ಕೆನಡಾ ಸಂಸತ್ತಿನ ಅಧಿವೇಶನದಲ್ಲಿ ಕನ್ನಡದಲ್ಲಿ ಭಾಷಣವನ್ನು ಮಾಡಿ ವಿಶ್ವಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ ಶ್ರೀ ಚಂದ್ರ ಆರ್ಯ ಅವರಿಗೆ ಕಸಾಪ ಅಭಿನಂದನೆ

100

ಕೆನಡಾ ಸಂಸತ್ತಿನ ಅಧಿವೇಶನದಲ್ಲಿ ಕನ್ನಡದಲ್ಲಿ ಭಾಷಣವನ್ನು ಮಾಡಿ ವಿಶ್ವಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ ಶ್ರೀ ಚಂದ್ರ ಆರ್ಯ ಅವರಿಗೆ ಸಮಗ್ರ ಕನ್ನಡಿಗರ ಪರವಾಗಿ ಅಭಿನಂದನೆಗಳು

ನಾಡೋಜ ಡಾ. ಮಹೇಶ ಜೋಶಿ

ಕೆನಡಾ ದೇಶದ ಸಂಸತ್ತಿನ ಅಧಿವೇಶನದಲ್ಲಿ ಭಾಷಣವನ್ನು ಕನ್ನಡದಲ್ಲಿ ಸ್ವಚ್ಛಂದವಾಗಿ ಮಾತನಾಡುವ ಮೂಲಕ ಕನ್ನಡತನವನ್ನು ವಿಶ್ವಾದ್ಯಂತ ಸಾರಿರುವ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಶ್ರೀ ಚಂದ್ರ ಆರ್ಯ ಅವರು ದೂರದ ಆಂಗ್ಲಭಾಷೆಯ ನೆಲದಲ್ಲಿ, ಅದೂ ಸಂಸತ್ ಅಧಿವೇಶನದಲ್ಲಿ ಅತ್ಯಂತ ಹೆಮ್ಮೆಯಿಂದ ಕನ್ನಡವನ್ನು ಮಾತನಾಡಿದ್ದಾರೆ ಹಾಗೂ ಇದಕ್ಕಾಗಿ ಅವರು ಅಧಿವೇಶನದಲ್ಲಿ ಸಂತಸವನ್ನು ಸಹ ವ್ಯಕ್ತಪಡಿಸಿರುವುದನ್ನು ಕನ್ನಡಿಗರೆಲ್ಲರೂ ನೋಡಿ ಸಂತೋಷಪಟ್ಟು ಸಾಮಾಜಿಕ ಜಾಲತಾಣದಲ್ಲಿ, ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜಗತ್ತಿನಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಕ್ಕಾಗಿ, ಸಮಗ್ರ ಕನ್ನಡಿಗರ ಪರವಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಶ್ರೀ ಚಂದ್ರ ಆರ್ಯ ಅವರನ್ನು ಅಭಿನಂದಿಸಿ ಪತ್ರ ಬರೆದಿದ್ದಾರೆ.

ಜೊತೆಗೆ, “ಹಾವೇರಿಯಲ್ಲಿ ಮುಂದೆ ಜರುಗಲಿರುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ಮೂರು ದಿನಗಳ ಕಾಲ ಆಚರಿಸುವ ಈ ನುಡಿಜಾತ್ರೆಗೆ ಮೊದಲ ದಿನದಂದು ತಾವು ಕವಿಶೇಷ ಅತಿಥಿಗಳಾಗಿ ಆಗಮಿಸಿ ಸಮಾರಂಭದ ಘನತೆ, ಗೌರವವನ್ನು ಹೆಚ್ಚಿಸಬೇಕೆಂದು ತಮ್ಮನ್ನು ಕೋರುತ್ತೇನೆ. ಸಮ್ಮೇಳನದ ದಿನಾಂಕಗಳನ್ನು ನಿಗದಿಪಡಿಸಿದ ನಂತರ ತಮಗೆ ತಿಳಿಸಲಾಗುವುದು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೇ, ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸ್ಥಾಪಿಸಬೇಕೆಂಬ ಉದ್ದೇಶದಿಂದ 100 ಜನ ಕನ್ನಡಿಗರು ಸದಸ್ಯರಿರುವಲ್ಲಿ ಹೊರದೇಶ ಘಟಕಗಳನ್ನು ಸ್ಥಾಪಿಸಲು ನಿಯಮಗಳನ್ನು ಜಾರಿಗೆ ತಂದಿದ್ದು, ಕೆನಡಾ ದೇಶದಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಪರಿಷತ್ತಿನ ಘಟಕವನ್ನು ಸ್ಥಾಪಿಸಿ, ಕನ್ನಡದ ಕಾರ್ಯಚಟುವಟಿಕೆಗಳನ್ನು ನಡೆಸಲು ಉತ್ಸುಕರಾಗಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

21 May 2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)