ಜಿ. ಮಾದೇಗೌಡರಿಗೆ ಗಾಂಧೀ ಪುದುವಟ್ಟು ಗೌರವ

ಜಿ. ಮಾದೇಗೌಡರು

ಜಿ. ಮಾದೇಗೌಡರಿಗೆ ಗಾಂಧೀ ಪುದುವಟ್ಟು ಗೌರವ

img_9191

ಶ್ರೀ ಮಾದೆಗೌಡರಿಗೆ ನಿವೃತ್ತ ನ್ಯಾಯಮೂರ್ತಿ ಜೆ. ಸದಾಶಿವ ಅವರ
ನೇತೃತ್ವದಲ್ಲಿ  ಪರಿಷತ್ತು ಗಾಂಧೀ ಪುದುವಟ್ಟು ಗೌರವ ಸಲ್ಲಿಸಿದ ಕ್ಷಣ

ಮಾಜಿ ಸಂಸದ ಹಾಗೂ ಮಹಾನ್ ಹೋರಾಟಗಾರರಾದ ಶ್ರೀ. ಜಿ. ಮಾದೇಗೌಡ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಎ. ಆರ್. ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧೀ ಪುದುವಟ್ಟು ಗೌರವ ಸಂದಿದೆ.  ಸಾಹಿತ್ಯ, ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರತೀ ವರ್ಷ  ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.  ನವೆಂಬರ್ ೨೧, ೨೦೧೬ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯಾಯಮೂರ್ತಿ ಜೆ. ಸದಾಶಿವ ಅವರು ಮಾದೇಗೌಡರಿಗೆ ಈ ಗೌರವವನ್ನು ಅರ್ಪಿಸಿದರು. ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಪುದುವಟ್ಟಿನ ಸ್ಥಾಪಕರಾದ ಹಿರಿಯ ಗಾಂಧೀವಾದಿ ಶ್ರೀ. ಎ. ಆರ್. ನಾರಾಯಣ ಘಟ್ಟ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀ ಎ.ಆರ್. ನಾರಾಯಣ ಘಟ್ಟ-ಸರೋಜಮ್ಮ ಗಾಂಧೀ ಪುದುವಟ್ಟು

ಶ್ರೀ ನಾರಾಯಣ ಘಟ್ಟ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಗಾಂಧೀ ಪುದುವಟ್ಟಿನ ಸ್ಥಾಪಕರು. ಶ್ರೀಯುತರು  ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು.

ಶ್ರೀ ನಾರಾಯಣ ಘಟ್ಟ ಅವರ ಬದುಕಿನ ಪ್ರಮುಖ ಘಟ್ಟಗಳೆಂದರೆ, ಕರ್ನಾಟಕ ಪಠ್ಯಪುಸ್ತಕ ಇಲಾಖೆಯಲ್ಲಿ ಪಠ್ಯ ಪುಸ್ತಕ ರಚನೆ ಮತ್ತು ಪರಿಷ್ಕರಣಾ ಕಾಯಕ, ಬೆಂಗಳೂರು ಆಕಾಶವಾಣಿಯಲ್ಲಿ ಕನ್ನಡ ಭಾಷೆ ಮತ್ತು ಇತಿಹಾಸದ ಬಗ್ಗೆ ೫೦ಕ್ಕೂ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳ ಪ್ರಸಾರ, ಸ್ವಾತಂತ್ರ್ಯ ಸುವರ್ಣ ವರ್ಷದಲ್ಲಿ ‘ಕೆಚ್ಚೆದೆಯ ಕಲಿಗಳು’ ಎಂಬ ೧೪ ಕಂತುಗಳ ರೂಪಕ ಪ್ರಸಾರ, ಬೆಂಗಳೂರು ದೂರದರ್ಶನದಲ್ಲಿ ‘ಚಲೇಜಾವ್ ರಾಷ್ಟ್ರೀಯ ನಾಟಕ’ ಎರಡು ಕಂತುಗಳಲ್ಲಿ ಪ್ರಸಾರ, ‘ಗೀತಾ ಕುಟೀರ’ ಪ್ರಕಾಶನದ ಮೂಲಕ ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ನಾಟಕ, ವಿಚಾರ – ಇತ್ಯಾದಿ ಹಲವು ಪ್ರಕಾರಗಳಲ್ಲಿ ೫೬ ಕೃತಿಗಳ ಪ್ರಕಟಣೆ ಮುಂತಾದವು. ‘ಬಹುಜನ ಕನ್ನಡಿಗರು’ ಕನ್ನಡ ಪಾಕ್ಷಿಕದಲ್ಲಿ ‘ವಿಚಾರ ವಿಹಾರ’ ಎಂಬ ಅಂಕಣದಲ್ಲಿ ಅವರ ಹಲವಾರು ಲೇಖನಗಳು ಪ್ರಕಟಗೊಂಡಿವೆ. ಈ ಹಿರಿಯ ವಯಸ್ಸಿನಲ್ಲಿಯೂ ಬಹಳ ಹುಮ್ಮಸ್ಸಿನಿಂದಲೇ ಸಾಹಿತ್ಯಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಶ್ರೀ ಘಟ್ಟ ಅವರು ತಲ್ಲೀನರಾಗಿರುವುದು ಅವರ ಮನಸ್ಸಿನ ಆರೋಗ್ಯವನ್ನು ಸೂಚಿಸುತ್ತದೆ.

