಡಾರ ಮಾಡಿಕೊಂಡಿದ್ದರು.
ಈ ಸಂತೋಷಕೂಟವನ್ನು ಏರ್ಪಡಿಸುವ ಯೋಚನೆ ಮಾಡಿ ನಾನು ನನ್ನ ಮಾನ್ಯಮಿತ್ರರಾದ ಸರಕಾರದ ಸೆಕ್ರೆಟರಿ ಡಿ. ಎಂ. ನರಸಿಂಹರಾಯರ ಸಹಾಯವನ್ನು ಬೇಡಿದೆ. ಎರಡು ಡೇರಾಗಳು. ಐವತ್ತು ಮೇಜುಗಳು, ಇನ್ನೂರು ಕುರ್ಚಿಗಳು, ನಾಲ್ಕು ಜಮಖಾನೆಗಳು – ಇವಷ್ಟನ್ನು ಸರಕಾರದ ಉಗ್ರಾಣದಿಂದ ಸಾಲ ಕೊಡಿಸುವುದಾದರೆ ಅದಕ್ಕೆ ತಗಲುವ ಬಾಡಿಗೆಯನ್ನು ನಾನು ಕೊಡುವುದಾಗಿ ಹೇಳಿದೆ. ಅವರು “ನಿನಗೆ ಯಾಕಯ್ಯ ಅಷ್ಟು ಶ್ರಮ? ಅಲ್ಲಿ ಹಾಸ್ಟೆಲ್ ವಾರ್ಡನ್ ಬಿ. ವೆಂಕಟೇಶಾಚಾರ್ಯರಿದ್ದಾರಲ್ಲ, ಅವರು ಈ ಸಹಾಯವನ್ನೆಲ್ಲ ನಿನಗೆ ಸುಲಭವಾಗಿ ಒದಗಿಸಬಹುದು” ಎಂದರು.
“ನನಗೆ ವೆಂಕಟೇಶಾರ್ಯರ ಪರಿಚಯ ಇಲ್ಲವಲ್ಲ?”
“ಅದೇನು ಕಷ್ಟ?” – ಎಂದು ನರಸಿಂಗರಾಯರು ನನ್ನೊಡನೆ ವೆಂಕಟೇಶಾಚಾರ್ಯರನ್ನು ನೋಡಲು ಬಂದರು. ಪೂಜ್ಯರಾದ ವೆಂಕಟೇಶಾಚಾರ್ಯರಿಗೂ ನನಗೂ ಮೊದಲು ಭೇಟಿಯಾದದ್ದು ಹೀಗೆ. ಅವರು ಉತ್ಸಾಹದಿಂದ ಸಹಕರಿಸಿ ಎಲ್ಲ ವಿಧಗಳಲ್ಲಿಯೂ ಸಹಾಯ ಕೊಟ್ಟರು. ಆ ಕೂಟದಲ್ಲಿ ಪಿಟೀಲು ವಿದ್ವಾನ್ ಪುಟ್ಟಪ್ಪನವರ ಬಾಯಿ ಹಾಡಿಕೆ ನಡೆಯಿತು. ಬಹಳ ಸೊಗಸಾಗಿತ್ತೆಂದು ಕೇಳಿದವರೆಲ್ಲ ಹೇಳಿದರು. ಗಂಧಪುಷ್ಪ ವಿನಿಯೋಗವಾದ ಮೇಲೆ ಎಲ್ಲರೂ ಅಲ್ಲಿಂದ ಹೊರಡುವ ಸಮಯದಲ್ಲಿ ನಂಜುಂಡಯ್ಯನವರು ನನ್ನನ್ನು ಬೇರೆಯಾಗಿ ಕರೆದು ಕೇಳಿದರು:
“ಎಷ್ಟು ಖರ್ಚುಮಾಡಿದೆ? ಸಾಲ ಹೆಚ್ಚು ಮಾಡಿದ್ದರೆ ಹೇಳು.” ಆಗ ಎಂ. ಶಾಮರಾಯರೂ ಇದ್ದರು. ಅವರೆಂದರು.
“ಮಾಡಲೇಳಿ ಹುಡುಗನ ಹುಚ್ಚು.”
ಪರಿಷತ್ತಿನ ಸ್ಥಾಪನೆಯ ವಿವರಗಳನ್ನು ಮೊದಲ ಸಮ್ಮೇಳನದ ವರದಿಯನ್ನು ಅಂದಿನ ಪತ್ರಿಕೆಗಳು ಸಾಕಷ್ಟು ವಿವರವಾಗಿ ಪ್ರಕಟಿಸಿದವು. ಇಲ್ಲಿ ನಿದರ್ಶನಪೂರ್ವಕವಾಗಿ ಮೈಸೂರು ಸ್ಟಾರ್ ಪತ್ರಿಕೆ (೯-೫-೧೯೧೫) ಪ್ರಕಟಿಸಿದ ವರದಿ ಹೀಗಿದೆ:
ಮೈಸೂರು ಸ್ಟಾರ್ ೧೯೧೫ನೆಯ ಇಸವಿ ಮೇ ತಾರೀಖು ೯ನೇ ಭಾನುವಾರ, ಪುಟ ೫
ಕನ್ನಡಿಗರ ಸಮ್ಮೇಳನ
ಕನ್ನಡಿಗರ ಸಮ್ಮೇಳನವು ಕಳೆದ ತಾ|| ೩ರಲ್ಲಿ ಬೆಂಗಳೂರು ಸರ್ಕಾರಿಯ ಹೈಸ್ಕೂಲ್ ಕಟ್ಟಡದಲ್ಲಿ ೧ನೆಯ ಕೌನ್ಸಿಲರ್ ಮ|| ಎಚ್. ವಿ. ನಂಜುಂಡಯ್ಯನವರ ಅಧ್ಯಕ್ಷತೆಯಲ್ಲಿ ಆರಂಭಿಸಲ್ಪಟ್ಟಿತು. ಧಾರವಾಡ, ಮದ್ರಾಸು, ಉಡುಪಿ ಮೊದಲಾದ ಕಡೆಗಳಿಂದ ಭಾಷಾಭಿಮಾನಿಗಳಾದವರು ಪ್ರತಿನಿಧಿಗಳಾಗಿ ಕರೆಯಲ್ಪಟ್ಟು ಬಂದಿದ್ದರಲ್ಲದೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಿ ಸೇರಿದ್ದಿತು. ಶ್ರೀಮದ್ಯುವರಾಜರು, ದಿವಾನರು ಮೊದಲಾದವರು ತಂತಿಯ ಮೂಲಕ ತಮ್ಮಭಿನಂದನಗಳನ್ನು ಕಳುಹಿಸಿದ್ದರು. ಅಧ್ಯಕ್ಷರು ಕನ್ನಡ ಭಾಷೆಯಯುತ್ಪತ್ತಿ, ಪೂರ್ವದಲ್ಲಿ ಅದಕ್ಕಿದ್ದ ಶುದ್ಧತೆ, ಮತ್ತೂ ಉಚ್ಛ್ರಾಯಸ್ಥಿತಿ ಈಗ ಅದಕ್ಕೂ ತೆಲುಗು ತಮಿಳು ಮೊದಲಾದ ದ್ರಾವಿಡಭಾಷೆಗಳಿಗೂ ಇತರತಕ್ಕ ವ್ಯತ್ಯಾಸ – ಇವುಗಳನ್ನು ವಿವರಿಸುವ ಮತ್ತೂ ಮುಂದೆ ಅದು ಕರ್ನಾಟಕ ಪ್ರಾಂತಗಳಲ್ಲೆಲ್ಲಾ ಏಕಸ್ವರೂಪವನ್ನು ಹೊಂದಿ ಸೋದರಭಾಷೆಗಳಂತೆ ಉಚ್ಚಸ್ಥಿತಿಗೆ ಬರುವ ಉಪಾಯ ಮೊದಲಾಂಶಗಳನ್ನೊಳಗೊಂಡ ಒಂದು ದೊಡ್ಡ ಭಾಷಣವನ್ನು ಮಾಡಿದರು. ಅನಂತರ ವಿಷಯನಿರ್ಧಾರಕ ಭಾಷಣವನ್ನು ಮಾಡಿದರು. ಅನಂತರ ವಿಷಯನಿರ್ಧಾರಕಸಭೆಯು ಏರ್ಪಡಿಸಲ್ಪಟ್ಟು ಆ ದಿವಸದ ಸಭೆಯು ವಿಸರ್ಜಿತವಾಯಿತು. ವಿಷಯನಿರ್ಧಾರಕಸಭೆಯವರು ತಾ|| ೪ರಲ್ಲಿ ದಿ || ಬ|| ಕೆ.ಪಿ. ಪುಟ್ಟಣ್ಣಸೆಟ್ಟರ ಅಧ್ಯಕ್ಷತೆಯಲ್ಲೂ ಸಭೆಸೇರಿದ್ದು, ಮೈಸೂರಪ್ರಾಂತಕ್ಕೆ ೧೨, ಬೊಂಬಾಯಾಧಿಪತ್ಯಕ್ಕೆ ೮, ಹೈದರಾಬಾದಿಗೆ ೨, ದಕ್ಷಿಣಮಹಾರಾಷ್ಟ್ರಕ್ಕೆ ೨ ಮತ್ತೂ ಕೊಡಗಿಗೆ ೧ ಈ ಪ್ರಕಾರ ೩0 ಸಭ್ಯರನ್ನೊಳಗೊಂಡ ೧ ಕಾರ್ಯಕಾರಿಮಂಡಳಿಯು ಸ್ಥಾಪಿತವಾಗಿ, ಒಬ್ಬರು ಅಧ್ಯಕ್ಷರು, ಒಬ್ಬರು ಉಪಾಧ್ಯಕ್ಷರು, ಒಬ್ಬರು ಸೆಕ್ರೆಟರಿ, ಮತ್ತೊಬ್ಬರು ಆಡಿಟರು ಹೀಗೆ ಅಧಿಕಾರಿಗಳು ನಿಯಮಿಸಲ್ಪಡಬೇಕೆಂದೂ; ಪ್ರಾಚೀನ ಕರ್ನಾಟಕ ಗ್ರಂಥಗಳು ಶೇಖರಿಸಲ್ಪಟ್ಟು ವ್ಯಾಖ್ಯಾನದೊಡನೆ ಪ್ರಚುರಪಡಿಸಲ್ಪಡಬೇಕು, ಗ್ರಂಥಶೋಧನೆಗೆ ಉತ್ತೇಜನವೂ, ಗ್ರಂಥಕರ್ತರಿಗೆ ಪ್ರೋತ್ಸಾಹವೂ ಕೊಡಲ್ಪಡಬೇಕು, ೧000 ರೂ. ಗಳನ್ನು ಕೊಡತಕ್ಕವರು ಪೋಷಕರಾಗಿಯೂ, ೫00 ರೂ. ಗಳನ್ನು ಕೊಡತಕ್ಕವರು ಆಶ್ರಯದಾತರಾಗಿಯೂ, ೧00 ರೂ. ಗಳನ್ನು ಕೊಡತಕ್ಕವರು ಆಜೀವಸಭಾಸದರಾಗಿಯೂ ಮಾಡಲ್ಪಡತಕ್ಕುದೆಂದೂ; ಪ್ರತಿವರ್ಷದಲ್ಲೂ ೧೨ ರೂ. ಗಳನ್ನು ಕೊಡುವವರು ೧ನೆಯ ತರಗತಿಯ ಸಭ್ಯರಾಗಿಯೂ, ೪ ರೂ. ಗಳನ್ನು ಕೊಡುವವರು ೨ನೆಯ ತ|| ಸಭ್ಯರಾಗಿಯೂ ಇರತಕ್ಕುದೆಂದೂ; ಒಂದು ಕಾರ್ಯಕಾರಿ ಮಂಡಳಿಯು ಏರ್ಪಾಟಾಗತಕ್ಕುದೆಂದೂ ನಿರ್ಧಾರಗಳಾಗಿ, ಮ || ಗಳಾದ ಎಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿಯೂ, ಎಂ. ಶ್ಯಾಮರಾಯರು ಉಪಾಧ್ಯಕ್ಷರಾಗಿಯೂ, ಸರದಾರ್ ಎಂ. ಕಾಂತರಾಜ ಅರಸಿನವರು, ಎಂ. ವೆಂಕಟಕೃಷ್ಣಯ್ಯನವರು, ಕರ್ಪೂರ ಶ್ರೀನಿವಾಸರಾಯರು, ಆರ್. ಎ. ನರಸಿಂಹಾಚಾರ್ಯರು, ಡಾ|| ಅಚ್ಯುತರಾಯರು, ಆರ್. ರುನಾಥರಾಯರು, ಬಾಪು ಸುಬ್ಬರಾಯರು, ಅಯ್ಯಾಶಾಸ್ತ್ರಿಗಳು, ಕರಿಬಸವಶಾಸ್ತ್ರಿಗಳು, ಕೆ.ಪಿ. ಪುಟ್ಟಣ್ಣಸೆಟ್ಟರು, ಸಿ. ಕೃಷ್ಣರಾಯರು, ಸಿ. ವಾಸುದೇವಯ್ಯನವರು, ಎಂ. ಎಸ್.ಪುಟ್ಟಣ್ಣನವರು, ಬಿ. ಎಂ. ಶ್ರೀಕಂಠಯ್ಯನವರು, ಬಿ. ಕೃಷ್ಣಪ್ಪನವರು ಮೈಸೂರಸೀಮೆಯ ಪರವಾಗಿಯೂ; ಧಾರವಾಡದ ಟ್ರೇನಿಂಗ್ ಕಾಲೇಜಿನ ಮುಖ್ಯೋಪಾಧ್ಯಾಯರಾದ ವಿ. ಬಿ. ಜೋಷಿ ಅವರು, ಪಬ್ಲಿಕ್ ಪ್ರಾಸಿಕ್ಯೂಟರಾದ ಎನ್. ಜಿ. ಕರಿಗುದರಿ ಆವರು, ಆರ್. ಎ. ಜಹಗೀರ್ದಾರ್ ಅವರು, ನರಗುಂದಕರ್ ಅವರು, ಪಿ.ಆರ್. ಚಿಕ್ಕೋಡಿಯವರು, ಮುದವೇಡಕರ್ ಅವರು, ಎಫ್.ಜಿ. ಹಳಕಟ್ಟಿಯವರು, ವಿ.ಬಿ. ಆಲೂರ್ ಅವರು ಮತ್ತೂ ವಿ. ಎನ್. ಮಗ್ದಾಳ ಅವರು ಬೊಂಬಾಯಾಧಿಪತ್ಯದ ಪರವಾಗಿಯೂ, ಬೆನಗಲ್ ರಾಮರಾಯರು, ರಾಜಗೋಪಾಲಕೃಷ್ಣರಾಯರು, ಮತ್ತೂ ಎ. ವೆಂಕಟರಾಯರು ಮದ್ರಾಸಾಧಿಪತ್ಯದ ಪರವಾಗಿಯೂ ಮೆಂಬರುಗಳಾಗಿ ನಿಯಮಿಸಲ್ಪಟ್ಟರು. ಕನ್ನಡಭಾಷೆಯನ್ನಾಡತಕ್ಕ ಪ್ರದೇಶಗಳಲ್ಲಿಯ ಬಾಲ್ಯವಿದ್ಯಾಭ್ಯಾಸವು ಕನ್ನಡದಲ್ಲೇ ಜರುಗುವಂತೆ ಮಾಡಲು ಪ್ರಾರ್ಥಿಸಬೇಕು; ಇದೇ ವಿಚಾರದಲ್ಲಿ ಮದ್ರಾಸು ಮತ್ತೂ ಬೊಂಬಾಯಿ ಸರ್ವಕಲಾಶಾಲೆಯವರನ್ನು ಪ್ರಾರ್ಥಿಸಬೇಕಲ್ಲದೆ, ಮದ್ರಾಸು, ಬೊಂಬಾಯಿ, ಹೈದರಾಬಾದು, ದಕ್ಷಿಣ ಮಹಾರಾಷ್ಟ್ರ, ದೇಶೀಯ ಸಂಸ್ಥಾನಗಳು ಇವುಗಳ ಕೋರ್ಟುಭಾಷೆಯೂ ಕನ್ನಡವಾಗಿರುವಂತೆ ಆಯಾ ಸರ್ಕಾರದವರನ್ನೂ, ಕನ್ನಡವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವಂತೆ ಇಂಡ್ಯಾ ಸರ್ಕಾರದವರನ್ನೂ ಪ್ರಾರ್ಥಿಸಿಕೊಳ್ಳಬೇಕೆಂದು ಅಧ್ಯಕ್ಷರು ಸೂಚಿಸಿದ ಮೇಲೆ ಕೆಲ ಮಂಗಳಪದ್ಯಗಳು ಹೇಳಲ್ಪಟ್ಟು ಸಮ್ಮೇಳನಕಾರ್ಯವು ಪರಿಸಮಾಪ್ತಿಗೊಳಿಸಲ್ಪಟ್ಟಿತು.
ಮಾಹಿತಿ ಕೃಪೆ: ಕನ್ನಡ ಸಾಹಿತ್ಯ ಪರಿಷತ್ತು-೧೦೦, ಪ್ರೊ. ಜಿ. ಅಶ್ವತ್ಥನಾರಾಯಣ
Tag: Kannada Sahitya Parishat, Kannada Sahitya Parishattu, 5ನೇ ಮೇ 1915, 5th May 1915, Samskruthika Itihasa
ಶ್ರೀಮತಿ ಕೆ.ಎಂ ಗಾಯಿತ್ರಿ ಭಾ.ಆ.ಸೇ
ಆಡಳಿತಾಧಿಕಾರಿಗಳು
ಪರಿಷತ್ತಿನ ಉಪಾಧ್ಯಕ್ಷರುಗಳು
ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭಗೊಂಡು, ಎಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎಂ. ಶಾಮರಾಯರು ಉಪಾಧ್ಯಕ್ಷರಾಗಿದ್ದರು. ನಂಜುಡಯ್ಯನವರ ನಂತರದಲ್ಲಿ ಅಧ್ಯಕ್ಷರಾದವರು ಎಂ. ಕಾಂತರಾಜ ಅರಸು ಅವರು. (೧೯೨0-೧೯೨೩) ಅವರಾದ ಮೇಲೆ ಯುವರಾಜ ಕಂಠೀರವ ಚಾಮರಾಜೇಂದ್ರ ಒಡೆಯರ್ ಪರಿಷತ್ತಿನ ಅಧ್ಯಕ್ಷರಾದರು. ಇವರ ನಂತರ ಒಂಟಿಮುರಿ ಶ್ರೀಮಂತ ಬಸವಪ್ರಭು ಸರದೇಸಾಯಿ ಅವರು (೧೯೪೧-೧೯೪೬) ಆಮೇಲೆ ಜಸ್ಟೀಸ್ ಲೋಕೂರು ನಾರಾಯಣರಾವ್ ಸ್ವಾಮಿರಾವ್ ಅವರು ಅಧ್ಯಕ್ಷರಾಗಿದ್ದರು. ಆಗ ನಿಬಂಧನೆಯಲ್ಲಿ “ರಾಜ್ಯಾಧಿಪತಿಗಳು, ಶ್ರೀಮಂತರು, ಉನ್ನತ ಪದವಿಯಲ್ಲಿರುವವರು ಮಾತ್ರ ಮಹಾಪೋಷಕರು ಅಥವಾ ಪೋಷಕರು ಆಗಿರಬೇಕು” ಎಂಬ ನಿಯಮವಿದ್ದು, ಇವರ ಪೈಕಿ ಅಧ್ಯಕ್ಷರನ್ನು ಆರಿಸಲಾಗುತ್ತಿತ್ತು. ೧೯೪೭ರ ನಂತರ ಈ ನಿಯಮ ರದ್ದಾಯಿತು.
ಈ ಅರಸರು ಅಥವಾ ಶ್ರೀಮಂತರು ಪರಿಷತ್ತಿನ ಅಧ್ಯಕ್ಷರಾದ ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವ ವಿದ್ವಾಂಸರನ್ನು ಪರಿಷತ್ತಿನ ಆಜೀವ ಗೌರವ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿತ್ತು. ಇವರ ಪೈಕಿ ಒಬ್ಬರು ಪರಿಷತ್ತಿನ ಉಪಾಧ್ಯಕ್ಷರಾಗಿರುತ್ತಿದ್ದರು. ಹೀಗೆ ಉಪಾಧ್ಯಕ್ಷರೆನಿಸಿಕೊಂಡವರು ಕ್ರಮವಾಗಿ ಕರ್ಪೂರ ಶ್ರೀನಿವಾಸರಾವ್, ಡಿವಿಜಿ, ಬಿಎಂಶ್ರೀ ಮತ್ತು ಮಾಸ್ತಿ. ಅವರು ವಾಸ್ತವಿಕದಲ್ಲಿ ಪರಿಷತ್ತಿನ ಕಾರ್ಯಗಳನ್ನೆಲ್ಲ ಅಧ್ಯಕ್ಷರ ಹೆಸರಿನಲ್ಲಿ ನಡೆಸಿದರು.
ಎಂ.ಶಾಮರಾವ್
ಕರ್ಪೂರ ಶ್ರೀನಿವಾಸರಾವ್
ಡಿ. ವಿ. ಗುಂಡಪ್ಪ
ಬಿ. ಎಂ. ಶ್ರೀಕಂಠಯ್ಯ
- ನಮ್ಮ ಪರಿಷತ್ತು
- ಸಂಸ್ಥಾಪಕರು
- ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ
- ಸರ್ ಮಿರ್ಜಾ ಇಸ್ಮಾಯಿಲ್
- ಸಾಂಸ್ಕೃತಿಕ ಇತಿಹಾಸ
- ಅಧ್ಯಕ್ಷರು
- ಕೇಂದ್ರ ಕಾರ್ಯಕಾರಿ ಸಮಿತಿ
- ಇಂದಿನವರೆಗಿನ ಅಧ್ಯಕ್ಷರುಗಳು
- ಹಿಂದಿನ ಉಪಾಧ್ಯಕ್ಷರುಗಳು
- ಇಂದಿನವರೆಗಿನ ಕಾರ್ಯದರ್ಶಿಗಳು
- ಇಂದಿನವರೆಗಿನ ಕೋಶಾಧ್ಯಕ್ಷರು
- ಪರಿಷತ್ತಿನ ಕಾರ್ಯಕಾರಿ ಸಮಿತಿ
ನಮ್ಮ ಪರಿಷತ್ತು
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ 1915ರಲ್ಲಿ ಹುಟ್ಟಿಕೊಂಡದ್ದು ‘ಕನ್ನಡ ಸಾಹಿತ್ಯ ಪರಿಷತ್ತು’ –. ಇವತ್ತು 110 ವರ್ಷಗಳ ಸಂಭ್ರಮದಲ್ಲಿರುವ ಈ ಸಂಸ್ಥೆಯ ಹೇಗಿರಬೇಕೆಂಬ ಆಲೋಚನೆ ಪ್ರಾರಂಭವಾದದ್ದು, ‘ಮೈಸೂರು ಇಕನಾಮಿಕ್ ಕಾನ್ಫರೆನ್ಸ್’ ಎಂಬ ಸಂಸ್ಥೆಯಲ್ಲಿ.ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲು, ಕನ್ನಡ ಭಾಷೆ-ಸಂಸ್ಕೃತಿಗಳನ್ನು ಸಂರಕ್ಷಿಸಲು ನಾಡಿನ ಕನ್ನಡಾಭಿಮಾನಿಗಳು ಸಂಘಟಿತ ಪ್ರಯತ್ನ ಆರಂಭಿಸಿದರು. ಇದೇ ವೇಳೆಗೆ ಸರ್ ಎಂ. ವಿಶ್ವೇಶ್ವರಯ್ಯನವರು ರಾಜ್ಯಪ್ರಗತಿ ಕಾರ್ಯಗಳಿಗೆ ಚಾಲನೆ ನೀಡುವ ಮೈಸೂರು ಸರ್ಕಾರದ ಚೀಫ್ ಇಂಜಿನಿಯರ್ ಆಗಿ ನಿಯುಕ್ತಿಗೊಂಡರು. ಪ್ರಾರಂಭದ ದಿನಗಳಲ್ಲಿಯೇ ಮೈಸೂರಿನ ಅಭಿವೃದ್ಧಿಯ ದೃಷ್ಟಿಯಿಂದ ಇಕನಾಮಿಕ್ ಕಾನ್ಫರೆನ್ಸ್ (ಸಂಪದಭ್ಯುದಯ ಸಭಾ) ಎಂಬ ಸಂಪದಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸುವಂತೆ ಮಹಾರಾಜರಿಗೆ ಸಲಹೆ ನೀಡಿದರು. ಅದರ ಅಂಗವಾಗಿ, ಕಾರ್ಖಾನೆ ಕೈಗಾರಿಕೆಗಳ ಸಮಿತಿ; ವಿದ್ಯಾಸಮಿತಿ; ಭೂವ್ಯವಸಾಯ ಸಮಿತಿ – ಎಂಬ ಮೂರು ಸಮಿತಿಗಳು ರಚನೆಯಾದವು. ಇದರಲ್ಲಿ ವಿದ್ಯಾಸಮಿತಿಯಲ್ಲಿ ಪರ್ಯಾಲೋಚನೆಗೆ ಬಂದ ಎರಡು ಯೋಜನೆಗಳು – ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತು.
ರಂಭದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿತ್ತು! ಮೇ 5, 1915 ರಂದು ಬೆಂಗಳೂರಿನಲ್ಲಿ ಇದು ಅಸ್ತಿತ್ವಕ್ಕೆ ಬಂದಾಗ ಎಚ್ ವಿ ನಂಜುಂಡಯ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರಾದರು. 1920 ರಿಂದ 1946 ರವರೆಗೆ ಮೈಸೂರು ರಾಜಮನೆತನದ ಎಂ.ಕಾಂತರಾಜೇ ಅರಸ್ ಅಧ್ಯಕ್ಷರಾಗಿದ್ದರು. ತದನಂತರದಲ್ಲಿ ಕಂಠೀರವ ನರಸರಾಜ ಒಡೆಯರ್, ಜಯಚಾಮರಾಜ ಒಡೆಯರ್, ಬಸವಪ್ರಭು, ರಾಜಾ ಲಕ್ಷ್ಮಣ ಗೌಡ ಅಧ್ಯಕ್ಷರಾಗಿದ್ದು, ಕರ್ಪೂರ ಶ್ರೀನಿವಾಸರಾವ್, ಡಿ ವಿ ಗುಂಡಪ್ಪ, ಬಿ ಎಂ ಶ್ರೀ, ಮಾಸ್ತಿ ಉಪಾಧ್ಯಕ್ಷರಾಗಿ ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ. ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಸತತ ಪ್ರಯತ್ನದಿಂದಾಗಿ ಈಗಿರುವ ಕಟ್ಟಡದ ನಿವೇಶನ ಉಚಿತವಾಗಿ ದೊರೆಯಿತು. 1933 ರಲ್ಲಿ ಅದೇ ಸ್ಥಳದಲ್ಲಿ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದ ನಿರ್ಮಾಣವಾಯಿತು. ಇಂತಹ ಪರಿಷತ್ತಿಗೆ ಮೈಸೂರು ಸರಕಾರ ಆಗಿನ ಕಾಲದಲ್ಲೇ 1800 ರೂಪಾಯಿಗಳ ಅನುದಾನವನ್ನು ನೀಡುತ್ತಿತ್ತು! ಪರಿಷತ್ತಿಗೆ ಲಾಂಛನವನ್ನು ನೀಡಿದವರು ಬಿ. ಎಂ. ಶ್ರೀ. ಅವರು! ಅಲ್ಲದೇ ಮುದ್ರಣಾಲಯವನ್ನೂ ಸ್ಥಾಪಿಸಿದರು. ಆಗಲೇ ಕನ್ನಡ ನುಡಿ ವಾರಪತ್ರಿಕೆ ಆರಂಭವಾಗಿ ಅನಕೃ ಸಂಪಾದಕತ್ವವನ್ನು ವಹಿಸಿಕೊಂಡರು. 1938 ರಲ್ಲಿ ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು “ಕನ್ನಡ ಸಾಹಿತ್ಯ ಪರಿಷತ್ತು” ಎಂದಾಯಿತು.
ಜಿ. ನಾರಾಯಣ ಅವರು ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಸಮ್ಮೇಳನವನ್ನು “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ” ಎಂದು ಕರೆದರು. ಅದೇ ವರ್ಷ ದೆಹಲಿಯಲ್ಲಿ 50ನೇ ಸಮ್ಮೇಳನ ಆಯೋಜಿತಗೊಂಡಿತ್ತು. ಜಿ ಎಸ್ ಸಿದ್ಧಲಿಂಗಯ್ಯನವರು ಅಧ್ಯಕ್ಷರಾಗಿದ್ದಾಗ ಪರಿಷತ್ತಿಗೆ ಪ್ರತ್ಯೇಕ ಧ್ವಜದ ರಚನೆಯಾಯಿತು. ಸಾ.ಶಿ.ಮರುಳಯ್ಯನವರು ತಮ್ಮ ಅವಧಿಯಲ್ಲಿ ಕನ್ನಡಾಂಬೆಯ ತೈಲಚಿತ್ರವನ್ನು ಸಿದ್ಧಪಡಿಸಿದರು. 1940 ರಲ್ಲಿ ರಜತ ಮಹೋತ್ಸವವನ್ನೂ, 1973 ರಲ್ಲಿ ಸುವರ್ಣಮಹೋತ್ಸವವನ್ನೂ, 1977 ರಲ್ಲಿ ವಜ್ರ ಮಹೋತ್ಸವವನ್ನೂ, 1991 ರಲ್ಲಿ ಅಮೃತ ಮಹೋತ್ಸವವನ್ನೂ, 2015 ರ ವರ್ಷದಲ್ಲಿ ಶತಮಾನೋತ್ಸವವನ್ನೂ ಪರಿಷತ್ತು ಆಚರಿಸಿದೆ.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪರಿಷತ್ತಿನ ಜಿಲ್ಲಾ ಘಟಕಗಳು, ತಾಲ್ಲೂಕು ಘಟಕಗಳು ಹಾಗೂ ಹೋಬಳಿ ಘಟಕಗಳು ಅಧಿಕೃತವಾಗಿ ಅಸ್ತಿತ್ವದಲ್ಲಿವೆ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ನಾಡಿನಾದ್ಯಂತ ಚಟುವಟಿಕೆ ನಡೆಸುತ್ತಿವೆ. ಸಮ್ಮೇಳನ, ಗೋಷ್ಠಿ, ಸ್ಪರ್ಧೆ, ಉಪನ್ಯಾಸ, ವಸಂತ ಸಾಹಿತ್ಯೋತ್ಸವ, ಸಾಹಿತ್ಯ ರಚನಾ ತರಬೇತಿ ಶಿಬಿರಗಳು, ಪರಿಷತ್ತಿನ ಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ರಾಜ್ಯೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕೆಲವು ಜಿಲ್ಲೆಗಳಲ್ಲಿ ನಿವೇಶನಗಳಿವೆ. ಜಿಲ್ಲಾ ಸಾಹಿತ್ಯ ಭವನಗಳು ಅನೇಕ ಕಡೆ ನಿರ್ಮಾಣವಾಗಿವೆ –ನಿರ್ಮಾಣಗೊಳ್ಳುತ್ತಲಿವೆ. ಜಿಲ್ಲಾ ಘಟಕಗಳ ವತಿಯಿಂದಲೂ ಪುಸ್ತಕ ಪ್ರಕಟಣೆಯಾಗುತ್ತಿವೆ. ಪರಿಷತ್ತಿನ ಚಟುವಟಿಕೆ ಹೊರರಾಜ್ಯದಲ್ಲಿಯೂ ಹರಡಿದ್ದು ಅಲ್ಲಿ ವ್ಯವಸ್ಥಿತವಾಗಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧೀಕೃತ ಗಡಿನಾಡ ಘಟಕಗಳನ್ನು ರಚಿಸಲಾಗಿದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಅವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಪರಿಷತ್ತಿನ ಸರಸ್ವತೀ ಭಂಡಾರ ಸುಮಾರು 70ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಹೊಂದಿದೆ! ಇದು ನಾಡಿನ ಪ್ರಮುಖ ಪ್ರಾಚೀನ ಗ್ರಂಥಾಲಯಗಳಲ್ಲಿ ಒಂದು. ಇಲ್ಲಿ ಪ್ರತ್ಯೇಕವಾಗಿ ಸಂಶೋಧನಾ ವಿಭಾಗವನ್ನು ತೆರೆಯಲಾಗಿದ್ದು ಹದಿನೈದು ಸಾವಿರಕ್ಕೂ ಹೆಚ್ಚು ಅಮೂಲ್ಯ ಗ್ರಂಥಗಳನ್ನು ಪರಾಮರ್ಶನಕ್ಕಾಗಿ ಇರಿಸಲಾಗಿದೆ. ಪ್ರತಿದಿನ ನೂರಾರು ಸಾಹಿತ್ಯಾಸಕ್ತರು ಉಚಿತವಾಗಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಸಾಹಿತ್ಯಲೋಕದ ಗಣ್ಯರ ಅಮೂಲ್ಯ ಭಾಷಣಗಳು, ಕಲಾವಿದರ ಹಾಡುಗಳನ್ನು ಒಳಗೊಂಡ ಧ್ವನಿಮುದ್ರಣ ಭಂಡಾರ ಮತ್ತು ಪರಿಷತ್ತಿನ ಮತ್ತು ಕನ್ನಡ ಸಾಹಿತಿಗಳ ಹಾಗೂ ಜನಪದ ಕಲೆಗಳ ಪರಿಚಯ ನೀಡುವ ಸಾಕ್ಷ್ಯಚಿತ್ರ ಭಂಡಾರ ಪರಿಷತ್ತಿನ ಅಮೂಲ್ಯ ಆಸ್ತಿಯಾಗಿದೆ. ಅಪರೂಪವಾದಂತಹ ನಾಣ್ಯಗಳು, ಕೈಬರಹಗಳು, ತಾಮ್ರ ಫಲಕಗಳು, ಜಾನಪದ ವಸ್ತುಗಳು, ವಿಗ್ರಹಗಳು ಮೊದಲಾದವುಗಳು ಪರಿಷತ್ತಿನ ವಸ್ತುಸಂಗ್ರಹಾಲಯದಲ್ಲಿದೆ. ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಇದೊಂದು ಆಸಕ್ತಿದಾಯಕ ಸ್ಥಳ!
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪೈಕಿ ಅತಿ ಮುಖ್ಯವಾದುದು ಅದರ ಪುಸ್ತಕ ಪ್ರಕಟಣೆ. ಕನ್ನಡ ಸಾಹಿತ್ಯ ಪರಿಷತ್ತು ೧೯೧೫ರಲ್ಲಿ ಆರಂಭವಾಯಿತು. ಪರಿಷತ್ತಿಗೆ ಆರಂಭದ ವರ್ಷದಲ್ಲಿ ಯಾವುದೇ ಪ್ರಕಟಣೆಯನ್ನೂ ಹೊರತರಲು ಆಗಿರಲಿಲ್ಲ. ಕಾರಣ ಅದು ಸ್ಥಿರಗೊಳ್ಳಬೇಕಾಗಿತ್ತು. ೧೯೧೬ರಲ್ಲಿ ಪುಸ್ತಕ ಪ್ರಕಟಣೆಯನ್ನು ಆರಂಭಿಸಿತು. ಪರಿಷತ್ತು ಹೊರತಂದ ಮೊದಲ ಕೃತಿ; ವೈ.ಕೆ. ರಾಮಚಂದ್ರರಾವ್ ಅವರು ಕನ್ನಡಕ್ಕೆ ಅನುವಾದಿಸಿದ `ಜೇಮ್ಸ್ ಏಬ್ರಾಮ್ ಗಾರ್ಫೀಲ್ಡ್ ಚರಿತೆ’. ಅನಂತರ ಅದರ ಪ್ರಕಟಣೆಗಳು ಒಂದೊಂದಾಗಿ ಹೊರಬಂದವು. ಪರಿಷತ್ತು ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಪ್ರಕಟಿಸಿದೆ. ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಧಿಸಿದ ಕೆಲವು ಇಂಗ್ಲಿಷ್ ಕೃತಿಗಳೂ ಇದರಲ್ಲಿ ಸೇರಿವೆ. ಇವುಗಳಲ್ಲಿ ಹಲವು ಮರುಮುದ್ರಣಗಳನ್ನು ಕಂಡು ದಾಖಲೆ ಸ್ಥಾಪಿಸಿವೆ.
*ಯಾವ ಪ್ರಕಾರವೇ ಇರಲಿ, ಯಾವ ಕೃತಿಯೇ ಆಗಿರಲಿ ಈ ಪ್ರಕಟಣೆಗಳ ಪೈಕಿ ಪರಿಷತ್ತನ್ನು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಸಿದ್ದು ಅದು ಹೊರತಂದಿರುವ ಬಹೂಪಯೋಗಿ ನಿಘಂಟುಗಳು. ಪರಿಷತ್ತಿನ ಸ್ಥಾಪನೆಯ ಮೂಲ ಉದ್ದೇಶಗಳಲ್ಲಿ ಪಂಡಿತ ಮಾನ್ಯವಾದ, ಪರಾಮರ್ಶನ ಮೌಲ್ಯವುಳ್ಳ ಕನ್ನಡ-ಕನ್ನಡ ನಿಘಂಟಿನ ಪ್ರಕಟಣೆ ಮಹತ್ತ್ವವಾದುದು. 45ವರ್ಷಗಳ ಕಾಲ ಹತ್ತಿರ ಹತ್ತಿರ ನೂರು ಘನ ವಿದ್ವಾಂಸರ ಅಹರ್ನಿಶಿ ಬೌದ್ಧಿಕ ಶ್ರಮದ ಫಲವಾಗಿ ಹೊರಬಂದ ಒಟ್ಟು ಎಂಟು ಸಂಪುಟಗಳ 9200ಪುಟಗಳ ಬೃಹತ್ ಸ್ವರೂಪದ ಕನ್ನಡ-ಕನ್ನಡ ನಿಘಂಟು ಪ್ರಕಟವಾಯಿತು. ಈ ಸ್ವರೂಪದ ನಿಘಂಟು ಭಾರತೀಯ ಭಾಷೆಗಳ ಪೈಕಿ ಅತ್ಯಂತ ಅಮೋಘವಾದುದು, ಅಪರೂಪವಾದುದು. ಇದು ಭಾರತೀಯ ಭಾಷೆಗಳ ನಿಘಂಟುಗಳಲ್ಲೇ `ಏಕಂ ಏವಾ ಅದ್ವಿತೀಯ’ವಾದುದು. ಪರಿಷತ್ತಿನ ಮತ್ತೊಂದು ಮಹತ್ವದ ಪ್ರಕಟಣೆ ಸುಮಾರು 1450 ಪುಟಗಳಷ್ಟಿರುವ ಸಂಕ್ಷಿಪ್ತ ಕನ್ನಡ ನಿಘಂಟು. ವಿದ್ಯಾರ್ಥಿಗಳಿಗೆ ನೆರವಾಗುವಂತಹ ಸಣ್ಣ ಆಕಾರದ `ಕನ್ನಡ ರತ್ನಕೋಶ’ ಎಂಬ ನಿಘಂಟು ಪರಿಷತ್ತಿನ ಖ್ಯಾತಿಯನ್ನು ಮನೆಮನೆಗೂ ಹರಡಿತು. ಇದುವರೆಗೆ ಇದರ 10 ಲಕ್ಷ ಪ್ರತಿಗಳು ಮಾರಾಟವಾಗಿವೆ. ಕನ್ನಡ ಪ್ರಕಟಣ ಕ್ಷೇತ್ರದ ವಿಕ್ರಮವಿದು. ಸುಭಾಷಿತ ಮಂಜರಿ ಕೃತಿಯು ಸಹ ಪರಿಷತ್ತಿಗೆ ಅಸ್ಮಿತೆ ನೀಡಿದೆ.
ಕನ್ನಡಕ್ಕಾಗಿ ಗಮನಾರ್ಹ ಸೇವೆ ಸಲ್ಲಿಸಿರುವ ಗಣ್ಯ ಸಾಹಿತಿಗಳಿಗೆ ಪರಿಷತ್ತಿನ ಅತ್ಯುಚ್ಚ ಮನ್ನಣೆಯಾದ‘ಗೌರವ ಸದಸ್ಯತ್ವ’ವನ್ನು ನೀಡಲಾಗುತ್ತಿದೆ.ಇದು ಫೆಲೋಷಿಪ್ ಮಾದರಿಯದು. ಜೊತೆಗೆ ಪುರಸ್ಕೃತರ ಒಂದು ಪ್ರಾತಿನಿಧಿಕ ಕೃತಿಯನ್ನು ಮುದ್ರಿಸಿ ಸುಲಭ ಬೆಲೆಗೆ ಮಾರಲಾಗುತ್ತಿದೆ. ಕನ್ನಡ ನಾಡಿನ ಮಹನೀಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತರು ಪರಿಷತ್ತಿನಲ್ಲಿ ದತ್ತಿನಿಧಿಗಳನ್ನು ಇರಿಸಿದ್ದಾರೆ ಆ ದತ್ತಿ ನಿಧಿಗಳ ಮೂಲ ಉದ್ದೇಶದಂತೆ ವಿವಿಧ ರೀತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧಕರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಲಾಗುತ್ತಿದೆ ಜೊತೆಗೆ ಉತ್ತಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಷ್ಟೇ ಅಲ್ಲದೆ ನಾಡಿನಾದ್ಯಂತ ನಡೆಸುತ್ತಿದೆ. ಈ ದತ್ತಿ ನಿಧಿ ಪ್ರಶಸ್ತಿಗಳಲ್ಲಿ ‘ನೃಪತುಂಗ’ ಪ್ರಶಸ್ತಿಯಂತಹ ಮಹತ್ವದ ಸಾಹಿತ್ಯಕ ಪ್ರಶಸ್ತಿಗಳೂ ಒಳಗೊಂಡಿದೆ.
ಕರ್ನಾಟಕದ ಏಕೀಕರಣದಲ್ಲಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನದು ಬೃಹತ್ ಕೊಡುಗೆ. ತನ್ನ ಆರಂಭದ ದಿನದಲ್ಲಿಯೇ ಪರಿಷತ್ತು “ಸಮಗ್ರ ಕರ್ನಾಟಕ ಆಡಳಿತ ಮಂಡಳಿ ರಚಿಸಿ ದೃಢವಾದ ಹೆಜ್ಜೆಯಿಟ್ಟಿತ್ತು. 1921, ಮಾರ್ಚ್ 3 ರಂದು ಕರ್ನಾಟಕದ ಏಕೀಕರಣದ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಿ ಈ ನಿಟ್ಟಿನಲ್ಲಿ ಸ್ಪಷ್ಟವಾದ ಹೆಜ್ಜೆಯನ್ನಿಟ್ಟು ಉಳಿದವರಿಗೂ ಮಾದರಿಯಾಗಿತ್ತು. 1930 ರಲ್ಲಿ ಮೈಸೂರಿನಲ್ಲಿ ನಡೆದ 16ನೇ ಸಾಹಿತ್ಯ ಸಮ್ಮೇಳನದಲ್ಲಿ ಆಲೂರು ವೆಂಕಟರಾಯರು “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು..” ಎಂದು ನುಡಿಯುತ್ತಲೇ ಪರಿಷತ್ತು ಮಾತ್ರವೇ ಏಕೀಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರ ಪ್ರೇರಣೆಯಿಂದ ಪರಿಷತ್ತು “ಕರ್ನಾಟಕ ನಾಡಿನ ಚರಿತ್ರೆ” ಪುಸ್ತಕವನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿತು. ಈ ಪ್ರಯತ್ನವು ಕನ್ನಡ ಬರಹಗಾರರ ವಿವರಗಳನ್ನು ಒಟ್ಟಿಗೆ ತರುವ ಮಹತ್ವದ ಪ್ರಯೋಗವೆನ್ನಿಸಿತು. 1948ರಲ್ಲಿ ಕಾಸರಗೋಡಿನಲ್ಲಿ 31ನೇ ಸಮ್ಮೇಳನವು ನಡೆದಾಗ ಕರ್ನಾಟಕ ಏಕೀಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸರ್ಕಾರದ ಮುಲಾಜಿಗೆ ಕಾಯದೇ ಮುಂದುವರೆಯಲು ನಿಶ್ಚಯಿಸಿ “ಸಹಾಯಕ ಸೀಮಾನಿಶ್ಚಯ ಸಮಿತಿ”ಯನ್ನು ರಚಿಸಿತು. ಜೊತೆಗೆ ಚೌಂಚರಿ ಕಮಿಷನ್ ಮುಂದೆ ಈ ಸಮಿತಿಯ ವರದಿಯನ್ನು ಸಲ್ಲಿಸಿ ಏಕೀಕರಣ ಸ್ವರೂಪದ ಕುರಿತಾಗಿ ತನ್ನ ಅಭಿಪ್ರಾಯವನ್ನು ದಾಖಲಿಸಿತು. ಈ ಪ್ರಯತ್ನದಲ್ಲಿ ತಿ.ತಾ.ಶರ್ಮರವರು ಪ್ರಮುಖ ಪಾತ್ರ ವಹಿಸಿದ್ದರು. 1955ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ಶಿವರಾಮಕಾರಂತರು “ಕನ್ನಡ ನಾಡು ಒಂದಾಗಬೇಕು, ಕರ್ನಾಟಕ ಎನ್ನುವ ಹೆಸರು ಬರಬೇಕು” ಎನ್ನುವ ಸ್ಪಷ್ಟ ಕರೆಯನ್ನು ನೀಡಿದರು. ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆದ್ಯ ರಂಗಾಚಾರ್ಯರು “ಕರ್ನಾಟಕ ಏಕೀಕರಣವಾಗಲು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳಗಳೇ ಕಾರಣ” ಎಂದು ಹೇಳಿದ್ದರು. ಈ ಸಮ್ಮೇಳದಲ್ಲೇ ಕರ್ನಾಟಕ ಏಕೀಕರಣವಾಗಬೇಕು, ಕರ್ನಾಟಕ ಹೆಸರು ಬರಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು. 1939ರಿಂದಲೂ ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಏಕೀಕರಣವಾಗದೇ ಸಮ್ಮೇಳನಾಧ್ಯಕ್ಷತೆ ವಹಿಸುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ಅವರು ತಳೆದಿದ್ದರು. ಅದರಂತೆ ಏಕೀಕರಣದ ನಂತರ 1957ರಲ್ಲಿ ಧಾರವಾಡದಲ್ಲಿ ನಡೆದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, “ನಮ್ಮ ಮುಂದಿನ ಗುರಿ ಕರ್ನಾಟಕ ಎನ್ನುವ ಹೆಸರು ನಾಡಿಗೆ ಬರಬೇಕು” ಎಂಬ ದೃಢವಾದ ಕರೆಯನ್ನು ನೀಡಿದ್ದರು. 1970ರಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷರು “ದೇ.ಜ.ಗೌ.” ಇದೇ ಮಾತನ್ನು ಆಗ್ರಹಿಸಿದ್ದರು. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಅವರು ಇದಕ್ಕಾಗಿ ವ್ಯಾಪಕವಾಗಿ ನಾಡಿನುದ್ದಕ್ಕೂ ಪ್ರವಾಸವನ್ನು ಕೈಗೊಂಡಿದ್ದರು. 1973, ನವೆಂಬರ್ 1 ರಂದು ನಮ್ಮ ನಾಡಿಗೆ “ಕರ್ನಾಟಕ” ಎನ್ನುವ ಹೆಸರು ಬಂದಿತು. 1974 ರಲ್ಲಿ ಮಂಡ್ಯದಲ್ಲಿ ನಡೆದ 44ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಯದೇವಿ ತಾಯಿ ಲಿಗಾಡೆಯವರು “ಕನ್ನಡಿಗರು ಒಗ್ಗೂಡಲು ಪರಿಷತ್ತೇ ಪ್ರೇರಣೆ” ಎಂದಿದ್ದರು. ಸಮ್ಮೇಳನವನ್ನು ಉದ್ಘಾಟಿಸಿದ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅವರು ಕರ್ನಾಟಕ ಏಕೀಕರಣ – ಕರ್ನಾಟಕ ನಾಮಕರಣದಲ್ಲಿ ಪರಿಷತ್ತಿನ ಪಾತ್ರವನ್ನು ಶ್ಲಾಘಿಸಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್
ಜೂನ್ ೪ , ೧೮೮೪ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು. ನಾವು ಯಾವ ಯಾವುದನ್ನು ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂತಹ ಮಹನೀಯರ ಶ್ರೇಷ್ಠ ಸೇವೆ ಎಂದು ಕೊಂಡಾಡುತ್ತೇವೆಯೋ ಆ ಹಿರಿಮೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಕೂಡಾ ಮಹತ್ತರವಾದುದು. ಸರ್ವ ಕಾಲದಲ್ಲೂ ಪ್ರಾಜ್ಞರು ನಿಷ್ಠರು ಇದ್ದಿರುತ್ತಾರೆ. ಆ ಪ್ರಾಜ್ಞರಿಗೆ ಕಾರ್ಯದಕ್ಷತೆ ತೋರುವ ಅವಕಾಶ, ಸ್ವಾತಂತ್ರ್ಯ ಅಧಿಕಾರಗಳನ್ನು ನೀಡುವ ಮನೋಬಲ ರಾಜ್ಯಭಾರದವರಿಗೆ ಇದ್ದಾಗ ಮಾತ್ರವೇ ಅದು ಸಾಧ್ಯ ಎಂಬುದು ಅತ್ಯಂತ ಮುಖ್ಯ ಸಂಗತಿಯಲ್ಲವೆ?
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ – ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ರವರೆಗೆ ನಡೆಯಿತು.
ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.
೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ತಕ್ಷಣದಿಂದಲೇ ಅವರು ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ಕಂಕಣ ಬದ್ದರಾದರು, ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯವು ಕಂಡುದರಿಂದ, ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು
ನಾಲ್ವಡಿ ಕೃಷ್ಣರಾಜ ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು. ಅವರ ಕಾಲದಲ್ಲಿ, ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ‘ಪ್ರಜಾ ಪ್ರತಿನಿಧಿ ಸಭೆ’ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. ಇದರ ಜೊತೆಗೆ ‘ನ್ಯಾಯ ವಿಧಾಯಕ’ ಸಭೆಯನ್ನೂ ಸಹ ಸ್ಥಾಪಿಸಲಾಯಿತು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು .
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಮಾಡಳಿತ ಸಂಸ್ಥೆಗಳಾದವು. ಹೊಸ ರೈಲು ದಾರಿಗಳ ನಿರ್ಮಾಣಗಳಾದವು.
೧೯೦೭ ರಲ್ಲಿ ‘ವಾಣೀವಿಲಾಸ ಸಾಗರ’ (ಮಾರಿ ಕಣಿವೆ) ಕಟ್ಟಲ್ಪಟ್ಟಿತು, ೧೯೧೧ ರಲ್ಲಿ ಆರಂಭವಾದ ‘ಕೃಷ್ಣರಾಜ ಸಾಗರ’ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. ೧೯೦೦ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು, ಇದು ಭಾರತದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ.
ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು. ನಾಲ್ವಡಿ ಕೃಷ್ಣರಾಜರ ಮತ್ತೊಂದು ಮಹತ್ತರ ಸಾಧನೆಯೆಂದರೆ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದುದು. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು.
ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. ೧೯೦೬ ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.
