ಸಾಹಿತ್ಯ ಸಮ್ಮೇಳನ-೬೭ : ಕನಕಪುರ
ಫೆಬ್ರವರಿ ೧೯೯೯

ಅಧ್ಯಕ್ಷತೆ: ಎಸ್.ಎಲ್. ಭೈರಪ್ಪ

bhyrappa

೬೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎಸ್.ಎಲ್. ಭೈರಪ್ಪ

ಗಳಗನಾಥರು ಮತ್ತು ಅನಕೃ ಅನಂತರ ಕನ್ನಡದಲ್ಲಿ ಕತೆ ಕಾದಂಬರಿ ಓದುವ ಸಾವಿರಾರು ಓದುಗರನ್ನು ಸೃಷ್ಟಿಸಿದವರೆಂದರೆ ಎಸ್.ಎಲ್. ಭೈರಪ್ಪನವರು. ಕಾದಂಬರಿಕಾರರೂ ಮೀಮಾಂಸಕರು ಆಗಿರುವ ಎಸ್.ಎಲ್. ಭೈರಪ್ಪನವರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಲಿಂಗಣ್ಣಯ್ಯ-ಗೌರಮ್ಮ ದಂಪತಿಗಳಿಗೆ ೨0-೮-೧೯೩೧ರಲ್ಲಿ ಜನಿಸಿದರು. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ೧೯೫೮ರಿಂದ ೧೯೬0ವರೆಗೆ ಕೆಲಸ ಮಾಡಿದರು. ೧೯೬0ರಿಂದ ೧೯೬೬ವರೆಗೆ ೬ ವರ್ಷಗಳ ಕಾಲ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದರು. ೧೯೬೭ರಿಂದ ೧೯೭೧ವರೆಗೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮೇಲೆ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾಗಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ೧೯೯೧ರಲ್ಲಿ ವೃತ್ತಿಯಿಂದ ನಿವೃತ್ತರಾದರು. ಭೈರಪ್ಪನವರ ಸಾಹಿತ್ಯ ಸಾಧನೆಗೆ ಅನೇಕ ಪ್ರಶಸ್ತಿ ಬಂದಿವೆ, ಸನ್ಮಾನಗಳು ಸಂದಿವೆ. ತಂತು ಕಾದಂಬರಿಗೆ ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ ಲಭಿಸಿದೆ.ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ವಂಶವೃಕ್ಷ, ಸಾಕ್ಷಿ, ದಾಟು ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ,

೧೯೯೪ರಲ್ಲಿ ಮಾಸ್ತಿ ಪ್ರಶಸ್ತಿ, ೧೯೮೫ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಇವರಿಗೆ ಲಭಿಸಿದೆ. ಕನಕಪುರದಲ್ಲಿ ೧೯೯೯ರಲ್ಲಿ ನಡೆದ ೬೭ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ. ಸರಸ್ವತೀ ಸಮ್ಮಾನ್ ಪ್ರಶಸ್ತಿಯನ್ನು ಕನ್ನಡದಲ್ಲಿ ಪಡೆದವರಲ್ಲಿ ಮೊದಲಿಗರು ಇವರು. ಬರೆದ ಕಾದಂಬರಿಗಳೆಲ್ಲಾ ಜನಪ್ರಿಯವಾಗಿ ಹತ್ತಾರು ಮರುಮುದ್ರಣಗಳಾಗಿವೆ. ಮರಾಠಿ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಿಗೆ ಅನುವಾದವಾಗಿವೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮೊದಲಾದವು ಚಲನಚಿತ್ರಗಳಾಗಿವೆ. ಇವರು ಕಾದಂಬರಿಗಳನ್ನಷ್ಟೆ ಅಲ್ಲದೆ ಸೌಂದರ್ಯಮೀಮಾಂಸೆಯ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಸತ್ಯ ಮತ್ತು ಸೌಂದರ್ಯ ಇವರು ರಚಿಸಿದ ಪಿ ಎಚ್ ಡಿ ಗ್ರಂಥವಾಗಿದೆ. ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು ಗ್ರಂಥಗಳು ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿವೆ. ನಾನೇಕೆ ಬರೆಯುತ್ತೇನೆ. ಭಿತ್ತಿ ಆತ್ಮವೃತ್ತಾದ ಗ್ರಂಥವಾಗಿವೆ. ಆವರಣ, ಕವಲು ಅವರ ಈಚಿನ ಕಾದಂಬರಿಗಳಾಗಿವೆ. ವಂಶವೃಕ್ಷ, ದಾಟು, ತಂತು, ಅಂಚು, ಪರ್ವ, ಗೃಹಭಂಗ, ಅನ್ವೇಷಣ, ಮಂದ್ರ, ಸಾರ್ಥ, ನಾಯಿನೆರಳು, ಧರ್ಮಶ್ರೀ, ದೂರಸರಿದರು ಮತದಾನ ಮುಂತಾದವು ಅವರು ಬರೆದ ಪ್ರಸಿದ್ಧ ಕಾದಂಬರಿಗಳಾಗಿವೆ.

