nalwadi

ನಾಲ್ವಡಿ ಕೃಷ್ಣರಾಜ ಒಡೆಯರ್

 

ಜೂನ್ ೪ , ೧೮೮೪ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು.  ನಾವು ಯಾವ ಯಾವುದನ್ನು ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂತಹ ಮಹನೀಯರ ಶ್ರೇಷ್ಠ ಸೇವೆ ಎಂದು ಕೊಂಡಾಡುತ್ತೇವೆಯೋ ಆ ಹಿರಿಮೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಕೂಡಾ ಮಹತ್ತರವಾದುದು. ಸರ್ವ ಕಾಲದಲ್ಲೂ ಪ್ರಾಜ್ಞರು ನಿಷ್ಠರು ಇದ್ದಿರುತ್ತಾರೆ.  ಆ ಪ್ರಾಜ್ಞರಿಗೆ ಕಾರ್ಯದಕ್ಷತೆ ತೋರುವ ಅವಕಾಶ, ಸ್ವಾತಂತ್ರ್ಯ ಅಧಿಕಾರಗಳನ್ನು ನೀಡುವ ಮನೋಬಲ ರಾಜ್ಯಭಾರದವರಿಗೆ ಇದ್ದಾಗ ಮಾತ್ರವೇ ಅದು ಸಾಧ್ಯ ಎಂಬುದು ಅತ್ಯಂತ ಮುಖ್ಯ ಸಂಗತಿಯಲ್ಲವೆ?

ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ – ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ರವರೆಗೆ ನಡೆಯಿತು.

ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.

೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ತಕ್ಷಣದಿಂದಲೇ ಅವರು  ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ಕಂಕಣ ಬದ್ದರಾದರು, ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯವು ಕಂಡುದರಿಂದ, ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು

ನಾಲ್ವಡಿ ಕೃಷ್ಣರಾಜ ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು. ಅವರ ಕಾಲದಲ್ಲಿ, ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ‘ಪ್ರಜಾ ಪ್ರತಿನಿಧಿ ಸಭೆ’ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು.  ಇದರ ಜೊತೆಗೆ  ‘ನ್ಯಾಯ ವಿಧಾಯಕ’ ಸಭೆಯನ್ನೂ ಸಹ ಸ್ಥಾಪಿಸಲಾಯಿತು.  ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು .

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಮಾಡಳಿತ ಸಂಸ್ಥೆಗಳಾದವು. ಹೊಸ ರೈಲು ದಾರಿಗಳ ನಿರ್ಮಾಣಗಳಾದವು.

೧೯೦೭ ರಲ್ಲಿ ‘ವಾಣೀವಿಲಾಸ ಸಾಗರ’ (ಮಾರಿ ಕಣಿವೆ) ಕಟ್ಟಲ್ಪಟ್ಟಿತು, ೧೯೧೧ ರಲ್ಲಿ ಆರಂಭವಾದ ‘ಕೃಷ್ಣರಾಜ ಸಾಗರ’ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. ೧೯೦೦ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು, ಇದು ಭಾರತದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ.

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು. ನಾಲ್ವಡಿ ಕೃಷ್ಣರಾಜರ ಮತ್ತೊಂದು ಮಹತ್ತರ ಸಾಧನೆಯೆಂದರೆ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದುದು. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು.

ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. ೧೯೦೬ ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.

ಮೈಸೂರು ಬೆಂಗಳೂರು ಪ್ರದೇಶಗಳಂತಹ ನಗರಗಳಲ್ಲಿ ರಚಿತವಾದ ಶ್ರೇಷ್ಠ ಕಟ್ಟಡಗಳು, ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನವನಗಳು, ಜಲ ಕಾರಂಜಿಗಳು, ವಿಹಾರಿ ಧಾಮಗಳು, ಶ್ರೇಷ್ಠ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಛತ್ರಗಳು, ಶುಲ್ಕ ವಿಧಿಸದೆ ಉತ್ತಮ ಸೇವೆ ನೀಡುತ್ತಿದ್ದ ಆಸ್ಪತ್ರೆಗಳು, ಶುಶ್ರೂಷಾ ಧಾಮಗಳು, ಸಂಪರ್ಕ ವ್ಯವಸ್ಥೆಗಳು, ಪ್ರಯಾಣ ಸೌಲಭ್ಯಗಳು ಬಹುಷಃ ಇಷ್ಟು ಶ್ರೇಷ್ಠ ಮಟ್ಟದಲ್ಲಿದ್ದುದು ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಾಲದಲ್ಲಿ.  ಈ ಪ್ರಾಂತ್ಯದಲ್ಲಿದ್ದ ಸರ್ವ ಭಾಷಿಗರ ಸಮನ್ವಯ, ಸರ್ವ ಧರ್ಮೀಯರ ಸಮನ್ವಯ, ಎಲ್ಲಾ ವರ್ಗದವರ ಹಿತಕಾಯುವ ಮನೋಭಾವ ಇತ್ಯಾದಿಗಳು ಸಾರ್ವಕಾಲಿಕವಾಗಿ ಮಹೋನ್ನತವಾದ ಗಳಿಗೆಗಳು.  ಈ ಸಂಸ್ಥಾನದಲ್ಲಿ ಕಲೆ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಣೆ ಅದ್ವಿತೀಯವಾಗಿತ್ತು.