ಮೈಸೂರು ಬೆಂಗಳೂರು ಪ್ರದೇಶಗಳಂತಹ ನಗರಗಳಲ್ಲಿ ರಚಿತವಾದ ಶ್ರೇಷ್ಠ ಕಟ್ಟಡಗಳು, ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನವನಗಳು, ಜಲ ಕಾರಂಜಿಗಳು, ವಿಹಾರಿ ಧಾಮಗಳು, ಶ್ರೇಷ್ಠ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಛತ್ರಗಳು, ಶುಲ್ಕ ವಿಧಿಸದೆ ಉತ್ತಮ ಸೇವೆ ನೀಡುತ್ತಿದ್ದ ಆಸ್ಪತ್ರೆಗಳು, ಶುಶ್ರೂಷಾ ಧಾಮಗಳು, ಸಂಪರ್ಕ ವ್ಯವಸ್ಥೆಗಳು, ಪ್ರಯಾಣ ಸೌಲಭ್ಯಗಳು ಬಹುಷಃ ಇಷ್ಟು ಶ್ರೇಷ್ಠ ಮಟ್ಟದಲ್ಲಿದ್ದುದು ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಾಲದಲ್ಲಿ. ಈ ಪ್ರಾಂತ್ಯದಲ್ಲಿದ್ದ ಸರ್ವ ಭಾಷಿಗರ ಸಮನ್ವಯ, ಸರ್ವ ಧರ್ಮೀಯರ ಸಮನ್ವಯ, ಎಲ್ಲಾ ವರ್ಗದವರ ಹಿತಕಾಯುವ ಮನೋಭಾವ ಇತ್ಯಾದಿಗಳು ಸಾರ್ವಕಾಲಿಕವಾಗಿ ಮಹೋನ್ನತವಾದ ಗಳಿಗೆಗಳು. ಈ ಸಂಸ್ಥಾನದಲ್ಲಿ ಕಲೆ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಣೆ ಅದ್ವಿತೀಯವಾಗಿತ್ತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಕಾಲದಲ್ಲಿ ಮಹತ್ವದ ಸಾಮಾಜಿಕ ಸುಧಾರಣಾ ಕಾನೂನುಗಳು ಸಹಾ ಜಾರಿಗೆ ಬಂದವು. ಇವುಗಳಲ್ಲಿ ೧೯೦೯ ರಲ್ಲಿ ದೇವದಾಸಿ ಪದ್ಧತಿ ನಿಷೇಧ, ೧೯೧೦ ರಲ್ಲಿ ಬಸವಿ ಪದ್ಧತಿ ರದ್ಧತಿ, ೧೯೧೦ ರಲ್ಲಿ ’ಗೆಜ್ಜೆಪೂಜೆ’ ಸಂಪೂರ್ಣ ನಿರ್ಮೂಲನೆ, ೧೯೩೬ ಜುಲೈ ೧೪ ರಂದು ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆಯ ಜಾರಿ, ೧೯೩೬ ಜುಲೈ ೭ ರಂದು ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, ೧೯೧೪ ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ ಮತ್ತು ೧೯೧೯ ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ, ೧೯೨೭ ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕು ಮುಂತಾದವು ಪ್ರಮುಖವಾಗಿ ನೆನಪಿಗೆ ಬರುತ್ತವೆ. ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ೧೯೦೫ ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು. ೧೯೧೩ ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದರು. ೧೯೧೮ ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತರಲಾಯಿತು. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದು ಸೂಕ್ತವಾಗಿಯೇ ಇದೆ.
ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ದಿವಾನರಾದರು. ಇವರ ಅಧಿಕಾರಾವಧಿ ೧೯೧೨ರಿಂದ ೧೯೧೮ ರವರೆಗೆ ೬ ವರ್ಷಗಳು. ಈ ಮುಂಚೆ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಚೀಫ್ ಇಂಜಿನಿಯರಾಗಿ ೧೯೦೯ರಲ್ಲಿ ನೇಮಕಗೊಂಡಿದ್ದರು. ಅನಂತರ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು. ೧. ಕಾರ್ಖಾನೆಗಳ ಕೈಗಾರಿಕಾ ಸಮಿತಿ ೨. ವಿದ್ಯಾಸಮಿತಿ ೩. ಭೂ ವ್ಯವಸಾಯ ಸಮಿತಿ.
ವಿದ್ಯಾಸಮಿತಿಗೆ ಹೆಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ವಿ. ಸುಬ್ರಹ್ಮಣ್ಯ ಅಯ್ಯರ್ ಅವರು ಕಾರ್ಯದರ್ಶಿಗಳಾಗಿ ನೇಮಕವಾದರು. ಈ ವಿದ್ಯಾ ಸಮಿತಿಯವರು ಮುಖ್ಯವಾಗಿ ಎರಡು ಯೋಜನೆಗಳನ್ನು ನಿರ್ಧರಿಸಿದರು. ೧. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ ೨. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು
ಹಲವು ಪರಿಣತರ ಅಭಿಪ್ರಾಯಕ್ರೋಡೀಕರಣ ರೂಪುರೇಷೆಗಳ ನಿರ್ಮಾಣ ಮುಖೇನ ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂತು (ಈ ಕುರಿತ ಸಂಪೂರ್ಣ ವಿವರಗಳು ಸಾಂಸ್ಕೃತಿಕ ಇತಿಹಾಸ ಪುಟದಲ್ಲಿ ಲಭ್ಯವಿದೆ).
ಇಂಥಹ ರಾಜರು ಮಾತ್ರವೇ ಚರಿತ್ರೆಯಲ್ಲಿ ಅಜರಾಮರರು. ಹೀಗೊಬ್ಬ ಅರಸರು ಕಳೆದ ಶತಮಾನದಲ್ಲಿ ನಮ್ಮ ನಾಡಿನಲ್ಲಿದ್ದರು ಎಂಬ ಹೆಮ್ಮೆ ನಮ್ಮದು. ನಾವು ಯಾವ ಯಾವುದನ್ನು ಶ್ರೇಷ್ಠ ಅರಮನೆ, ಪ್ರೇಕ್ಷಣೀಯ, ಮನೋಲ್ಲಾಸಕರವೆಂದು ಕೊಂಡಾಡುತ್ತಿದ್ದೇವೆಯೋ ಅವೆಲ್ಲಾ ಒಂದಿಲ್ಲೊಂದು ರೀತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಪ್ರಾರಂಭ ಇಲ್ಲವೇ ಫೋಷಣೆ ಪಡೆದು ಔನ್ನತ್ಯಗೊಂಡಂತಹವು ಎಂಬುದು ಈ ನಾಲ್ವಡಿಯವರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ ಸಮರ್ಥ ರಾಜಕಾರಣಿಯನ್ನು ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂಥಹ ಸಮರ್ಥ ಆಡಳಿತಗಾರರನ್ನು ನಮ್ಮ ನಾಡು ನಿರಂತರವಾಗಿ ಸ್ಮರಿಸುತ್ತಿದೆ.
Tag: Nalwadi Krishnaraja Wodeyar, Samsthapakaru
Photo Courtesy: www.kamat.com
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ
ಈ ನಾಡಿನ ಮಹತ್ವದ ಚಿಂತನೆಗಳ ಹಿಂದಿರುವ ಪ್ರೇರಕಶಕ್ತಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕಾರಣಕರ್ತರೂ ಹೌದು.
“ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ, ನಮ್ಮ ವಿಧಿ – ಮನುಷ್ಯನ ಕೈಯಲ್ಲಿರುವ ಸಾಧನ” ಎಂದು ಹೇಳುತ್ತಿದ್ದವರು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.
ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿದವರು ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಬದುಕಿಡೀ ನಾಡಿಗೆ ದುಡಿದು, ಸೇವೆ ಸಲ್ಲಿಸಿದ ನಮ್ಮ ನೆಲದ ಹೆಮ್ಮೆಯ ಈ ಭಾರತೀಯ, ತಮ್ಮ ಜೀವಿತಕಾಲದಲ್ಲಿಯೇ ದಂತಕತೆಯಾದರು. ಜಗತ್ಪ್ರಸಿದ್ಧರಾದರು.
ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆಯನ್ನು ಮನಗಂಡು ಅವರೊಡನೆ ಸಹಕರಿಸಿದ, ಅವರ ಯೋಜನೆಗಳನ್ನು ಬೆಂಬಲಿಸಿದ ಮೈಸೂರು ಮಹಾರಾಜರು, ದಿವಾನರುಗಳ ಸಹಯೋಗವೂ ಇದೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಕಾರಣರಾದವರು.
೧೯೦೮ರಲ್ಲಿ ಅತ್ಯಂತ ಕೆಟ್ಟ ಪ್ರವಾಹ ಏರಿ ಬಂದು, ಹೈದರಾಬಾದಿಗೆ ಎಲ್ಲಿಲ್ಲದ ಹಾನಿಯಾಯಿತು. ವಿದೇಶ ಪ್ರವಾಸದಲ್ಲಿದ್ದ ವಿಶ್ವೇಶ್ವರಯ್ಯ ಅವರಿಗೆ ಹೈದರಾಬಾದಿನ ನಿಜಾಮರಿಂದ ತುರ್ತು ಕರೆ ಹೋಯಿತು. ತಮ್ಮ ವಿದೇಶ ಯಾತ್ರೆಯನ್ನು ಪೂರ್ಣಗೊಳಿಸದೆಯೇ ಹಿಂದಿರುಗಿ ಬಂದ ವಿಶ್ವೇಶ್ವರಯ್ಯ ಅವರು, ಅಂದಿನ ಹೈದರಾಬಾದನ್ನು ಪ್ರವಾಹದಿಂದ ರಕ್ಷಿಸಲು ಯೋಜನೆಗಳನ್ನು ತಯಾರಿಸಿಕೊಟ್ಟರು. ಅಂದಿನ ಹೈದರಾಬಾದ್ ನಗರದಿಂದ ಹದಿನಾರು ಮೈಲಿಗಳಾಚೆಗೆ ಓಸ್ಮಾನ್ ಸಾಗರ ಮತ್ತು ಹಿಮಾಯತ್ ಸಾಗರಗಳನ್ನು ನಿರ್ಮಿಸಲು ಕಾರಣರಾದರು. ನಗರದ ಒಳಚರಂಡಿ, ನೀರ್ಗಾಲುವೆಗಳ ವ್ಯವಸ್ಥೆಯನ್ನೂ ನಿರೂಪಿಸಿದರು. ಒಂದು ಕಾಲಕ್ಕೆ ಅಬ್ಬರಿಸಿ ಹರಿದ ಮುಸಿಯನ್ನು ಪಳಗಿಸಿ ಆಧುನಿಕ ಹೈದರಾಬಾದಿನ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಕಾರಣರಾದರು.
ನಮ್ಮ ಚಿಕ್ಕಂದಿನಿಂದ ನಮ್ಮ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಎಂದು ಜನ ಆಪ್ತವಾಗಿ ಕತೆ ಹೇಳುತ್ತಿದ್ದುದನ್ನು ಕೇಳಿ ಬೆಳೆದವರು ನಾವು. ಆ ಕಾಲಕ್ಕಾಗಲೇ ವಿಶ್ವೇಶ್ವರಯ್ಯ ದಂತಕತೆಯಾಗಿದ್ದರು. ಕಟ್ಟೆಯ ಮೇಲಿಂದ ಕೆಳಗೆ ತೆರೆದ ಬಾಗಿಲುಗಳಿಂದ ಭೋರ್ಗರೆದು ಹರಿಯುವ ಕಾವೇರಿಯ ನೀರನ್ನು ನೋಡುವುದೇ ಒಂದು ಅದ್ಭುತ ಅನುಭವವಾಗಿತ್ತು.
ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆಯ ಬಗ್ಗೆ ಅದೆಷ್ಟೋ ಕತೆಗಳಿದ್ದವು. ಅವರ ಪ್ರಾಮಾಣಿಕತೆಯನ್ನು ಕುರಿತ ಮೋಂಬತ್ತಿಯ ಕತೆಯಂತೂ ಜನಜನಿತವಾಗಿತ್ತು. ವಿದ್ಯುಚ್ಚಕ್ತಿಯಿಲ್ಲದ ಆ ಕಾಲದಲ್ಲಿ ರಾತ್ರಿ ಹೊತ್ತು ಮೋಂಬತ್ತಿಗಳನ್ನು ಬಳಸಲಾಗುತ್ತಿತ್ತು. ವಿಶ್ವೇಶ್ವರಯ್ಯನವರು ಸರ್ಕಾರದ ಕೆಲಸ ಮಾಡುವ ತನಕ ಮಾತ್ರ ಸರಕಾರ ಕೊಟ್ಟ ಮೋಂಬತ್ತಿ ಬಳಸುತ್ತಿದ್ದರು. ಅದು ಮುಗಿದೊಡನೆ, ತಮ್ಮ ಸ್ವಂತ ಖರ್ಚಿನಲ್ಲಿ ಕೊಂಡ ಮೋಂಬತ್ತಿ ಹತ್ತಿಸುತ್ತಿದ್ದರು – ಈ ಕತೆಯನ್ನು ಅದೆಷ್ಟೋ ಜನರ ಬಾಯಲ್ಲಿ ಕೇಳುತ್ತಿದ್ದೆವು.
ವಿಶ್ವೇಶ್ವರಯ್ಯನವರು ೧೮೬೧ ಸೆಪ್ಟೆಂಬರ್ ೧೫ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀನಿವಾಸಶಾಸ್ತ್ರಿ ಸಂಸ್ಕೃತ ವಿದ್ವಾಂಸರು. ತಾಯಿ ವೆಂಕಟಲಕ್ಷಮ್ಮನವರು. ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ವಿಶ್ವೇಶ್ವರಯ್ಯ ಅವರಿಗೆ ಹದಿನೈದು ವರ್ಷವಾಗಿದ್ದಾಗ ತಂದೆ ತೀರಿಕೊಂಡರು. ದಟ್ಟ ದಾರಿದ್ರ್ಯದ ಬದುಕು. ತಲೆ ಬೋಳಿಸಿಕೊಂಡು ಕೆಂಪು ಸೀರೆಯುಟ್ಟು ತಾಯಿ ಅವರಿವರ ಮನೆಯಲ್ಲಿ ದುಡಿಯುತ್ತ ಮಗನನ್ನು ಸಾಕಿ ಸಲಹಿದರು. ಸೋದರ ಮಾವ ಎಚ್ ರಾಮಯ್ಯನವರ ಸಹಾಯದಿಂದ ೧೮೭೫ರಲ್ಲಿ ವಿಶ್ವೇಶ್ವರಯ್ಯ ಬೆಂಗಳೂರಿಗೆ ಬಂದು ವೆಸ್ಲಿ ಮಿಶನ್ ಹೈಸ್ಕೂಲ್ ಸೇರಿದರು.
ಒಮ್ಮೆಯಂತೂ ಎಸ್ ಎಸ್. ಎಲ್. ಸಿ ಪರೀಕ್ಷೆಗೆ ಕೂರಲು ಹಣದ ತೀವ್ರ ಮುಗ್ಗಟ್ಟಿನಿಂದಾಗಿ ಬೆಂಗಳೂರಿನಿಂದ ಮುದ್ದೇನಹಳ್ಳಿಗೆ ೩೫ ಕಿಲೋಮೀಟರ್ ನಡೆದುಕೊಂಡೇ ಹೋದರು. ಮನೆಯ ಪಾತ್ರೆ ಅಡವಿಟ್ಟು ಆ ತಾಯಿ ಹಣ ಹೊಂದಿಸಿಕೊಟ್ಟಿದ್ದರು. ಆದರೆ ಅವರಲ್ಲಿ ಬಡತನಕ್ಕೂ ಬಗ್ಗದ ಜೀವನೋತ್ಸಾಹವಿತ್ತು. ಬದುಕನ್ನು ಎದುರಿಸುವ ದಿಟ್ಟತನವಿತ್ತು. ಭವಿಷ್ಯದ ದೃಢ ಸಂಕಲ್ಪಗಳಿದ್ದವು. ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. ಓದತೊಡಗಿದರು. ಆ ಕಾಲದಲ್ಲಿ ಬಿ.ಎ ತರಗತಿಗಳಲ್ಲಿಯೇ ವಿಜ್ಞಾನದ ವಿಷಯವನ್ನೂ ಹೇಳಿಕೊಡುತ್ತಿದ್ದರು. ಬದುಕು ಸುಲಭವಿರಲಿಲ್ಲ. ಅನಾನುಕೂಲತೆಗಳ ನಡುವೆಯೇ ಮುಂದುವರೆದ ವಿದ್ಯಾಭ್ಯಾಸ. ದೈನಂದಿಕ ಖರ್ಚಿಗೆ ಹಣವಿಲ್ಲದೆ, ಒಂದು ಕೂರ್ಗಿ ಕುಟುಂಬದಲ್ಲಿ ಪಾಠ ಹೇಳಿಕೊಟ್ಟು ಹಣ ಹೊಂದಿಸಿದರು.
೧೮೮೦ರಲ್ಲಿ ಡಿಸ್ಟಿಂಕ್ಷನ್ ಪಡೆದು ಬಿ.ಎ. ಪಾಸು ಮಾಡಿದ ವಿಶ್ವೇಶ್ವರಯ್ಯನವರಿಗೆ ಪುಣೆಯಲ್ಲಿ ಇಂಜಿನಿಯರಿಂಗ್ ಓದಲು ವಿದ್ಯಾರ್ಥಿವೇತನ ಲಭಿಸಿತು. ಮೈಸೂರು ಸಂಸ್ಥಾನದಲ್ಲಿ ಇಂಜಿನಿಯರಿಂಗ್ ಕಾಲೇಜಿರಲಿಲ್ಲ. ೧೮೮೧ರಲ್ಲಿ ಇಂಜಿನಿಯರಿಂಗ್ ಸೇರಿದ ವಿಶ್ವೇಶ್ವರಯ್ಯ ಮೂರು ವರ್ಷದ ಕೋರ್ಸನ್ನು ಎರಡೂವರೆ ವರ್ಷಕ್ಕೆ ಮುಗಿಸಿದರು. ಪರೀಕ್ಷೆಯಲ್ಲಿ ಅವರ ಮೇಧಾವಿತನ ಪ್ರಜ್ವಲಿಸಿತು. ಜೇಮ್ಸ್ ಬರ್ಕ್ಲಿ ಬಹುಮಾನ ದೊರೆತುದಲ್ಲದೆ, ಬಾಂಬೆ ಪಿ.ಡಬ್ಲ್ಯೂ.ಡಿ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ನೌಕರಿ ದೊರೆಯಿತು. ಅಲ್ಲಿಂದ ಪುಣೆಗೆ ವರ್ಗವಾಯಿತು.
ಪುಣೆಯಲ್ಲಿ ವಿಶ್ವೇಶ್ವರಯ್ಯನವರ ಅನೇಕ ಅನ್ವೇಷಣೆಗಳು ಅವರ ಮೇಧಾವಿತನವನ್ನು ಎತ್ತಿ ತೋರಿದವು. ವಿಶ್ವೇಶ್ವರಯ್ಯ ಅಟೋಮ್ಯಾಟಿಕ್ ಸ್ಲೂಸ್ ಗೇಟ್ ಕಂಡು ಹಿಡಿದರು. ಪುಣೆ ನಗರಕ್ಕೆ ಒಂದು ಸರೋವರದಿಂದ ನೀರಿನ ಪೂರೈಕೆಯಾಗುತ್ತಿತ್ತು. ಸರೋವರ ಕೆಲವು ತಿಂಗಳು ಉಕ್ಕಿ ಹರಿಯುತ್ತಿತ್ತು. ಕೆಲವು ತಿಂಗಳಲ್ಲಿ ಬತ್ತಿ ಇಳಿಯುತ್ತಿತ್ತು. ವಿಶ್ವೇಶ್ವರಯ್ಯನವರು ಸರೋವರದ ಅಡ್ಡಕಟ್ಟೆಯ ಮೇಲೆ ಸ್ವಯಂಚಾಲಿತ ಜಾರು ಬಾಗಿಲುಗಳನ್ನು ವಿನ್ಯಾಸ ಮಾಡಿ ನೆಟ್ಟರು. ನೀರು ಪ್ರವಾಹದ ಮಟ್ಟ ಮುಟ್ಟಿದಾಗ ಜಾರು ಬಾಗಿಲುಗಳು ಸ್ವಯಂಚಾಲಿತವಾಗಿ ತೆರದು ಹೆಚ್ಚುವರಿ ನೀರನ್ನು ಹೊರಹೋಗಲು ಬಿಡುತ್ತಿದ್ದವು. ಅದೇ ನೀರಿನ ಮಟ್ಟ ಕಡಿಮೆ ಇದ್ದಾಗ, ಈ ದ್ವಾರಗಳು ಮುಚ್ಚಿಕೊಂಡು ನೀರನ್ನು ಹಿಡಿದಿಡುತ್ತಿದ್ದವು. ವಿಶ್ವೇಶ್ವರಯ್ಯ ತಮ್ಮ ಈ ಆವಿಷ್ಕಾರಕ್ಕೆ ಪೇಟೆಂಟ್ ಪಡೆದರು. ಆದರೆ ಆ ಪೇಟೆಂಟಿಗೆ ಯಾವುದೇ ಸಂಭಾವನೆ ಪಡೆಯಲು ನಿರಾಕರಿಸಿದರು. ಸರ್ಕಾರದ ಕೆಲಸವನ್ನು ತಾವು ಮಾಡಿದ್ದಾಗಿ ಹೇಳಿದರು. ಈ ದ್ವಾರಗಳನ್ನು ಅವರು ೧೯೧೦ರಲ್ಲಿ ನೆಟ್ಟಿದ್ದರು. ನಲವತ್ತೈದು ವರ್ಷಗಳ ಅನಂತರ ಅವುಗಳನ್ನು ವಿಶ್ವೇಶ್ವರಯ್ಯ ನೋಡಿದಾಗಲೂ ಅವು ತ್ರಪ್ತಿಕರವಾಗಿ ಕೆಲಸ ಮಾಡುತ್ತಿದ್ದವು! ೧೯೦೪ರಲ್ಲಿ ಬಾಂಬೆ ಸರ್ಕಾರದ ಸ್ಯಾನಿಟರಿ ಇಂಜಿನಿಯರ್ ಆಗಿ ವಿಶ್ವೇಶ್ವರಯ್ಯ ನೇಮಕಗೊಂಡರು. ಅವರು ಈ ಹುದ್ದೆಯನ್ನು ಪಡೆದ ಮೊದಲ ಭಾರತೀಯರಾಗಿದ್ದರು.
೧೯೦೬ರಲ್ಲಿ ಬ್ರಿಟಿಷರ ಆಡಳಿತದಲ್ಲಿದ್ದ ಯೆಮೆನ್ ದೇಶದ ಏಡನ್ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ವಿಶ್ವೇಶ್ವರಯ್ಯನವರನ್ನು ಕಳುಹಿಸಲಾಯಿತು. ಬೆಟ್ಟಗಳಿಂದ ಸುತ್ತುವರೆದ ಏಡನ್ ನಗರದಲ್ಲಿ ಸುರಿದ ಮಳೆ, ಮರಳು ಭೂಮಿಯಲ್ಲಿ ಹಿಂಗಿ ಹೋಗುತ್ತಿತ್ತು. ವಿಶ್ವೇಶ್ವರಯ್ಯನವರು ಆ ಭೂಪ್ರದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರು. ದೂರದ ಗುಡ್ಡಗಾಡುಗಳಲ್ಲಿ ಬಿದ್ದ ಮಳೆ ಹರಿದು ಹಿಂಗುವ ಜಾಗ, ಏಡನ್ ನಗರದಿಂದ ೧೮ ಮೈಲಿಗಳ ದೂರದಲ್ಲಿತ್ತು. ಇಲ್ಲಿ ನೆಲದಾಳದಲ್ಲಿ ನೀರಿನ ಜಲಾಶಯವಿರುವುದನ್ನು ವಿಶ್ವೇಶ್ವರಯ್ಯನವರು ಗುರುತಿಸಿದರು. ಕುಡಿಯುವ ನೀರಿನ ವ್ಯವಸ್ಥೆಯನ್ನು ಯೋಜಿಸಿಕೊಟ್ಟರು. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಏಡನ್ ನಗರ ಇಂದೂ ನೆನಪಿಟ್ಟುಕೊಂಡಿದೆ. ವಿಶ್ವೇಶ್ವರಯ್ಯನವರ ಈ ಅನುಪಮ ಸೇವೆಗೆ ಬ್ರಿಟಿಷ್ ಸರ್ಕಾರ ಅವರಿಗೆ ಕೈಸರ್– ಎ-ಹಿಂದ್ ಬಿರುದು ನೀಡಿ ಗೌರವಿಸಿತು.
೧೯೦೮ರಲ್ಲಿ ತಮ್ಮ ಬಾಂಬೆ ಕೆಲಸಕ್ಕೆ ರಾಜೀನಾಮೆ ನೀಡಿದ ವಿಶ್ವೇಶ್ವರಯ್ಯನವರು ವಿದೇಶ ಪ್ರವಾಸಕ್ಕೆ ತೊಡಗಿದ್ದರು. ಆ ಸಂದರ್ಭದಲ್ಲಿ ಪ್ರವಾಹಗಳಿಂದ ದುಸ್ಥಿತಿಯಲ್ಲಿದ ಹೈದರಾಬಾದಿಗೆ ನೆರವಾಗಲು ಹೈದರಾಬಾದಿನ ನಿಜಾಮರು ಸಲ್ಲಿಸಿದ ಕೋರಿಕೆಯನ್ನು ಮನ್ನಿಸಿ ವಿದೇಶ ಪ್ರವಾಸದಿಂದ ಅರ್ಧ ಹಾದಿಯಲ್ಲಿ ಹಿಂದಿರುಗಿ ಬಂದ ಅವರು, ೧೯೦೯ರಲ್ಲಿ ಅಲ್ಲಿನ ವಿಶೇಷ ಸಲಹಾ ಇಂಜಿನಿಯರ್ ಆದರು. ಅದೇ ಸಂದರ್ಭದಲ್ಲಿ ಮೈಸೂರಿನ ದಿವಾನರಾಗಿದ್ದ ಮಾಧವರಾವ್ ಅವರು ವಿಶ್ವೇಶ್ವರಯ್ಯ ಅವರಿಗೆ ಮೈಸೂರು ರಾಜ್ಯದ ಚೀಫ್ ಇಂಜಿನಿಯರ್ ಆಗುವಂತೆ ಕೋರಿಕೆ ಇಟ್ಟರು. ಮೈಸೂರಿನವರೇ ಆದ ಅವರ ಪ್ರತಿಭೆ, ಪ್ರಸಿದ್ಧಿ ಮಹಾರಾಜರನ್ನು ಪ್ರಭಾವಿಸಿತ್ತು. ಆದರೆ, ವಿಶ್ವೇಶ್ವರಯ್ಯ ಅವರಿಗೆ ವಿಶೇಷವಿಲ್ಲದ ಸಾಮಾನ್ಯ ಕೆಲಸಗಳಲ್ಲಿ ತೊಡಗುವ ಇಚ್ಛೆ ಇರಲಿಲ್ಲ. ಮೈಸೂರು ಸರ್ಕಾರಕ್ಕೆ ತಾಂತ್ರಿಕ ವಿದ್ಯಾಭ್ಯಾಸ ಮತ್ತು ಕಾರ್ಖಾನೆಗಳ ಅಬಿವೃದ್ಧಿಗೆ ಭಾರೀ ಯೋಜನೆಗಳನ್ನು ಹಾಕುವುದರಲ್ಲಿ ಆಸಕ್ತಿ ಇದ್ದರೆ ಮಾತ್ರ ತಾವು ಬರುವುದಾಗಿ ಹೇಳಿದರು. ಮುಸಿ ನದಿಯ ಪ್ರವಾಹ ಸಮಸ್ಯೆಗೆ ಪರಿಹಾರ ಒದಗಿಸಿಕೊಟ್ಟ ವಿಶ್ವೇಶ್ವರಯ್ಯನವರು ಹೈದಾರಾಬಾದಿನಿಂದ ಬೀಳ್ಕೊಂಡು ಮಹಾರಾಜ ಕೃಷ್ಣರಾಜ ಒಡೆಯರ ಒತ್ತಾಯದ ಆಹ್ವಾನದ ಮೇಲೆ ಮೈಸೂರಿಗೆ ಬಂದರು.