ಕನ್ನಡ ಸಾಹಿತ್ಯ ಸಮ್ಮೇಳನ೬೭

ಅಧ್ಯಕ್ಷರು, ಎಸ್. ಎಲ್. ಭೈರಪ್ಪ

ದಿನಾಂಕ ೧೧, ೧೨, ೧೩, ೧೪ ಫೆಬ್ರವರಿ ೧೯೯೯

ಸ್ಥಳ : ಕನಕಪುರ

 

ಕಾರ್ಯಗತಗೊಳಿಸುವ ಶಕ್ತಿ ಇಲ್ಲ

ರ್ದೀರ್ಘ ಇತಿಹಾಸವುಳ್ಳ ಈ ಸಮ್ಮೇಳನಗಳ ಹಿಂದಿನ ಅಧ್ಯಕ್ಷರ ಹೆಸರುಗಳನ್ನು ನೋಡಿದಾಗ ಈ ಸ್ಥಾನದಲ್ಲಿ ಕೂರಲು ನನಗೆ ಸಂಕೋಚವಾಗುತ್ತದೆ. ಅವರೆಲ್ಲ ಕನ್ನಡ ನಾಡುನುಡಿಗಳನ್ನು ಕಟ್ಟಿ ಬೆಳೆಸಲು ಶ್ರಮಿಸಿದವರು. ಸದಾ ಆ ಬೆಳವಣಿಗೆಯ ಬಗೆಗೆ  ಚಿಂತಿಸಿದವರು. ಕನ್ನಡ ನುಡಿ ಮತ್ತು ನಾಡಿನ ಏಳ್ಗೆಗಾಗಿ ಪ್ರತಿಯೊಬ್ಬ ಸಮ್ಮೇಳನಾಧ್ಯಕ್ಷರೂ ತಮ್ಮ ಒಳನೋಟಗಳಿಂದ ಕೂಡಿದ ವಿಶ್ಲೇಷಣೆಗಳನ್ನು ಮುಂದಿಟ್ಟಿದ್ದಾರೆ. ಅವುಗಳಿಗಿಂತ ಹೆಚ್ಚು ಹೇಳುವ ತಿಳವಳಿಕೆ ನನಗಿಲ್ಲ. ಒಳನೋಟ, ವಿಶ್ಲೇಷಣೆ, ಚಿಂತನೆಗಳಿಗೆ ಕರ್ನಾಟಕದಲ್ಲಿ ಯಾವತ್ತೂ ಕೊರತೆ ಇಲ್ಲ. ಕೊರತೆ ಇರುವುದು ಅವುಗಳನ್ನು, ಕಾರ್ಯಗತಗೊಳಿಸಲು ಬೇಕಾದ ರಾಜಕೀಯ ಸಂಕಲ್ಪಶಕ್ತಿಯಲ್ಲಿ, ನಾಡು ನುಡಿಗಳ ಹಿತರಕ್ಷಣೆ ಮತ್ತು ಬೆಳವಣಿಗೆಗಳ ಬಗೆಗೆ ನೆರೆರಾಜ್ಯಗಳ ಜನರಿಗಿರುವಷ್ಟು ಸ್ಪಷ್ಟ ಪ್ರಜ್ಞೆ ಕನ್ನಡಿಗರಿಗಿಲ್ಲ ಎಂಬುದನ್ನು ವಿಷಾದದಿಂದ ಹೇಳಬೇಕಾಗಿದೆ.

 

