ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ರಲ್ಲಿ ಜಾರಿಯಲ್ಲಿ ಪ್ರಾಧಿಕಾರದ, ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳನ್ನು ಕೈಬಿಟ್ಟಿರುವುದು ಖಂಡಿಸಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಿಂದ ಮುಖ್ಯಮಂತ್ರಿ ಅವರಿಗೆ ಪತ್ರ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ರಲ್ಲಿ ಜಾರಿಯಲ್ಲಿ ಪ್ರಾಧಿಕಾರದ, ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳನ್ನು ಕೈಬಿಟ್ಟಿರುವುದು ಖಂಡಿಸಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಿಂದ ಮುಖ್ಯಮಂತ್ರಿ ಅವರಿಗೆ ಪತ್ರ

ಬೆಂಗಳೂರು: “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ರ ಜಾರಿಯಲ್ಲಿ ಪ್ರಾಧಿಕಾರದ, ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳನ್ನು ಕೈಬಿಟ್ಟಿರುವುದು ಸರಿಯಲ್ಲ, ಈ ವಿಧೇಯಕದಲ್ಲಿ ಈ ಎಲ್ಲರನ್ನು ಪುನಃ ಸೇರ್ಪಡೆಗೊಳಿಸುವಂತೆ ಸಮಸ್ತ ಕನ್ನಡಿಗರು ಆಗ್ರಹಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದು ತಿಳಿಸಿದ್ದಾರೆ

ಬೆಹರೇನ್‌ ಕನ್ನಡ ಸಂಘದವರು ನಿರ್ಮಿಸಿರುವ ವಿದೇಶದ ಪ್ರಪ್ರಥಮ ಕನ್ನಡ ಭವನವನ್ನು ಲೋಕಾರ್ಪಣೆಯಲ್ಲಿ ಭಾಗವಹಿಸಿ ಕರ್ನಾಟಕಕ್ಕೆ ಮರಳಿರುವ ನಾಡೋಜ ಡಾ. ಮಹೇಶ ಜೋಶಿ ಅವರು, ಕನ್ನಡಿಗರ ಧ್ವನಿಯಾಗಿ ರಾಜ್ಯ ಸರಕಾರಕ್ಕೆ ವಿಧೇಯಕದ ರಾಜ್ಯಮಟ್ಟದ ಸಮಿತಿಯಲ್ಲಿ ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳನ್ನು ಸೇರಿಸಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಜೊತೆಗೆ ದಿನಾಂಕ ೧೨-೧೦-೨೦೨೨ರಂದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಕುರಿತಂತೆ “ಚಿಂತನಾ ಗೋಷ್ಠಿ”ಯನ್ನು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದು, ಸಾಹಿತ್ಯ, ಶಿಕ್ಷಣ, ಉದ್ಯೋಗ, ಕೈಗಾರಿಕಾ, ನ್ಯಾಯಾಂಗ ಸೇರಿದಂತೆ ಪ್ರಮುಖ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಕೈಗೊಂಡ ಮಹತ್ವಪೂರ್ಣ ನಿರ್ಣಯಗಳನ್ನು ಸರ್ಕಾರಕ್ಕೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?

ನ್ಯಾಯಮೂರ್ತಿ ಶ್ರೀ ಎಸ್.ಆರ್. ಬನ್ನೂರಮಠ ಅವರ ನೇತೃತ್ವದ ಕರ್ನಾಟಕ ಕಾನೂನು ಆಯೋಗವು ತನ್ನ ಐವತ್ತೇಳನೇ ವರದಿಯಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಅನ್ನು ಸರ್ಕಾರಕ್ಕೆ ಸಲ್ಲಿಸಿ, ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸುವುದಕ್ಕಾಗಿ ಉಪಬಂಧ ಕಲ್ಪಿಸುವ ಒಂದು ವಿಧೇಯಕ ಎಂದು ಸ್ಪಷ್ಟವಾಗಿ ನಮೂದಿಸಿದೆ. ಕರ್ನಾಟಕ ಕಾನೂನು ಆಯೋಗವು ಸರ್ಕಾರಕ್ಕೆ ಸಲ್ಲಿಸಿದ್ದ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ರ ಕಲಂ-೭ರಲ್ಲಿ ‘ಅಧಿಕೃತ ಭಾಷೆಯ ಅನುಷ್ಠಾನಕ್ಕಾಗಿ ಕಾರ್ಯವ್ಯವಸ್ಥೆ’ ಶೀರ್ಷಿಕೆಯಡಿಯಲ್ಲಿ ಒಂದು ರಾಜ್ಯಮಟ್ಟದ ಸಮಿತಿ ಇರತಕ್ಕದ್ದು ಎಂದು ಉಲ್ಲೇಖಿಸಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ‘ರಾಜ್ಯಮಟ್ಟದ ಸಮಿತಿಯ ಸದಸ್ಯರ’ನ್ನಾಗಿಯೂ ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರುಗಳನ್ನು ‘ಜಿಲ್ಲಾ ಮಟ್ಟದ ಸದಸ್ಯರು’ಗಳನ್ನಾಗಿಯೂ ಸೇರ್ಪಡಿಸಿ, ವಿಧೇಯಕ ಜಾರಿಗೆ ತರಲು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಿತ್ತು.