ನಾಲ್ವಡಿ  ಕೃಷ್ಣರಾಜ  ಒಡೆಯರ್  ಆಡಳಿತ  ಕಾಲದಲ್ಲಿ ಮಹತ್ವದ  ಸಾಮಾಜಿಕ  ಸುಧಾರಣಾ  ಕಾನೂನುಗಳು ಸಹಾ ಜಾರಿಗೆ ಬಂದವು.  ಇವುಗಳಲ್ಲಿ  ೧೯೦೯ ರಲ್ಲಿ ದೇವದಾಸಿ ಪದ್ಧತಿ ನಿಷೇಧ, ೧೯೧೦ ರಲ್ಲಿ ಬಸವಿ ಪದ್ಧತಿ ರದ್ಧತಿ, ೧೯೧೦ ರಲ್ಲಿ ’ಗೆಜ್ಜೆಪೂಜೆ’ ಸಂಪೂರ್ಣ ನಿರ್ಮೂಲನೆ, ೧೯೩೬ ಜುಲೈ ೧೪ ರಂದು ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆಯ ಜಾರಿ, ೧೯೩೬ ಜುಲೈ ೭ ರಂದು ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, ೧೯೧೪ ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ ಮತ್ತು ೧೯೧೯ ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ, ೧೯೨೭ ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕು ಮುಂತಾದವು  ಪ್ರಮುಖವಾಗಿ  ನೆನಪಿಗೆ ಬರುತ್ತವೆ.  ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ೧೯೦೫ ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು. ೧೯೧೩ ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದರು. ೧೯೧೮ ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತರಲಾಯಿತು. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದು ಸೂಕ್ತವಾಗಿಯೇ ಇದೆ.

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ದಿವಾನರಾದರು. ಇವರ ಅಧಿಕಾರಾವಧಿ ೧೯೧೨ರಿಂದ ೧೯೧೮ ರವರೆಗೆ ೬ ವರ್ಷಗಳು. ಈ ಮುಂಚೆ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಚೀಫ್ ಇಂಜಿನಿಯರಾಗಿ ೧೯೦೯ರಲ್ಲಿ ನೇಮಕಗೊಂಡಿದ್ದರು. ಅನಂತರ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು. ೧. ಕಾರ್ಖಾನೆಗಳ ಕೈಗಾರಿಕಾ ಸಮಿತಿ ೨. ವಿದ್ಯಾಸಮಿತಿ ೩. ಭೂ ವ್ಯವಸಾಯ ಸಮಿತಿ.

ವಿದ್ಯಾಸಮಿತಿಗೆ ಹೆಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ವಿ. ಸುಬ್ರಹ್ಮಣ್ಯ ಅಯ್ಯರ್ ಅವರು ಕಾರ್ಯದರ್ಶಿಗಳಾಗಿ  ನೇಮಕವಾದರು.  ಈ ವಿದ್ಯಾ ಸಮಿತಿಯವರು ಮುಖ್ಯವಾಗಿ ಎರಡು ಯೋಜನೆಗಳನ್ನು ನಿರ್ಧರಿಸಿದರು. ೧. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ ೨. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು

ಹಲವು  ಪರಿಣತರ  ಅಭಿಪ್ರಾಯಕ್ರೋಡೀಕರಣ  ರೂಪುರೇಷೆಗಳ  ನಿರ್ಮಾಣ ಮುಖೇನ  ೧೯೧೫ರಲ್ಲಿ  ಕನ್ನಡ  ಸಾಹಿತ್ಯ  ಪರಿಷತ್ತು  ಅಸ್ತಿತ್ವಕ್ಕೆ  ಬಂತು  (ಈ ಕುರಿತ  ಸಂಪೂರ್ಣ  ವಿವರಗಳು  ಸಾಂಸ್ಕೃತಿಕ  ಇತಿಹಾಸ  ಪುಟದಲ್ಲಿ  ಲಭ್ಯವಿದೆ).

ಇಂಥಹ ರಾಜರು ಮಾತ್ರವೇ ಚರಿತ್ರೆಯಲ್ಲಿ ಅಜರಾಮರರು.  ಹೀಗೊಬ್ಬ ಅರಸರು ಕಳೆದ ಶತಮಾನದಲ್ಲಿ ನಮ್ಮ ನಾಡಿನಲ್ಲಿದ್ದರು ಎಂಬ ಹೆಮ್ಮೆ ನಮ್ಮದು.  ನಾವು ಯಾವ ಯಾವುದನ್ನು ಶ್ರೇಷ್ಠ ಅರಮನೆ, ಪ್ರೇಕ್ಷಣೀಯ, ಮನೋಲ್ಲಾಸಕರವೆಂದು ಕೊಂಡಾಡುತ್ತಿದ್ದೇವೆಯೋ ಅವೆಲ್ಲಾ ಒಂದಿಲ್ಲೊಂದು ರೀತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಪ್ರಾರಂಭ ಇಲ್ಲವೇ ಫೋಷಣೆ ಪಡೆದು ಔನ್ನತ್ಯಗೊಂಡಂತಹವು ಎಂಬುದು ಈ ನಾಲ್ವಡಿಯವರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸುತ್ತಿವೆ.  ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ   ಸಮರ್ಥ ರಾಜಕಾರಣಿಯನ್ನು ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂಥಹ ಸಮರ್ಥ ಆಡಳಿತಗಾರರನ್ನು ನಮ್ಮ ನಾಡು ನಿರಂತರವಾಗಿ  ಸ್ಮರಿಸುತ್ತಿದೆ.

Tag: Nalwadi Krishnaraja Wodeyar, Samsthapakaru

Photo Courtesy: www.kamat.com