ಕನ್ನಡದ ಜ್ಞಾನಸೀಮೆಯನ್ನು ವಿಸ್ತರಿಸಿದ ವರಕವಿ ಬೇಂದ್ರೆ: ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು.  ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು.  ರಸವೆ ಜನನ ವಿರಸ ಮರಣ ಸಮರಸವೇ ಜೀವನ ಎಂದು ಬದುಕನ್ನು ಎದೆಗಪ್ಪಿಕೊಂಡು ಅರಳಿದ ಕಾವ್ಯಚೇತನ ಅವರದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವರ್ಣಿಸಿದರು . ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದು ವರಕವಿ ದ.ರಾ.ಬೇಂದ್ರೆಯವರ 129ನೆಯ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗುತ್ತ ಹೋಗುವ ಪವಾಡಸದೃಶ ಶಕ್ತಿ ಎಂದು ವಿಶ್ಲೇಷಿಸಿದ ನಾಡೋಜ ಡಾ.ಮಹೇಶ ಜೋಶಿಯವರು ಬದುಕೇ ಕಾವ್ಯವಾಗುವ ಸಹಜ ಕವಿ ಹೃದಯವನ್ನು ಇಂಥ ಕಡೆ ಗುರುತಿಸಬಹುದು.  ಬದುಕಿಗೆ ತೀವ್ರವಾಗಿ ಸ್ಪಂದಿಸುವ ಕವಿಚೇತನವಾದದ್ದರಿಂದಲೇ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಪಾತರಗಿತ್ತಿ ಪಕ್ಕಗಳ ವೈಭವಗಳು ನವಿಲು ಗರಿಗೆದರಿದಂತೆ ಮೈತೆರೆಯುತ್ತಾ ಹೋಗುತ್ತದೆ.  ಶ್ರಾವಣವಾಗಲಿ, ಧಾರವಾಡದ ಚೆಲುವಾಗಲಿ ಬದುಕಿನ ಕಾವ್ಯ ಅಥವಾ ಸುಂದರ ಮುಖವಾಗಲೀ ಈ ಪ್ರತಿಭೆಗೆ ಸದಾ ಆಹ್ವಾನವಾಗಿರುತ್ತದೆ ಎಂದರು.ಬೇಂದ್ರೆಯವರ ಒಡನಾಟ ತಮಗೆ ಬಾಲ್ಯದಲ್ಲಿ ದೊರಕಿದ ಪ್ರಸಂಗಗಳನ್ನು ನೆನಪು ಮಾಡಿಕೊಂಡ ಅವರು ಅದು ತಮ್ಮ ಬದುಕನ್ನು ಶ್ರೀಮಂತಗೊಳಿಸಿತು ಎಂದರು. ಬೇಂದ್ರೆಯವರಿಗೆ ಜ್ಞಾನಪೀಠ ಬಂದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಏರ್ಪಡಿಸಿದ್ದ ಸನ್ಮಾನ ಸಮಾರಂಭಕ್ಕೆ ಅವರನ್ನು ಕರೆದು ಕೊಂಡು ಹೋಗುವ ಅವಕಾಶ ಸಿಕ್ಕ ಬದುಕಿನ ಅಮೂಲ್ಯ ಘಳಿಗೆಯನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿ ಅಂದಿನ ಬೇಂದ್ರೆಯವರ ಮಾತುಗಳು ಎಲ್ಲರನ್ನೂ ಭಾವುಕವಾಗಿಸಿದ್ದವು. ಅವುಗಳು ಇನ್ನೂ ತಮ್ಮ ನೆನಪಿನ ಭಾವಕೋಶದಲ್ಲಿ ಜೀವಂತವಾಗಿದೆ ಎಂದರು. ಕುವೆಂಪು ಮತ್ತು ಬೇಂದ್ರೆ ಇಬ್ಬರ ಕಾವ್ಯದಲ್ಲಿಯೂ ಇರುವ ಅಧ್ಯಾತ್ಮಿಕ ಹಿನ್ನೆಲೆಯ ಮಹತ್ವವನ್ನು ಹೇಳಿದ ಅವರು ಇಬ್ಬರೂ ಕನ್ನಡ ಕಾವ್ಯದ ಎರಡು ಕಣ್ಣುಗಳಿದ್ದ ಹಾಗೆ ಎಂದು ವರ್ಣಿಸಿದರು.