ನವೆಂಬರ್ ೧೯೦೯ರಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿ ಸೇರಿಕೊಂಡರು. ಸೇರಿದೊಡನೆ ಅವರಿಗೆ ಪಿ.ಡಬ್ಲ್ಯೂ.ಡಿ ಗೆ ಹೊಸದಾಗಿ ನೇಮಿಸಿಕೊಂಡ ಜನರ ಹೆಸರುಗಳ ಪಟ್ಟಿ ಕಳುಹಿಸಲಾಯಿತು. ಹೊಸದಾಗಿ ನೇಮಕಗೊಂಡ ಅವರ ಮುಖ್ಯ ಅರ್ಹತೆ ಎಂದರೆ, ಅವರೆಲ್ಲ ದೊಡ್ಡ ಅಧಿಕಾರಿಗಳ ಸಂಬಂಧಿಗಳಾಗಿದ್ದದ್ದು! ವಿಶ್ವೇಶ್ವರಯ್ಯ ಆ ಪಟ್ಟಿಯನ್ನು ನಿರಾಕರಿಸಿ, ಕೇವಲ ಪ್ರತಿಭೆ ಮತ್ತು ವಿದ್ಯಾರ್ಹತೆಯ ಮೇಲೆ ಮತ್ತೊಂದು ಪಟ್ಟಿ ಸಿದ್ಧ ಮಾಡಲು ಹೇಳಿದರು. ತಮಗೆ ಇಂತಹ ನಡೆಗಳಿಂದ ಬಂದ ತೊಂದರೆಗಳನ್ನು ಲೆಕ್ಕಿಸದೆ, ತಾವು ಹಿಡಿದ ಅಭಿವೃದ್ಧಿಯ ಹಾದಿಯಲ್ಲಿ ಮೈಸೂರನ್ನು ನಡೆಸಿದರು.
ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು.
೧. ಕಾರ್ಖಾನೆಗಳ ಕೈಗಾರಿಕಾ ಸಮಿತಿ
೨. ವಿದ್ಯಾಸಮಿತಿ
೩. ಭೂ ವ್ಯವಸಾಯ ಸಮಿತಿ
ಈ ವಿದ್ಯಾ ಸಮಿತಿಯ ಅಡಿಯಲ್ಲಿ ಮುಖ್ಯವಾಗಿ ಎರಡು ಯೋಜನೆಗಳನ್ನು ನಿರ್ಧರಿಸಲಾಯಿತು.
೧. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ
೨. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು
ಹೀಗೆ ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಪ್ರೇರಕಶಕ್ತಿ ಹಾಗೂ ಕಾರಣಕರ್ತರಾಗಿದ್ದಾರೆ.
ನಮ್ಮ ಎಲ್ಲ ಆರ್ಥಿಕ ರೋಗಗಳಿಗೂ ವಿದ್ಯಾಭ್ಯಾಸವೇ ಮದ್ದು ಎಂದು ವಿಶ್ವೇಶ್ವರಯ್ಯ ಬಲವಾಗಿ ನಂಬಿದ್ದರು.
ಕನ್ನಂಬಾಡಿ ಆಣೆಕಟ್ಟು ಮತ್ತು ವಿದ್ಯುಚ್ಚಕ್ತಿ ಯೋಜನೆಗಳನ್ನು ಪೂರೈಸಿದಂತಹ ಮಹತ್ವದ ಸಾಧನೆಗಳಿಗಾಗಿ ಬ್ರಿಟಿಷ್ ಸರ್ಕಾರ ಅವರನ್ನು ನೈಟ್ ಕಮಾಂಡರ್ ಆಗಿ ಅಲಂಕರಿಸಿ ಸರ್ ಪದವಿಯನ್ನು ನೀಡಿತು. ಆಡಳಿತದಲ್ಲಿ ದಕ್ಷರಾದ ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ಮೈಸೂರು ಸಂಸ್ಥಾನದ ಏಳನೆ ದಿವಾನರಾದರು. ದಿವಾನರಾಗುವ ಮೊದಲು ತನ್ನ ತಾಯಿಗೆ ನೀನು ಯಾರ ಶಿಫಾರಸ್ಸನ್ನೂ ನನ್ನಲ್ಲಿಗೆ ತರುವುದಿಲ್ಲ ಎಂದರೆ ಮಾತ್ರ ನಾನು ದಿವಾನ ಪದವಿಯನ್ನು ಒಪ್ಪಿಕೊಳ್ಳುವೆ ಎಂದು ಹೇಳಿದರಂತೆ! ವಿಶ್ವೇಶ್ವರಯ್ಯನವರು ಶಿಕ್ಷಣ, ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದರು.
ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಹಾರಾಣಿ ಕಾಲೇಜು, ಹಲವಾರು ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಸೌಲಭ್ಯಗಳು, ಮೈಸೂರು ವಿಶ್ವವಿದ್ಯಾಲಯ, ವಿವಿಧರೀತಿಯ ಕೈಗಾರಿಕೆಗಳು, ಸಾರ್ವಜನಿಕ ಗ್ರಂಥಾಲಯಗಳು ಇವೆಲ್ಲಾ ವಿಶ್ವೇಶ್ವರಯ್ಯನವರ ಸಮಗ್ರ ಕೊಡುಗೆಗಳು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣ ಹಾಗೂ ಆ ಮೂಲಕ ಕನ್ನಡಿಗರ ಒಕ್ಕೂಟ, ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ಕೂಡಾ ವಿಶ್ವೇಶ್ವರಯ್ಯನವರ ಬೆಂಬಲ ಪ್ರಮುಖವಾದದ್ದು.
ಭಾರತದ ಆರ್ಥಿಕ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಗಾಧವಾದದ್ದು. ೧೯೨೦ರಲ್ಲಿ Reconstructing India, ೧೯೩೪ರಲ್ಲಿ Planned Economy for India ಪುಸ್ತಕಗಳನ್ನು ಪ್ರಕಟಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ೧೯೫೫ರಲ್ಲಿ ವಿಶ್ವೇಶ್ವರಯ್ಯ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಪುರಸ್ಕಾರವನ್ನು ನೀಡಲಾಯಿತು. ಒಂದು ವಿಧದಲ್ಲಿ ಭಾರತರತ್ನಕ್ಕೆ ವಿಶ್ವೇಶ್ವರಯ್ಯನವರಿಂದ ಒಂದು ಮೌಲ್ಯ ಬಂತು ಎಂಬದು ಇಂದಿಗೂ ಸಾರ್ವಜನಿಕವಾದ ಅಭಿಪ್ರಾಯವಾಗಿದೆ ಎಂದರೆ ಸುಳ್ಳಲ್ಲ! ಅವರ ನೂರನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನೆಹರೂ ಅವರು ಬಂದರು.
ಭಾರತದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯ ಅವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಸರ್ ಎಂ. ವಿ ಅವರ ಬದುಕು ಮತ್ತು ಸಾಧನೆಯನ್ನು ಜನ ಅರಿತಷ್ಟೂ ನಮ್ಮ ಎಳೆಯ ಪೀಳಿಗೆಯ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ. ಲಂಚಕೋರತನ, ಲಾಭಕೋರತನದ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕ ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪವಾಗಬಲ್ಲದು.
ಈ ಮಹಾನ್ ಪ್ರೇರಕ ಶಕ್ತಿ, ಆದರ್ಶ, ಪ್ರಾಮಾಣಿಕತೆ, ಸಾಮರ್ಥ್ಯ, ಚೇತನಗಳಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು.
(ಆಧಾರ: ನೇಮಿಚಂದ್ರ ಅವರ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಕುರಿತಾದ ಲೇಖನ. ಉದಯವಾಣಿ)
Tag: Sir M. Visvesvaraiaha
ಸರ್ ಮಿರ್ಜಾ ಇಸ್ಮಾಯಿಲ್
(೧೮೮೩ – ಜನವರಿ ೮, ೧೯೫೯), ಮೈಸೂರಿನ ದೀವನರು
ಮಿರ್ಜಾ ಇಸ್ಮಾಯಿಲ್ (೧೮೮೩ – ಜನವರಿ ೮, ೧೯೫೯) ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಮೈಸೂರಿನ ದಿವಾನರಾಗಿದ್ದರು.. ಕಾಗದದ ಕಾರ್ಖಾನೆ , ಸಕ್ಕರೆ ಕಾರ್ಖಾನೆ, ಮೊದಲಾದ ಕಾರ್ಖಾನೆಗಳನ್ನು ಸ್ಥಾಪಿಸಲು ಕಾರಣರ್ತರಾದವರು. ವೃಂದಾವನ ಉದ್ಯಾನವನ್ನು ನರ್ಮಿಸಿದವರು ಮರ್ಜಾರವರು. ಸಂಸ್ಥಾನದ ಸಮೃದ್ಧಿ ಮತ್ತು ಸೊಬಗುಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರು ಹಿಂದೂ ಮುಸ್ಲಿಮ್ ಸೌಹರ್ದತೆಗೂ ಕಾರಣರಾಗಿದ್ದರು.
ಮಿರ್ಜಾ ಇಸ್ಮಾಯಿಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ನಿವೇಶನವು ಒಂದು ಬಯಲುಪ್ರದೇಶ. ಎದುರುಗಡೆ ಹಾರ್ಡಿಂಜ್ ರಸ್ತೆ. (ಈಗ ಪಂಪಮಹಾಕವಿರಸ್ತೆಯಾಗಿದೆ) ಅಕ್ಕಪಕ್ಕ ೨ ಹಾಗೂ ೩ನೇ ಮುಖ್ಯರಸ್ತೆ. ಹಿಂಭಾಗದಲ್ಲಿ ಎರಡು ಖಾಸಗಿ ಮನೆಗಳು. ಈ ಬಯಲಿನ ಅಂಚಿನಲ್ಲಿ ಆ ಎರಡೂ ಮನೆಗಳ ನಡುಭಾಗದಲ್ಲಿ ಮೂರು ದೊಡ್ಡ ಹೊಂಗೆಮರಗಳು. ಸಂಜೆಯ ಸೂರ್ಯನ ಬಿಸಿಲನ್ನು ತಡೆದು ಬಯಲಿಗೆ ನೆರಳೀಯುತ್ತಿದ್ದವು. ಭಾರತ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಎಲ್ಲ ಸಭೆಗಳೂ ಈ ಬಯಲಿನಲ್ಲಿ ನಡೆಯುತ್ತಿದ್ದವು. ಜನರು ಅದನ್ನು ಗಾಂಧೀಮೈದಾನ ಎಂದು ಕರೆಯುತ್ತಿದ್ದರು.
ಕೃಷ್ಣರಾಜಪರಿಷನ್ಮಂದಿರ ನಿರ್ಮಾಣವಾದಾಗ ಈಗಿನ ಸಭಾ ಮಂದಿರಕ್ಕೆ ಬದಲಾಗಿ ಎರಡು ಕೋಟೆಗಳನ್ನು ಕಟ್ಟಿರುವುದನ್ನು ಕಟ್ಟಡ ಏಳುವಾಗ ಆಗಾಗ ಬಂದು ನೋಡುತ್ತಿದ್ದ ಮಿರ್ಜಾ ಸಾಹೇಬರು ತಮ್ಮ ಗುರುಗಳಾದ ವೆಂಕಟನಾರಣಪ್ಪ ಅವರನ್ನು ಕಂಡು “ನಿಮಗೆ ಸಭೆ ಸಮಾರಂಭಗಳಿಗಾಗಿ ಒಂದು ಹಾಲ್ ಬೇಡವೇ? ಈ ಭಾಗವನ್ನು ಎರಡು ರೂಮುಗಳಾಗಿ ಒಡೆಯಬೇಡಿ. ಒಂದು ಹಾಲ್ ಮಾಡಿಕೊಳ್ಳಿ ಎಂದು ಬೋಧನೆ ಮಾಡಿ ಹಾಲ್ ವ್ಯವಸ್ಥೆ ಮಾಡಿದರು. ಅವರ ವಿವೇಕ ಹಾಗೂ ದೂರದೃಷ್ಟಿಯಿಂದ ಮಾಡಿದ ಈ ಕಾರ್ಯ ಪರಿಷತ್ತಿಗೆ ಅನುಕೂಲಕರವಾಯಿತು. ಕಾಲಕಾಲಕ್ಕೆ ಮೈಸೂರು ಸಂಸ್ಥಾನದಿಂದ ಧನಸಹಾಯ ತರಿಸಲು ಕಾರಣರಾದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮುದ್ರಣವಾಗಿರುವ ಸರ್ ಮಿರ್ಜಾ ಇಸ್ಮಾಯಿಲ್ ಎಂಬ ಪುಸ್ತಕದಲ್ಲಿ ಇವರ ಕುರಿತು ವಿಸ್ತೃತ ಮಾಹಿತಿ ದೊರೆಯುತ್ತದೆ.
1915ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಮುಖ ಗಣ್ಯರು
ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಇತಿಹಾಸ
ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕೀಕರಣದ ಹೋರಾಟಗಾರರೂ ಸಾಹಿತಿಗಳೂ ವಿದ್ವಾಂಸರೂ ಮೈಸೂರಿನ ಆಡಳಿತಗಾರರೂ, ಅಧ್ಯಾಪಕರೂ, ಸಾರ್ವಜನಿಕ ಗಣ್ಯರು ಹೀಗೆ ಹಲವಾರು ಗಣ್ಯವ್ಯಕ್ತಿಗಳ ನಾಡು – ನುಡಿ ಸೇವಕರ ಒಂದು ಗುಂಪಿನ ಜನರ ಸಂಯುಕ್ತ ಶ್ರಮ ತ್ಯಾಗಗಳ ಫಲವಾಗಿ ರೂಪುಗೊಂಡಿತು.
ಬೆಂಗಳೂರಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಮಾಡಿದ ಪ್ರಯತ್ನಗಳೂ ಹೆಚ್.ವಿ. ನಂಜುಂಡಯ್ಯ, ಬೆಳ್ಳಾವೆ ವೆಂಕಟನಾರಣಪ್ಪ, ಕರ್ಪೂರ ಶ್ರೀನಿವಾಸರಾವ್, ಅಚ್ಯುತರಾವ್, ಬಹಾದ್ದೂರ್ ಶ್ಯಾಮರಾವ್, ರಾ.ಹ. ದೇಶಪಾಂಡೆ, ಆಲೂರು ವೆಂಕಟರಾಯರು ಇನ್ನೂ ಅನೇಕರು ಸೇರಿ ಅಹರ್ನಿಶಿ ನಡೆಸಿದ ಚಿಂತನೆ – ಪರಿಶ್ರಮಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ರೂಪುಗೊಂಡು ಸ್ಥಾಪನೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೫ನೇ ಮೇ ೧೯೧೫ರಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ರೀತಿ ಒಂದು ಐತಿಹಾಸಿಕ ಮಹತ್ವದ ಘಟನೆಯಾಗಿದೆ.
ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಮೇಲೆ ೧೮೮೧ರಲ್ಲಿ ಚಾಮರಾಜೇಂದ್ರ ಒಡೆಯರ್ ಪಟ್ಟಕ್ಕೆ ಬಂದರು. ಆಗಿನಿಂದ ದಿವಾನರ ಆಡಳಿತ ಪ್ರಾರಂಭವಾಯಿತು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ದಿವಾನರಾದರು. ಇವರ ಅಧಿಕಾರಾವಧಿ ೧೯೧೨ರಿಂದ ೧೯೧೮ ರವರೆಗೆ ೬ ವರ್ಷಗಳು. ಈ ಮುಂಚೆ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಚೀಫ್ ಇಂಜಿನಿಯರಾಗಿ ೧೯0೯ರಲ್ಲಿ ನೇಮಕಗೊಂಡಿದ್ದರು. ಅನಂತರ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು.
೧. ಕಾರ್ಖಾನೆಗಳ ಕೈಗಾರಿಕಾ ಸಮಿತಿ
೨. ವಿದ್ಯಾಸಮಿತಿ
೩. ಭೂ ವ್ಯವಸಾಯ ಸಮಿತಿ
ವಿದ್ಯಾಸಮಿತಿಗೆ ಹೆಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ವಿ. ಸುಬ್ರಹ್ಮಣ್ಯ ಅಯ್ಯರ್ ಅವರು ಕಾರ್ಯದರ್ಶಿಗಳಾಗಿ ನೇಮಕವಾದರು. ಈ ವಿದ್ಯಾ ಸಮಿತಿಯವರು ಮುಖ್ಯವಾಗಿ ಎರಡು ಯೋಜನೆಗಳನ್ನು ನಿರ್ಧರಿಸಿದರು.
೧. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ
೨. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ವಿಷಯದಲ್ಲಿ ದೇಶದ ವಿದ್ವಜ್ಜನರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬೇಕೆಂದು ವಿದ್ಯಾಸಮಿತಿಯು ಕೆಲವು ವಿಷಯಗಳನ್ನು ಸಂಕಲ್ಪಿಸಿ ಆ ಬಗ್ಗೆ ಹಲವು ಉಪನ್ಯಾಸಗಳನ್ನು ವಿದ್ವಜ್ಜನರಿಂದ ಏರ್ಪಡಿಸಿತು. ಹಾಗೆ ಏರ್ಪಟ್ಟಿದ್ದು ಬಿ. ಎಂ. ಶ್ರೀ ಅವರ ಉಪನ್ಯಾಸ ಮೈಸೂರು ನಗರದಲ್ಲಿ, ೧೯೧೨-೧೩ರಲ್ಲಿ. ಆಗ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ದಸರಾ ಅಧಿವೇಶನಕ್ಕೆ ಬಂದಿದ್ದರು. ಎಂ. ವೆಂಕಟಕೃಷ್ಣಯ್ಯ, ಅಂಬಳೆ ಅಣ್ಣಯ್ಯ ಪಂಡಿತರು, ಕರ್ಪೂರ ಶ್ರೀನಿವಾಸರಾವ್, ಕೆ. ಕೃಷ್ಣಯ್ಯಂಗಾರ್ ಮೊದಲಾದ ಗಣ್ಯವ್ಯಕ್ತಿಗಳು ಬಂದಿದ್ದರು. ಮೈಸೂರಿನ ಗಾರ್ಡನ್ ಪಾರ್ಕಿನಲ್ಲಿರುವ ಡಿಸ್ಟ್ರಿಕ್ಟ್ ಆಫೀಸರ್ ಕಟ್ಟಡದಲ್ಲಿ ಸಭೆ ಸೇರಿತ್ತು. ಬೆಳಿಗ್ಗೆ ೯ರಿಂದ ೧೧ರವರೆಗೆ ಬಿಎಂಶ್ರೀ ಅವರು ಉಪನ್ಯಾಸ ನೀಡಿದರು. ಆ ಭಾಷಣದಲ್ಲಿ “ಕನ್ನಡಕ್ಕೆ ಹೊಸ ಸಾಹಿತ್ಯ ಬೇಕಾಗಿದೆ. ಪ್ರಾಚೀನಸಾಹಿತ್ಯದ ಅಭ್ಯಾಸ ಮಾಡಿ ಭಾಷೆಯ ಹಳೆಯ ಶಬ್ದರಾಶಿ ಪ್ರಯೋಗಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಹೊಸಬರವಣಿಗೆಗೆ ಅದು ಅತ್ಯಂತ ಅವಶ್ಯಕವಾದ ಸಿದ್ಧತೆ. ಸಂಸ್ಕೃತದ ಪರಿಚಯವಿಲ್ಲದಿದ್ದರೆ ಹೊಸ ಸಾಹಿತ್ಯಕ್ಕೆ ಬೇಕಾದ ಶಬ್ದಸಾಮಗ್ರಿ ಒದಗಲಾರದು. ಸಂಸ್ಕೃತ ಹೇಗೆ ಆವಶ್ಯಕವೋ ಇಂಗ್ಲಿಷ್ ಸಾಹಿತ್ಯವೂ ಹಾಗೇ ಅವಶ್ಯಕ. ಹೊಸಗನ್ನಡದಲ್ಲಿ ಹೊಸಹೊಸ ಛಂದಃಪ್ರಯೋಗಗಳು ಹೊಸಹೊಸ ಪದಸಂಯೋಜನೆಗಳೂ ಹೊಸಹೊಸ ಕಥಾಪ್ರಪಂಚದ ನಿರ್ಮಿತಿಗಳೂ ಸೇರಿ ನಮ್ಮ ಸಾಹಿತ್ಯ ಜನಜೀವನಕ್ಕೆ ಒಂದು ಹೊಸ ಪ್ರಚೋದಕ ಶೈಲಿಯಾಗಬೇಕು“ ಎಂದು ಹೇಳಿದರು.
ಅನಂತರ ೧೯೧೪ರ ಇಸವಿಯಲ್ಲಿ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಅವರು ವಾರ್ಷಿಕ ಸಮ್ಮೇಳನ ನಡೆಸಿದಾಗ ಆ ಸಭೆಯಲ್ಲಿ ಎಂ. ಶಾಮರಾವ್ ಅವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ೭ನೇ ಅಂಶದಲ್ಲಿ ಕನ್ನಡ ಸಾಹಿತ್ಯದ ಅಭಿವೃದ್ಧಿಗಾಗಿ ಒಂದು ಸಂಸ್ಥೆಯ ಸ್ಥಾಪನಾ ವಿಷಯವನ್ನು ಮಂಡಿಸುವಂತೆ ಕೋರಿದ್ದರು. ಅದರಂತೆ ಸಭೆಯು “ಕರ್ನಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸಿದವರ ಪ್ರೋತ್ಸಾಹಕ್ಕಾಗಿ ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದಿರಬೇಕು: ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತವೆಂದು ಸಂಪದಭ್ಯುದಯ ಸಮಾಜವು ಸರ್ಕಾರಕ್ಕೆ ಶಿಫಾರಸು ಮಾಡಬೇಕು” ಎಂದು ನಿರ್ಣಯಿಸಿತು.
ಅದರಂತೆ ೩೧ ಅಕ್ಟೋಬರ್ ೧೯೧೪ರಲ್ಲಿ ಸಂಪದಭ್ಯುದಯ ಸಮಾಜದ ವಿದ್ಯಾವಿಷಯಕ ಮಂಡಳಿಯವರು ಉಪಸಮಿತಿಯೊಂದನ್ನು ರಚಿಸಿದರು. ಆ ಸಮಿತಿಗೆ ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರು ಸದಸ್ಯರಾಗಿದ್ದರು. ಈ ಸಮಿತಿ “ಕನ್ನಡ ನಾಡುಗಳ ಪ್ರಮುಖರನ್ನು ಬೆಂಗಳೂರಿಗೆ ಆಹ್ವಾನಮಾಡಿ ಕರ್ಣಾಟಕ ಭಾಷಾ ಪರಿಷ್ಕರಣಕ್ಕೂ ಕರ್ಣಾಟಕ ಗ್ರಂಥಾಭಿವೃದ್ಧಿಗೂ ಅನುಕೂಲವಾಗುವಂತೆ ಸಮಿತಿಯೊಂದನ್ನು ಏರ್ಪಡಿಸುವ ಕಾರ್ಯವನ್ನು ನಿರ್ವಹಿಸಬೇಕು” ಎಂದು ತೀರ್ಮಾನಿಸಿತು.
ಈ ಉಪಸಮಿತಿಯು ೧೯೧೫ ಜನವರಿ ೭ರಂದು ಮೊದಲ ಸಭೆಯನ್ನು, ೧೯೧೫ ಮಾರ್ಚಿ ೨ರಂದು ೨ನೇ ಸಭೆಯನ್ನು, ೧೯೧೫ ಮಾರ್ಚಿ ೨೨ರಂದು ೩ನೇ ಸಭೆಯನ್ನು ನಡೆಸಿತು. ಆ ೩ ಸಭೆಗಳ ಸಂಕ್ಷಿಪ್ತ ವಿವರಣೆ ಹೀಗಿದೆ:
ಮೊದಲ ಸಭೆ : (೭–೧–೧೯೧೫)
ಜನವರಿ ೭ರಂದು ನಡೆದ ಉಪಸಮಿತಿಯ ಮೊದಲ ಸಭೆಯಲ್ಲಿ ಮುಂಬಯಿ ಮತ್ತು ಮದರಾಸ್ ಪ್ರಾಂತದಿಂದ ಸಮ್ಮೇಳನಕ್ಕೆ ಗಣ್ಯರನ್ನು ಆಹ್ವಾನಿಸುವ ವಿಷಯ ಇತ್ಯರ್ಥವಾಯಿತು. ಮೈಸೂರು ಮತ್ತು ಬೊಂಬಾಯಿಯ ಶಿಕ್ಷಣ ಇಲಾಖೆಗಳು ನಿಗದಿಪಡಿಸಿರುವ ಕನ್ನಡ ಪಠ್ಯ ಪುಸ್ತಕಗಳಲ್ಲಿ ಸಾಹಿತ್ಯಿಕ ಸಮಾನಾಂತರ ರೂಪದ ಬಳಕೆ ಬಗ್ಗೆ ಮೈಸೂರು ಕನ್ನಡ ಭೇದವನ್ನು ಮೈಸೂರು ಶಿಕ್ಷಣ ಇಲಾಖೆಯ ಮೂವರು ರೀಡರುಗಳೊಂದಿಗೆ ಚರ್ಚಿಸಿ, ವರದಿ ತಯಾರಿಸಿ ಮುಂದೆ ನಡೆಯಲಿರುವ ಸಮ್ಮೇಳನದಲ್ಲಿ ಮಂಡಿಸಬೇಕೆಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕೋರಲು ತೀರ್ಮಾನಿಸಲಾಯಿತು.