ದಿನಾಂಕ ೨೨-೦೯-೨೦೨೨ರಂದು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್ ಅವರು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ವಿಧಾನಸಭೆಯ ಅಧಿವೇಶನದಲ್ಲಿ ಮಂಡಿಸಿದಾಗ, ಮಂಡಿಸಿದ ಈ ವಿಧೇಯಕದ ಕಲಂ-೭ರಲ್ಲಿ ತಿಳಿಸಿದಂತೆ ಪ್ರಸ್ತಾಪಿತ ವಿಧೇಯಕದಲ್ಲಿ ಇದ್ದ, ರಾಜ್ಯಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರುಗಳನ್ನು ಜಾರಿ ಪ್ರಾಧಿಕಾರದಿಂದ ಕೈಬಿಡಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಈ ಕ್ರಮದಿಂದಾಗಿ, ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಹಾಗೂ ಎಲ್ಲ ಕನ್ನಡ ಸಂಘ-ಸಂಸ್ಥೆಗಳ ಮಾತೃ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಾಗೂ ಸಮಸ್ತ ಕನ್ನಡಿಗರಿಗೆ ಮಾಡಿರುವ ಘೋರ ಅನ್ಯಾಯವಾಗಿದೆ ಮತ್ತು ಅಕ್ಷಮ್ಯ ಅಪರಾಧವಾಗಿದೆ. ಇದು ಕನ್ನಡ ವಿರೋಧಿಗಳ ಕುತಂತ್ರ ಹಾಗೂ ಕನ್ನಡಿಗರನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾತ್ರವಲ್ಲ, ಎಲ್ಲ ಕನ್ನಡಿಗರಿಗೆ ತೋರುತ್ತಿರುವ ಅಸಡ್ಡೆ, ಅಸಹನೆ, ತಾತ್ಸರ ಹಾಗೂ ಬೇಜಾವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಈ ವಿಧೇಯಕದಿಂದ ಕೈಬಿಡುವ ಮೂಲಕ ಸರ್ಕಾರವು ಕನ್ನಡ ವಿರೋಧಿ ಧೋರಣೆ ತೋರುತ್ತಿದೆ ಎಂದು ಸಮಗ್ರ ಕನ್ನಡಿಗರು ಅದರಲ್ಲೂ, ಸಾಹಿತಿಗಳು, ಸಂಘಟಕರು, ಕನ್ನಡಪರ ಹೋರಾಟಗಾರರು ಖಂಡಿಸುತ್ತಿದ್ದಾರೆ. ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ತಮ್ಮ ತವರು ಜಿಲ್ಲೆಯಾದ ಹಾವೇರಿಯಲ್ಲಿ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು, ಸಮ್ಮೇಳನದ ಸಂದರ್ಭದಲ್ಲಿ ಈ ವಿಚಾರವನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ, ಘೋಷಣೆ ಮುಂತಾದ ಅಹಿತಕರ ಘಟನೆಗಳು ನಡೆಯುವ ಎಲ್ಲ ಸಾಧ್ಯತೆಗಳು ಹೆಚ್ಚಾಗುವಂತೆ ಕಾಣುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರ ಮಂಡಿಸಿದ ಈ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ರಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರನ್ನು ಕೈ ಬಿಟ್ಟಿರುವ ಈ ವಿಚಾರ ಈಗ ಕಾಳ್ಗಿಚ್ಚಿನಂತೆ ಎಲ್ಲ ಕಡೆ ಹಬ್ಬುತ್ತಿದೆ, ಜೊತೆಗೆ ನಾಡಿನಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು, ಇದು ಕೈ ಮೀರುವುದರ ಜೊತೆಗೆ ಸಾಹಿತ್ಯ ಸಮ್ಮೇಳನದ ಮೇಲೆ ಕರಿಛಾಯೆ ಮೂಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ತಾವು ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರನ್ನು ಕೈಬಿಟ್ಟಿರುವ ಅಧಿಕಾರಿಗಳನ್ನು ಗುರುತಿಸಿ, ಅವರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಪರಿಷತ್ತಿಗೆ ಹಾಗೂ ಕನ್ನಡಿಗರಿಗೆ ಆಗಿರುವಂತಹ ಅನ್ಯಾಯವನ್ನು ಸರಿಪಡಿಸಿಕೊಡಬೇಕೆಂಬುದು ಕನ್ನಡಿಗರೆಲ್ಲರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲ್ಲೂಕು, ಹೋಬಳಿ, ಗಡಿರಾಜ್ಯ, ಹೊರರಾಜ್ಯ ಅಧ್ಯಕ್ಷರುಗಳ, ಕಾರ್ಯಕಾರಿ ಸಮಿತಿಗಳ ಒಕ್ಕೊರಲ ಧ್ವನಿಯಾಗಿದೆ. ಕಲಂ-೭ರಲ್ಲಿ ರಾಜ್ಯಮಟ್ಟದ ಸಮಿತಿಯನ್ನು ಪರಿಷ್ಕೃತಗೊಳಿಸಲಾಗಿದ್ದು, ಈ ಸಮಿತಿಯಲ್ಲಿರುವ ಎಲ್ಲರೂ ಸರ್ಕಾರದ ಅಧಿಕಾರಿಗಳೇ ಇದ್ದು, ಸ್ವತಂತ್ರವಾಗಿರುವ, ಸ್ವಾಯತ್ತತೆಯಿಂದ ಸರ್ಕಾರಕ್ಕೆ ಎಚ್ಚರದ ಗಂಟೆ ಕೊಡುವ ಯಾವುದೇ ಸಂಸ್ಥೆ ಇರುವುದಿಲ್ಲ ಎಂಬುದನ್ನು ವಿಷಾದದಿಂದ ನಾಡೋಜ ಡಾ. ಮಹೇಶ ಜೋಶಿ ಪತ್ರದ ಮೂಲಕ ತಿಳಿಸಿದ್ದಾರೆ.