ಭಾಷಣ ಹಾಗೂ ಕಾವ್ಯವಾಚನದಲ್ಲಂತೂ ಬೇಂದ್ರೆಯವರದು ಅಸದೃಶವಾದ ಸೃಜನಶೀಲ ಪ್ರತಿಭೆ.  ನಾವು ಓದುವ ಕವಿತೆಯಷ್ಟೇ ಅಲ್ಲದೆ ಕವಿಗೋಷ್ಠಿಯಲ್ಲಿ ಭಾಗವಹಿಸುವ ಎಲ್ಲರೂ ಕವಿತೆಯನ್ನು ಸಹೃದಯನ ಹೃದಯಕ್ಕೆ ಮುಟ್ಟಿಸಬೇಕೆಂಬುದು ಅವರ ಸದಾಗ್ರಹ.  ವಾಸ್ತವವಾಗಿ ಬೇಂದ್ರೆಯವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಪ್ರಭಾವ ಬೀರಿದ್ದೆ ಅವರ ಕಾವ್ಯದ ವಾಚನದ ಮೂಲಕ ಎನ್ನಬಹುದು ಎಂದು ಹೇಳಿದ 87ನೆಯ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪನವರು 1929ರ ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಹಕ್ಕಿ ಹಾರುತಿದೆ ನೋಡಿದಿರಾ ಕವನವನ್ನು ಓದಿದಾಗ ವಾರಿ ರುಮಾಲು ಸುತ್ತಿದ್ದ ಬೇಂದ್ರೆಯವರ ಗಾರುಡಿಗ ವ್ಯಕ್ತಿತ್ವ ಮಾಸ್ತಿಯಂಥವರನ್ನೂ ಬೆರಗುಗೊಳಿಸಿತು ಎಂದು ಹೇಳಿ, ಕಾರವಾರ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರ ಜೊತೆಗೆ ದಕ್ಕಿದ ನಿಕಟ ಒಡನಾಟದ ಘಟನೆಯನ್ನೂ, ತಮ್ಮ ‘ವಿಭೂತಿ’ ಕೃತಿಗೆ ಅವರು ಲೇಖನ ನೀಡಿದ ಸಂದರ್ಭವನ್ನೂ ನೆನಪು ಮಾಡಿಕೊಂಡು ತರೀಕರೆಯಲ್ಲಿ ತಾವು ಅಯೋಜಿಸಿದ್ದ ಪ್ರಥಮ ಜನಪದ ಸಮ್ಮೇಳನಕ್ಕೆ ಅವರು ಸರ್ವಾಧ್ಯಕ್ಷರಾಗಿದ್ದರು ಎಂದು ತಮ್ಮ ಅನುಭವಗಳನ್ನು ಹಂಚಿ ಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಂಸದೀಯ ವ್ಯವಹಾರ ಇಲಾಖೆಯ ವಿಶ್ರಾಂತ ಕಾರ್ಯದರ್ಶಿ ಜಿ.ದಕ್ಷಿಣಾ ಮೂರ್ತಿ, ನಿವೃತ್ತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಿ.ಶಿವಲಿಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ಕೋಶಾದ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಹಾವೇರಿ ಜಿಲ್ಲಾಧ್ಯಕ್ಷರಾದ ಲಿಂಗಯ್ಯ. ಬಿ.ಹಿರೇಮಠ, ಬಳ್ಳಾರಿ ಜಿಲ್ಲಾಧ್ಯಕ್ಷರಾದ ನಿಷ್ಠಿ ರುದ್ರಪ್ಪ, ಡಾ.ಎಚ್.ಎಸ್.ಮುದ್ದೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ (ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು)

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)