ಎರಡನೆಯ ಸಭೆ : (೨–೩–೧೯೧೫)
ಸಂಪದಭ್ಯುದಯ ಸಮಾಜದ ವಿದ್ಯಾವಿಷಯ ಸಮಿತಿಯ, ಮೂವರು ಪ್ರಾಜ್ಞ ಸದಸ್ಯರ ಉಪಸಮಿತಿಯು ೧೯೧೫ರ ಮಾರ್ಚಿ ೨ರಂದು ಎರಡನೆಯ ಸಭೆ ನಡೆಸಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಂಡಿತು.
- ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಇಬ್ಬರು ಲಿಂಗಾಯಿತರು, ಇಬ್ಬರು ಜೈನ ಪ್ರತಿನಿಧಿಗಳನ್ನು, ಬೊಂಬಾಯಿಯ ಕರ್ನಾಟಕಸಭೆ ಇಬ್ಬರು ಪ್ರತಿನಿಧಿಗಳನ್ನು ಸಮ್ಮೇಳನಕ್ಕೆ ಕಳುಹಿಸುವಂತೆ ಪ್ರಾರ್ಥಿಸುವುದು.
- ಬೊಂಬಾಯಿ ಶಿಕ್ಷಣ ಇಲಾಖೆಯ ಮೂರು ಕನ್ನಡಪುಸ್ತಕಗಳನ್ನು ಪರಿಶೀಲಿಸಿ, ಬೊಂಬಾಯಿ ಕನ್ನಡದಲ್ಲಿನ ಉಚ್ಚಾರಭೇದಗಳಲ್ಲಿರುವ ಬಗೆಗೆ ಸಂಕ್ಷಿಪ್ತವಾದ ವರದಿಯನ್ನು ಸಮ್ಮೇಳನಕ್ಕಾಗಿ ಸಿದ್ಧಪಡಿಸಬೇಕೆಂದು ಆರ್. ನರಸಿಂಹಾಚಾರ್, ಆರ್. ರಘುನಾಥರಾವ್, ಎಂ. ಲಕ್ಷ್ಮೀನಾರಣಪ್ಪ ಮತ್ತು ಬಿ. ಕೃಷ್ಣಪ್ಪ ಅವರುಗಳನ್ನೊಳಗೊಂಡ ಉಪಸಮಿತಿ ನೇಮಕ ಮಾಡುವುದು.
- ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಆಯ್ದ ಒಂದಕ್ಕಿಂತ ಹೆಚ್ಚು ವಿಷಯಗಳ ಬಗ್ಗೆ ಲೇಖನಗಳನ್ನು ಬರೆದು ೧೯೧೫ ಏಪ್ರಿಲ್ ೧೫ರೊಳಗೆ, ಪ್ರಾವಿಷನಲ್ ಸೆಕ್ರೆಟರಿ ಬಿ. ಕೃಷ್ಣಪ್ಪ ಅವರಿಗೆ ತಲುಪಿಸುವಂತೆ ಕೋರುವುದು.
ಆಯ್ದ ಐದು ಅಂಶಗಳು ಇಂತಿವೆ:
- ಕನ್ನಡನಾಡಿನ ಬೇರೆಬೇರೆ ಜಾಗಗಳಲ್ಲಿರುವ ಭಾಷಾಭಿಜ್ಞರಲ್ಲಿ ಐಕಮತ್ಯವನ್ನು ಪರಸ್ಪರ ಸೌಹಾರ್ದವನ್ನು ಹೆಚ್ಚಿಸುವುದಕ್ಕಾಗಿ ಉತ್ತಮೋಪಾಯಗಳನ್ನು ನಿರ್ಧರಿಸುವುದು.
- ಕನ್ನಡನಾಡಿನ ಬೇರೆಬೇರೆ ಭಾಗಗಳಲ್ಲಿ ಪ್ರಚಾರದಲ್ಲಿರುವ ಗ್ರಾಂಥಿಕಭಾಷೆಯನ್ನು ಒಂದೇರೂಪಕ್ಕೆ ತರಲು ತಕ್ಕ ಮಾರ್ಗವನ್ನು ನಿಶ್ಚಯಿಸುವುದು,
- ಕನ್ನಡವನ್ನೋದುವ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾಶಾಲೆಗಳಲ್ಲಿಯೂ ಪಾಠದ ಪುಸ್ತಕಗಳು ಒಂದೇ ಆಗಿರುವುದಕ್ಕೆ ಬೇಕಾದ ಪ್ರಯತ್ನಗಳನ್ನು ಮಾಡುವುದು.
- ಕನ್ನಡವನ್ನಾಡುವ ಜನಸಾಮಾನ್ಯರಲ್ಲಿ ಲೋಕವ್ಯವಹಾರ ಜ್ಞಾನವು ಸರಳ ಹಾಗೂ ಸುಲಭವಾಗಿ ಹರಡುವಂತೆ ತಕ್ಕ ಸಣ್ಣ ಪುಸ್ತಕಗಳನ್ನು ಬರೆಯಿಸಿ ಪ್ರಚಾರಮಾಡುವುದಕ್ಕೆ ಸಾಧಕವಾದ ಉತ್ತಮೋಪಾಯಗಳನ್ನು ನಿರ್ಣಯಿಸುವುದು,
- ಕನ್ನಡದಲ್ಲಿ ಬರೆಯುವ ಭೌತಿಕಾದಿ ನಾನಾ ಶಾಸ್ತ್ರಗಳಲ್ಲಿ ಪ್ರಯೋಗಿಸಬೇಕಾದ ಪಾರಿಭಾಷಿಕ ಶಬ್ದಗಳನ್ನು ನಿರ್ಣಯಿಸುವುದಕ್ಕೆ ತಕ್ಕ ಉತ್ತಮೋಪಾಯಗಳನ್ನು ಪರಿಶೀಲಿಸುವುದು.
ಮೂರನೆಯ ಸಭೆ : (೨೨–೩–೧೯೧೫)
೧೯೧೫ ಮಾರ್ಚಿ ೨೨ರಂದು ಸೇರಿದ ಮೂರನೆಯ ಸಭೆಯಲ್ಲಿ ಸಮ್ಮೇಳನವನ್ನು ೩-೫-೧೯೧೫ರಲ್ಲಿ ನಡೆಸಲು ತೀರ್ಮಾನಿಸಿತು. ಮೇಲ್ಕಾಣಿಸಿದ ೫ ವಿಷಯಗಳ ಬಗ್ಗೆ ವಿದ್ಯಾವಿಷಯಕ ಸಮಿತಿಯ ಉಪಸಮಿತಿಯ ವಿನಂತಿಯ ಮೇರೆಗೆ ೩೧ ಲೇಖನಗಳು ಬಂದವು. ಆ ಪೈಕಿ ೭ ಇಂಗ್ಲಿಷಿನಲ್ಲಿ ಉಳಿದವು ಕನ್ನಡದಲ್ಲಿದ್ದವು.
ಈ ಉಪನ್ಯಾಸಗಳನ್ನೆಲ್ಲ ಪರಿಶೀಲಿಸಿ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ನಿಯಮಗಳನ್ನು ನಿರ್ಧರಿಸುವ ವೇಳೆಯಲ್ಲಿ ಅದರ ಉದ್ದೇಶ ಸಾಧನಕ್ರಮಗಳನ್ನು ಮುಂದೆ ಹೇಳುವ ರೀತಿಯಲ್ಲಿ ವಿವರಿಸಿರುತ್ತಾರೆ:
- ಕನ್ನಡ ಭಾಷೆಯಲ್ಲಿ ಪಂಡಿತಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು ಈ ಮೂರನ್ನೂ ಬರೆಯಿಸುವುದು, ಅಥವಾ ಬರೆಯುವುದಕ್ಕೆ ಸಹಾಯಮಾಡುವುದು.
- ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
- ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
- ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
- ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
- ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
- ಕರ್ಣಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
- ಕರ್ಣಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡುಕೊಳ್ಳುವುದರಿಂದಾಗಲಿ, ಅವರು ಬರೆದಿರುವ ಪುಸ್ತಕಗಳನ್ನು ಅಚ್ಚು ಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ, ಅವರ ಗ್ರಂಥಗಳ ಮುದ್ರಣಾಧಿಕಾರವನ್ನು (Copyright) ಹಣಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ ಸಂಭಾವನೆಯನ್ನಾಗಲಿ ಕೊಡುವುದು.
- ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
- ಕರ್ಣಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
- ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
- ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.
ಅಲ್ಲದೆ, ಸಾಮಾನ್ಯವಾಗಿ ಕರ್ಣಾಟಕ ಭಾಷೋನ್ನತಿಗೂ ಗ್ರಂಥಾಭಿವೃದ್ಧಿಗೂ ಆವಶ್ಯಕವಾದ ಇತರ ಪ್ರಯತ್ನಗಳನ್ನು ಮಾಡುವುದು.
೨೨–೩–೧೯೧೫ರಲ್ಲಿ ಸೇರಿದ ಉಪಸಮಿತಿ ತೀರ್ಮಾನಿಸಿದಂತೆ ೩ ಮೇ ೧೯೧೫ರಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಏರ್ಪಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವು ಮಧ್ಯಾಹ್ನ ೩ ಗಂಟೆಗೆ ಪ್ರಾರಂಭವಾಯಿತು. ಪ್ರಥಮ ಸಮ್ಮೇಳನದಲ್ಲಿ ಭಾಗವಹಿಸಿದ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ – ಪುಟ ೫೭ರಲ್ಲಿ ಸ್ಪಷ್ಟವಾಗಿ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾದದ್ದು ಬೆಂಗಳೂರು ಸೆಂಟ್ರಲ್ ಕಾಲೇಜಿನ ಎದುರುಗಡೆಯಿರುವ ಈಗಿನ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ ಕಟ್ಟಡದ ನಡುವಣ ಸಭಾಮಂದಿರದಲ್ಲಿ ಎಂದಿದ್ದಾರೆ.ನಿಯಮಿತ ಕಾಲಕ್ಕೆ ಎಷ್ಟೋ ಮುಂಚಿತವಾಗಿಯೇ ವಿಶಾಲವಾದ ಹಜಾರವೆಲ್ಲಾ ಜನಸಂದಣಿಯಿಂದ ತುಂಬಿತ್ತು.
ಕರ್ಣಾಟಕದ ನಾನಾ ಪ್ರಾಂತಗಳ ಪ್ರಮುಖರೂ, ವಿದ್ವಾಂಸರೂ ದಯೆಮಾಡಿಸಿದ್ದರು. ಧಾರವಾಡ, ಬಿಜಾಪುರ, ಬೆಳಗಾಮು, ಗಾಲ್ವಿಯರ, ಬೊಂಬಾಯಿ ನಗರ, ಬೊಂಬಾಯಾಧಿಪತ್ಯದ ದೇಶೀಯ ಸಂಸ್ಥಾನಗಳು, ಮದರಾಸು ನಗರ, ಬಳ್ಳಾರಿ, ದಕ್ಷಿಣ ಕನ್ನಡೀಯ, ಮೈಸೂರು ಸಂಸ್ಥಾನದ ಡಿಸ್ಟ್ರಿಕ್ಟ್ಗಳು – ಈ ಪ್ರಾಂತಗಳ ಅನೇಕ ಪ್ರತಿನಿಧಿಗಳು ದಯೆಮಾಡಿಸಿ ಸಮ್ಮೇಳನವನ್ನು ಅಲಂಕರಿಸಿದ್ದರು. ಧಾರವಾಡದ ಕರ್ಣಾಟಕ ವಿದ್ಯಾವರ್ಧಕ ಸಂಘದ ಮತ್ತು ಕರ್ಣಾಟಕ ವಿದ್ಯಾವ್ಯಾಸಂಗ ಸಮಾಜದ, ಬೊಂಬಾಯಿ ನಗರದ ಕರ್ಣಾಟಕ ಸಭೆಯ, ಮತ್ತು ಮೈಸೂರು ಸಂಸ್ಥಾನದ ಕಾಲೇಜು ಮತ್ತು ಹೈಸ್ಕೂಲುಗಳ ಪ್ರತಿನಿಧಿಗಳೂ ದಯೆಮಾಡಿಸಿದ್ದರು. ಧಾರವಾಡದ ‘ಕರ್ಣಾಟಕ ವೃತ್ತ ಮತ್ತು ಧನಂಜಯ’, ಹುಬ್ಬಳ್ಳಿಯ ‘ಸಚಿತ್ರ ಭಾರತ’ ಪತ್ರಿಕೆ, ಮಂಗಳೂರಿನ ‘ಸ್ವದೇಶಾಭಿಮಾನಿ’ ಮತ್ತು ಮೈಸೂರು ಸಂಸ್ಥಾನದ ವೃತ್ತಾಂತ ಪತ್ರಿಕೆಗಳ ಸಂಪಾದಕರೂ ಹಾಜರಿದ್ದರು. ಹೀಗಿದ್ದುದರಿಂದ ಈ ಸಮ್ಮೇಳನಕ್ಕೆ ಕನ್ನಡ ನಾಡುಗಳ ಎಲ್ಲಾ ಕಡೆಗಳಿಂದಲೂ ಪ್ರತಿನಿಧಿಗಳು ಬಂದಿದ್ದಂತೆ ಭಾವಿಸಬಹುದು.
ಪರಿಷತ್ತಿನ ಸ್ಥಾಪನೆ ಎಲ್ಲಿ?
ಡಿವಿಜಿ ಅವರು ಸಭೆಗೆ ಬಂದವರನ್ನು ಕುರಿತು ಹೀಗೆ ಹೇಳಿದ್ದಾರೆ:
“ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾದದ್ದು ಬೆಂಗಳೂರು ಸೆಂಟ್ರಲ್ ಕಾಲೇಜಿನ ಎದುರುಗಡೆಯಿರುವ ಈಗಿನ ಆರ್ಟ್ಸ್ ಅಂಡ್ ಸಯನ್ಸ್ ಕಾಲೇಜ್ ಕಟ್ಟಡದ ನಡುವಣ ಸಭಾಮಂದಿರದಲ್ಲಿ.
ಪರಿಷತ್ತಿನ ಸಮಾರಂಭಕ್ಕಾಗಿ ಕನ್ನಡದೇಶದ ನಾನಾಭಾಗಗಳಿಂದ ಗಣ್ಯಜನ ಬಂದಿದ್ದರು. ಧಾರವಾಡದಿಂದ ರಾಮಚಂದ್ರ ಹಣಮಂತ ದೇಶಪಾಂಡೆ, ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು, (ಕರ್ಣಾಟಕ ಪ್ರಿಂಟಿಂಗ್ ಪ್ರೆಸ್ಸಿನ) ಜಠಾರ್ ಅವರು ಬಂದಿದ್ದರು. ಬಳ್ಳಾರಿಯಿಂದ ವಕೀಲ ತಿಮ್ಮಕೃಷ್ಣರಾಯರು, ಹೊಸಪೇಟೆಯ ರಾವ್ ಬಹದ್ದೂರ್ ಸಿ. ಹನುಮಂತಗೌಡರು, ಮದರಾಸಿನಿಂದ ಬೆನಗಲ್ ರಾಮರಾಯರು, ಮಂಗಳೂರಿನಿಂದ ಮುಳಿಯ ತಿಮ್ಮಪ್ಪಯ್ಯನವರು, ಮೈಸೂರಿನಿಂದ ಪುಂಗನೂರು ರಾಘವೇಂದ್ರಾಚಾರ್ಯರು – ಮೊದಲಾದ ವಿದ್ವಾಂಸರು ದಯಮಾಡಿಸಿದ್ದರು. ಬೆಂಗಳೂರು ಹೊರಗಿನಿಂದ ಬಂದಿದ್ದವರು ನೂರೈವತ್ತು- ಇನ್ನೂರು ಮಂದಿ ಇರಬಹುದು. ಬೆಂಗಳೂರಿನ ಸ್ಥಳೀಕರು ಮುನ್ನೂರು – ನಾಲ್ಕುನೂರು ಮಂದಿ. ಒಟ್ಟಿನಲ್ಲಿ ಅದು ದೊಡ್ಡ ಸಭೆ. ಬಿ. ಎಂ. ಶ್ರೀಕಂಠಯ್ಯನವರು ಅದರಲ್ಲಿದ್ದ ಹಾಗೆ ನನಗೆ ಜ್ಞಾಪಕವಿಲ್ಲ. ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿ – ಇವರು ಸಭೆಯಲ್ಲಿ ಎಲ್ಲಿಯೋ ಇದ್ದರಂತೆ. ಅವರಿಗೂ ನನಗೂ ಆಗ ಪರಿಚಯವಾಗಿರಲಿಲ್ಲ. ಅವರಿಬ್ಬರೂ ಆಗ್ಗೆ ಇನ್ನೂ ಅಪ್ರಸಿದ್ಧರು.”
೩–೫–೧೯೧೫ ಮೊದಲನೇ ದಿನದ ಸಮ್ಮೇಳನ
ಅಗ್ರಾಸನಾಧಿಪತಿಗಳನ್ನು ಚುನಾಯಿಸುವುದು ಸಮ್ಮೇಳನದ ಕಾರ್ಯಗಳಲ್ಲಿ ಮೊದಲನೆಯದಾಗಿದ್ದುದರಿಂದ, ಅಲ್ಲಿ ಸೇರಿದ್ದ ಮಹಾಜನಗಳು ಮ||ರಾ|| ರಾಜಮಂತ್ರಪ್ರವೀಣ ಎಚ್. ವಿ. ನಂಜುಂಡಯ್ಯ, ಎಂ.ಎ., ಎಂ.ಎಲ್., ಸಿ. ಐ.ಇ., ಎಂಬುವರನ್ನು ಅಗ್ರಾಸನಾಧಿಪತಿಗಳನ್ನಾಗಿ ಏಕಕಂಠ್ಯದಿಂದ ಚುನಾಯಿಸಿದರು. ಅಗ್ರಾಸನಾಧಿಪತಿಗಳು ಪೀಠವನ್ನಲಂಕರಿಸಿದ ಕೂಡಲೆ ಬೊಂಬಾಯಿಯ ಕರ್ಣಾಟಕ ಸಭೆಯ ಪ್ರತಿನಿಧಿಗಳಾದ ಮ|| ವಿ. ಬಿ. ಧಾರ್ವಾಡಕರ್, ಬಿ. ಎ. ಅವರು ತಾವು ರಚಿಸಿದ್ದ ದೇವತಾಪ್ರಾರ್ಥನಾರೂಪದ ಕೃತಿಯೊಂದನ್ನು ಮಧುರಧ್ವನಿಯಿಂದ ಹಾಡಿದರು. ಶ್ರೀಮನ್ಮಹಾರಾಜರವರೂ ಶ್ರೀಮದ್ಯುವರಾಜರವರೂ ಮೈಸೂರು ಸಂಸ್ಥಾನದ ದಿವಾನ್ ಸಾಹೇಬರವರೂ, ಮ || ಎಂ. ಎ. ಬಾಳರಾಜ ಅರಸಿನವರೂ, ರಾವ್ಬಹದೂರ್ ಫ್ರೊಫೆಸರ್ ಎಸ್. ಮಂಗೇಶರಾಯರವರೂ, ಫ್ರೊಫೆಸರ್ ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ಯರವರೂ, ಮದರಾಸಿನ ಡಾಕ್ಟರ್ ಸಿ. ಬಿ. ರಾಮರಾಯರವರೂ ಬರೆದು ಕಳುಹಿಸಿದ್ದ ಪ್ರೋತ್ಸಾಹಕ ಪತ್ರಿಕೆಗಳನ್ನು ರಾವ್ಬಹದ್ದೂರ್ ಎಂ. ಶಾಮರಾಯರವರು ಸಭೆಗೆ ಶ್ರುತಪಡಿಸಿದರು. ಸಭೆಯವರ ಸಂತೋಷಾತಿಶಯದ ಕೋಲಾಹಲದ ಮಧ್ಯದಲ್ಲಿ ಅಗ್ರಾಸನಾಧಿಪತಿಗಳು ಅನೇಕ ನವೀನ ವಿಷಯಗರ್ಭಿತವಾದ ತಮ್ಮ ಪ್ರೌಢೋಪನ್ಯಾಸವನ್ನು ಪಠಿಸಿದರು.
ಉಪನ್ಯಾಸ ಪ್ರವಾಹ
ಅದೇ ಮಧ್ಯಾಹ್ನಾತ್ಪರ ಸುಮಾರು ಎರಡೂವರೆ ಗಂಟೆಯಿಂದ ಆರು ಗಂಟೆಯವರೆಗೂ ಉಪನ್ಯಾಸಗಳು. ಕನ್ನಡ ನಾಡುಗಳ ಹಿರಿಮೆ, ಕನ್ನಡ ಭಾಷೆಯ ಹಿರಿಮೆ, ನಮ್ಮ ಪೂರ್ವಕವಿಗಳು, ನಮ್ಮ ಜನಕ್ಕೆ ಬೇಕಾಗಿರುವಂಥ ಸಾಹಿತ್ಯ, ಪರಿಷತ್ತಿನಿಂದ ದೇಶಕ್ಕೆ ಆಗಬಹುದಾದ ಪ್ರಯೋಜನಗಳು – ಈ ನಾನಾ ವಿಷಯಗಳನ್ನು ಕುರಿತು ವಿದ್ವಾಂಸರುಗಳು ಭಾಷಣ ಮಾಡಿದರು.
ಅಗ್ರಾಸನಾಧಿಪತಿಗಳ ಉಪನ್ಯಾಸವು ಸಾಮಾಜಿಕರಿಗೆ ಆನಂದವನ್ನುಂಟುಮಾಡಿತು. ಅಹೂತರಾಗಿ ಬೊಂಬಾಯಿ ನಗರದಿಂದ ದಯೆಮಾಡಿಸಿದ್ದ ಮ|| ಆರ್. ಎ. ಜಹಗೀರ್ದಾರ್ ಅವರು ಸಮ್ಮೇಳನದ ಪ್ರಥಮೋದ್ದೇಶವನ್ನು ಕುರಿತು ಬರೆದ ತಮ್ಮ ಲೇಖನವನ್ನು ಓದಿದರು. ಬಳಿಕ ದಕ್ಷಿಣ ಕನ್ನಡದ ಪುತ್ತೂರಿನಿಂದ ಆಗಮಿಸಿದ್ದ ಮ|| ಬೈಂದೂರು ಆನಂದರಾಯರು ಕನ್ನಡ ನಾಡುಗಳ ಗ್ರಾಂಥಿಕಭಾಷೆಯ ಏಕರೂಪತೆಯ ಸಾಧನಮಾರ್ಗವನ್ನು ಕುರಿತು ತಾವು ಬರೆದುದನ್ನು ಪಠಿಸಿದರು. ಆ ಮೇಲೆ ಮ|| ಗೋವಿಂದರಾಜಯ್ಯಂಗಾರ್ಯರು ಸಮ್ಮೇಳನದ ಪ್ರಥಮೋದ್ದೇಶವನ್ನು ಕುರಿತು ತಾವು ಬರೆದುದನ್ನೂ, ತದನಂತರದಲ್ಲಿ ಮ|| ಎಂ. ಎಸ್. ಪುಟ್ಟಣ್ಣನವರು ಕರ್ಣಾಟಕ ಭಾಷೆಯ ಪ್ರಾಚೀನ ನವೀನಸ್ಥಿತಿಗಳನ್ನು ಕುರಿತು ತಾವು ಬರೆದ ಲೇಖನವನ್ನೂ ಓದಿದರು. ಆಗ ಮಾಜಿ ಕೌನ್ಸಿಲರ್ ದಿವಾನ್ ಬಹದೂರ್ ರಾಜಸಭಾಭೂಷಣ ಮ|| ಪುಟ್ಟಣ್ಣಶೆಟ್ಟಿಯವರು ಆರು ಗಂಟೆಯಾಗಿ ಸಾಯಂಕಾಲವಾಗುತ್ತಾ ಬಂತೆಂತಲೂ, ಉಳಿದ ಲೇಖನಗಳನ್ನು ಓದಿ ನೋಡುವುದಕ್ಕೂ ಸಮ್ಮೇಳನದ ಮುಂದಿನ ದಿವಸಗಳಲ್ಲಿ ವಿಚಾರ ಮಾಡಬೇಕಾದ ವಿಷಯಗಳನ್ನು ನಿರ್ಧರಿಸುವುದಕ್ಕೂ ವಿಷಯ ನಿರ್ಧಾರಕ ಮಂಡಲಿಯೊಂದನ್ನು ಏರ್ಪಡಿಸುವುದು ಆವಶ್ಯಕವೆಂದು ತಿಳಿಸಿದರು. ಈ ಮಂಡಲಿಯಲ್ಲಿ ಮೈಸೂರಿನವರು ಒಂಬತ್ತು ಮಂದಿ, ಬೊಂಬಾಯಿ ಅಧಿಪತ್ಯದವರು ಆರುಮಂದಿ, ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳಿಗೆ ಸಂಬಂಧಪಟ್ಟವರು ಇಬ್ಬರು, ಮದರಾಸಾಧಿಪತ್ಯದವರು ಮೂರು ಮಂದಿ, ಆವಶ್ಯಕವಿದ್ದಲ್ಲಿ ಮತ್ತಷ್ಟು ಮಂದಿ ಇರಬಹುದೆಂದು ತೀರ್ಮಾನವಾಯಿತು.