ಚಿತ್ರದುರ್ಗದಲ್ಲಿ ನಡೆದ ೭೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ನಾರಾಯಣ ಘಟ್ಟ ಅವರನ್ನು ಸನ್ಮಾನಿಸಲಾಗಿದೆ. ಶ್ರೀ ಎ.ಆರ್. ನಾರಾಯಣ ಘಟ್ಟ ಮತ್ತು ಅವರ ಧರ್ಮಪತ್ನಿ ಸರೋಜಮ್ಮ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇರಿಸಿರುವ ೨ ಲಕ್ಷ ರೂಪಾಯಿಗಳ ಪುದುವಟ್ಟಿನಿಂದ ಬರುವ ಆದಾಯದಲ್ಲಿ ಪ್ರತಿವರ್ಷ ನಾಡಿನ ಹಿರಿಯ ಗಾಂಧೀವಾದಿಗಳೊಬ್ಬರಿಗೆ ನಗದು ರೂ. ೧೦ ಸಾವಿರ ಒಳಗೊಂಡಂತೆ ಪ್ರಶಸ್ತಿ ಪತ್ರ, ಫಲಕ ಹಾಗೂ ಫಲತಾಂಬೂಲಗಳನ್ನು ನೀಡಿ ಸನ್ಮಾನಿಸಲಾಗುತ್ತಿದೆ. ಶ್ರೀ ನಾರಾಯಣ ಘಟ್ಟ ದಂಪತಿಗಳ ಈ ಮೆಚ್ಚುಗೆ ಕಾರ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸಂತಸ ವ್ಯಕ್ತಪಡಿಸಿ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತದೆ. 

ಶ್ರೀ ಜಿ. ಮಾದೇಗೌಡ

ಕನ್ನಡದ ನೆಲ, ಜಲ, ರೈತ ಹಿತರಕ್ಷಣೆಯ ವಿಚಾರ ಬಂದಾಗಲೆಲ್ಲಾ ಜನಮಾನಸದಲ್ಲಿ ಮೂಡಿಬರುವ ನಾಯಕರುಗಳಲ್ಲಿ ಜಿ. ಮಾದೇಗೌಡರು ಪ್ರಮುಖರು. ‘ಮಂಡ್ಯದ ಗಾಂಧೀ’, ‘ನೇರ ನಿಷ್ಠುರ ಪಾರದರ್ಶಕ ಹೋರಾಟಗಾರ’ ಮುಂತಾದ ಬಿರುದುಗಳಿಗೆ ಇವರು ಪಾತ್ರರಾಗಿದ್ದಾರೆ. ೧೯೨೮ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿಯಲ್ಲಿ ಜನಿಸಿದ ಮಾದೇಗೌಡರು, ಹತ್ತರ ಎಳವೆಯಲ್ಲೇ ಶಿವಪುರದ ಸತ್ಯಾಗ್ರಹ ಸಂದರ್ಭದಲ್ಲಿ ಭಾಗವಹಿಸಿದ ಸತ್ಯಾಗ್ರಹಿಗಳಿಗೆ ನೀರು ಕೊಡುವ ಕಾಯಕದಲ್ಲಿ ತೊಡಗಿ, ಮುಂದೆ ಸ್ವಯಂ ತಾವೇ ಸತ್ಯಾಗ್ರಹಿಯಾಗಿ ಬೆಳೆದರು. ಮಹಾತ್ಮ ಗಾಂಧೀಯವರು ೧೯೪೨ರಲ್ಲಿ ಕರೆಕೊಟ್ಟ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದ ಸಂದರ್ಭದಲ್ಲಿ, ಚಳವಳಿಯ ಪ್ರಚಾರಕ್ಕಾಗಿ ಶಾಲೆಯನ್ನೇ ಬಿಟ್ಟು ಹೊರಬಂದರು. ಮುಂದೆ ತಮ್ಮ ನಡೆ, ನುಡಿ, ಆಚಾರ, ವಿಚಾರಗಳಲ್ಲೆಲ್ಲಾ ಗಾಂಧೀ ಮಾರ್ಗವನ್ನು ಅವಲಂಭಿಸಿದ ಗೌಡರು ಬಿ.ಎ. ಪದವಿ ಮತ್ತು ಕಾನೂನು ಪದವಿಗಳನ್ನು ಗಳಿಸಿದರು. ನಿರಂತರ ಜನಾನುರಾಗಿಗಳಾಗಿ ಜನಪರದನಿಯಾಗಿದ್ದ ಮಾದೇಗೌಡರು ೧೯೫೯ರಲ್ಲಿ ತಾಲ್ಲೂಕು ಮಂಡಳಿ ಚುನಾವಣೆಗಳಲ್ಲಿ ಜಯಿಸಿದ್ದು ಮೊದಲ್ಗೊಂಡಂತೆ, ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ೮೯ ವರ್ಷದ ವಯಸ್ಸಿನಲ್ಲಿಯೂ ಕಾವೇರಿ ನದಿ ನೀರಿನ ವಿಷಯವಾಗಿ ನಿರಂತರ ಹೋರಾಟ ನಡೆಸುತ್ತಿರುವುದು ಮಾದರಿಯಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಜಿ. ಮಾದೇಗೌಡ ಅವರಿಗೆ ಅವರ ಅನುಪಮ ಸೇವೆಯನ್ನು ಗುರುತಿಸಿ  “ಶ್ರೀ ಎ.ಆರ್. ನಾರಾಯಣ ಘಟ್ಟ-ಸರೋಜಮ್ಮ ಗಾಂಧೀ ಪುದುವಟ್ಟು” ಗೌರವ ನೀಡಿ ಸನ್ಮಾನಿಸಿದೆ.

Tag: G. Madegowda, A.R. Narayana Ghatta mattu Sarojamma Gandhi Puraskara Datti Prashasthi

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)