His Masters Voice (HMV) ಅಂದರೆ, ಸರ್ಕಾರದ ಧ್ವನಿಯಾಗುವುದೇ ಹೊರತು, ಕನ್ನಡದ ಧ್ವನಿಯಾಗುವುದಿಲ್ಲ. ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಸಮಿತಿಯ ಉಪಾಧ್ಯಕ್ಷರನ್ನಾಗಿಸಿ, ಸಚಿವ ಸ್ಥಾನಮಾನ ಹೊಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಸಮಿತಿಗೆ ಕೇವಲ ಸದಸ್ಯರನ್ನಾಗಿಸಿರುವುದು ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ ಹಾಗೂ ಅಧಿಕಾರಶಾಹಿ ಧೋರಣೆಯಿಂದ ಸರ್ಕಾರವನ್ನು ಶರಣಾಗತಿ ಮಾಡುವಂತೆ ಕಂಡುಬರುತ್ತಿರುವುದು, ಕನ್ನಡವನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ಅಧಿಕಾರಿಗಳು ಸರ್ಕಾರವನ್ನು ತಪ್ಪು ದಾರಿಗೆ ಎಳೆದು ತರುವ ಕುತಂತ್ರವಾಗಿದೆ. ಅದರಲ್ಲೂ ಕನ್ನಡಪರ ಕೆಲಸವನ್ನು ಮಾಡಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳೇ ಕನ್ನಡವನ್ನು ಅಧಿಕಾರಶಾಹಿಗಳ ನಿಯಂತ್ರಣದಲ್ಲಿಡುವಂತೆ ಈ ವಿಧೇಯಕವನ್ನು ರೂಪಿಸಿ, ಸರ್ಕಾರವನ್ನು ಬಲಹೀನವನ್ನಾಗಿಸಿರುವುದು ಅತ್ಯಂತ ಖೇದಕರ ಎಂಬ ಮಾತುಗಳು ಮಾಧ್ಯಮಗಳಲ್ಲಿ, ಸಾರ್ವಜನಿಕರಲ್ಲಿ ಎದ್ದು ಕಾಣುತ್ತಿದ್ದು, ಈ ಬಗ್ಗೆ ಚರ್ಚೆಯೂ ಪ್ರಾರಂಭವಾಗಿದೆ. ಜೊತೆಗೆ ಕನ್ನಡ ಅನುಷ್ಠಾನದ ಈ ಮಹತ್ವದ ವಿಧೇಯಕದಿಂದ ಕನ್ನಡದ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಹೊರಗಿಟ್ಟಿರುವುದು ಚಳವಳಿಯ ರೂಪದಲ್ಲೂ ಸಹ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಪರಿಸ್ಥಿತಿ ಕೈ ಮೀರಿ ಹೋಗುವುದಕ್ಕಿಂತ ಮುಂಚೆ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕು. ಸರ್ಕಾರದ ಜೊತೆ ಸೌಹಾರ್ದಯುತ ಸಂಬಂಧವನ್ನು ಹೊಂದಬೇಕೆಂಬ ಉದ್ದೇಶದಿಂದ ಹಾಗೂ ಮುಂದೆ ಆಗುವ ಅನಾಹುತಕ್ಕೆ ಪರಿಷತ್ತು ಹೊಣೆಯಾಗದಿರುವುದರಿಂದ ಈ ಬಗ್ಗೆ ತಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯ ಅಭಿವೃದ್ಧಿ ಕುರಿತು ಆಳವಾಗಿ ಅಧ್ಯಯನ ನಡೆಸಿ, ಚರ್ಚಿಸಿ, ಸಿದ್ಧಪಡಿಸಲಾದ ಈ ವಿಧೇಯಕವನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಇದೆ. ವಿಧೇಯಕ ತಯಾರಿಸಿದ್ದು ಆಗಲೇಬೇಕಾದ ಮತ್ತು ಶ್ರೇಷ್ಠ ಕಾರ್ಯವಾಗಿದೆ. ಆದ್ದರಿಂದ ಮಂಡನೆಯಾಗಿರುವ ಈ ವಿಧೇಯಕವು ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಜರುಗಲಿರುವ ಅಧಿವೇಶನದಲ್ಲಿ ಚರ್ಚೆಯಾಗುವುದು ಎಂದು ಮಾಧ್ಯಮಗಳ ಮೂಲಕ ವರದಿಯಾಗಿದ್ದು, ಕನ್ನಡದ ಕೆಲಸವಾಗಿರುವ ಈ ವಿಧೇಯಕ ಜಾರಿಗೊಳಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುವುದರಿಂದ, ವಿಧೇಯಕದಲ್ಲಿರುವ ತಪ್ಪುಗಳನ್ನು ಸರಿಪಡಿಸಿ, ಹೇಗೆ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದಿರೋ, ಹಾಗೆ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸುವುದರ ಜತೆಗೆ ಅನ್ಯ ಭಾಷೆಗಳ ದಬ್ಬಾಳಿಕೆಗೆ ಅಂಕುಶ ಹಾಕಲು ಜಾರಿಗೆ ತರಲಾಗುತ್ತಿರುವ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಅನ್ನು ಕಾನೂನಾಗಿ ಜಾರಿಗೊಳಿಸಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ದಿನಾಂಕ ೨೬-೮-೨೦೨೨ರಂದು ನಡೆದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ತಾವೇ ಖುದ್ದು ಈ ವಿಧೇಯಕದ ವಿಷಯ ಪ್ರಸ್ತಾಪಿಸಿ, ಕನ್ನಡಪರವಾದ ಈ ಕಾನೂನು ಜಾರಿಗೆ ಕುರಿತಂತೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚರ್ಚೆಮಾಡಬೇಕು, ಇದರ ಜವಾಬ್ದಾರಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ವಹಿಸಿಕೊಳ್ಳಬೇಕು ಎಂದು ತಿಳಿಸಿದ್ದಿರಿ. ಈ ಹಿನ್ನೆಲೆಯಲ್ಲಿ ದಿನಾಂಕ ೧೨-೧೦-೨೦೨೨ರಂದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಕುರಿತಂತೆ “ಚಿಂತನಾ ಗೋಷ್ಠಿ”ಯನ್ನು ಪರಿಷತ್ತು ಏರ್ಪಡಿಸಿದ್ದು, ಸಾಹಿತ್ಯ, ಶಿಕ್ಷಣ, ಉದ್ಯೋಗ, ಕೈಗಾರಿಕಾ, ನ್ಯಾಯಾಂಗ ಸೇರಿದಂತೆ ಪ್ರಮುಖ ಕ್ಷೇತ್ರಗಳ ಪರಿಣತರನ್ನು ಈ ಗೋಷ್ಠಿಗೆ ಆಹ್ವಾನ ಮಾಡಿದ್ದೇವೆ. ಅಂದು ಸಭೆಯಲ್ಲಿ ಚರ್ಚೆಯಾದ ನಂತರ, ಕೈಗೊಂಡ ಮಹತ್ವದ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪತ್ರದಲ್ಲಿ ಬರೆದಿದ್ದಾರೆ.

ಛಾಯಾಚಿತ್ರ: ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ರ ಆಗಿರುವ ದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರದ ಪ್ರತಿ.

ಕನ್ನಡ ಭಾಷಾ ವಿಧೇಯಕ ಕಸಾಪ ಪತ್ರ

Kasapa-ವಿಧೇಯಕದಲ್ಲಿ ಕಸಾಪ ಪದಾದಿಕಾರಿಗಳ ಕೈಬಿಟ್ಟ ಕುರಿತು ಸಿಎಮ್_ ಪತ್ರ-26-09-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)