ಇಲ್ಲಿಗೆ ಪ್ರಥಮ ದಿವಸದ ಸಮ್ಮೇಳನವು ಮುಗಿಯಿತು. ಆ ಮೇಲೆ ವಿಷಯ ನಿರ್ಧಾರಕ ಮಂಡಲಿಯವರು ಅದೇ ಹಜಾರದಲ್ಲಿ ಕುಳಿತು ಸಮ್ಮೇಳನದ ಎರಡನೆಯ ದಿನದಲ್ಲಿ ಚರ್ಚಿಸಿ ತೀರ್ಮಾನಿಸಬೇಕಾದ ವಿಷಯಗಳ ಮಸೂದೆಯನ್ನು ಪರ್ಯಾಲೋಚಿಸಿ ನಿರ್ಧರಿಸಿದರು.
ಪ್ರಥಮ ಕನ್ನಡ ಸಮ್ಮೇಳನದಲ್ಲಿ ಇಂಗ್ಲಿಷ್ ಬಳಕೆ
ಮೊದಲ ದಿನ
೧೯೧೫ರಲ್ಲಿ ಇಂಗ್ಲಿಷಿಗೆ ಪ್ರಾಧಾನ್ಯ ಹೇಗಿತ್ತು ಸಾರ್ವಜನಿಕ ಜೀವನದಲ್ಲಿ ಎಂಬುದಕ್ಕೆ ಈ ಸಮ್ಮೇಳನದ ಕೆಲವು ಸಂಗತಿಗಳು ಸಾಕ್ಷಿಯಾಗಿವೆ.
ಮೊದಲ ಸಂಗತಿ ಎಂದರೆ ಸಮ್ಮೇಳನದ ಆಹ್ವಾನ ಪತ್ರಿಕೆ ಇಂಗ್ಲಿಷಿನಲ್ಲಿತ್ತು. ಈ ಬಗ್ಗೆ ಮೈಸೂರು ಸ್ಟಾರ್ ಪತ್ರಿಕೆ ೨-೫-೧೯೧೫ ಭಾನುವಾರ ಪುಟ ೫ರಲ್ಲಿ ಪ್ರಕಟವಾದ ವಾಚಕರ ಪತ್ರದಲ್ಲಿ ಈ ಸಂಗತಿಯನ್ನು ತಿಳಿಸಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸೇರುವ ಕನ್ನಡಿಗರ ಸಮ್ಮೇಳನಕ್ಕೆ ಸಂಬಂಧಪಟ್ಟ ಆಹ್ವಾನಪತ್ರಿಕೆ ಮೊದಲಾದವುಗಳು ಇಂಗ್ಲಿಷಿನಲ್ಲಿ ಅಚ್ಚುಮಾಡಿಸಿ ಕಳುಹಿಸಲ್ಪಟ್ಟಿವೆ. ಆಹ್ವಾನ ಮಾಡಲ್ಪಟ್ಟವರಲ್ಲಿ ಬರಿಯ ಕನ್ನಡವನ್ನು ಬಲ್ಲವರು ಅದನ್ನು ಓದಿಸಿಕೊಳ್ಳುವುದಕ್ಕಾಗಿ ಇಂಗ್ಲಿಷ್ ಪ್ಯಾಸ್ ಮಾಡಿದವರಲ್ಲಿಗೆ ಹೋಗಬೇಕಾಯಿತು. ಸಮ್ಮೇಳನವನ್ನು ಕೂಡಿಸುವವರು ಕನ್ನಡಿಗರು, ಅಲ್ಲಿ ಸೇರುವವರು ಕನ್ನಡಿಗರು, ಅಲ್ಲಿ ಪಡೆದ ಲಾಭವು ಕನ್ನಡದ ಏಳ್ಗೆಯಾಗಿರುವಾಗ ಇಂಗ್ಲಿಷಿನ ಮಧ್ಯಸ್ತಿಕೆ ಯಾತಕ್ಕೆ? ಇದು ಪ್ರಥಮ ಕಬಳದಲ್ಲೇ ಮಕ್ಷಿಕಾಪಾತವಾದಂತಲ್ಲವೆ? ಇದು ಸ್ವಭಾಷಾಭಿಮಾನದ ಲಕ್ಷಣವೆ? ಇಂಥ ಪರಭಾಷಾ ಪ್ರೇಮದಿಂದಲೇ ಅಲ್ಲವೆ ನಮ್ಮ ಸ್ವಭಾಷಾಮಾತೆಯು ಮೂಲೆಮುಟ್ಟಾಗಿರುವುದು? ಆ ಹೀನಸ್ಥಿತಿಯನ್ನು ನಿವಾರಣೆ ಮಾಡುವ ಪ್ರಯತ್ನದಲ್ಲೂ ಇಂಥ ನಡೆಯಾದರೆ ಮುಂದಣ ಸಭೆಯ ಕೆಲಸವೂ, ಅದರ ಚರಿತಾರ್ಥವೂ, ಎಷ್ಟುಮಟ್ಟಿಗೆ ನಮ್ಮ ಭಾಷೆಗೆ ಹಿತವನ್ನು ಮಾಡುವುದೋ ನೋಡಬೇಕು ಎಂದು ನಮ್ಮ ಪತ್ರವ್ಯವಹಾರಕರೊಬ್ಬರು ಬರೆದಿರುತ್ತಾರೆ.
ಇಂಗ್ಲಿಷಿನಲ್ಲಿ ಪ್ರಾರಂಭೋಪನ್ಯಾಸ
ಸಮ್ಮೇಳನದ ಅಧ್ಯಕ್ಷರಾದ ಹೆಚ್. ವಿ. ನಂಜುಂಡಯ್ಯನವರ ಭಾಷಣವೂ ಇಂಗ್ಲಿಷ್ನಲ್ಲಿದ್ದು ಆ ಬಗ್ಗೆ ಡಿವಿಜಿ ಅವರು ಈ ರೀತಿ ಬರೆದಿದ್ದಾರೆ.
ಹೆಚ್.ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ಪ್ರಾರಂಭೋಪನ್ಯಾಸ ಮಾಡಿದರು. ಆದರೆ ಇಂಗ್ಲಿಷಿನಲ್ಲಿ! ವೇದಿಕೆಯ ಎದುರುಗಡೆ ಮೊದಲನೆಯ ಸಾಲಿನ ನಾಲ್ಕೈದು ಪೀಠಗಳ ಪೈಕಿ ಒಂದರಲ್ಲಿ ಬೆಳ್ಳಾವೆ ವೆಂಕಟನಾರಣಪ್ಪನವರು ಕುಳಿತಿದ್ದರು. ನಾನು ಅವರ ಪಕ್ಕದಲ್ಲಿದ್ದೆ. ನಂಜುಂಡಯ್ಯನವರು ಇಂಗ್ಲಿಷಿನಲ್ಲಿ ತಮ್ಮ ಮೊದಲ ಮಾತುಗಳನ್ನು ನುಡಿಯುತ್ತಿದ್ದಂತೆಯೇ ವೆಂಕಟನಾರಣಪ್ಪನವರು ಮೆಲ್ಲನೆಯ ಧ್ವನಿಯಲ್ಲಿ-
“Nonsense. ಇದು ಶುದ್ಧ Nonsense ಅಷ್ಟೆ” – ಎಂದರು. ನಂಜುಂಡಯ್ಯನವರಿಗೆ ಅದು ಕೇಳಿಸಿರಬೇಕು. ಅವರ ಎಡಮೀಸೆ ಹಾರಿತು. ಅವರನ್ನು ಬಲ್ಲವರಿಗೆ ಅದು ನಗುವಿನ ಲಾಂಛನವೆಂಬುದು ಗೊತ್ತಿತ್ತು. ನಂಜುಂಡಯ್ಯನವರು ವೆಂಕಟನಾರಣಪ್ಪನವರ ಟೀಕೆಯನ್ನು ಕೇಳಲಿಲ್ಲವೋ ಏನೋ ಎಂಬಂತೆ ಉಪನ್ಯಾಸ ಮುಗಿಸಿ ಸಭೆ ಪುನಃ ಅದೇ ಜಾಗದಲ್ಲಿ ಆ ಮಧ್ಯಾಹ್ನ ಎರಡೂವರೆ ಗಂಟೆಗೆ ಸೇರತಕ್ಕದ್ದೆಂದು ತೀರ್ಮಾನ ಹೇಳಿ, ವೇದಿಕೆಯಿಂದ ಇಳಿದು ಬಂದು ವೆಂಕಟನಾರಣಪ್ಪನವರ ಹತ್ತಿರ ನಿಂತು, “ಅದಕ್ಕೇನು ಕನ್ನಡದಲ್ಲಿ ಮಾತಿಲ್ಲವೋ?” – ಎಂದು ಕೇಳಿದರು.
ವೆಂಕಟನಾರಣಪ್ಪನವರು ನಕ್ಕರು. ನನ್ನ ಕಡೆ ತಿರುಗಿ “ಏನಪ್ಪಾ Nonsense ಅಂಬೋದಕ್ಕೆ ಕನ್ನಡದಲ್ಲಿ ಏನು?” ಎಂದು ಕೇಳಿದರು. ನಾನು “ನಾನ್ಸೆನ್ಸೇ” ಎಂದೆ. ಆ ಕ್ಷಣ ನನಗೆ ಬೇರೆ ಏನೂ ಹೊಳೆಯಲಿಲ್ಲ. ಆಮೇಲೆ ನಂಜುಂಡಯ್ಯನವರು ಒಂದು ಸಣ್ಣ ವಿವರಣೆ ಕೊಟ್ಟರು:
“ನಾವು ಈಗ ಮಾಡುತ್ತಿರುವ ಪ್ರಯತ್ನ ಕನ್ನಡ ತಿಳಿಯದ ಜನರಿಗೂ ತಿಳಿಯಬೇಕಾದದ್ದು. ನಮ್ಮ ಪರಿಷತ್ತಿಗೆ ಹಣ ಕೊಡಬೇಕಾದ ಸರಕಾರಕ್ಕೂ ತಿಳಿಯಬೇಕು; ಸರಕಾರದ ಮೇಲೆ ಉಸ್ತುವಾರಿ ನಡೆಸುವ ಬ್ರಿಟಿಷ್ ರೆಸಿಡೆಂಟರಿಗೂ ತಿಳಿಯಬೇಕು. ಅವರಿಗೆಲ್ಲ ತಿಳಿದರೆ ನಮಗೇನೂ ನಷ್ಟವಾಗದು; ಕೊಂಚ ಪ್ರಯೋಜನವೂ ಇರಬಹುದು ಅಲ್ಲವೇ?”
ಎರಡನೆಯ ದಿವಸದ ಸಮ್ಮೇಳನದಲ್ಲಿ ನಡೆದ ಕೆಲಸ (೪–೫–೧೯೧೫)
ಇದೇ ಹೈಸ್ಕೂಲಿನ ಹಜಾರದಲ್ಲಿ ಸಮ್ಮೇಳನವು ಅಪರಾಹ್ನ ೩ ಗಂಟೆಗೆ ಸರಿಯಾಗಿ ಸೇರಿತು. ಸಭೆಯ ಪ್ರಾರ್ಥನಾನುಸಾರವಾಗಿ ದಿವಾನ್ ಬಹದೂರ್ ರಾಜಸಭಾಭೂಷಣ ಮ|| ಕೆ. ಪಿ. ಪುಟ್ಟಣ್ಣ ಶೆಟ್ಟಿಯವರು ಅಗ್ರಾಸನವನ್ನು ಅಲಂಕರಿಸಿದರು. ಮುಂದೆ ವಿವರಿಸಲ್ಪಡುವ ಸಲಹೆಗಳು ಚರ್ಚಿತವಾಗಿ ತೀರ್ಮಾನಿಸಲ್ಪಟ್ಟುವು:
೧. ಕರ್ಣಾಟಕ ಭಾಷಾ ಸಂಸ್ಕರಣಕ್ಕಾಗಿಯೂ ಕರ್ಣಾಟಕ ಗ್ರಂಥಾವಳಿಯ ಅಭಿವೃದ್ಧಿಗಾಗಿಯೂ ಬೆಂಗಳೂರಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿನೊಡನೆ ಪ್ರಧಾನಸಭೆಯೊಂದು ಸ್ಥಾಪಿತವಾಗಬೇಕು.
೨. ಬೊಂಬಾಯಿ, ಮದರಾಸು, ಹೈದರಾಬಾದು ಮತ್ತು ಕೊಡಗು ಪ್ರಾಂತ್ಯಗಳಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಶಾಖೆಗಳಿರಬೇಕು; ಮತ್ತು ಈ ಪರಿಷತ್ತಿನ ಉದ್ದೇಶಗಳನ್ನೇ ಇಟ್ಟುಕೊಂಡು ಕೆಲಸಮಾಡುವ ಇತರ ಸಂಘಗಳನ್ನು ತನ್ನ ಜತೆಗೆ ಸೇರಿಸಿಕೊಳ್ಳುವುದಕ್ಕೆ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಅಧಿಕಾರವಿರಬೇಕು.
ನಿಬಂಧನೆಗಳ ರಚನೆ
ಅಂದಿನ ಬೆಳಗ್ಗೆ ಸಂಸ್ಥೆಯ ನಿಯಮಾವಳಿಯನ್ನು ತಯಾರು ಮಾಡುವುದಕ್ಕಾಗಿ ನೇಮಕವಾಗಿದ್ದ ಉಪಸಮಿತಿ ತನ್ನ ನಿಯಮಗಳ ಕರಡುಪ್ರತಿಯನ್ನು ಒಪ್ಪಿಸಿತು. ಆ ಉಪಸಮಿತಿಯಲ್ಲಿದ್ದವರು ಕರ್ಪೂರ ಶ್ರೀನಿವಾಸರಾಯರು. ಡಾ|| ಪಿ. ಎಸ್. ಅಚ್ಯುತರಾಯರು, ಪುಟ್ಟಣ್ಣನವರು, ಬಾಪು ಸುಬ್ಬರಾಯರು, ಆರ್. ರಘುನಾಥರಾಯರು, ಟಿ. ಲಕ್ಷ್ಮೀನರಸಿಂಹರಾಯರು ಮತ್ತು ಡಿ. ವಿ. ಗುಂಡಪ್ಪನವರು.
ಇಲ್ಲಿಗೆ ಎರಡನೆಯ ದಿನದ ಸಭೆಯು ಭರಕಾಸ್ತಾಯಿತು. ಬಳಿಕ ವಿಷಯ ನಿರ್ಧಾರಕ ಮಂಡಲಿಯವರು ಮೂರನೆಯ ದಿನ ಸಲಹೆಗಳನ್ನು ಕ್ರಮಪಡಿಸುವುದಕ್ಕೆ ಸಭೆಸೇರಿದರು.
ಮೂರನೆಯ ದಿನದ ಕೆಲಸ (೫–೫–೧೯೧೫)
ಅದೇ ಹಜಾರದಲ್ಲಿ ಮೂರನೆಯ ದಿವಸವೂ ಸಮ್ಮೇಳನವು ಅಪರಾಹ್ನ ೩ ಗಂಟೆಗೆ ಸರಿಯಾಗಿ ಸೇರಿತು. ಮ|| ಕರ್ಪೂರ ಶ್ರೀನಿವಾಸರಾಯರು ಅಗ್ರಾಸನವನ್ನು ಅಲಂಕರಿಸಬೇಕೆಂದು ಡಾಕ್ಟರು ಅಚ್ಯುತರಾಯರವರು ಸಭೆಗೆ ಬಿನ್ನವಿಸಲು ಸಭೆಯವರೆಲ್ಲರೂ ಹರ್ಷಾತಿಶಯದ ಕಲಕಲದೊಡನೆ ಒಪ್ಪಿದರು.
ಆ ದಿವಸದಲ್ಲಿ ಪರಿಷತ್ತಿನ ರಚನಾಕ್ರಮವೂ, ನಿಬಂಧನೆಗಳೂ ಜಿಜ್ಞಾಸಾಪೂರ್ವಕವಾಗಿ ತೀರ್ಮಾನಿಸಲ್ಪಟ್ಟವು.
ಮೂರನೆಯ ದಿನ ಕರಡು ನಿಯಮಾವಳಿಯು ಸಭೆಯ ಪರ್ಯಾಲೋಚನೆಗೆ ಬಂದಿತು. ಅದರ ಮೇಲೂ ಪಂಡಿತ ಭಾಷಣಗಳು. ದಾತೃಗಳು, ಪ್ರದಾತೃಗಳು, ಮಹಾಪ್ರದಾತೃಗಳ ಆಶ್ರಯದಾತರು, ಆಶ್ರಯಕರ್ತರು, ಪೋಷಕರು, ಪರಿಪೋಷಕರು – ಇಂಥ ಮಾತುಗಳೆಲ್ಲ ಚರ್ಚೆ. ಒಬ್ಬರು ಶಬ್ದಮಣಿದರ್ಪಣವನ್ನು ಹೇಳಿದರೆ ಇನ್ನೊಬ್ಬರು ಶಾಸನಪ್ರಯೋಗವನ್ನು ಹೇಳಿದರು….. ಹೀಗೆ ಬೆಳೆಯಿತು ವಿಚಾರಸರಣಿ.
ನಂಜಂಡಯ್ಯನವರು ಬಹುಮಟ್ಟಿಗೆ ನಗುತ್ತ, ಒಂದೊಂದು ಸಾರಿ ಕಟು ಟೀಕೆ ಮಾಡುತ್ತ, ಹಾಗೂ ಈ ಕೆಲಸವನ್ನು ಮೂರನೆಯ ದಿನ ಸಂಜೆ ನಾಲ್ಕು ಗಂಟೆಗೆ ಮುಗಿಸಿದರು.
ಪರಿಷತ್ತಿನ ಸ್ಥಾಪನಕಾರ್ಯದಲ್ಲಿ ಮೊದಲಿನಿಂದ ಕಡೆಯವರೆಗೂ ಶ್ರಮಿಸಿದವರು ಸೆಕ್ರೆಟರಿ ಬಿ. ಕೃಷ್ಣಪ್ಪ, ಎಂ. ಎ., ಅವರು. ಅವರ ಪಾಂಡಿತ್ಯ ಎಷ್ಟು ದೊಡ್ಡದೋ ಅವರ ತಾಳ್ಮೆಯೂ ಕಾರ್ಯದಕ್ಷತೆಯೂ ಅಷ್ಟು ಪ್ರಶಂಸನೀಯವಾದವು. ಆ ಮಹನೀಯರು ಮೈಸೂರು ವಿಶ್ವವಿದ್ಯಾನಿಲಯದ ಮೊದಲನೆಯ ಕನ್ನಡ ಪ್ರೊಫೆಸರಾಗಿದ್ದರು.
ಇದು ವಿಷಯ. ಮೊದಲು ಕರ್ನಾಟಕವೆ, ಕರ್ಣಾಕಟವೆ, ಕನ್ನಡವೆ? ಅಥವಾ ಕರಿನಾಡೆ? ಮೂರನೆಯದಾಗಿ ಕರ್ಣಾಟವೆ, ಕರ್ಣಾಟಕವೇ? ಅಥವಾ ಕಾರ್ಣಾಟಕೀ ಎಂದೆ? ನಾಲ್ಕನೆಯದಾಗಿ ಪರಿಷತ್ತೆ, ಸಂಸತ್ತೆ ಅಥವಾ ಪರಿಷದವೆ, ಅಥವಾ ಸಂಸದವೆ, ಅಥವಾ ಸಭಾ ಎನ್ನತಕ್ಕದ್ದೆ? ಸಭೆ ಸೇರಿದಾಗ ಅಧ್ಯಕ್ಷ ನಂಜುಂಡಯ್ಯನವರು ಹೀಗೆ ಹೇಳಿದರು:
“ಈಗ ಎರಡು ದಿನವೆಲ್ಲ ಹೆಸರನ್ನು ಚರ್ಚಿಸುವುದಕ್ಕಾಗಿ ಕಳೆದೆವಲ್ಲ. ಈಗಲಾದರೂ ಕೆಲಸಕ್ಕೆ ಉಪಕ್ರಮ ಮಾಡೋಣ. ನಿಮ್ಮಲ್ಲಿ ರಘುನಾಥರಾಯರೋ ರಾಘವೇಂದ್ರಾಚಾರ್ಯರೋ ಇನ್ನು ಯಾರಾದರೂ ಒಂದು ಹೆಸರನ್ನು ಸೂಚಿಸೋಣವಾಗಲಿ, ಅದನ್ನು ಸಭೆಯ ವೋಟಿಗೆ ಹಾಕುತ್ತೇನೆ. ಭಾಷಣಗಳು ಸಾಕು. ಆ ಸೂಚನೆ ಅಂಗೀಕಾರವಾಗದೆ ಹೋದರೆ ಆಮೇಲೆ ಇನ್ನೊಂದು ಸೂಚನೆ. ಅನಂತರ ಮತ್ತೊಂದು – ಕ್ರಮವನ್ನನುಸರಿಸೋಣ.”
ಸಭೆಯಲ್ಲಿ ಯಾರೋ ಒಬ್ಬರು “ಇನ್ನೂ ಮಾತನಾಡುವವರಿದ್ದಾರೆ, ಸ್ವಾಮಿ” ಎಂದರು. ನಂಜುಂಡಯ್ಯನವರು “ಹೌದು ಹೌದು. ನಾವೆಲ್ಲ ಅದೇ. ಊರು ತುಂಬ ಮಾತನಾಡುವವರೇ. ಆದರೆ ಕೆಲಸವೂ ನಡೆಯಬೇಕಲ್ಲ?” ಎಂದರು. ಕೆಲಸಕ್ಕೆ ಉಪಕ್ರಮ ಮಾಡಿಸಿದರು.
ನಾಲ್ಕನೆಯ ದಿನ ೬–೫–೧೯೧೫
೪ನೇ ದಿನ ಮಧ್ಯಾಹ್ನ ಎರಡೂವರೆ ಗಂಟೆಗೆ ಪ್ರಾರಂಭವಾಯಿತು. ಕರ್ಪೂರ ಶ್ರೀನಿವಾಸರಾಯರು ಅಗ್ರಾಸನಾಧಿಪತಿಗಳಾಗಿದ್ದರು. ನಾಲ್ಕನೇ ದಿನದ ಸಭೆಯಲ್ಲಿ ನಿರ್ಣಯಗಳು ಮಂಡಿಸಲ್ಪಟ್ಟು ಅಂಗೀಕಾರವಾಯಿತು. ಪರಿಷತ್ತಿನ ಕಾರ್ಯಕಾರಿ ದಿನವಿಡೀ ರೂಪುಗೊಂಡಿತು.
ಸಮ್ಮೇಳನದ ಕಾರ್ಯವು ಇಲ್ಲಿಗೆ ಮುಗಿಯಲು, ಪಂಡಿತರುಗಳಾದ ಅಯ್ಯಾಶಾಸ್ತ್ರಿಗಳೂ, ದೇವೋತ್ತಮ ಜೋಯಿಸರೂ, ಶ್ರೀರಂಗಾಚಾರ್ಯರೂ, ಕೋದಂಡರಾಮಶಾಸ್ತ್ರಿಗಳೂ, ಮ || ಚಿಕ್ಕೋಡಿಯವರೂ, ಕೇಶವಯ್ಯನವರೂ ಪರಿಷತ್ತಿನ ಉತ್ತರೋತ್ತರ ಶ್ರೇಯಸ್ಸನ್ನು ಬಯಸಿ ಪ್ರಾರ್ಥನಾರೂಪದಲ್ಲಿ ತಾವು ತಾವು ರಚಿಸಿದ ಪದ್ಯಗಳನ್ನು ಶ್ಲೋಕಗಳನ್ನೂ ರಾಗದಿಂದ ಓದಿದರು.
ಬೇರೆಬೇರೆ ಕನ್ನಡನಾಡುಗಳ ಮಹನೀಯರುಗಳ ಪರಿಚಯವನ್ನು ಸಂಪಾದಿಸಿಕೊಂಡು ಸನ್ಮಿತ್ರ ಮಂಡಲಿಯನ್ನು ವಿಸ್ತರಿಸಿಕೊಳ್ಳುವುದಕ್ಕೂ ಮೈಸೂರು ಸಂಸ್ಥಾನ ಪಂಡಿತರ ಮಂಡಲಿಯೊಡನೆ ಸಂಭಾಷಣೆಯನ್ನು ಬೆಳೆಯಿಸುವುದಕ್ಕೂ ಈ ಪರಿಷತ್ತಿನ ಮೂಲಕ ಅವಕಾಶವನ್ನು ಕಲ್ಪಿಸಿಕೊಟ್ಟು ಮಹೋಪಕಾರವನ್ನು ಮಾಡಿದುದಕ್ಕಾಗಿ ಮಹಾಪ್ರಭುಗಳಾದ ಶ್ರೀಮನ್ಮಹಾರಾಜರವರಿಗೂ ಅವರ ಸರ್ಕಾರಕ್ಕೂ ಸಮ್ಮೇಳನವನ್ನೇರ್ಪಡಿಸಿದ ಮಹನೀಯರುಗಳಿಗೂ ಬೊಂಬಾಯಿ ಕರ್ಣಾಟಕದವರ ಪರವಾಗಿ ವಂದನೆಗಳನ್ನು ಸಮರ್ಪಿಸುತ್ತಾ ಮ || ದೇಶಪಾಂಡೆಯವರೂ, ಜೋಷಿಯವರೂ, ದೇಸಾಯಿಯವರೂ, ವಾಸುದೇವಾಚಾರ್ಯರವರೂ, ನರ್ಗುಂದಕರವರೂ, ಸೆಟ್ಲೂರವರೂ, ಜಹಗೀರ್ದಾರವರೂ, ಚಿಕ್ಕೋಡಿಯವರೂ, ಮಂಗಸೂಲಿಯವರೂ ಉತ್ಸಾಹಭರಿತರಾಗಿ ಪ್ರವಚನಗಳನ್ನು ಮಾಡಿದರು.
