ಸಿ.ಪಿ. ಕೃಷ್ಣಕುಮಾರ್

cpk

ಸಿ.ಪಿ.ಕೆ. ಎಂಬ ಮೂರಕ್ಷಗಳಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿರುವ  ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಅವರು ೮-೪-೧೯೩೯ರಲ್ಲಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರದ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿ ಸಾಲಿಗ್ರಾಮದಲ್ಲಿ ಪೂರೈಸಿ ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಮುಂದುವರಿಸಿ ೧೯೬೧ರಲ್ಲಿ ಎಂ.ಎ. ಪದವಿ ಗಳಿಸಿದರು.

೧೯೬೧ರಿಂದ ೧೯೬೪ರವರೆಗೆ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿ ೧೯೬೭ರಿಂದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ೧೯೯೯ರಲ್ಲಿ ನಿವೃತ್ತರಾದರು.

ನಿವೃತ್ತಿಯ ನಂತರ ಸಂದರ್ಶಕ ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ಗ್ರಂಥಪ್ರಕಟನಾ ಅಧ್ಯಕ್ಷರಾಗಿ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ, ಕನಕಪೀಠ ಸಲಹಾ ಸಮಿತಿ ಮೊದಲಾದ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅನೇಕ ಸಾಹಿತ್ಯ ಸಮ್ಮೇಳನಗಳ ಗೋಷ್ಠಿ ಅಧ್ಯಕ್ಷರಾಗಿ, ಕಾರ್ಯನಿರ್ವಹಿಸಿದ ಇವರು ೨0೧೧ರಲ್ಲಿ ಗಂಗಾವತಿಯಲ್ಲಿ ನಡೆದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಅನೇಕ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಆ ಪೈಕಿ ಕೆಲವು ಹೀಗಿವೆ: ಬಸವ ಸಾಹಿತ್ಯಶ್ರೀ, ವಿದ್ವತ್ ಶಿರೋಮಣಿ, ಹನಿಗವನ ಹರಿಕಾರ, ಜಾನಪದತಜ್ಞ, ನೃಪತುಂಗ ಸಾಹಿತ್ಯ ಪ್ರಶಸ್ತಿ ಇತ್ಯಾದಿ.

ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆದಿದ್ದಾರೆ. ಚುಟುಕ, ವ್ಯಕ್ತಿಚಿತ್ರ, ಪ್ರಬಂಧ, ಸಂಶೋಧನೆ, ಜಾನಪದ ವಿಮರ್ಶೆ, ಹಾಸ್ಯ ಭಾಷಾಂತರ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ಇವರ ಕೆಲವು ಕೃತಿಗಳು: ತಾರಾಸಖ, ಕನ್ನಡ ಚತುರ್ಮುಖ, ಏಳು ಗ್ರೀಕ್ ನಾಟಕಗಳು, ಕನ್ನಡ ಉತ್ತರ ರಾಮಚರಿತೆ, ಗೀತಾಂಜಲಿ, ಅರಣ್ಯ ಪರ್ವ, ಕನ್ನಡ ಛಂದಸ್ಸಿನ ಚರಿತ್ರೆ, ಒಗಟು ಮತ್ತು ಗಾದೆ. ಕನ್ನಡ ಸಂಸ್ಕೃತಿ ಸಂಬಂಧ ಇತ್ಯಾದಿ.

 Tag: Nrupatunga Prashasthi

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)