ಸಾಹಿತ್ಯದ ಮೇಲಿನ ದಾಳಿ

ಇದು ಸಾಹಿತ್ಯ ಸಮ್ಮೇಳನ, ಸಾಹಿತಿಗಳ, ಸಹೃದಯಿಗಳ  ಹಾಗೂ ರಾಜ್ಯದ ಸಮ್ಮೇಳನ.  ಸಾಹಿತ್ಯದ ಮೂಲಗುಣದ ಬಗೆಗೆ ಸಾಹಿತಿಯೇ ವ್ಯಾಖ್ಯೆ ಮಾಡುವ ಅಗತ್ಯವಿಲ್ಲ. ಅವನ ಕೃತಿಗಳೇ ಅವನ ಸಾಹಿತ್ಯ ಕಲ್ಪನೆಯನ್ನು ಸೂಚಿಸುತ್ತವೆ. ಹಾಗೆ ನೋಡಿದರೆ ತನ್ನ ಸೃಜನಾತ್ಮಕ ಕೃತಿಗಳ ಹೊರಗೆ ಸಾಹಿತಿಯ ಸಾಹಿತ್ಯದ ವ್ಯಾಖ್ಯೆ ಮಾಡುವುದು ಇತ್ತೀಚಿನ ಪರಿಪಾಠ. ತನ್ನ ಕೃತಿ ಮತ್ತು ಸೃಷ್ಟಿಯ ಬಗೆಗೆ ಸಂಗೀತಗಾರ, ವಾಸ್ತುಶಿಲ್ಪಿ, ಚಿತ್ರಕಾರ, ನರ್ತಕ ಮೊದಲಾಗಿ ಯಾರೂ ಹೆಚ್ಚು ಮಾತನಾಡುವುದಿಲ್ಲ. ಸಾಹಿತ್ಯಿಕ ಕೃತಿಗಳನ್ನು ಕುರಿತು ಬರುತ್ತಿರುವಷ್ಟು ಲೇಖನಗಳು, ಪುಸ್ತಕಗಳು ಬೇರಾವ ಕಲಾ ಪ್ರಕಾರಗಳನ್ನು ಕುರಿತೂ ಬರುತ್ತಿಲ್ಲ. ಸಾಹಿತ್ಯದ ಮಾಧ್ಯಮವೇ ಮಾತಾದುದರಿಂದ ಸಾಹಿತ್ಯದ ಬಗೆಗೆ ಅತಿ ಪ್ರಮಾಣದಲ್ಲಿ ಮಾತು ನಡೆಯುತ್ತಿದೆ. ಒಂದು ಸಾಹಿತ್ಯ ಕೃತಿಯ ಮೇಲೆ ಮಾತನಾಡುವುದು ಸುಲಭ. ಏನಿಲ್ಲವೆಂದರೂ ಅದರ ಸನ್ನಿವೇಶವನ್ನೂ ಕಥೆಯನ್ನೋ ಭಾಷ್ಯವನ್ನೋ ಹೇಳಬಹುದು. ಅದರ ಒಳನೋಟಗಳು, ಒಪ್ಪಂದದ ದೃಷ್ಟಿ, ಪಾತ್ರಪಾತ್ರಗಳ ನಡುವೆ ಬರುವ ಚರ್ಚೆಗಳನ್ನು ಕುರಿತು ಬಂದಿರಬಹುದು. ಗಾಯಕನು ಒಂದು ರಾಗವನ್ನು ಹಾಡಿದರೆ, ವಾದಕನು ನುಡಿಸಿದರೆ, ಮಾತಿನಲ್ಲಿ ಏನೆಂದು ಹೇಳಬೇಕು? ಏನೆಂದು ಲಂಬಿಸಬೇಕು. ಅವನು ಸ್ವರಸ್ಥಾನಗಳನ್ನು ಮುಟ್ಟುವ ಕ್ರಮ, ದಾಟುಸ್ವರ ಚಾರುಸ್ವರಗಳನ್ನು ನಿರ್ವಹಿಸುವ ಕೌಶಲ ಮೊದಲಾಗಿ ಏನು ಹೇಳಿದರೂ  ಬರಡಾಗುತ್ತದೆ. ಇವನ್ನು ನಾಲ್ಕು ವಾಕ್ಯಗಳಿಗಿಂತ ಹೆಚ್ಚು ಹೇಳಲೂ ಸಾಧ್ಯವಿಲ್ಲ. ಸಂಗೀತವು ಭಾಷೆಯ ಹಿಡಿತಕ್ಕೆ ಸಿಕ್ಕದ, ಭಾಷೆಯ ಸ್ವರವನ್ನು ಮೀರಿದ ಕಲೆ.  ನರ್ತನ, ಚಿತ್ರ, ವಾಸ್ತು, ಶಿಲ್ಪ ಮೊದಲಾದುವೆಲ್ಲಾ ನೋಡಿ ಆನಂದಿಸಬೇಕು. ವಿಮರ್ಶೆಯು ಸಹಾಯ ಮಾಡುತ್ತದಾದರೂ ತುಸು ಹೆಚ್ಚಾದರೂ ಬೇಸರವನ್ನುಂಟು ಮಾಡುತ್ತದೆ. ಸಾಹಿತ್ಯ ವಿಮರ್ಶೆಗೂ ಈ ಮಾತು ಅನ್ವಯವಾದರೂ ಇಲ್ಲಿ ಅತಿಮಾತಿಗೆ ಅವಕಾಶವಿದೆ. ಇತರ ಕಲೆಗಳಲ್ಲಿ ಇಲ್ಲ. ಅಲ್ಲಿ ಎಷ್ಟೋ ಕಲಾವಿದರಿಗೆ ಮಾತುಗಾರಿಕೆ ಇಲ್ಲವೇ ಇಲ್ಲ. ಸಭೆಯಲ್ಲಿ ನಿಲ್ಲಿಸಿ ಮಾತನಾಡೆಂದರೆ ಎಷ್ಟೋ ಸಂಗೀತಗಾರರು ತೊದಲುತ್ತಾರೆ. ಆದರೆ ಭಾಷಣ ಮಾಡಲು ಬಾರದ ಸಾಹಿತಿ ಸಾಹಿತಿಯೇ ಅಲ್ಲ ಎಂದು ನಿರ್ಣಯಿಸುವ ಮಟ್ಟಿಗೆ ಸಾಹಿತ್ಯದ ಮೇಲೆ ಮಾತಿನ ದಾಳಿ ನಡೆದಿದೆ.

Tag: Kannada Sahitya Sammelana 67, S.L. Bhyrappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)