ಮೈಸೂರು ಸಂಪದಭ್ಯುದಯ ಸಮಾಜದವರ ಮೂಲಕ ಈ ಕರ್ಣಾಟ ವಿದ್ವನ್ಮಂಡಲಿಯ ಸಮ್ಮೇಳನವನ್ನು ಏರ್ಪಡಿಸಿ, ಬೇರೆಬೇರೆ ಕನ್ನಡ ನಾಡುಗಳಿಂದ ಆಹ್ವಾನವನ್ನು ಹೊಂದಿ ಬಂದ ಮಹನೀಯರನ್ನು ಒಂದೇ ಎಡೆಯಲ್ಲಿ ಸಂಧಿಸುವುದಕ್ಕೆ ತಮಗೆ ಅಸಾಧಾರಣವಾದ ಆನುಕೂಲ್ಯವನ್ನು ಕಲ್ಪಿಸಿಕೊಟ್ಟುದುದಕ್ಕಾಗಿ ಶ್ರೀಮನ್ಮಮಹಾರಾಜ ಸಾಹೇಬ್ ಬಹದೂರವರಿಗೂ ಅವರ ಸರ್ಕಾರಕ್ಕೂ ತಮ್ಮ ಕೃತಜ್ಞತೆಯನ್ನು ಪ್ರದರ್ಶಿಸುತ್ತಾ ಮದರಾಸು ಕರ್ಣಾಟಕದವರ ಪರವಾಗಿ ಮ || ತಿಮ್ಮಕೃಷ್ಣರಾಯರವರೂ, ರಾಮರಾಯರವರೂ, ಮಂಗೇಶರಾಯರವರೂ, ವೆಂಕಟರಾಯರವರೂ ವಂದನೆಗಳನ್ನು ಸಮರ್ಪಿಸುತ್ತಾ ಮೃದುಮಧುರ ವಚನಗಳಿಂದ ಪ್ರಸಂಗಿಸಿದರು.
ಒಂದೇ ಸಮನಾದ ವಿನಯದೊಡನೆಯೂ ಸಾಮರ್ಥ್ಯದೊಡನೆಯೂ ಶ್ರದ್ಧೆಯೊಡನೆಯೂ ತಾಳ್ಮೆಯೊಡನೆಯೂ ಅಗ್ರಾಸನಾಧಿಪತಿಗಳು ಸಮ್ಮೇಳನದ ನಾಲ್ಕು ದಿವಸಗಳ ಕೆಲಸಗಳನ್ನು ನಡೆಯಿಸಿದುದು ಶ್ಲಾಘನೀಯವೆಂದೂ, ಸಮ್ಮೇಳನದ ಏರ್ಪಾಡುಗಳನ್ನು ಸಮರ್ಪಕವಾಗುವಂತೆ ನಿರ್ಮಿಸಿದ ಮಹನೀಯರ ಸಾಮರ್ಥ್ಯವು ಅಸಾಧಾರಣವಾದುದೆಂದೂ ಅಂತಹವರ ಸಹಾಯವು ಪರಿಷತ್ತಿನ ಕಾರ್ಯನಿರ್ವಾಹಕ್ಕೆ ದೊರೆತುದು ಕರ್ಣಾಟಕ ಮಹಾಮಂಡಲಿಯ ಪುಣ್ಯೋದಯವೆಂದೇ ಹೇಳಬೇಕೆಂದೂ ಪರಮೋತ್ಸಾಹದಿಂದ ವರ್ಣಿಸುತ್ತ ಮ|| ಮುದವೇಡಕರ್ರವರು ವಾಗ್ವೈಖರಿಯೊಡನೆ ವಂದನೆಗಳನ್ನು ಸಮರ್ಪಿಸಿದರು.
ನಾಲ್ಕನೇದಿನ ಸಂಜೆ ಬಂದಿದ್ದ ಮಹನೀಯರಿಗೆ ಏರ್ಪಡಿಸಿದ್ದ ಸಂತೋಷಕೂಟವನ್ನು ಡಿವಿಜಿ ಹೀಗೆ ಬಣ್ಣಿಸಿದ್ದಾರೆ, (ಜ್ಞಾ. ಚಿತ್ರಶಾಲೆ ಪುಟ ೫೯):
ಅಂದು ಸಂಜೆ, ಬಂದಿದ್ದ ಮಹನೀಯರ ಸಂತೋಷಕ್ಕಾಗಿ ಒಂದು ಸಂತೋಷಕೂಟವನ್ನೇರ್ಪಡಿಸಿತ್ತು. ಅದು ಸೆಂಟ್ರಲ್ ಕಾಲೇಜಿನ ವಿದ್ಯಾಮಂದಿರದ ಆವರಣದಲ್ಲಿ. ಸದಸ್ಯರಲ್ಲಿ ಬಹುಮಂದಿ ಅಲ್ಲಿಯೇ ಬಿಡಾರ ಮಾಡಿಕೊಂಡಿದ್ದರು.
ಈ ಸಂತೋಷಕೂಟವನ್ನು ಏರ್ಪಡಿಸುವ ಯೋಚನೆ ಮಾಡಿ ನಾನು ನನ್ನ ಮಾನ್ಯಮಿತ್ರರಾದ ಸರಕಾರದ ಸೆಕ್ರೆಟರಿ ಡಿ. ಎಂ. ನರಸಿಂಹರಾಯರ ಸಹಾಯವನ್ನು ಬೇಡಿದೆ. ಎರಡು ಡೇರಾಗಳು. ಐವತ್ತು ಮೇಜುಗಳು, ಇನ್ನೂರು ಕುರ್ಚಿಗಳು, ನಾಲ್ಕು ಜಮಖಾನೆಗಳು – ಇವಷ್ಟನ್ನು ಸರಕಾರದ ಉಗ್ರಾಣದಿಂದ ಸಾಲ ಕೊಡಿಸುವುದಾದರೆ ಅದಕ್ಕೆ ತಗಲುವ ಬಾಡಿಗೆಯನ್ನು ನಾನು ಕೊಡುವುದಾಗಿ ಹೇಳಿದೆ. ಅವರು “ನಿನಗೆ ಯಾಕಯ್ಯ ಅಷ್ಟು ಶ್ರಮ? ಅಲ್ಲಿ ಹಾಸ್ಟೆಲ್ ವಾರ್ಡನ್ ಬಿ. ವೆಂಕಟೇಶಾಚಾರ್ಯರಿದ್ದಾರಲ್ಲ, ಅವರು ಈ ಸಹಾಯವನ್ನೆಲ್ಲ ನಿನಗೆ ಸುಲಭವಾಗಿ ಒದಗಿಸಬಹುದು” ಎಂದರು.
“ನನಗೆ ವೆಂಕಟೇಶಾರ್ಯರ ಪರಿಚಯ ಇಲ್ಲವಲ್ಲ?”
“ಅದೇನು ಕಷ್ಟ?” – ಎಂದು ನರಸಿಂಗರಾಯರು ನನ್ನೊಡನೆ ವೆಂಕಟೇಶಾಚಾರ್ಯರನ್ನು ನೋಡಲು ಬಂದರು. ಪೂಜ್ಯರಾದ ವೆಂಕಟೇಶಾಚಾರ್ಯರಿಗೂ ನನಗೂ ಮೊದಲು ಭೇಟಿಯಾದದ್ದು ಹೀಗೆ. ಅವರು ಉತ್ಸಾಹದಿಂದ ಸಹಕರಿಸಿ ಎಲ್ಲ ವಿಧಗಳಲ್ಲಿಯೂ ಸಹಾಯ ಕೊಟ್ಟರು. ಆ ಕೂಟದಲ್ಲಿ ಪಿಟೀಲು ವಿದ್ವಾನ್ ಪುಟ್ಟಪ್ಪನವರ ಬಾಯಿ ಹಾಡಿಕೆ ನಡೆಯಿತು. ಬಹಳ ಸೊಗಸಾಗಿತ್ತೆಂದು ಕೇಳಿದವರೆಲ್ಲ ಹೇಳಿದರು. ಗಂಧಪುಷ್ಪ ವಿನಿಯೋಗವಾದ ಮೇಲೆ ಎಲ್ಲರೂ ಅಲ್ಲಿಂದ ಹೊರಡುವ ಸಮಯದಲ್ಲಿ ನಂಜುಂಡಯ್ಯನವರು ನನ್ನನ್ನು ಬೇರೆಯಾಗಿ ಕರೆದು ಕೇಳಿದರು:
“ಎಷ್ಟು ಖರ್ಚುಮಾಡಿದೆ? ಸಾಲ ಹೆಚ್ಚು ಮಾಡಿದ್ದರೆ ಹೇಳು.” ಆಗ ಎಂ. ಶಾಮರಾಯರೂ ಇದ್ದರು. ಅವರೆಂದರು.
“ಮಾಡಲೇಳಿ ಹುಡುಗನ ಹುಚ್ಚು.”
ಪರಿಷತ್ತಿನ ಸ್ಥಾಪನೆಯ ವಿವರಗಳನ್ನು ಮೊದಲ ಸಮ್ಮೇಳನದ ವರದಿಯನ್ನು ಅಂದಿನ ಪತ್ರಿಕೆಗಳು ಸಾಕಷ್ಟು ವಿವರವಾಗಿ ಪ್ರಕಟಿಸಿದವು. ಇಲ್ಲಿ ನಿದರ್ಶನಪೂರ್ವಕವಾಗಿ ಮೈಸೂರು ಸ್ಟಾರ್ ಪತ್ರಿಕೆ (೯-೫-೧೯೧೫) ಪ್ರಕಟಿಸಿದ ವರದಿ ಹೀಗಿದೆ:
ಮೈಸೂರು ಸ್ಟಾರ್ ೧೯೧೫ನೆಯ ಇಸವಿ ಮೇ ತಾರೀಖು ೯ನೇ ಭಾನುವಾರ, ಪುಟ ೫
ಕನ್ನಡಿಗರ ಸಮ್ಮೇಳನ
ಕನ್ನಡಿಗರ ಸಮ್ಮೇಳನವು ಕಳೆದ ತಾ|| ೩ರಲ್ಲಿ ಬೆಂಗಳೂರು ಸರ್ಕಾರಿಯ ಹೈಸ್ಕೂಲ್ ಕಟ್ಟಡದಲ್ಲಿ ೧ನೆಯ ಕೌನ್ಸಿಲರ್ ಮ|| ಎಚ್. ವಿ. ನಂಜುಂಡಯ್ಯನವರ ಅಧ್ಯಕ್ಷತೆಯಲ್ಲಿ ಆರಂಭಿಸಲ್ಪಟ್ಟಿತು. ಧಾರವಾಡ, ಮದ್ರಾಸು, ಉಡುಪಿ ಮೊದಲಾದ ಕಡೆಗಳಿಂದ ಭಾಷಾಭಿಮಾನಿಗಳಾದವರು ಪ್ರತಿನಿಧಿಗಳಾಗಿ ಕರೆಯಲ್ಪಟ್ಟು ಬಂದಿದ್ದರಲ್ಲದೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಿ ಸೇರಿದ್ದಿತು. ಶ್ರೀಮದ್ಯುವರಾಜರು, ದಿವಾನರು ಮೊದಲಾದವರು ತಂತಿಯ ಮೂಲಕ ತಮ್ಮಭಿನಂದನಗಳನ್ನು ಕಳುಹಿಸಿದ್ದರು. ಅಧ್ಯಕ್ಷರು ಕನ್ನಡ ಭಾಷೆಯಯುತ್ಪತ್ತಿ, ಪೂರ್ವದಲ್ಲಿ ಅದಕ್ಕಿದ್ದ ಶುದ್ಧತೆ, ಮತ್ತೂ ಉಚ್ಛ್ರಾಯಸ್ಥಿತಿ ಈಗ ಅದಕ್ಕೂ ತೆಲುಗು ತಮಿಳು ಮೊದಲಾದ ದ್ರಾವಿಡಭಾಷೆಗಳಿಗೂ ಇತರತಕ್ಕ ವ್ಯತ್ಯಾಸ – ಇವುಗಳನ್ನು ವಿವರಿಸುವ ಮತ್ತೂ ಮುಂದೆ ಅದು ಕರ್ನಾಟಕ ಪ್ರಾಂತಗಳಲ್ಲೆಲ್ಲಾ ಏಕಸ್ವರೂಪವನ್ನು ಹೊಂದಿ ಸೋದರಭಾಷೆಗಳಂತೆ ಉಚ್ಚಸ್ಥಿತಿಗೆ ಬರುವ ಉಪಾಯ ಮೊದಲಾಂಶಗಳನ್ನೊಳಗೊಂಡ ಒಂದು ದೊಡ್ಡ ಭಾಷಣವನ್ನು ಮಾಡಿದರು. ಅನಂತರ ವಿಷಯನಿರ್ಧಾರಕ ಭಾಷಣವನ್ನು ಮಾಡಿದರು. ಅನಂತರ ವಿಷಯನಿರ್ಧಾರಕಸಭೆಯು ಏರ್ಪಡಿಸಲ್ಪಟ್ಟು ಆ ದಿವಸದ ಸಭೆಯು ವಿಸರ್ಜಿತವಾಯಿತು. ವಿಷಯನಿರ್ಧಾರಕಸಭೆಯವರು ತಾ|| ೪ರಲ್ಲಿ ದಿ || ಬ|| ಕೆ.ಪಿ. ಪುಟ್ಟಣ್ಣಸೆಟ್ಟರ ಅಧ್ಯಕ್ಷತೆಯಲ್ಲೂ ಸಭೆಸೇರಿದ್ದು, ಮೈಸೂರಪ್ರಾಂತಕ್ಕೆ ೧೨, ಬೊಂಬಾಯಾಧಿಪತ್ಯಕ್ಕೆ ೮, ಹೈದರಾಬಾದಿಗೆ ೨, ದಕ್ಷಿಣಮಹಾರಾಷ್ಟ್ರಕ್ಕೆ ೨ ಮತ್ತೂ ಕೊಡಗಿಗೆ ೧ ಈ ಪ್ರಕಾರ ೩0 ಸಭ್ಯರನ್ನೊಳಗೊಂಡ ೧ ಕಾರ್ಯಕಾರಿಮಂಡಳಿಯು ಸ್ಥಾಪಿತವಾಗಿ, ಒಬ್ಬರು ಅಧ್ಯಕ್ಷರು, ಒಬ್ಬರು ಉಪಾಧ್ಯಕ್ಷರು, ಒಬ್ಬರು ಸೆಕ್ರೆಟರಿ, ಮತ್ತೊಬ್ಬರು ಆಡಿಟರು ಹೀಗೆ ಅಧಿಕಾರಿಗಳು ನಿಯಮಿಸಲ್ಪಡಬೇಕೆಂದೂ; ಪ್ರಾಚೀನ ಕರ್ನಾಟಕ ಗ್ರಂಥಗಳು ಶೇಖರಿಸಲ್ಪಟ್ಟು ವ್ಯಾಖ್ಯಾನದೊಡನೆ ಪ್ರಚುರಪಡಿಸಲ್ಪಡಬೇಕು, ಗ್ರಂಥಶೋಧನೆಗೆ ಉತ್ತೇಜನವೂ, ಗ್ರಂಥಕರ್ತರಿಗೆ ಪ್ರೋತ್ಸಾಹವೂ ಕೊಡಲ್ಪಡಬೇಕು, ೧000 ರೂ. ಗಳನ್ನು ಕೊಡತಕ್ಕವರು ಪೋಷಕರಾಗಿಯೂ, ೫00 ರೂ. ಗಳನ್ನು ಕೊಡತಕ್ಕವರು ಆಶ್ರಯದಾತರಾಗಿಯೂ, ೧00 ರೂ. ಗಳನ್ನು ಕೊಡತಕ್ಕವರು ಆಜೀವಸಭಾಸದರಾಗಿಯೂ ಮಾಡಲ್ಪಡತಕ್ಕುದೆಂದೂ; ಪ್ರತಿವರ್ಷದಲ್ಲೂ ೧೨ ರೂ. ಗಳನ್ನು ಕೊಡುವವರು ೧ನೆಯ ತರಗತಿಯ ಸಭ್ಯರಾಗಿಯೂ, ೪ ರೂ. ಗಳನ್ನು ಕೊಡುವವರು ೨ನೆಯ ತ|| ಸಭ್ಯರಾಗಿಯೂ ಇರತಕ್ಕುದೆಂದೂ; ಒಂದು ಕಾರ್ಯಕಾರಿ ಮಂಡಳಿಯು ಏರ್ಪಾಟಾಗತಕ್ಕುದೆಂದೂ ನಿರ್ಧಾರಗಳಾಗಿ, ಮ || ಗಳಾದ ಎಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿಯೂ, ಎಂ. ಶ್ಯಾಮರಾಯರು ಉಪಾಧ್ಯಕ್ಷರಾಗಿಯೂ, ಸರದಾರ್ ಎಂ. ಕಾಂತರಾಜ ಅರಸಿನವರು, ಎಂ. ವೆಂಕಟಕೃಷ್ಣಯ್ಯನವರು, ಕರ್ಪೂರ ಶ್ರೀನಿವಾಸರಾಯರು, ಆರ್. ಎ. ನರಸಿಂಹಾಚಾರ್ಯರು, ಡಾ|| ಅಚ್ಯುತರಾಯರು, ಆರ್. ರುನಾಥರಾಯರು, ಬಾಪು ಸುಬ್ಬರಾಯರು, ಅಯ್ಯಾಶಾಸ್ತ್ರಿಗಳು, ಕರಿಬಸವಶಾಸ್ತ್ರಿಗಳು, ಕೆ.ಪಿ. ಪುಟ್ಟಣ್ಣಸೆಟ್ಟರು, ಸಿ. ಕೃಷ್ಣರಾಯರು, ಸಿ. ವಾಸುದೇವಯ್ಯನವರು, ಎಂ. ಎಸ್.ಪುಟ್ಟಣ್ಣನವರು, ಬಿ. ಎಂ. ಶ್ರೀಕಂಠಯ್ಯನವರು, ಬಿ. ಕೃಷ್ಣಪ್ಪನವರು ಮೈಸೂರಸೀಮೆಯ ಪರವಾಗಿಯೂ; ಧಾರವಾಡದ ಟ್ರೇನಿಂಗ್ ಕಾಲೇಜಿನ ಮುಖ್ಯೋಪಾಧ್ಯಾಯರಾದ ವಿ. ಬಿ. ಜೋಷಿ ಅವರು, ಪಬ್ಲಿಕ್ ಪ್ರಾಸಿಕ್ಯೂಟರಾದ ಎನ್. ಜಿ. ಕರಿಗುದರಿ ಆವರು, ಆರ್. ಎ. ಜಹಗೀರ್ದಾರ್ ಅವರು, ನರಗುಂದಕರ್ ಅವರು, ಪಿ.ಆರ್. ಚಿಕ್ಕೋಡಿಯವರು, ಮುದವೇಡಕರ್ ಅವರು, ಎಫ್.ಜಿ. ಹಳಕಟ್ಟಿಯವರು, ವಿ.ಬಿ. ಆಲೂರ್ ಅವರು ಮತ್ತೂ ವಿ. ಎನ್. ಮಗ್ದಾಳ ಅವರು ಬೊಂಬಾಯಾಧಿಪತ್ಯದ ಪರವಾಗಿಯೂ, ಬೆನಗಲ್ ರಾಮರಾಯರು, ರಾಜಗೋಪಾಲಕೃಷ್ಣರಾಯರು, ಮತ್ತೂ ಎ. ವೆಂಕಟರಾಯರು ಮದ್ರಾಸಾಧಿಪತ್ಯದ ಪರವಾಗಿಯೂ ಮೆಂಬರುಗಳಾಗಿ ನಿಯಮಿಸಲ್ಪಟ್ಟರು. ಕನ್ನಡಭಾಷೆಯನ್ನಾಡತಕ್ಕ ಪ್ರದೇಶಗಳಲ್ಲಿಯ ಬಾಲ್ಯವಿದ್ಯಾಭ್ಯಾಸವು ಕನ್ನಡದಲ್ಲೇ ಜರುಗುವಂತೆ ಮಾಡಲು ಪ್ರಾರ್ಥಿಸಬೇಕು; ಇದೇ ವಿಚಾರದಲ್ಲಿ ಮದ್ರಾಸು ಮತ್ತೂ ಬೊಂಬಾಯಿ ಸರ್ವಕಲಾಶಾಲೆಯವರನ್ನು ಪ್ರಾರ್ಥಿಸಬೇಕಲ್ಲದೆ, ಮದ್ರಾಸು, ಬೊಂಬಾಯಿ, ಹೈದರಾಬಾದು, ದಕ್ಷಿಣ ಮಹಾರಾಷ್ಟ್ರ, ದೇಶೀಯ ಸಂಸ್ಥಾನಗಳು ಇವುಗಳ ಕೋರ್ಟುಭಾಷೆಯೂ ಕನ್ನಡವಾಗಿರುವಂತೆ ಆಯಾ ಸರ್ಕಾರದವರನ್ನೂ, ಕನ್ನಡವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವಂತೆ ಇಂಡ್ಯಾ ಸರ್ಕಾರದವರನ್ನೂ ಪ್ರಾರ್ಥಿಸಿಕೊಳ್ಳಬೇಕೆಂದು ಅಧ್ಯಕ್ಷರು ಸೂಚಿಸಿದ ಮೇಲೆ ಕೆಲ ಮಂಗಳಪದ್ಯಗಳು ಹೇಳಲ್ಪಟ್ಟು ಸಮ್ಮೇಳನಕಾರ್ಯವು ಪರಿಸಮಾಪ್ತಿಗೊಳಿಸಲ್ಪಟ್ಟಿತು.
ಮಾಹಿತಿ ಕೃಪೆ: ಕನ್ನಡ ಸಾಹಿತ್ಯ ಪರಿಷತ್ತು-೧೦೦, ಪ್ರೊ. ಜಿ. ಅಶ್ವತ್ಥನಾರಾಯಣ
Tag: Kannada Sahitya Parishat, Kannada Sahitya Parishattu, 5ನೇ ಮೇ 1915, 5th May 1915, Samskruthika Itihasa
ಶ್ರೀಮತಿ ಕೆ.ಎಂ ಗಾಯಿತ್ರಿ ಭಾ.ಆ.ಸೇ
ಆಡಳಿತಾಧಿಕಾರಿಗಳು
ಶ್ರೀ ಎಂ. ಕಾಂತರಾಜ ಅರಸು
ಶ್ರೀ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್
ಶ್ರೀ ಹೆಚ್.ವಿ.ನಂಜುಂಡಯ್ಯ
ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹಾದೂರ್
ಶ್ರೀ ರಾಜಾ ಲಕುಮನ ಗೌಡ ಸರ್ದೇಸಾಯಿ
ಜಸ್ಟೀಸ್ ಲೋಕೂರ ನಾರಾಯಣರಾವ್ ಸ್ವಾಮಿರಾವ್
ಶ್ರೀ ತಿರುಮಲೆ ತಾತಾಚಾರ್ಯ ಶರ್ಮ
ರೆವರೆಂಡ್ ಉತ್ತಂಗಿ ಚೆನ್ನಪ್ಪ
ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ
ಪ್ರೊ. ಎ. ಎನ್. ಮೂರ್ತಿರಾವ್
ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್
ಡಾ. ಬಿ. ಶಿವಮೂರ್ತಿ ಶಾಸ್ತ್ರಿ
ಪ್ರೊ. ಜಿ. ವೆಂಕಟಸುಬ್ಬಯ್ಯ
ಶ್ರೀ ಜಿ. ನಾರಾಯಣ
ಡಾ. ಹಂಪನಾಗರಾಜಯ್ಯ
ಶ್ರೀ ಹೆಚ್. ಬಿ. ಜ್ವಾಲನಯ್ಯ
ಶ್ರೀ ಜಿ.ಎಸ್. ಸಿದ್ಧಲಿಂಗಯ್ಯ
ಶ್ರೀ ಗೊ. ರು. ಚನ್ನಬಸಪ್ಪ
ಡಾ. ಸಾ. ಶಿ. ಮರುಳಯ್ಯ
ಶ್ರೀ ಎನ್. ಬಸವಾರಾಧ್ಯ
ಶ್ರೀ ಹರಿಕೃಷ್ಣ ಪುನರೂರು
ಡಾ. ಚಂದ್ರಶೇಖರ ಪಾಟೀಲ
ಡಾ. ನಲ್ಲೂರು ಪ್ರಸಾದ್
ಶ್ರೀ ಪುಂಡಲೀಕ ಹಾಲಂಬಿ
ಡಾ. ಮನು ಬಳಿಗಾರ್
ನಾಡೋಜ ಡಾ. ಮಹೇಶ ಜೋಶಿ
ಪರಿಷತ್ತಿನ ಉಪಾಧ್ಯಕ್ಷರುಗಳು
ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭಗೊಂಡು, ಎಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎಂ. ಶಾಮರಾಯರು ಉಪಾಧ್ಯಕ್ಷರಾಗಿದ್ದರು. ನಂಜುಡಯ್ಯನವರ ನಂತರದಲ್ಲಿ ಅಧ್ಯಕ್ಷರಾದವರು ಎಂ. ಕಾಂತರಾಜ ಅರಸು ಅವರು. (೧೯೨0-೧೯೨೩) ಅವರಾದ ಮೇಲೆ ಯುವರಾಜ ಕಂಠೀರವ ಚಾಮರಾಜೇಂದ್ರ ಒಡೆಯರ್ ಪರಿಷತ್ತಿನ ಅಧ್ಯಕ್ಷರಾದರು. ಇವರ ನಂತರ ಒಂಟಿಮುರಿ ಶ್ರೀಮಂತ ಬಸವಪ್ರಭು ಸರದೇಸಾಯಿ ಅವರು (೧೯೪೧-೧೯೪೬) ಆಮೇಲೆ ಜಸ್ಟೀಸ್ ಲೋಕೂರು ನಾರಾಯಣರಾವ್ ಸ್ವಾಮಿರಾವ್ ಅವರು ಅಧ್ಯಕ್ಷರಾಗಿದ್ದರು. ಆಗ ನಿಬಂಧನೆಯಲ್ಲಿ “ರಾಜ್ಯಾಧಿಪತಿಗಳು, ಶ್ರೀಮಂತರು, ಉನ್ನತ ಪದವಿಯಲ್ಲಿರುವವರು ಮಾತ್ರ ಮಹಾಪೋಷಕರು ಅಥವಾ ಪೋಷಕರು ಆಗಿರಬೇಕು” ಎಂಬ ನಿಯಮವಿದ್ದು, ಇವರ ಪೈಕಿ ಅಧ್ಯಕ್ಷರನ್ನು ಆರಿಸಲಾಗುತ್ತಿತ್ತು. ೧೯೪೭ರ ನಂತರ ಈ ನಿಯಮ ರದ್ದಾಯಿತು.
ಈ ಅರಸರು ಅಥವಾ ಶ್ರೀಮಂತರು ಪರಿಷತ್ತಿನ ಅಧ್ಯಕ್ಷರಾದ ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವ ವಿದ್ವಾಂಸರನ್ನು ಪರಿಷತ್ತಿನ ಆಜೀವ ಗೌರವ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿತ್ತು. ಇವರ ಪೈಕಿ ಒಬ್ಬರು ಪರಿಷತ್ತಿನ ಉಪಾಧ್ಯಕ್ಷರಾಗಿರುತ್ತಿದ್ದರು. ಹೀಗೆ ಉಪಾಧ್ಯಕ್ಷರೆನಿಸಿಕೊಂಡವರು ಕ್ರಮವಾಗಿ ಕರ್ಪೂರ ಶ್ರೀನಿವಾಸರಾವ್, ಡಿವಿಜಿ, ಬಿಎಂಶ್ರೀ ಮತ್ತು ಮಾಸ್ತಿ. ಅವರು ವಾಸ್ತವಿಕದಲ್ಲಿ ಪರಿಷತ್ತಿನ ಕಾರ್ಯಗಳನ್ನೆಲ್ಲ ಅಧ್ಯಕ್ಷರ ಹೆಸರಿನಲ್ಲಿ ನಡೆಸಿದರು.
ಎಂ.ಶಾಮರಾವ್
ಕರ್ಪೂರ ಶ್ರೀನಿವಾಸರಾವ್
ಡಿ. ವಿ. ಗುಂಡಪ್ಪ
ಬಿ. ಎಂ. ಶ್ರೀಕಂಠಯ್ಯ
ಇಂದಿನವರೆಗಿನ ಕಾರ್ಯದರ್ಶಿಗಳು
| ಕ್ರಮ ಸಂಖ್ಯೆ | ಹೆಸರು | ಅವಧಿ |
| ೧ | ಬಿ. ಕೃಷ್ಣಪ್ಪ | 0೫.0೫.೧೯೧೫ - 0೨.೧೧.೧೯೧೬ |
| ೨ | ಬಿ. ವೆಂಕಟನಾರಾಯಣಪ್ಪ | 0೭.0೫.೧೯೧೬- ೨೯.0೯.೧೯೧೬ |
| ೩ | ಆರ್. ರಘುನಾಥರಾವ್ | ೨೯.0೯.೧೯೧೬ -೧೯೧೮ |
| ೪ | ಪಿ.ಎಸ್. ಅಚ್ಯುತರಾವ್ | 0೨.೧೧.೧೯೧೬ - ೧೯೧೭ |
| ೫ | ಹೆಚ್. ಚನ್ನಕೇಶವಯ್ಯಂಗಾರ್ | ೧೯೧೮ - ೧೯೧೮ |
| ೬ | ಎಂ.ಎಸ್. ಪುಟ್ಟಣ್ಣ | ೧೯೧೮ - ೧೯೧೯ |
| ೭ | ಎನ್. ವೆಂಕಟೇಶಯ್ಯಂಗಾರ್ | ೧೯೧೯ - ೧೯೨೧ |
| ೮ | ಬೆಳ್ಳಾವೆ ವೆಂಕಟನಾರಾಯಣಪ್ಪ | ೧೯೨೧ - ೧೯೨೬ |
| ೯ | ಎನ್. ವೆಂಕಟೇಶಯ್ಯಂಗಾರ್ | ೧೯೩0 - ೨೧.0೩.೧೯೩0 |
| ೧0 | ಸಿ.ಕೆ. ವೆಂಕಟರಾಮಯ್ಯ | ೨೧.0೩.೧೯೩0 - ೨೧.0೩.೧೯೩೭ |
| ೧೧ | ಬಿ. ವೆಂಕೋಬರಾವ್ | ೧೯೪0 - ೨೫.0೨.೧೯೪೧ |
| ೧೨ | ಡಿ.ಸಿ. ಸುಬ್ಬರಾಯಪ್ಪ | ೧೯೪೧ - ೧೯೪೨ |
| ೧೩ | ಬಿ. ವೆಂಕೋಬರಾವ್ | ೧೯೪0 - ೨೫.0೨.೧೯೪೧ |
| ೧೪ | ಡಿ.ಸಿ. ಸುಬ್ಬರಾಯಪ್ಪ | ೧೯೪೧ - ೧೯೪೨ |
| ೧೫ | ಕ.ವೆಂ. ರಾಘವಾಚಾರ್ | ೧೯೪೨ - ೧೯೪೩ |
| ೧೬ | ಬಿ. ವೆಂಕೋಬರಾವ್ | ೧೯೪೩ - ೧೯೪೪ |
| ೧೭ | ಕ.ವೆಂ. ರಾಘವಾಚಾರ್ | ೧೯೪೪ - ೧೯೪೫ |
| ೧೮ | ಕೆ. ರೇವಣ್ಣ | ೧೯೪೫ - ೧೯೪೬ |
| ೧೯ | ಕ.ವೆಂ. ರಾಘವಾಚಾರ್ | ೧೯೪೬ - ೧೯೪೭ |
| ೨0 | ಗೋಪಾಲಕೃಷ್ಣರಾವ್ | ೧೯೪೭ - ೧೯೪೮ |
| ೨೧ | ಸಿ.ಕೆ. ನಾಗರಾಜರಾವ್ | 0೮.0೫.೧೯೪೭ - ೨೯.೧೨.೧೯೪೭ |
| ೨೨ | ಎಲ್. ಎಸ್. ಶೇಷಗಿರಿರಾವ್ | ೨೯.೧೨.೧೯೪೭ - ೧೭.0೨.೧೯೫0 |
| ೨೩ | ಸಿದ್ಧವನಹಳ್ಳಿ ಕೃಷ್ಣಶರ್ಮ | 0೬.0೩.೧೯೪೯ - ೧0.0೬.೧೯೫0 |
| ೨೪ | ಎಂ.ಎ. ನರಸಿಂಹಾಚಾರ್ | ೧0.0೬.೧೯೫0 - ೧೩.0೯.೧೯೫0 |
| ೨೫ | ಕಾ.ಸ. ಧರಣೇಂದ್ರಯ್ಯ | ೧೩.0೯.೧೯೫0 - 0೧.0೨.೧೯೫೨ |
| ೨೬ | ಸಿ.ಕೆ. ನಾಗರಾಜರಾವ್ | 0೧.0೨.೧೯೫೨ - ೩0.0೮.೧೯೫೩ |
| ೨೭ | ಎ.ಎನ್. ಮೂರ್ತಿರಾವ್ | ೩೧.0೮.೧೯೫೩ - 0೯.0೫.೧೯೫೪ |
| ೨೮ | ಡಿ.ಸಿ. ಸುಬ್ಬರಾಯಪ್ಪ | 0೯.0೫.೧೯೫೪ - ೧೭.0೬.೧೯೫೬ |
| ೨೯ | ಜಿ. ವೆಂಕಟಸುಬ್ಬಯ್ಯ | 0೯.0೫.೧೯೫೪ - ೧೭.0೬.೧೯೫೬ |
| ೩0 | ಡಿ.ಆರ್. ರಾಮಯ್ಯ | ೧೭.0೬.೧೯೫೬ - ೧೭.0೬.೧೯೫೬ |
| ೩೧ | ಸಿ.ಕೆ. ನಾಗರಾಜರಾವ್ | ೧೭.0೬.೧೯೫೬ - ೨0.0೩.೧೯೬೧ |
| ೩೨ | ಕೆ. ಗೋಪಾಲಕೃಷ್ಣರಾವ್ | ೨೮.೧0.೧೯೫೬ - ೨0.0೩.೧೯೬೧ |
| ೩೩ | ಜಿ. ಶ್ರೀನಿವಾಸನ್ | 0೮.೧0.೧೯೫೮ - ೨೭.0೫.೧೯೫೬ |
| ೩೪ | ಡಿ.ಆರ್. ರಾಮಯ್ಯ | ೨೭.0೫.೧೯೫೯ - ೨೪.0೧.೧೯೬0 |
| ೩೫ | ಅನ್ನದಾನಯ್ಯ ಪುರಾಣಿಕ | ೨೪.0೧.೧೯೬0 - ೨೫.೧0.೧೯೬೪ |
| ೩೬ | ಕೆ.ಎಂ. ಕೃಷ್ಣರಾವ್ | ೨೧.0೩.೧೯೬೧ - ೨೫.೧0.೧೯೬೪ |
| ೩೭ | ಎಸ್. ಶಂಕರಪ್ಪ | ೨೮.0೯.೧೯೬೩ - ೨೫.೧0.೧೯೬೪ |
| ೩೮ | ಕೆ.ಎಸ್. ನಿರಂಜನ | ೨೬.೧0.೧೯೬೪ - ೧೨.0೫.೧೯೬೫ |
| ೩೯ | ಹೆಚ್.ಆರ್. ದಾಸೇಗೌಡ | ೨೬.೧0.೧೯೬೪ - ೨0.0೧.೧೯೬೫ |
| ೪0 | ಜಿ.ಕೆ. ಗುಂಡೂರಾವ್ | ೧೭.0೫.೧೯೬೫ - ೩0.0೬.೧೯೬೫ |
| ೪೧ | ಎಂ.ಎಚ್. ಕೃಷ್ಣಯ್ಯ | 0೧.0೭.೧೯೬೫ - 0೧.೧0.೧೯೬೫ |
| ೪೨ | ಬಿ.ಎನ್. ಶಾಸ್ತ್ರಿ | 0೧.0೭.೧೯೬೫ - ೨೬.೧0.೧೯೬೬ |
| ೪೩ | ವೆಂಕಟೇಶ ಸಾಂಗಲಿ | ೨೭.೧0.೧೯೬೬ - 0೫.೧೧.೧೯೬೭ |
| ೪೪ | ಹಂಪ ನಾಗರಾಜಯ್ಯ | ೨೭.೧0.೧೯೬೬ - ೧೧.0೫.೧೯೬೯ |
| ೪೫ | ಅ.ರಾ. ಮಿತ್ರ | ೧೨.0೫.೧೯೬೯ - ೨೫.0೮.೧೯೭0 |
| ೪೬ | ಹಂಪ ನಾಗರಾಜಯ್ಯ * | ೧೨.0೫.೧೯೬೯ - ೩0.0೯.೧೯೭೪ |
| ೪೭ | ವೆಂಕಟೇಶ ಸಾಂಗಲಿ | ೨೫.0೮.೧೯೭0 - ೩೧.೧೨.೧೯೭೫ |
| ೪೮ | ಜಿ.ಕೆ. ಗುಂಡೂರಾವ್ | 0೧.೧೧.೧೯೭೪ - ೨೬.0೭.೧೯೭೮ |
| ೪೯ | ಡಿ. ಲಿಂಗಯ್ಯ | ೨೬.0೭.೧೯೭೮ - ೧೬.0೪.೧೯೮೨ |
| ೫0 | ಜಿ. ಅಶ್ವತ್ಥ ನಾರಾಯಣ | ೨೬.0೭.೧೯೭೮ - ೧೬.0೯.೧೯೭೯ |
| ೫೧ | ಲಕ್ಷ್ಮಣ್ ತೆಲಗಾವಿ | ೧೭.0೯.೧೯೭೯ - ೧೯.0೨.೧೯೮೬ |
| ೫೨ | ಹೊ.ವೆ. ನಾರಾಯಣಸ್ವಾಮಿ | ೧೩.0೫.೧೯೮೨ - 0೯.೧೧.೧೯೮೪ |
| ೫೩ | ಚಂದ್ರಕಾಂತ ಪಡೇಸೂರ | ೧೭.೧೧.೧೯೮೪ - 0೨.೧೧.೧೯೮೭ |
| ೫೪ | ಜಿ.ವಿ. ಶಿವಸ್ವಾಮಿ | ೨0.0೨.೧೯೮೬ - 0೨.೧೧.೧೯೮೭ |
| ೫೫ | ಸಾ.ಶಿ. ಮರುಳಯ್ಯ * | ೨೨.0೨.೧೯೮೯ - ೧೬.೧0.೧೯೮೯ |
| ೫೬ | ಚಿ. ಶ್ರೀನಿವಾಸರಾಜು | ೨೪.0೨.೧೯೮೯ - ೧೭.0೨.೧೯೯0 |
| ೫೭ | ಗೊ.ರು. ಚನ್ನಬಸಪ್ಪ * | ೧೬.೧0.೧೯೮೯ - ೧೭.0೨.೧೯೯0 |
| ೫೮ | ಟಿ. ರಾಮಯ್ಯ | ೧೬.0೪.೧೯೯0 - ೧೪.0೫.೧೯೯೨ |
| ೫೯ | ಎಸ್. ಶ್ರೀನಿವಾಸನ್ | ೨0.0೫.೧೯೯೨ - ೨೨.0೬.೧೯೯೫ |
| ೬0 | ಜಿ. ಚನ್ನವೀರಸ್ವಾಮಿ | 0೩.0೬.೧೯೯೨ - ೨೨.0೬.೧೯೯೫ |
| ೬೧ | ಎಂ.ಜಿ. ನಾಗರಾಜ್ | ೧೩.0೯.೧೯೯೩ - ೨೨.0೬.೧೯೯೫ |
| ೬೨ | ನರಹಳ್ಳಿ ಬಾಲಸುಬ್ರಹ್ಮಣ್ಯ | ೨೬.0೬.೧೯೯೫ - 0೬.೧೨.೧೯೯೫ |
| ೬೩ | ಕೆ.ಆರ್. ಇಕ್ಬಾಲ್ ಅಹಮದ್ | ೨೬.0೬.೧೯೯೫ - 0೩.0೧.೧೯೯೭ |
| ೬೪ | ಶ್ರೀಮತಿ ವತ್ಸಲಾ ಪ್ರಭು | 0೬.೧೨.೧೯೯೫ - 0೩.0೧.೧೯೯೭ |
| ೬೫ | ಎಂ.ಆರ್. ವಿಶ್ವನಾಥರೆಡ್ಡಿ | ೨0.0೧.೧೯೯೭ - ೧೬.0೪.೧೯೯೭ |
| ೬೬ | ಪುಂಡಲೀಕ ಹಾಲಂಬಿ * | ೧೯.0೨.೧೯೯೭ - ೧0.0೭.೧೯೯೮ |
| ೬೭ | ಬೇಡರೆಡ್ಡಿಹಳ್ಳಿ ಪಂಪಣ್ಣ | ೧೧.0೬.೧೯೯೭ - ೧0.0೭.೧೯೯೮ |
| ೬೮ | ಡಾ. ಸಿ. ವೀರಣ್ಣ | ೧0.0೭.೧೯೯೮ - ೧೫.0೫.೨00೧ |
| ೬೯ | ಡಾ. ಕೆ.ವಿ. ಚಂದ್ರಣ್ಣಗೌಡ | ೧0.0೭.೧೯೯೮ - ೧೧-0೭-೨00೧ |
| ೭0 | ಡಾ. ಸಿ. ವೀರಣ್ಣ | ೧೮.0೭.೨00೧ - 0೫.0೬.೨00೨ |
| ೭೧ | ಪುಂಡಲೀಕ ಹಾಲಂಬಿ | ೧೮.0೭.೨00೧ - 0೨.೧೧.೨00೪ |
| ೭೨ | ಪ್ರೊ|| ಜಿ. ಶಂಕರಯ್ಯ | ೧೪.0೬.೨00೨ - 0೨.0೭.೨00೪ |
| ೭೩ | ಜರಗನಹಳ್ಳಿ ಶಿವಶಂಕರ್ | 0೪.೧೧.೨00೪ - ೩0.0೪.೨00೮ |
| ೭೪ | ಡಾ.ಎಚ್. ಜಯಮ್ಮ ಕರಿಯಣ್ಣ | ೧೬.೧೧.೨00೪ - ೩0.0೪.೨00೮ |
| ೭೫ | ಶ್ರೀ ಹೆಚ್.ಕೆ. ಮಳಲೀಗೌಡ | ೩0.0೮.೨00೮ - ೨೭.0೨.೨0೧೨ |
| ೭೬ | ಶ್ರೀ ಟಿ.ಎಸ್. ದಕ್ಷಿಣಾಮೂರ್ತಿ | ೧೫.0೯.೨00೮ - ೧೬.0೧.೨0೧೧ |
| ೭೭ | ಶ್ರೀ ಸಂಗಮೇಶ ಬಾದವಾಡಗಿ | ೧೬.0೧.೨0೧೧ - ೨೭.0೨.೨0೧೧ |
| ೭೮ | ಶ್ರೀ ಸಂಗಮೇಶ ಬಾದವಾಡಗಿ | ೧0.0೫.೨0೧೨ - ೧೭.0೭.೨0೧೪ |
| ೭೯ | ಡಾ. ಕೋ.ವೆಂ. ರಾಮಕೃಷ್ಣೇಗೌಡ | ೧೭.0೫.೨0೧೨ - ೧೪.0೪.೨0೧೩ |
| ೮0 | ಶ್ರೀ ಸಿ.ಕೆ. ರಾಮೇಗೌಡ | ೧೫.0೪.೨0೧೩ – ೨೦೧೪ |
| ೮೧ | ಡಾ. ರಾಜಶೇಖರ ಹತಗುಂದಿ | ೨೧.0೭.೨0೧೪ - ೧೯.೦೧.೨೦೨೧(ಎರಡು ಅವಧಿಗೆ) |
| ೮೨ | ವ.ಚ. ಚನ್ನೇಗೌಡ | ೨೧.೦೭.೨೦೧೪ - ೧.೧೧.೨೦೨೦ |
| ೮೩ | ಶ್ರೀ ಕೆ. ರಾಜಕುಮಾರ್ | ೦೨.೧೧.೨೦೨೦ ರಿಂದ ೨೦-೦೧-೨೦೨೧ |
| ೮೪ | ಡಾ. ಪದ್ಮರಾಜ ದಂಡಾವತಿ | ೨೦-೧-೨೦೨೧ ರಿಂದ ೨೪-೧೧-೨೦೨೧ |
| ೮೫ | ನೇ.ಭ. ರಾಮಲಿಂಗಶೆಟ್ಟಿ | ೨೬ -೧೧ -೨೦೨೧ ರಿಂದ ೨೬-೦೬-೨೦೨೫ |
| ೮೬ | ಕೆ. ಮಹಾಲಿಂಗಯ್ಯ | ೧೬-೦೮ -೨೦೨೨ - ೩೦ -೧೨ -೨೦೨೨ |
| ೮೭ | ಡಾ.ಪದ್ಮಿನಿ ನಾಗರಾಜು | ೧೯-೦೧-೨೦೨೩-೧೯-೦೬-೨೦೨೫ |
| ೮೮ | ಡಾ. ಹೆಚ್.ಎಲ್. ಮಲ್ಲೇಶಗೌಡ | ೨೬-೦೬-೨೦೨೫-೩೦-೦೬-೨೦೨೫ |
| ೮೯ | ಶ್ರೀ ಬಿ.ಎಂ. ಪಟೇಲ್ ಪಾಂಡು | ೩೦-೦೬-೨೦೨೫-೨೮-೧೦-೨೦೨೫ |
| ೯೦ | ಶ್ರೀ ಹೆಚ್.ಬಿ. ಮದನ್ಗೌಡ | ೧೪-೦೮-೨೦೨೫-೨೮-೧೦-೨೦೨೫ |
ಇಂದಿನವರೆಗಿನ ಕೋಶಾಧಿಕಾರಿಗಳು
| ಕ್ರಮ ಸಂಖ್ಯೆ | ಹೆಸರು | ಅವಧಿ |
| ೧ | ಪಿ.ಎಸ್. ಅಚ್ಯುತರಾವ್ | 0೫.0೫.೧೯೧೫ - 0೭.0೫.೧೯೧೬ |
| ೨ | ಟಿ. ಲಕ್ಷ್ಮೀನರಸಿಂಹರಾಯರು | 0೭.0೫.೧೯೧೬ - ೧೯೧೮ |
| ೩ | ಬಿ. ವೆಂಕಟೇಶಯ್ಯಂಗಾರ್ | ೧೯೧೮ - ೧೯೨0 |
| ೪ | ಎನ್. ವೆಂಕಟನಾರಾಣಪ್ಪ | ೧೯೨0 - ೧೯೨೧ |
| ೫ | ಎನ್. ವೆಂಕಟೇಶಯ್ಯಂಗಾರ್ | ೧೯೨೧ - ೧೯೨೬ |
| ೬ | ಬೆಳ್ಳಾವೆ ವೆಂಕಟನಾರಾಣಪ್ಪ | ೧೯೨೬ - ೧೮.0೨.೧೯೩೪ |
| ೭ | ವಿ. ಸೀತಾರಾಮಯ್ಯ | ೨೯.೧೨.೧೯೩೪ - ೧೯೪0 |
| ೮ | ಡಿ.ಸಿ. ಸುಬ್ಬರಾಯಪ್ಪ | ೧೯೪0 - ೧೯೪೪ |
| ೯ | ಜಿ.ಪಿ. ರಾಜರತ್ನಂ | ೧೯೪೫ - ೧೯೪೫ |
| ೧೦ | ಕೆ. ರೇವಣ್ಣ | ೧೯೪೬ - ೨೯.೧೨.೧೯೪೭ |
| ೧೧ | ಎಂ. ವಾಸುದೇವಮೂರ್ತಿ | ೨೯.೧೨.೧೯೪೭ - 0೬.0೩.೧೯೪೯ |
| ೧೨ | ಸಿ.ಕೆ. ನಾಗರಾಜರಾವ್ | 0೬.0೩.೧೯೪೯ - ೨೫.0೪.೧೯೫೨ |
| ೧೩ | ಎಚ್.ಎಸ್. ಸೀತಾರಾಂ | ೨೫.0೪.೧೯೫೨ - ೩0.0೮.೧೯೫೩ |
| ೧೪ | ಡಿ.ಸಿ. ಸುಬ್ಬರಾಯಪ್ಪ | 0೪.0೯.೧೯೫೩ - 0೮.0೫.೧೯೫೪ |
| ೧೫ | ಎನ್. ವರದರಾಜನ್ | 0೯.0೫.೧೯೫೪ - ೧೭.0೬.೧೯೫೬ |
| ೧೬ | ಎಚ್.ಎಸ್. ಸೀತಾರಾಂ | ೧೭.0೬.೧೯೫೬ - 0೭.0೨.೧೯೫೭ |
| ೧೭ | ಜಿ. ಶ್ರೀನಿವಾಸನ್ | ೧೭.0೬.೧೯೫೯ - ೨೮.0೮.೧೯೬0 |
| ೧೮ | ಎಚ್.ಎಸ್. ಸೀತಾರಾಂ | 0೬.0೯.೧೯೫೭ - ೨೧.0೫.೧೯೫೯ |
| ೧೯ | ಜಿ. ಶ್ರೀನಿವಾಸನ್ | 0೭.0೨.೧೯೫೭ - 0೬.0೯.೧೯೫೭ |
| ೨೦ | ಆರ್. ಅನಂತರಾಮನ್ | ೨೯.0೮.೧೯೬೩ - ೨೫.೧0.೧೯೬೪ |
| ೨೧ | ಎ.ಸಿ. ಭೈರಪ್ಪ | ೨೬.೧0.೧೯೬೪ - ೨೫.೧೧.೧೯೬೬ |
| ೨೨ | ಎನ್. ವರದರಾಜನ್ | ೨೬.೧೨.೧೯೬೬ - 0೩.0೯.೧೯೭೭ |
| ೨೩ | ಶ್ರೀಮತಿ ಎಸ್. ಪ್ರಮೀಳಾ | 0೩.0೯.೧೯೭೭ - ೨೨.0೭.೧೯೭೮ |
| ೨೪ | ಎಂ.ಪಿ. ದೇವರಾಜ್ | ೨೨.0೯.೧೯೭೮ - 0೨.೧೧.೧೯೮೭ |
| ೨೫ | ಎಸ್.ವಿ. ಶ್ರೀನಿವಾಸರಾವ್ | ೨೪.0೨.೧೯೮೯ - ೧೪.0೫.೧೯೯೨ |
| ೨೬ | ಹೆಚ್.ಆರ್. ದಾಸೇಗೌಡ | ೧೮.0೫.೧೯೯೨ - ೨೨.0೬.೧೯೯೫ |
| ೨೭ | ಎಂ. ಶ್ರೀರಾಮಯ್ಯ | ೨೬.0೬.೧೯೯೫ - 0೩.0೧.೧೯೯೭ |
| ೨೮ | ಕೆ.ಎಂ. ಸೀತಾರಾಮಯ್ಯ | ೨0-0೧-೧೯೯೭ - ೧0.0೭.೧೯೯೮ |
| ೨೯ | ಆರ್.ಎಸ್. ನಾರಾಯಣ | ೨೯.0೭.೧೯೯೮ - ೧೩.0೫.೧೯೯೯ |
| ೩೦ | ಬಿ.ಎನ್. ಸತ್ಯನಾರಾಯಣರಾವ್ | ೨೦೦೦-೨೦೦೧ |
| ೩೧ | ಡಾ|| ನಲ್ಲೂರು ಪ್ರಸಾದ್ | ೧೮.0೭.೨00೧ - 0೧.0೯.೨00೪ |
| ೩೨ | ಪುಂಡಲೀಕ ಹಾಲಂಬಿ | ೧೮.೧೧.೨00೪ - ೩0-0೪-೨00೮ |
| ೩೩ | ಪುಂಡಲೀಕ ಹಾಲಂಬಿ | ೩0-0೮-೨00೮ - ೨೭-0೨-೨0೧೨ |
| ೩೪ | ಪಿ. ಮಲ್ಲಿಕಾರ್ಜುನಪ್ಪ | ೧0-0೫-೨0೧೨ - ೨೪-೧೧-೨೦೨೧ |
| ೩೫ | ಶ್ರೀ ಬಿ.ಎಂ. ಪಟೇಲ್ ಪಾಂಡು | ೧೭-೧೨-೨೦೨೧-೦೯-೦೭-೨೦೨೫ |
| ೩೬ | ಶ್ರೀ ಡಿ.ಆರ್. ವಿಜಯ ಕುಮಾರ್ | ೦೯-೦೭-೨೦೨೫-೨೮-೧೦-೨೦೨೫ |


